ಮನ್​ ಮುಲ್​ನಿಂದ ಮತ್ತೆರಡು ಹೊಸ ಉತ್ಪನ್ನ ಬಿಡುಗಡೆ: ಹಾಲಿನ ಬರ್ಫಿ ಹಾಗೂ ಪನ್ನಿರ್​ ನಿಪ್ಪಟ್ಟು ಮಾರುಕಟ್ಟೆಗೆ ಎಂಟ್ರಿ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 25, 2023 | 4:14 PM

ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ ಗ್ರಾಮದ ಬಳಿ ಮನ್​ ಮುಲ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಂದಿನಿಯ ಎರಡೂ ಉತ್ಕೃಷ್ಟ ಉತ್ಪನ್ನಗಳನ್ನು ಮನ್​ ಮುಲ್ ಅಧ್ಯಕ್ಷ ಬೋರೇಗೌಡ ಬಿಡುಗಡೆ ಮಾಡಿದ್ದಾರೆ. ಸ್ಪೆಷಲ್ ಹಾಲಿನ ಬರ್ಫಿ ಹಾಗೂ ಪನ್ನಿರ್ ನಿಪ್ಪಟ್ಟು ಇಂದು ಮಾರುಕಟ್ಟೆಗೆ ಪ್ರವೇಶಿಸಿವೆ.

ಮನ್​ ಮುಲ್​ನಿಂದ ಮತ್ತೆರಡು ಹೊಸ ಉತ್ಪನ್ನ ಬಿಡುಗಡೆ: ಹಾಲಿನ ಬರ್ಫಿ ಹಾಗೂ ಪನ್ನಿರ್​ ನಿಪ್ಪಟ್ಟು ಮಾರುಕಟ್ಟೆಗೆ ಎಂಟ್ರಿ
ಹೊಸ ಉತ್ಪನ್ನ ಬಿಡುಗಡೆ ಮಾಡಿದ ಗಣ್ಯರು
Follow us on

ಮಂಡ್ಯ, ಆಗಸ್ಟ್​ 25: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಿಂದ ನಂದಿನಿ (Nandini) ಪನ್ನೀರ್ ನಿಪ್ಪಟ್ಟು ಹಾಗೂ ನಂದಿನಿ ಸ್ಪೆಷಲ್ ಹಾಲಿನ ಬರ್ಫಿ ಎಂಬ ಎರಡು ನೂತನ ಉತ್ಪನ್ನಗಳನ್ನು ಶುಕ್ರವಾರ ಮನ್ ಮುಲ್ ನ ಡಾ. ವರ್ಗೀಸ್ ಕೂರಿಯನ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಬಿ.ಬೋರೇಗೌಡ ಮತ್ತು ಆಡಳಿತ ಮಂಡಳಿಯ ನಿರ್ದೇಶಕರುಗಳಿಂದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಸ್ಪೆಷಲ್ ಹಾಲಿನ ಬರ್ಫಿ ಹಾಗೂ ಪನ್ನಿರ್ ನಿಪ್ಪಟ್ಟು ಇಂದು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.

ನೂತನ ಪ್ರಾಡಕ್ಟ್ ಬಿಡುಗಡೆ ಮಾಡಿ ಮಾತನಾಡಿದ ಮನ್ಮುಲ್ ಅಧ್ಯಕ್ಷ ಬೋರೇಗೌಡ ಅವರು ಮಂಡ್ಯ ಹಾಲು ಒಕ್ಕೂಟದಿಂದ ಹೊಸ ಉತ್ಪನ್ನ ಮಾರುಕಟ್ಟೆಗೆ ಬರುತ್ತಿದೆ. ಈಗಾಗಲೇ ನಂದಿನಿ ತುಪ್ಪ ಸಾಕಷ್ಟು ಪ್ರಮಾಣದಲ್ಲಿ ಖರೀದಿಯಾಗುತ್ತಿವೆ. ಇದು ಕೂಡ ಹಾಗೇಯೆ ಖರೀದಿಯಾಗಿ ಜನಮನ್ನಣೆ ಗಳಿಸಲಿದೆ ಎಂಬ ವಿಶ್ವಾಸವಿದೆ ಎಂದರು.

ಮನ್ ಮುಲ್ ನಿಂದ ಇನ್ನು ಹೊಸ ಹೊಸ ರೀತಿಯಲ್ಲಿ ಉತ್ಪನ್ನ ಕೊಡುತ್ತೇವೆ. ಹೊಸ ಉತ್ಪನ್ನ ತಯಾರಿಕೆಯಿಂದ ಮನ್ ಮುಲ್ ಗೆ‌ ಮತ್ತಷ್ಟು ಆದಾಯ ಬರಲು ಸಾಧ್ಯವಾಗಿದೆ. ಸಾರ್ವಜನಿಕರು ಮನ್ ಮುಲ್ ಪ್ರಾಡಕ್ಟ್ ಗಳನ್ನು ಮತ್ತಷ್ಟು ಖರೀದಿಸಿ ಸಹಕರಿಸುವಂತೆ ಮನವಿ ಮಾಡಿದರು.

ಇದನ್ನೂ ಓದಿ: ರೈತರಿಗೆ ಬಿಗ್ ಶಾಕ್ ಕೊಟ್ಟ ಮನ್ಮುಲ್: ಖರೀದಿ ಹಾಲಿನ ದರ ಕಡಿತ

ಕಾರ್ಯಕ್ರಮದಲ್ಲಿ ಮನ್ ಮುಲ್ ಉಪಾಧ್ಯಕ್ಷ ರಘುನಂದನ್, ನಿರ್ದೇಶಕ ಉಮ್ಮಡಳ್ಳಿ ಶಿವಪ್ಪ, ರೂಪ, ಪುಷ್ಪಲತಾ ಸೇರಿದಂತೆ ಇನ್ನಿತರರು ಇದ್ದರು.

ಹಾಲಿನ ದರ ಕಡಿತ ಮಾಡಿದ ಮಂಡ್ಯ ಹಾಲು ಒಕ್ಕೂಟ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಇತ್ತೀಚೆಗೆ ರೈತರಿಗೆ ಮತ್ತೊಂದು ಶಾಕ್​ ನೀಡಿತ್ತು. ಕಳೆದ ಜೂನ್ ತಿಂಗಳಲ್ಲಿ ಹಾಲಿನ ದರವನ್ನ 1 ರೂಪಾಯಿ ಕಡಿತಗೊಳಿಸಿ ರೈತರ ಕೆಂಗಣ್ಣಿಗೆ ಗುರಿಯಾಗಿದ್ದ ಒಕ್ಕೂಟ, ಬಳಿಕ ಮತ್ತೊಮ್ಮೆ ಒಂದು ಲೀಟರ್ ಹಾಲಿಗೆ ಒಂದು ಮುಕ್ಕಾಲು ರೂಪಾಯಿ ಕಡಿತಗೊಳಿಸಿ ಆದೇಶ ಹೊರಡಿಸಿತ್ತು. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಒಕ್ಕೂಟದ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಾಗಿತ್ತು.

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿ ಒಂದು ಲೀಟರ್ ಹಾಲಿಗೆ ಒಂದೂಮುಕ್ಕಾಲು ರೂಪಾಯಿ ಬೆಲೆಯನ್ನ ಕಡಿತಗೊಳಿಸಿ ಆದೇಶ ಹೊರಡಿಸಿತ್ತು. ಯಾಕಂದ್ರೆ ಮುಂಗಾರು ಮಳೆ ಕೈ ಕೊಟ್ಟಿದ್ದು ಸರಿಯಾಗಿ ಮಳೆಯಾಗಿಲ್ಲ. ನೀರು ಹರಿದು ಬಾರದೆ ಕೆಆರ್​ಎಸ್​ಡ್ಯಾಂ ಸಹ ಭರ್ತಿಯಾಗಿಲ್ಲ. ಹೀಗಾಗಿಯೇ ನೀರಾವರಿ ನಿಗಮದ ಅಧಿಕಾರಿಗಳು ರೈತರು ಈ ಬಾರಿ ಮುಂಗಾರು ಬೆಳೆಯನ್ನ ನಾಟಿ ಮಾಡಬಾರದು ಎಂದೂ
ಸೂಚನೆ ನೀಡಿದ್ದರು.

ಇದನ್ನೂ ಓದಿ: ತಮಿಳುನಾಡಿಗೆ ಹರಿಸುತ್ತಿರುವ ನೀರಿನ ಪ್ರಮಾಣ ಕಡಿಮೆ ಮಾಡಿದ ರಾಜ್ಯ ಸರ್ಕಾರ, ಆದರೂ ಎಷ್ಟು ನೀರು ಹರಿಯುತ್ತಿದೆ ಗೊತ್ತಾ?

ತಮ್ಮ ಕತೆ ಹೀಗಾಯ್ತಲ್ಲ ದೇವರೆ ಮುಂದೆ ಹೇಗೆ ಬದುಕು ಸಾಗಿಸುವುದು ಎಂದು ರೈತರು ತಲೆ ಮೇಲೆ ಕೈ ಹೊತ್ತುಕುಳಿತಿರುವಾಗಲೇ ಮನ್ಮುಲ್ ಆಡಳಿತ ಮಂಡಳಿ ಲೀಟರ್ ಹಾಲಿಗೆ ಒಂದೂಮುಕ್ಕಾಲು ರೂಪಾಯಿ ದರವನ್ನ ಕಡಿತಗೊಳಿಸಿ ಆದೇಶ ಹೊರಡಿಸಿತ್ತು. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದ್ದು ಕೂಡಲೇ ಹಾಲಿನ ದರ ಕಡಿತದ ನಿರ್ಧಾರವನ್ನ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು.

ಒಂದು ಲೀಟರ್ ಹಾಲಿಗೆ ಒಂದು ಮುಕ್ಕಾಲು ರೂಪಾಯಿ ಕಡಿತ ಎಂದರೆ ಅದು ಸಾಮಾನ್ಯ ವಿಷಯವೇ ಅಲ್ಲ. ಮನ್ಮುಲ್ ಆಡಳಿತ ಮಂಡಳಿ ವಿರುದ್ಧ ಜಿಲ್ಲೆಯ ರೈತರು ಪ್ರತಿಭಟಿಸುವ ಮೊದಲು ಸರ್ಕಾರ ಮಧ್ಯ ಪ್ರವೇಶ ಮಾಡುವ ಮೂಲಕ ಸಮಸ್ಯೆಯನ್ನ ಬಗೆಹರಿಸಲಾಗಿತ್ತು. ಆ ಮೂಲಕ ರೈತರ ಹಾಲಿಗೆ ಎಂದಿನಂತೆ ಹಿಂದಿನ ದರವನ್ನೇ ಮುಂದುವರೆಸುವತ್ತ ಕ್ರಮ ಕೈಗೊಳ್ಳಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:13 pm, Fri, 25 August 23