
ಮಂಡ್ಯ, ನವೆಂಬರ್ 20: ಎಟಿಎಂಗಳಿಗೆ ಹಣ ಪೂರೈಸಲು ಹಣ ಕೊಂಡೊಯ್ಯುತ್ತಿದ್ದ ವಾಹನವನ್ನು ಅಡ್ಡಗಟ್ಟಿ 7.1 ಕೋಟಿ ರೂಪಾಯಿ ದೋಚಿರುವ ಘಟನೆ ರಾಜ್ಯವನ್ನು ಬೆಚ್ಚಿ ಬೀಳಿಸಿರುವ ನಡುವೆ, ದರೋಡೆ ನಡೆಸುತ್ತಿದ್ದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳ ತಂಡವನ್ನು ಮಂಡ್ಯ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರು ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎಂಬುದು ಗೊತ್ತಾಗಿದೆ.
ಕೆಂಗೇರಿ ಬಸ್ ನಿಲ್ದಾಣ ಬಳಿ ಬಸ್ಗಾಗಿ ಕಾಯುವವರನ್ನೇ ಟಾರ್ಗೆಟ್ ಮಾಡಿ ಈ ವಿದ್ಯಾರ್ಥಿಗಳ ಗ್ಯಾಂಗ್ ರಾಬರಿ ಮಾಡುತ್ತಿತ್ತು. ಕಾರಿನಲ್ಲಿ ಡ್ರಾಪ್ ಮಾಡುವುದಾಗಿ ಹೇಳಿ ಹತ್ತಿಸಿಕೊಳ್ಳುತ್ತಿದ್ದ ಗ್ಯಾಂಗ್, ಮಂಡ್ಯದ ನಿರ್ಜನ ಪ್ರದೇಶದ ಬಳಿ ಬರ್ತಿದ್ದಂತೆ ಕತ್ತಿಗೆ ಹಗ್ಗ ಹಾಕಿ ಬೆದರಿಸಿ ಫೋನ್, ಜೇಬಿನಲ್ಲಿದ್ದ ಹಣ ದರೋಡೆ ಮಾಡುತ್ತಿತ್ತು. ಆರೋಪಿಗಳು ಫೋನ್ ಪೇ ಮೂಲಕ ಬೆಟ್ಟಿಂಗ್ ಆ್ಯಪ್ಗಳಿಗೆ ಹಣ ರವಾನೆ ಮಾಡಿಸಿಕೊಳ್ಳುತ್ತಿದ್ದರು. ದರೋಡೆ ಮಾಡಲು ಹೊರರಾಜ್ಯದ ಕಾರನ್ನ ಗ್ಯಾಂಗ್ ಬಾಡಿಗೆ ಪಡೆದಿತ್ತು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ 7 ಕೋಟಿ ದರೋಡೆ, ವೆಬ್ ಸೀರೀಸ್ನಿಂದ ಪ್ರೇರಿತರಾಗಿದ್ರಾ ರಾಬರ್ಸ್?
ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಕಿರಣ್, ಕುಶಾಲ್ ಬಾಬು ಜೊತೆಗೆ ಗೋಕುಲ್ ಬಂಧಿತ ಆರೋಪಿಗಳಾಗಿದ್ದು, ಆನ್ಲೈನ್ ಬ್ಯುಸಿನೆಸ್ ನೆಪದಲ್ಲಿ ಮೂವರು ವಿದ್ಯಾರ್ಥಿಗಳು ಒಂದಾಗಿದ್ದರು. ದರೋಡೆ ಮಾಡಿದ ಹಣದಲ್ಲಿ ಆರೋಪಿಗಳು ಐಷಾರಾಮಿ ಜೀವನ ನಡೆಸುತ್ತಿದ್ದರು. ಪೋಷಕರಿಗೆ ಪಿಜಿಯಲ್ಲಿರುವುದಾಗಿ ಹೇಳಿದ್ದ ಇವರು, ಅಪಾರ್ಟ್ಮೆಂಟ್ನಲ್ಲಿ ಮನೆ ಬಾಡಿಗೆ ಪಡೆದು ವಾಸವಿದ್ದರು. ವಿರಾಜಪೇಟೆಯ ಅಬ್ದುಲ್ ಜಲೀಲ್, ಮೈಸೂರಿನ ಯತೀಂದ್ರ ಬಳಿ ಗ್ಯಾಂಗ್ ದರೋಡೆ ಮಾಡಿತ್ತು. ಮಂಡ್ಯದ ತೂಬಿನಕೆರೆ, ಕರಿಘಟ್ಟ ಬಳಿ ನಡೆದಿದ್ದ ಪ್ರಕರಣ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬೆನ್ನತ್ತಿದ ಪೊಲೀಸರು ಸಿಕ್ಕ ತಾಂತ್ರಿಕ ಸುಳಿವು ಹಿಡಿದು ದರೋಡೆಕೋರರ ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ. ಮಂಡ್ಯ, ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದರೋಡೆ ಬಗ್ಗೆ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.
ಮೈಸೂರು ರಸ್ತೆ ಕಳ್ಳರ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ. ಸರ್ವೀಸ್ ರಸ್ತೆಯಲ್ಲಿ ದರೋಡೆ, ಕಳ್ಳತನ ಪ್ರಕರಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ರಾತ್ರಿ ವೇಳೆ ಬೈಕ್ನಲ್ಲಿ ಬರುವ, ಹೆದ್ದಾರಿ ಪಕ್ಕದಲ್ಲಿ ವಾಹನ ನಿಲ್ಲಿಸಿ ನಿದ್ರೆ ಮಾಡುವವರನ್ನೇ ಟಾರ್ಗೆಟ್ ಮಾಡಿ ಕಳ್ಳತನ, ದರೋಡೆ ಮಾಡುವ ಕೆಲಸಗಳು ವರದಿಯಾಗಿವೆ. ತಮಿಳುನಾಡು ಪೊಲೀಸರನ್ನೇ ಇಲ್ಲಿ ಕಳ್ಳರು ದೋಚಿದ್ದಾರೆ ಎಂದು ಇತ್ತೀಚೆಗಷ್ಟೇ ಸ್ಥಳೀಯರು ಆರೋಪಿಸಿದ್ದರು. ಆ ಬೆನ್ನಲ್ಲೇ ಅಂತಹುದೇ ಘಟನೆ ಸಂಬಂಧ ಆರೋಪಿಗಳನ್ನ ಬಂಧಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.