ರಾಯಚೂರು: ಕೈಯಲ್ಲಿ ಸೌಟು. ಬಂಡಿಯಲ್ಲಿ ಬೇಯುತ್ತಿರುವ ಮಿರ್ಚಿ. ಪಕ್ಕದಲ್ಲಿ ಮಂಡಕ್ಕಿ. ಇದನ್ನು ನೋಡೋಕೆ ನೆರೆದಿದ್ದು ನೂರಾರು ಜನ. ಬಿಸಿಬಿಸಿ ಮಿರ್ಚಿ ಬಾಂಡೆಲಿಯಿಂದ ಹೊರ ಬರುತ್ತಿದ್ದಂತೆ ಪಾರ್ಸಲ್ ಮಾಡೋಕೆ ಪ್ಯಾಕ್ ಮಾಡಲಾಯಿತು. ಎಲ್ಲರೂ ಇದನ್ನು ಕೌತುಕದಿಂದ ನೋಡುತ್ತಿದ್ದರು. ಅಷ್ಟಕ್ಕೂ ಇಲ್ಲಿ ಮಿರ್ಚಿ ಕರಿದವರು ಬೇರಾರೂ ಅಲ್ಲ, ಶಾಸಕ ಎಂ.ಪಿ.ರೇಣುಕಾಚಾರ್ಯ.
ಏಪ್ರಿಲ್ 17ರಂದು ಮಸ್ಕಿ ವಿಧಾನಸಭೆ ಉಪಚುನಾವಣೆ ನಡೆಯುತ್ತಿದ್ದು, ರಾಜಕಾರಣಿಗಳು ಇಲ್ಲಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಎಲ್ಲಾ ಪಕ್ಷದವರಿಗೂ ಇದು ಪ್ರತಿಷ್ಠೆಯ ಕಣವಾಗಿದ್ದು, ಗೆಲ್ಲಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ. ಈಗ ಶಾಸಕ ರೇಣುಕಾಚಾರ್ಯ ಅವರು ಬಿಜೆಪಿ ಪರ ಪ್ರಚಾರ ನಡೆಸಿದ್ದಾರೆ. ಇದೇ ವೇಳೆ ಅವರು ಮಿರ್ಚಿ ಕರಿದು ಎಲ್ಲರ ಗಮನ ಸೆಳೆದಿದ್ದಾರೆ.
ಬಿಜೆಪಿಯಿಂದ ಪ್ರತಾಪ್ ಗೌಡ ಪಾಟೀಲ್ ಹಾಗೂ ಕಾಂಗ್ರೆಸ್ನಿಂದ ಬಸನಗೌಡ ತುರವಿಹಾಳ ಉಪಚುನಾವಣಾ ಸಮರದ ಕಣದಲ್ಲಿದ್ದಾರೆ. ಇಂದು ಪ್ರತಾಪ್ ಗೌಡ ಪಾಟೀಲ್ ಪರವಾಗಿ ಮಸ್ಕಿ ಕ್ಷೇತ್ರದ ರಂಗಾಪುರ ಗ್ರಾಮ ಸೇರಿ ಸಾಕಷ್ಟು ಕಡೆಗಳಲ್ಲಿ ರೇಣುಕಾಚಾರ್ಯ ಪ್ರಚಾರ ಮಾಡಿದ್ದಾರೆ. ರಂಗಾಪುರ ಗ್ರಾಮದ ಸಿದ್ದಾಂತಿ ಮಠದ ಜಾತ್ರೆಯ ಟೆಂಟ್ಗೆ ತೆರಳಿದ ರೇಣುಕಾಚಾರ್ಯ, ಅಲ್ಲಿಯೂ ಮತಯಾಚನೆ ಮಾಡಿದ್ದಾರೆ.
ಈ ವೇಳೆ ರೇಣುಕಾಚಾರ್ಯ ಅಲ್ಲಿನ ಅಂಗಡಿ ಒಂದಕ್ಕೆ ತೆರಳಿ ಮಂಡಕ್ಕಿ-ಚುರುಮುರಿ ಖರೀದಿ ಮಾಡಿದ್ದಾರೆ. ನಂತರ ಅಂಗಡಿಯಾತ ಮಿರ್ಚಿ-ಬೋಂಡಾ ಕರಿಯುತ್ತಿದ್ದರು. ಈ ವೇಳೆ ಸೌಟನ್ನು ತಾವೇ ತೆಗೆದುಕೊಂಡು ರೇಣುಕಾಚಾರ್ಯ ತಾವೇ ಮಿರ್ಚಿ ಕರಿದಿದ್ದಾರೆ.
ರೇಣುಕಾಚಾರ್ಯ ಈ ರೀತಿಯ ವಿಡಿಯೋಗಳ ಮೂಲಕ ಈ ಮೊದಲಿನಿಂದಲೂ ಗಮನ ಸೆಳೆಯುತ್ತಲೇ ಬಂದಿದ್ದಾರೆ. ಈ ಮೊದಲು ಅವರು ಬಸ್ ಓಡಿಸಿ ಸುದ್ದಿಯಾಗಿದ್ದರು. ನೆರೆ ಉಂಟಾದ ಸ್ಥಳಕ್ಕೆ ತೆರಳಿ ಕ್ಯಾಮೆರಾಗೆ ಪೋಸ್ ಕೊಡಲು ಹೋಗಿ ಅವರು ನಡೆದುಕೊಂಡಿದ್ದ ರೀತಿ ಕೂಡ ಭಾರೀ ಚರ್ಚೆ ಆಗಿತ್ತು.
ಇದನ್ನೂ ಓದಿ: ಪ್ರತಾಪಗೌಡ ಪಾಟೀಲ್ ಮಾರಾಟವಾಗಿಲ್ಲ, ಸ್ವಾಭಿಮಾನಕ್ಕೆ ಧಕ್ಕೆಯಾಗಿ ಕಾಂಗ್ರೆಸ್ ತೊರೆದಿದ್ದಾರೆ: ರೇಣುಕಾಚಾರ್ಯ
Karnataka ByElection 2021: ಮಸ್ಕಿ ಕ್ಷೇತ್ರದಲ್ಲಿ ಜನರಿಂದ ಅಭೂತ ಪೂರ್ವ ಬೆಂಬಲ ಸಿಗುತ್ತಿದೆ – ಸಿದ್ದರಾಮಯ್ಯ