ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಥಳಿಸಿದ ಪ್ರಕರಣ; ಯುವತಿಗೆ ಲವ್​ ಮ್ಯಾರೇಜ್ ಮಾಡಿಸಿದ್ದಕ್ಕೆ ನಡೀತಾ ಹಲ್ಲೆ?

ಮಂಡ್ಯದ ಕೆ.ಆರ್.ಪೇಟೆ ಬೊಮ್ಮಲಾಪುರದಲ್ಲಿ ಪ್ರೀತಿ ವಿವಾಹಕ್ಕೆ ನೆರವಾದ ವ್ಯಕ್ತಿಯ ಕಾಲನ್ನು ಕಲ್ಲಿನಿಂದ ಜಜ್ಜಿ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಸಂತ್ರಸ್ತ ಪ್ರಕಾಶ್‌ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಈ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ. ಯುವತಿಯ ತಂದೆ ಹಾಗೂ ಇತರೆ ಆರೋಪಿಗಳು ಈ ಹಲ್ಲೆ ನಡೆಸಿದ್ದು, ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿ, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಥಳಿಸಿದ ಪ್ರಕರಣ; ಯುವತಿಗೆ ಲವ್​ ಮ್ಯಾರೇಜ್ ಮಾಡಿಸಿದ್ದಕ್ಕೆ ನಡೀತಾ ಹಲ್ಲೆ?
ಆರೋಪಿ ಸಂಜು
Edited By:

Updated on: Feb 24, 2026 | 10:43 AM

ಮಂಡ್ಯ, ಫೆಬ್ರವರಿ 24:  ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಕಾಲನ್ನು ಸೈಜ್​ ಕಲ್ಲಿನಿಂದ ಜಜ್ಜಿ ಹಲ್ಲೆ ಮಾಡಿದ ಘಟನೆ ನಡೆದಿತ್ತು. ಹುಡುಗಿ ವಿಚಾರವಾಗಿಯೇ ಈ ಹಲ್ಲೆ ನಡೆದಿದೆಯೆಂದು ಹೇಳಲಾಗಿದ್ದು, ಗ್ರಾಮದ ಹುಡುಗಿಯೊಬ್ಬಳು ಪ್ರೀತಿಸಿದ ಹುಡುಗನೊಂದಿಗೆ ಮದುವೆಯಾಗಲು ಸಂತ್ರಸ್ತ ಸಹಾಯ ಮಾಡಿದ್ದ ಎಂಬ ಕಾರಣಕ್ಕೆ ಆತನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ.

ಸೇಡು ತೀರಿಸಿಕೊಂಡ್ರಾ ಯುವತಿಯ ತಂದೆ?

ಬೊಮ್ಮಲಾಪುರ ಗ್ರಾಮದ ಪ್ರಕಾಶ್ ಹಾಗೂ ಆತನ ಬಾಮೈದ ನವೀನ್ ಮೇಲೆ ಗಿರೀಶ್, ಸಂಜು, ಗಣೇಶ್, ಪುಟ್ಟರಾಜು ಹಾಗೂ ನಿಂಗಣ್ಣ ಸೇರಿಕೊಂಡು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆ ವೇಳೆ ಆರೋಪಿಗಳು ಪ್ರಕಾಶ್ ಅವರನ್ನು ವಿವಸ್ತ್ರಗೊಳಿಸಿ, ಸೈಜ್ ಗಲ್ಲಿನಿಂದ ಕಾಲು ಜಜ್ಜಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದರು. ಈ ಹಿಂದೆ ಅದೇ ಗ್ರಾಮದ ನಿಂಗಣ್ಣ ಅವರ ಪುತ್ರಿ ನಾಪತ್ತೆಯಾಗಿದ್ದು, ಬಳಿಕ ತಾನು ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಿದ್ದಳು. ಯುವತಿ ಓಡಿಹೋಗಲು ಹಾಗೂ ಲವ್ ಮ್ಯಾರೇಜ್ ಆಗಲು ಪ್ರಕಾಶ್ ಸಹಾಯ ಮಾಡಿದ್ದಾನೆ ಎಂಬ ಅನುಮಾನದಿಂದ ಯುವತಿಯ ತಂದೆ ನಿಂಗಣ್ಣ ಹಾಗೂ ಸಂಜು ಗುಂಪು ಪ್ರಕಾಶ್ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ಕೃತ್ಯವನ್ನೆಸಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ ಮಂಡ್ಯದಲ್ಲೊಂದು ಅಮಾನುಷ ಕೃತ್ಯ: ಕೈಮುಗಿದು ಬೇಡಿದ್ರೂ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಹಲ್ಲೆ

ಸಂಜು ಮನೆಗೆ ನುಗ್ಗಿ ಹೊಡೆದಿದ್ದ ಪ್ರಕಾಶ್!

ಯುವತಿಯ ಮದುವೆಗೆ ಸಹಕರಿಸಿದ ಪ್ರಕಾಶ್​ಗೆ ಆಕೆಯ ತಂದೆ ನಿಂಗಣ್ಣ ಮತ್ತು ಸಂಜು ಸೇರಿ ಹಲವರು ಫೋನ್ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಇದರಿಂಗ ಕೋಪಗೊಂಡ ಪ್ರಕಾಶ್, ನವೀನ್​ನೊಂದಿಗೆ ಸೇರಿ ಫೆಬ್ರವರಿ 21ರಂದು ಸಂಜು ಮಧ್ಯರಾತ್ರಿ ಸಂಜು ಮನೆಗೆ ನುಗ್ಗಿ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಈ ಬಗ್ಗೆ ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಕಾರಣಕ್ಕೆ ಫೆಬ್ರವರಿ 22ರಂದು ಸಂಜು ಮತ್ತು ಗಿರೀಶ್ ತಂಡ ಪ್ರಕಾಶ್ ಹಾಗೂ ನವೀನ್ ಮೇಲೆ ಪ್ರತೀಕಾರದ ದಾಳಿ ನಡೆಸಿದೆ ಎಂದು ಹೇಳಲಾಗಿದೆ.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪ್ರಕರಣದ ಪ್ರಮುಖ ಆರೋಪಿ ಗಿರೀಶ್ ಅವರನ್ನು ಬಂಧಿಸಿದ್ದಾರೆ. ಇತರ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us