ಮಂಡ್ಯ ಕ್ಷೇತ್ರದಲ್ಲಿ ಬೆಂಬಲ ನೀಡುವಂತೆ ಸುಮಲತಾಗೆ ಮನವಿ ಮಾಡಿದ ಕುಮಾರಸ್ವಾಮಿ

ಮಂಡ್ಯ ಲೋಕಸಭಾ ಅಖಾಡ ಮತ್ತಷ್ಟು ರಂಗೇರಿದೆ. ಮಂಡ್ಯ ಬಿಟ್ಟು ಹೋಗಲ್ಲ ಅಂತಾ ಸಸ್ಪೆನ್ಸ್ ಉಳಿಸಿಕೊಂಡಿರುವ ಸುಮಲತಾ ನಡೆಯಿಂದ ದೋಸ್ತಿಗಳಿಗೆ ಟೆನ್ಷನ್ ಶುರುವಾಗಿದೆ. ಹೀಗಾಗಿ ಸುಮಲತಾರ ಮನವೊಲಿಕೆಗೆ ಖುದ್ದು ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿಯೇ ಅಖಾಡಕ್ಕಿಳಿದ್ದರು. ಸುಮಲತಾರನ್ನು ಭೇಟಿ ಮಾಡಿದ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Mar 31, 2024 | 7:05 PM

ಬೆಂಗಳೂರು, ಮಾರ್ಚ್​ 31: ಮಂಡ್ಯದಿಂದ ಸುಮಲತಾ (Sumalatha) ಕಣಕ್ಕಿಳಿತಾರಾ ಅನ್ನೋದು ಇನ್ನೂ ಸಸ್ಪೆನ್ಸ್ ಆಗಿದೆ.  ಈ ಸಸ್ಪೆನ್ಸ್ ಈಗ ಬಿಜೆಪಿ ಮತ್ತು ಜೆಡಿಎಸ್​ ನಾಯಕರುಗಳಿಗೆ ಟೆನ್ಷನ್ ತಂದಿಟ್ಟಿದೆ. ಯಾಕಂದ್ರೆ, ಸೋತ್ರೂ, ಗೆದ್ರೂ ಮಂಡ್ಯದಿಂದಲೇ, ಮಂಡ್ಯ ಬಿಟ್ಟು ಹೋಗಲ್ಲ. ಏಪ್ರಿಲ್ 3ಕ್ಕೆ ನಿರ್ಧಾರ ತಿಳಿಸ್ತೀನಿ ಎಂದಿರುವ ಸುಮಲತಾ, ಅದೆಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿಬಿಡ್ತಾರೋ ಅನ್ನೋ ಆತಂಕ ಬಿಜೆಪಿ-ಜೆಡಿಎಸ್‌ ನಾಯಕರಿಗೆ ಎದುರಾಗಿದೆ. ಹೀಗಾಗಿ ಮಂಡ್ಯ ಮೈತ್ರಿ ಅಭ್ಯರ್ಥಿಯಾಗಿರುವ ಹೆಚ್‌.ಡಿ ಕುಮಾರಸ್ವಾಮಿ ಭಾನುವಾರ ಸುಮಲತಾ ನಿವಾಸಕ್ಕೆ ಭೇಟಿ ನೀಡಿ, ಮನವೊಲಿಸೋ ಪ್ರಯತ್ನ ಮಾಡಿದ್ದಾರೆ.

ಬೆಂಬಲ ನೀಡುವಂತೆ ಮನವಿ

ಭೇಟಿ ಬಳಿಕ ಅಂಬರೀಶ್ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್​ಡಿ ಕುಮಾರಸ್ವಾಮಿ, ಮಂಡ್ಯ ಕ್ಷೇತ್ರದಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದ್ದೇನೆ. ಸುಮಲತಾ ಜೊತೆ ಬಿಜೆಪಿ ವರಿಷ್ಠರು, ಬಿಎಸ್​ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ಚರ್ಚಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಏ.3ರಂದು ಮಂಡ್ಯದಲ್ಲೇ ಸಭೆ ಮಾಡಿ ಅಲ್ಲೇ ರಾಜಕೀಯ ನಿರ್ಧಾರ ಘೋಷಣೆ: ಸಮಲತಾ ಸ್ಪಷ್ಟನೆ

ಅತ್ಯಂತ ಸೌಹಾರ್ದಯುತವಾಗಿ ಭೇಟಿಯಾಗಿದ್ದೆ. ಏ. 4ರಂದು ಮಂಡ್ಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ಏ. 3ರಂದು ಸುಮಲತಾ ಮಂಡ್ಯದಲ್ಲಿ ಬೆಂಬಲಿಗರ ಸಭೆ ಕರೆದಿದ್ದಾರೆ. ಬೆಂಬಲಿಗರು, ಕಾರ್ಯಕರ್ತರು, ಹಿತೈಷಿಗಳ ಜೊತೆ ಚರ್ಚಿಸಲಿದ್ದಾರೆ. ಬಳಿಕ ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.  ಅಂಬರೀಶ್ ಅಣ್ಣನ ಮನೆ ನನಗೆ ಹೊಸದೇನಲ್ಲ. ನಾನು, ಅಂಬರೀಶ್ ಒಟ್ಟಿಗೆ ಉಂಡು ಬೆಳೆದವರು ಎಂದಿದ್ದಾರೆ.

ಎಲ್ಲ ಮುಕ್ತವಾಗಿ ಚರ್ಚೆ ಮಾಡಿದ್ದೇವೆ. ಅದನ್ನ ನಾನು ಇಲ್ಲಿ ಹೇಳಲು ಆಗಲ್ಲ. ಈ ಮಾತುಕತೆ ವೇಳೆ ಯಾವುದೇ ಷರತ್ತು ಹಾಕಿಲ್ಲ ಅವರು. ಯಾರು ಶತ್ರು, ಯಾರು ಹಿತೈಷಿ ಅಂತ ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ ಎಂದು ಹೇಳಿದ್ದಾರೆ.

ನನ್ನ ಹಾಗೂ ಅವರ ಸ್ಪರ್ಧೆ ಬಗ್ಗೆ ಚರ್ಚೆ ನಡೆದಿಲ್ಲ: ಸುಮಲತಾ

ಕುಮಾರಸ್ವಾಮಿ ಭೇಟಿ ನಂತರ ಮಂಡ್ಯ ಸಂಸದೆ ಸುಮಲತಾ ಪ್ರತಿಕ್ರಿಯಿಸಿದ್ದು, ಹೆಚ್.ಡಿ.ಕುಮಾರಸ್ವಾಮಿ ಭೇಟಿ ವೇಳೆ ಆರೋಗ್ಯಕರ ಚರ್ಚೆಯಾಗಿದೆ. ಈ ವೇಳೆ ನನ್ನ ಹಾಗೂ ಅವರ ಸ್ಪರ್ಧೆ ಬಗ್ಗೆ ಚರ್ಚೆ ನಡೆದಿಲ್ಲ. ಹಳೆಯದನ್ನು ಮನಸಿನಲ್ಲಿಟ್ಟುಕೊಳ್ಳಬೇಡಿ ಎಂದು ಹೇಳಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಸಹಕಾರ ನೀಡುವಂತೆ ಅವರು ಮನವಿ ಮಾಡಿದ್ದಾರೆ. ಆದರೆ ಏ. 3ರಂದು ಮಂಡ್ಯದಲ್ಲಿ ಬೆಂಬಲಿಗರ ಸಭೆ ಕರೆದಿರುವ ಬಗ್ಗೆ ತಿಳಿಸಿದೆ ಎಂದರು.

ಇದನ್ನೂ ಓದಿ: ಮಂಡ್ಯ ಲೋಕಸಭಾ ಜಿದ್ದಾಜಿದ್ದಿ: ಸುಮಲತಾಗೆ ಎಚ್ಚರಿಕೆಯ ಬೇಡಿಕೆ ಇಟ್ಟ ಕಾಂಗ್ರೆಸ್ ಶಾಸಕ

ಮಂಡ್ಯದಲ್ಲಿ ನಡೆಯುವ ಸಭೆಯಲ್ಲಿ ದರ್ಶನ್, ಅಭಿಷೇಕ್ ಇರುತ್ತಾರೆ. ಬೆಂಬಲಿಗರು, ಕಾರ್ಯಕರ್ತರು, ಹಿತೈಷಿಗಳ ಅಭಿಪ್ರಾಯ ಸಂಗ್ರಹಿಸುವೆ. ಬೆಂಬಲಿಗರು, ಕಾರ್ಯಕರ್ತರು, ಹಿತೈಷಿಗಳ ಸೂಚನೆಯಂತೆ ಮುನ್ನಡೆಯುವೆ. ಏ.3ರಂದು ಮಂಡ್ಯದಲ್ಲೇ ನನ್ನ ನಿರ್ಧಾರ ಪ್ರಕಟಿಸುವೆ ಎಂದು ಹೇಳಿದ್ದಾರೆ.

ಹಾಲಿ ಸಂಸದರಾದರೂ ಬಿಜೆಪಿ ಮಂಡ್ಯ ಕ್ಷೇತ್ರದ ಟಿಕೆಟ್‌ ನೀಡದ ವಿಚಾರವಾಗಿ ಮಾತನಾಡಿದ ಅವರು, ರಾಜಕೀಯದಲ್ಲಿ ಒಮ್ಮೊಮ್ಮೆ ಹೀಗೆ ಆಗುತ್ತೆ, ಏನು ಮಾಡಲು ಆಗಲ್ಲ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:12 pm, Sun, 31 March 24