ರೇಬಲ್ ಲೇಡಿ ಸುಮಲತಾ ನಡೆ ಇನ್ನೂ ನಿಗೂಢ; ಇತ್ತ ತಂದೆ ಪರ ಮತಬೇಟೆ ಮುಂದುವರಿಸಿದ ನಿಖಿಲ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 31, 2024 | 9:30 PM

ಸಕ್ಕರೆ ನಗರಿ ಮಂಡ್ಯದಲ್ಲಿ ಚುನಾವಣಾ ಕಾವು ರಂಗೇರಿದೆ. ಮಾಜಿ ಸಿಎಂ ಕುಮಾರಸ್ವಾಮಿ ಸ್ವರ್ಧೆಯಿಂದ ಚುನಾವಣಾ ಕಣ ಹೈ ವೋಲ್ಟೇಜ್ ಕದನವಾಗಿ ಮಾರ್ಪಟ್ಟಿದೆ. ಈ ಮಧ್ಯೆ ಟಿಕೆಟ್ ವಂಚಿತ ಸುಮಲತಾ ನಡೆ ಏನು ಎಂಬುದು ಕೂತುಹಲ ಮೂಡಿಸಿದೆ. ಇನ್ನು ತಂದೆಯ ಪರ ಪುತ್ರ ನಿಖಿಲ್ ಮಂಡ್ಯದಲ್ಲಿ ಮತಬೇಟೆ ಮುಂದುವರೆಸಿದ್ದಾರೆ.

ರೇಬಲ್ ಲೇಡಿ ಸುಮಲತಾ ನಡೆ ಇನ್ನೂ ನಿಗೂಢ; ಇತ್ತ ತಂದೆ ಪರ ಮತಬೇಟೆ ಮುಂದುವರಿಸಿದ ನಿಖಿಲ್
ಸುಮಲತಾ, ನಿಖಿಲ್​ ಕುಮಾರಸ್ವಾಮಿ
Follow us on

ಮಂಡ್ಯ, ಮಾ.31: ಲೋಕಸಭಾ ಸಮರಕ್ಕೆ ಮಹೂರ್ತ ಫಿಕ್ಸ್ ಆಗಿದೆ. ಅದರಲ್ಲೂ ಸಕ್ಕರೆ ನಗರಿ ಮಂಡ್ಯ(Mandya), ಮಾಜಿ ಸಿಎಂ ಕುಮಾರಸ್ವಾಮಿ ‌ಸ್ವರ್ಧೆಯಿಂದ ಹೈ ವೋಲ್ಟೇಜ್ ಕದನವಾಗಿದೆ ಮಾರ್ಪಟ್ಟಿದೆ. ಆದರೆ, ಬಿಜೆಪಿ ಟಿಕೆಟ್ ಸಿಗದ ಅಸಮಾಧಾನಗೊಂಡಿರುವ ರೇಬಲ್ ಲೇಡಿ ನಡೆ ಇನ್ನೂ ನಿಗೂಢವಾಗಿದೆ. ಹೌದು, ಮಂಡ್ಯ ಸಂಸದೆ ಸುಮಲತಾ (Sumalatha) ರಾಜಕೀಯ ನಡೆ ನಿಗೂಢವಾಗಿದ್ದು, ಮುಂದಿನ  ರಾಜಕೀಯ ಭವಿಷ್ಯಕ್ಕಾಗಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಕೂತುಹಲ ಮೂಡಿಸಿದೆ. ಆಪ್ತರು ಹಾಗೂ ಬೆಂಬಲಿಗರ ಅಭಿಪ್ರಾಯಕ್ಕೆ ತಲೆ ಬಾಗ್ತಾರಾ, ಅಥವಾ ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ಗೌರವ ಕೊಡ್ತಾರ ಎಂಬುದನ್ನ ಕಾದು ನೋಡಬೇಕಿದೆ.

ಇನ್ನು ಮಂಡ್ಯದಲ್ಲೆ ಸುಮಲತಾರ ಮುಂದಿನ ರಾಜಕೀಯ ನಡೆ ನಿರ್ಧಾರವಾಗಲಿದ್ದು, ಏಪ್ರಿಲ್ 3 ರಂದು ತನ್ನ ಅಂತಿಮ ನಿರ್ಧಾರ ಪ್ರಕಟ ಮಾಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಪಕ್ಷೇತರವಾಗಿ ಸ್ಪರ್ಧಿಸುವಂತೆ ಆಪ್ತರು,‌ ಬೆಂಬಲಿಗರ ಒತ್ತಾಯ ಮಾಡುತ್ತಿದ್ದಾರೆ. ಹೀಗಾಗಿ ಮೈತ್ರಿಗೆ ಸೆಡ್ಡು ಹೊಡೆದು ನಮ್ಮನ್ನ ಉಳಿಸಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಇತ್ತ ಸುಮಲತಾ ಕೂಡ ಮಂಡ್ಯ ಬಿಡಲ್ಲ, ಮಂಡ್ಯ ಮಣ್ಣಿನ‌ ಋಣ ಮರೆಯಲ್ಲ ಎಂದು ಜನರಿಗೆ ಹೇಳಿದ್ದಾರೆ. ಆದರೆ, ಮತ್ತೊಂದೆಡೆ ಮೈತ್ರಿ ಬೆಂಬಲಿಸಿ, ಪಕ್ಷ ನಿಮ್ಮ ಜೊತೆ ಇರಲಿದೆ. ಸೂಕ್ತ ಸ್ಥಾನಮಾನದ ಭರವಸೆಯನ್ನ ಕೂಡ ನೀಡುವುದಾಗಿ ಬಿಜೆಪಿ ಹೈಕಮಾಂಡ್ ಹೇಳುತ್ತಿದೆ. ಹೀಗಾಗಿ ಸದ್ಯ ತ್ರಿಶಂಕು ಸ್ಥಿತಿಗೆ ತಲುಪಿದ್ದು, ಬುಧವಾರ ಮಂಡ್ಯದಲ್ಲಿಯೇ ತಮ್ಮ‌ ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ:ಮಂಡ್ಯ ಕ್ಷೇತ್ರದಲ್ಲಿ ಬೆಂಬಲ ನೀಡುವಂತೆ ಸುಮಲತಾಗೆ ಮನವಿ ಮಾಡಿದ ಕುಮಾರಸ್ವಾಮಿ

ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ನಿಖಿಲ್

ಇನ್ನು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಮತಬೇಟೆ ಮುಂದುವರೆದಿದ್ದು, ಅಪ್ಪನ ಪರವಾಗಿ ಮಗನ ಪ್ರಚಾರ ಮುಂದುವರೆಸಿದ್ದಾರೆ. ಇಂದು ಕೂಡ ಬಿಜೆಪಿ, ಜೆಡಿಎಸ್ ನಾಯಕರೊಂದಿಗೆ ನಿಖಿಲ್ ಪ್ರಚಾರ ಮಾಡಿದರು. ಮಂಡ್ಯದ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಶ್ರೀರಂಗಪಟ್ಟಣದಲ್ಲಿ ಕಾರ್ಯಕರ್ತರ ಸಮನ್ವಯ ಸಭೆ ನಡೆಸಿದರು.‌ ಸಭೆಯಲ್ಲಿ ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸಿ.ಎಸ್.ಪುಟ್ಟರಾಜು, ಸುರೇಶ್ ಗೌಡ, ಕೆಸಿ ನಾರಾಯಣ್ ಗೌಡ , ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದರು.

ಇದೆ ವೇಳೆ ಮಾತನಾಡಿದ ನಿಖಿಲ್, ‘ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಈ ಮಧ್ಯೆ ಮಾಜಿ ಸಿಎಂ ಕುಮಾರಸ್ವಾಮಿ ನಾಗಮಂಗಲದ ಚುಂಚನಗಿರಿ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಶ್ರೀಗಳ ಆರ್ಶೀವಾದ ಕೂಡ ಪಡೆದರು. ಇನ್ನು ನಾಳೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡುತ್ತಿದ್ದು, ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಕೂಡ ಭಾಗಿಯಾಗಲಿದ್ದಾರೆ. ಒಟ್ಟಾರೆ ಮಂಡ್ಯ ರಣಕಣ ರಂಗೇರಿದ್ದು, ಸುಮಲತಾ ನಡೆ ಏನು ಎಂಬುದು ಕೂತುಹಲ ಮೂಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ