ಸಿದ್ದರಾಮಯ್ಯಗೆ ಲೋಕಾಯುಕ್ತ ವ್ಯೂಹ: ಸಿಎಂ ಮುಂದಿರುವ ಮೂರು ಆಯ್ಕೆಗಳು ಇಲ್ಲಿವೆ

| Updated By: ಗಣಪತಿ ಶರ್ಮ

Updated on: Sep 26, 2024 | 6:21 AM

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಕೊರಳಿಗೆ ಲೋಕಾ ವ್ಯೂಹ ಸುತ್ತಿಕೊಂಡಿದೆ. ಉಭಯ ಕೋರ್ಟ್​​ಗಳಲ್ಲಿ ತನಿಖೆಗೆ ಆದೇಶ ಪ್ರಕಟವಾದ ಬೆನ್ನಲ್ಲೇ ಸಿದ್ದರಾಮಯ್ಯ ಮುಂದಿನ ಕಾನೂನು ಆಯ್ಕೆಗಳ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಸಿದ್ದರಾಮಯ್ಯ ಮುಂದೆ ಮೂರು ಕಾನೂನು ಆಯ್ಕೆಗಳಿವೆ. ಅವುಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಸಿದ್ದರಾಮಯ್ಯಗೆ ಲೋಕಾಯುಕ್ತ ವ್ಯೂಹ: ಸಿಎಂ ಮುಂದಿರುವ ಮೂರು ಆಯ್ಕೆಗಳು ಇಲ್ಲಿವೆ
ಸಿದ್ದರಾಮಯ್ಯ
Image Credit source: PTI
Follow us on

ಬೆಂಗಳೂರು, ಸೆಪ್ಟೆಂಬರ್ 26: ಮೊದಲ ಅವಧಿಯಲ್ಲಿ ಸಿಎಂ ಪಟ್ಟಕ್ಕೇರಿದ್ದ ಸಿದ್ದರಾಮಯ್ಯ ಅಂದು ಲೋಕಾಯುಕ್ತ ಅಧಿಕಾರವನ್ನೇ ಮೊಟಕುಗೊಳಿಸಿದ್ದರು. ಬಳಿಕ ಲೋಕಾಯುಕ್ತ ಹಲ್ಲಿಲ್ಲದ ಹಾವಿನಂತಾಗಿತ್ತು. ಲೋಕಾಯುಕ್ತಕ್ಕೆ ಪರ್ಯಾಯವಾಗಿ ಸಿಎಂ ಸಿದ್ದರಾಮಯ್ಯ ಎಸಿಬಿ ರಚನೆ ಮಾಡಿದ್ದರು. ಇದೀಗ, ಅಂದು ಲೋಕಾಯುಕ್ತ ಅಧಿಕಾರ ಕಸಿದಿದ್ದ ಸಿಎಂ ಇಂದು ಅದೇ ಲೋಕಾಯುಕ್ತದ ಬಲೆಯಲ್ಲೇ ಸಿಲುಕಿದ್ದಾರೆ. ಹಾಗಾದರೆ, ಮುಡಾ ಹಗರಣದಲ್ಲಿ ಲೋಕಾಯುಕ್ತ ತನಿಖೆ ಎದುರಿಸಬೇಕಾದ ಸಿಎಂಗೆ ಮುಂದಿರುವ ಆಯ್ಕೆಗಳೇನು?

ಸಿದ್ದರಾಮಯ್ಯ ಮುಂದಿರೋ ಆಯ್ಕೆಗಳು

ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತನಿಖೆಗೆ ಆದೇಶ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡುವಂತೆಯೂ ಮನವಿ ಮಾಡಲಿದ್ದಾರೆ. ಹೈಕೋರ್ಟ್ ತಡೆಯಾಜ್ಞೆ ನೀಡಿದರೆ ಸಿದ್ಧರಾಮಯ್ಯಗೆ ತನಿಖೆಯಿಂದ ರಿಲೀಫ್ ಸಿಕ್ಕಂತಾಗಲಿದೆ.

ಇನ್ನು ತನಿಖೆಗೆ ರಾಜ್ಯಪಾಲರು ನೀಡಿದ್ದ ಅನುಮತಿ ಎತ್ತಿ ಹಿಡಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲು ಸಿಎಂ ಸಿದ್ಧತೆ ನಡೆಸಿದ್ದಾರೆ. ರಾಜ್ಯಪಾಲರ ಆದೇಶಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದರೂ ಸಿದ್ದರಾಮಯ್ಯಗೆ ರಿಲೀಫ್ ಸಿಗಲಿದೆ.

ಒಂದು ವೇಳೆ ಹೈಕೋರ್ಟ್​ನಲ್ಲಿ ರಿಲೀಫ್ ಸಿಗದಿದ್ದರೆ ತಕ್ಷಣ ಸುಪ್ರೀಂಕೋರ್ಟ್ ಮೆಟ್ಟಿಲೇರಲೂ ಸಿಎಂ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ.

ಸಚಿವರು, ಶಾಸಕರಿಂದ ಸಿದ್ದರಾಮಯ್ಯಗೆ ಬೆಂಬಲ

ಹೀಗೆ ಮುಂದಿನ ಹೋರಾಟಕ್ಕೆ ಸಜ್ಜಾಗಿರುವ ಸಿಎಂಗೆ ಆನೆ ಬಲವೂ ಸಿಕ್ಕಿದೆ. ಸಚಿವರು ಶಾಸಕರು ನಾವು ಸಿಎಂ ಜೊತೆಗಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ. ಅಹಿಂದ ವರ್ಗವೂ ಕೂಡಾ ಸಿಎಂ ಪರ ಬ್ಯಾಟ್ ಬೀಸುತ್ತಿದೆ. ಬಳ್ಳಾರಿ ಕಲಬುರಗಿ ಮತ್ತು ಬಳ್ಳಾರಿಯಲ್ಲಿ ಶೋಷಿತ ವರ್ಗಗಳ ಸಮುದಾಯ ಸಿದ್ದರಾಮಯ್ಯ ಪರ ಪ್ರತಿಭಟನೆ ನಡೆಸಿವೆ. ಯಾವುದೇ ಕಾರಣಕ್ಕೂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬಾರದು ಎಂದು ಸಿಎಂ ಬೆನ್ನಿಗೆ ನಿಂತಿವೆ.

ಅಕ್ಟೋಬರ್ 3ರಿಂದ ಬೃಹತ್ ಹೋರಾಟಕ್ಕೆ ಅಹಿಂದ ನಿರ್ಧಾರ

ಹುಬ್ಬಳ್ಳಿಯಲ್ಲಿ ನಿನ್ನೆ ಸಭೆ ನಡೆಸಿದ ಅಹಿಂದ ಮುಖಂಡರು, ಬೃಹತ್ ಹೋರಾಟಕ್ಕೆ ನಿರ್ಧರಿಸಿದ್ದಾರೆ. ಸಿಎಂ ರಾಜೀನಾಮೆ ಕೊಡಬಾರದು. ನಾವು ಸಿಎಂ ಬೆನ್ನಿಗೆ ನಿಲ್ಲುತ್ತೇವೆ ಅಂತಾ ಸಿಎಂ ಪರವಾಗಿ ನಿರ್ಣಯ ಕೈಗೊಂಡಿದ್ದಾರೆ. ಅಕ್ಟೋಬರ್ 3ರಿಂದ ಬೃಹತ್ ಹೋರಾಟಕ್ಕೆ ನಿರ್ಧರಿಸಿದ್ದಾರೆ.

ಏತನ್ಮಧ್ಯೆ ಕೋರ್ಟ್ ತನಿಖಾದೇಶ ನೀಡುವ ಮುನ್ನವೇ ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದ ಸಚಿವರು ದಂಡು, ನಾವೆಲ್ಲರೂ ಸಿಎಂ ಜೊತೆಗಿದ್ದೇವೆ. ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ಮುಡಾಫ್​​: ಹೈಕೋರ್ಟ್​​-ಜನಪ್ರತಿನಿಧಿಗಳ ವಿಶೇಷ ಕೋರ್ಟ್​​ ಆದೇಶದ ಸಾರ ಇಲ್ಲಿದೆ

ರಾಜೀನಾಮೆ ನೀಡುವ ಪ್ರಶ್ನೆಯ ಇಲ್ಲ, ತಪ್ಪು ಮಾಡಿಲ್ಲ ತನಿಖೆ ಎದುರಿಸಲು ಸಿದ್ಧ ಎನ್ನುತ್ತಿರುವ ಸಿದ್ದರಾಮಯ್ಯ, ಇಂದು ಯಾವ ನಿರ್ಧಾರ ತೆಗೆದುಕೊಳ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ