19 ವರ್ಷದ ಯುವತಿಗೂ ಎರಡು ಮಕ್ಕಳ ತಂದೆಗೂ ಲವ್​: ಬಲಿಯಾಗಿದ್ದು 2 ಜೀವ

ಅವರಿಬ್ಬರೂ ತಾಯಿ ಮತ್ತು ಮಗಳು. ಒಟ್ಟೊಟ್ಟಿಗೆ ಇವರಿಬ್ಬರ ಆತ್ಮಹತ್ಯೆ ಗ್ರಾಮಕ್ಕೆ ಗ್ರಾಮವನ್ನೇ ಬೆಚ್ಚಿ ಬೀಳಿಸಿದೆ. ಕಾರಣ ಹುಡುಕಿ ಹೊರಟಾಗ ವಿಷಯ ತಿಳಿದು ಸ್ಥಳೀಯರು ಹೌಹಾರಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಅಷ್ಟಕ್ಕೂ ಇವರಿಬ್ಬರ ಸಾವಿಗೆ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ.

19 ವರ್ಷದ ಯುವತಿಗೂ ಎರಡು ಮಕ್ಕಳ ತಂದೆಗೂ ಲವ್​:  ಬಲಿಯಾಗಿದ್ದು 2 ಜೀವ
ಮೃತ ಮಗಳು ಮತ್ತು ತಾಯಿ
Image Credit source: Tv9 Kannada
Edited By:

Updated on: Feb 09, 2026 | 4:46 PM

ಮಂಡ್ಯ, ಫೆಬ್ರವರಿ 09: 19 ವರ್ಷದ ಯುವತಿ ಮತ್ತು ಎರಡು ಮಕ್ಕಳ ತಂದೆಯ ಪ್ರೇಮ ಪ್ರಕರಣದ ಹಿನ್ನೆಲೆ ಮರ್ಯಾದೆಗೆ ಹೆದರಿ ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಕುಂತಲಾದೇವಿ(46) ಮತ್ತು ಪ್ರಿಯಾಂಕಾ(19) ಮೃತರು. ಪ್ರಿಯಾಂಕಾಳ ಮದುವೆಗೆ ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು ಎನ್ನಲಾಗಿದ್ದು, ವಿವಾಹಿತ ಪುರುಷನ ಜೊತೆಗಿನ ಆಕೆಯ ಪ್ರೇಮವೇ ಘಟನೆಗೆ ಕಾರಣ ಎನ್ನಲಾಗಿದೆ.

ಹೌದು, ಕೋಡಿಹಳ್ಳಿ ಗ್ರಾಮದನೇ ಆದ 34 ವರ್ಷದ ಮುತ್ತುರಾಜ್​​ ಎಂಬವನ ಜೊತೆ ಪ್ರಿಯಾಂಕಾಗೆ ಲವ್​​ ಆಗಿತ್ತು. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಈತ ಕೂಡ ಪ್ರಿಯಾಂಕಾಳ ಹಿಂದೆ ಬಿದ್ದಿದ್ದ. ಮುತ್ತುರಾಜ್​​ ಪ್ರತಿದಿನವೂ ಪ್ರಿಯಾಂಕಾ ಮನೆಗೆ ಬರುತ್ತಿದ್ದ. ಇವರ ಪ್ರೀತಿಯ ವಿಷಯ ತಿಳಿಯದ ಮನೆಯವರು ಇದು ಸಾಮಾನ್ಯ ಎಂದುಕೊಂಡಿದ್ದರು. ಆದರೆ ಇತ್ತೀಚೆಗೆ ಇಬ್ಬರೂ ಪ್ರೀತಿ ಮಾಡ್ತಿರುವ ವಿಚಾರ ಪ್ರಿಯಾಂಕಾ ಪೋಷಕರಿಗೆ ಗೊತ್ತಾಗಿತ್ತು. ಬಳಿಕ ಇಬ್ಬರಿಗೂ ಬೈದು ಬುದ್ಧಿ ಹೇಳಿದ್ದರು. ಹೀಗಿದ್ದರೂ ಸಹ ವಿವಾಹಿತ ಮುತ್ತುರಾಜ್ ಪ್ರಿಯಾಂಕಾಳನ್ನು ಪೀಡಿಸುತ್ತಿದ್ದ. ಹಾಗಾಗಿ ಮರ್ಯಾದೆಗೆ ಹೆದರಿ ತಾಯಿ, ಪುತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಅಮ್ಮನ ಖಾಸಗಿ ಅಂಗ, ದೊಡ್ಡಮ್ಮನ ಬೆತ್ತಲೆ ಫೋಟೊ ತೆಗೆದು ಪ್ರಿಯಕರನಿಗೆ ಕಳುಹಿಸಿದ ಯುವತಿ!

ಸಂಬಂಧದಲ್ಲೇ ಮದುವೆಗೆ ನಡೆದಿತ್ತು ತಯಾರಿ

ಇನ್ನು ಪ್ರಿಯಾಂಕಾ ಮತ್ತು ಮುತ್ತುರಾಜ್​​ ಪ್ರೇಮದ ವಿಷಯ ಮೊದಲು ಶಕುಂತಲಾದೇವಿ ಅವರಿಗೆ ಗೊತ್ತಾಗಿತ್ತು. ಬಳಿಕ ಅವರು ಈ ಬಗ್ಗೆ ತಮ್ಮ ಪತಿಗೆ ತಿಳಿಸಿದ್ದರು ಎನ್ನಲಾಗಿದೆ. ಕಾಲೇಜಿಗೆ ತೆರಳುತ್ತಿದ್ದ ಮಗಳಿಗೆ ಸಂಬಂಧದಲ್ಲೇ ಹುಡುಗನನ್ನು ಹುಡುಕಿ ಮದುವೆ ಸಿದ್ಧತೆಯಲ್ಲಿದ್ದ ಕುಟುಂಬಕ್ಕೆ ಈ ವಿಷಯ ತಿಳಿದು ಆಘಾತವಾಗಿದೆ. ಮಗಳು ತನ್ನ ಪ್ರೀತಿಯ ವಿಚಾರದ ಬಗ್ಗೆ ಮೊದಲು ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ವಿಷಯ ಗೊತ್ತಾಗುತ್ತಿದ್ದಂತೆ ಇಷ್ಟೆಲ್ಲ ನಡೆದು ಹೋಗಿದೆ ಎಂದು ಯುವತಿಯ ತಂದೆ ಕಣ್ಣೀರು ಹಾಕಿದ್ದಾರೆ. ಇನ್ನು ಘಟನೆ ಬಗ್ಗೆ ಹಲಗೂರು ಠಾಣೆಗೆ ಶಕುಂತಲಾದೇವಿ ಪತಿ ಮಹೇಶ್​​ ನೀಡಿರುವ ದೂರಿನ ಅನ್ವಯ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ್ದ ಮುತ್ತುರಾಜ್​​

ಪ್ರಿಯಾಂಕಾಗೆ ಮದುವೆ ಮಾಡಲು ಕುಟುಂಬಸ್ಥರು ಮುಂದಾಗಿದ್ದ ವಿಚಾರ ತಿಳಿದು ಆಕೆಯನ್ನು ಹೆದರಿಸಲು ಮುತ್ತುರಾಜ್​ ಮೂರು ದಿನದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಸದ್ಯ ಮೈಸೂರಿನ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗ್ತಿದೆ. ಈ ಘಟನೆ ಬಳಿಕ ತಾಯಿ ಶಂಕುತಲಾ ಮತ್ತು ಮಗಳು ಪ್ರಿಯಾಂಕಾ ಇನ್ನಷ್ಟು ಗಾಬರಿಗೊಂಡಿದ್ದರು ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:35 pm, Mon, 9 February 26