ಬೆಂಗಳೂರು: ಊಟದ ವೇಳೆ ಇಲಿ ಪಾಷಾಣ ಸ್ಪ್ರೇ! 20ಕ್ಕೂ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳು ಅಸ್ವಸ್ಥ

| Updated By: ಆಯೇಷಾ ಬಾನು

Updated on: Aug 19, 2024 | 10:07 AM

ಬೆಂಗಳೂರಿನ ಜ್ಞಾನಭಾರತಿ ಪೊಲೀಸ್​ ಠಾಣಾ ವ್ಯಾಪ್ತಿಯ ಹಾಸ್ಟೆಲೊಂದರಲ್ಲಿ ರಾತ್ರಿ ​ ಊಟ ಸೇವಿಸಿದ್ದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ವಿದ್ಯಾರ್ಥಿಗಳು ಊಟ ಮಾಡುತ್ತಿದ್ದ ವೇಳೆಯೇ ಸಿಬ್ಬಂದಿ ಇಲಿ ಪಾಷಾಣ ಸ್ಪ್ರೇ ಮಾಡಿದ್ದು ಸದ್ಯ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು: ಊಟದ ವೇಳೆ ಇಲಿ ಪಾಷಾಣ ಸ್ಪ್ರೇ! 20ಕ್ಕೂ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳು ಅಸ್ವಸ್ಥ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಆಗಸ್ಟ್​.19: ಹಾಸ್ಟೆಲ್​ ಊಟ (Hostel Food) ಸೇವಿಸಿದ್ದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ವಿದ್ಯಾರ್ಥಿಗಳು (Students) ಊಟ ಮಾಡಲು ಬಂದಿದ್ದರು. ಇದೇ ವೇಳೆ ವಿದ್ಯಾರ್ಥಿಗಳು ಊಟ ಮಾಡುತ್ತಿದ್ದಾಗ ಹಾಸ್ಟೆಲ್ ಸಿಬ್ಬಂದಿ ಇಲಿ ಪಾಷಾಣ ಸ್ಟ್ರೇ ಮಾಡುತ್ತಿದ್ದರು. ಇಲಿ ಪಾಷಾಣದ ವಾಸನೆಯಿಂದ ನರ್ಸಿಂಗ್ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.

ವಾಂತಿ ಮಾಡಿಕೊಂಡು ಅಸ್ವಸ್ಥರಾದ 20ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗಳಿಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಾಸ್ಟೆಲ್​ ಸಿಬ್ಬಂದಿ ಎಡವಟ್ಟಿನಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಿದೆ. ಖಾಸಗಿ ನರ್ಸಿಂಗ್​ ಕಾಲೇಜಿಗೆ ಸೇರಿದ ಹಾಸ್ಟೆಲ್​ನಲ್ಲಿ ಘಟನೆ ನಡೆದಿದೆ. ಸದ್ಯ ಸ್ಥಳಕ್ಕೆ ಜ್ಞಾನಭಾರತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸ್ಟೆಲ್ ಸಿಬ್ಬಂದಿ ಮಂಜುನಾಥ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ನರ್ಸಿಂಗ್ ಹಾಸ್ಟೆಲ್ ಬಿಲ್ಡಿಂಗ್​ನ ನೆಲ‌ ಮಹಡಿಯಲ್ಲಿ ಊಟದ ಹಾಲ್ ಇದೆ. ವಿದ್ಯಾರ್ಥಿಗಳು ಊಟ ಮಾಡಲು ಹಾಲ್​ಗೆ ಬಂದ ವೇಳೆಯೇ ಇಲಿ ಪಾಷಾಣ ಸಿಂಪಡಣೆ ಮಾಡಲಾಗುತ್ತಿತ್ತು. ಏನು ಆಗಲ್ಲ ಬಿಡು ಎಂದು ವಿದ್ಯಾರ್ಥಿಗಳು ಊಟ ಮುಗಿಸಿ ತಮ್ಮ ತಮ್ಮ ಕೋಣೆಗಳಿಗೆ ತೆರಳಿದ್ದರು. ಆದರೆ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದಾರೆ.

ಇದನ್ನೂ ಓದಿ: ಪ್ರಾಸಿಕ್ಯೂಷನ್ ವಿರುದ್ಧ ಫೈಟ್: ಇಂದು ಹೈಕೋರ್ಟ್‌ಗೆ ಸಿದ್ದರಾಮಯ್ಯ ಪರ ವಕೀಲರಿಂದ ರಿಟ್ ಅರ್ಜಿ

ಮೂವರು ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕ, ಐಸಿಯುನಲ್ಲಿ ಚಿಕಿತ್ಸೆ

ಇನ್ನು ಆಸ್ಪತ್ರೆಗೆ ದಾಖಲಾಗಿರುವ 20 ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಯಾನ್ ವರ್ಗೀಸ್, ದಿಲೀಶ್ ಹಾಗೂ ಜೋಮೊನ್ ಸ್ಥಿತಿ ಗಂಭೀರವಾಗಿದೆ. ಜ್ಞಾನಭಾರತಿ ಅಮ್ಮ ಆಶ್ರಮದ ಬಳಿ ಇರುವ ಹಾಸ್ಟೆಲ್​ನಲ್ಲಿನ ನೆಲಮಹಡಿಯಲ್ಲಿ ಇಲಿಗಳಿಂದ ತೊಂದರೆ ಆಗ್ತಿತ್ತು. ಇದರಿಂದ ಬೇಸತ್ತ ಹಾಸ್ಟೆಲ್​ ಸಿಬ್ಬಂದಿ ಇಲಿ ಪಾಷಾಣ ಸಂಪಡಿಸಲಾಗಿತ್ತು. ಸದ್ಯ ಮೂರು ವಿದ್ಯಾರ್ಥಿಗಳ ಹೊರತುಪಡಿಸಿ ಉಳಿದವರು ಚೇತರಿಕೆ ಕಾಣುತ್ತಿದ್ದಾರೆ.

ಲೈಂಗಿಕ ದೌರ್ಜನ್ಯ ಆರೋಪ.. 9 ಮಂದಿ ಅರೆಸ್ಟ್

ಮಹಿಳೆ, ಮಗನನ್ನು ಅಪಹರಿಸಿ ದೈಹಿಕ & ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸರು, ಇಬ್ಬರು ರೌಡಿಶೀಟರ್​ಗಳು ಸೇರಿ 9 ಮಂದಿಯನ್ನು ಬಂಧಿಸಿದ್ದಾರೆ. ಕಳ್ಳತನ ಮಾಡ್ತಿದ್ದ ಮಹಿಳೆ ಮತ್ತು ಆಕೆಯ ಮಗನಿಗೆ ಹಣ ನೀಡುವಂತೆ ಬೆದರಿಸಿದ್ದಾರೆ. ಹಣ ನೀಡದಿದ್ದಾಗ ಅಪಹರಣ ಮಾಡಿ ಕೂಡಿ ಹಾಕಿ ದೈಹಿಕ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಅಲ್ಲದೇ, 2 ಲಕ್ಷ ಹಣ ಕೊಡುವಂತೆ ಕಿರುಕುಳ ನೀಡಿದ್ದಾರೆ ಅಂತಾ ಆರೋಪಿಸಿ ಮಹಿಳೆ ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ರು. ಹೀಗಾಗಿ 9 ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:45 am, Mon, 19 August 24