ಮುಡಾ ಹಗರಣದಲ್ಲಿ ಮೊದಲ ತಲೆದಂಡ: ರಾಜ್ಯಪಾಲರ ಆದೇಶಾನುಸಾರ ಹಿಂದಿನ ಆಯುಕ್ತ ಅಮಾನತು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟ್​ ಹಂಚಿಕೆ ಹಗರಣ ಭಾರೀ ಸದ್ದು ಮಾಡುತ್ತಿದ್ದು, ಇದೀಗ ಮುಡಾದ ಹಿಂದಿನ ಆಯುಕ್ತರ ತಲೆದಂಡವಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) ಹಿಂದಿನ ಆಯುಕ್ತ, ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾಗಿ ನೇಮಕವಾಗಿದ್ದ ಜಿ.ಟಿ ದಿನೇಶ್‌ ಕುಮಾರ್‌ ಅವರನ್ನು ಅಮಾನತು ಮಾಡಲಾಗಿದೆ. ಈ ಮೂಲಕ ಮುಡಾ ಹಗರಣದಲ್ಲಿ ಮೊದಲ ತಲೆದಂಡವಾದಂತಾಗಿದೆ.

ಮುಡಾ ಹಗರಣದಲ್ಲಿ ಮೊದಲ ತಲೆದಂಡ: ರಾಜ್ಯಪಾಲರ ಆದೇಶಾನುಸಾರ ಹಿಂದಿನ ಆಯುಕ್ತ ಅಮಾನತು
ದಿನೇಶ್ ಕುಮಾರ್
Follow us
| Updated By: ರಮೇಶ್ ಬಿ. ಜವಳಗೇರಾ

Updated on:Sep 02, 2024 | 9:13 PM

ಬೆಂಗಳೂರು/ಮೈಸೂರು, (ಸೆಪ್ಟೆಂಬರ್ 02): ಸೈಟ್​ ಹಂಚಿಕೆ ಹಗರಣ ಸಂಬಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತ, ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾಗಿ ನೇಮಕವಾಗಿದ್ದ ಜಿ.ಟಿ ದಿನೇಶ್‌ ಕುಮಾರ್‌ ಅವರನ್ನು ಅಮಾನತು ಮಾಡಲಾಗಿದೆ. ಮುಡಾ ಹಗರಣದ ಆರೋಪ ಹೊತ್ತಿರುವ ಮಧ್ಯ ಆಯುಕ್ತರಾಗಿದ್ದ ದಿನೇಶ್​ ಕುಮಾರ್​ ಅವರನ್ನು ರಾಜ್ಯ ಸರ್ಕಾರ, ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾಗಿ ಸರ್ಕಾರ ವರ್ಗಾಯಿಸಿತ್ತು. ಆದ್ರೆ, ಇದೀಗ ರಾಜ್ಯಪಾಲರ ಆದೇಶಾನುಸಾರವಾಗಿ ದಿನೇಶ್ ಕುಮಾರ್ ಅವರನ್ನ ಅಮಾನತುಗೊಳಿಸಲಾಗಿದೆ. ಸಸ್ಪೆಂಡ್ ಮಾಡಿ ಕಾರ್ಯದರ್ಶಿ ಉಮಾದೇವಿ ಅವರು ಇಂದು (ಸೆಪ್ಟೆಂಬರ್ 02) ಆದೇಶ ಹೊರಡಿಸಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಮುಡಾ (Muda) ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದೂ ಪಾತ್ರವಿದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ. ಈ ನಡುವೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದ ಬಳಿಕ ಆಯುಕ್ತ, ಕೆಎಎಸ್​ ಅಧಿಕಾರಿ ದಿನೇಶ್ ಕುಮಾರ್ ಅವರನ್ನು ಹಾವೇರಿ ವಿವಿ ಕಲಸಚಿವರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು.

ಇದನ್ನೂ ಓದಿ: ಮುಡಾ ಹಗರಣ ಆರೋಪಿತ ಅಧಿಕಾರಿ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ!

ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ವಿರುದ್ಧ ತನಿಖೆ ನಡೆಯುತ್ತಿದ್ದರೂ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ ನೇಮಕ ಮಾಡಿರುವ ರಾಜ್ಯ ಸರಕಾರದ ಕ್ರಮದ ವಿರುದ್ಧ ಬಿಜೆಪಿ ಭಾರಿ ಆಕ್ರೋಶ ವ್ಯಕ್ತಪಡಿಸಿತ್ತು. ಅಲ್ಲದೆ ಕೂಡಲೇ ಅವರ ನೇಮಕ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿತ್ತು. ಅಧಿಕಾರಿಗಳು ತಪ್ಪು ಮಾಡಿದರೆ ಕ್ರಮ ತೆಗೆದುಕೊಳ್ಳಬೇಕು, ಆದರೆ ಆರೋಪ ಕೇಳಿ ಬಂದಾಗಲೂ ಈ ರೀತಿ ನೇಮಕ ಮಾಡಿದ್ದೇಕೆ ಎಂದು ಬಿಜೆಪಿ ಪ್ರಶ್ನಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಮಧ್ಯ ಇದೀಗ ರಾಜ್ಯಪಾಲರ ಆದೇಶಾನುಸಾರ ಮುಡಾದಿಂದ ಹಾವೇರಿ ವಿವಿ ಕುಲಸಚಿವರಾಗಿದ್ದ ದಿನೇಶ್ ಕುಮಾರ್ ಅವರನ್ನು ಅಮಾನತುಗೊಳಿಸಿ ಅಧೀನ ಕಾರ್ಯದರ್ಶಿ ಉಮಾದೇವಿ ಆದೇಶ ಹೊರಡಿಸಿದ್ದಾರೆ.

ಲಕ್ಷ್ಮಿಪುರಂ ಠಾಣೆಯಲ್ಲಿ ದೂರು

ಮುಡಾ ಮಾಜಿ ಆಯುಕ್ತರಾಗಿದ್ದ ಡಿ.ಬಿ.ನಟೇಶ್ ಹಾಗೂ ಜಿ.ಟಿ.ದಿನೇಶ್ ಕುಮಾರ್ ಅವರು ಸರಕಾರಕ್ಕೆ 5 ಸಾವಿರ ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ. ಇವರಿಬ್ಬರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ವಕೀಲ ಅರುಣ್‌ಕುಮಾರ್ ಎನ್ನುವರು ಮೈಸೂರಿನ ಲಕ್ಷ್ಮಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:02 pm, Mon, 2 September 24