
ಮುಂದುವರಿದದು ಹೇಳಿದ ಸಚಿವರು, ‘‘ಕೊವಿಡ್-19 ಸೋಂಕಿನ ಆರಂಭದ ದಿನಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ನೀಡಿರಲಿಲ್ಲ. ಮಾರ್ಚ್ ತಿಂಗಳಲ್ಲಿ ಭಾರತದಲ್ಲೇ ಮೊದಲ ಸಾವು ಕಲಬುರಗಿಯಲ್ಲಿ ಆಯ್ತು. ಆಗ ಸ್ವತಃ ನಾನೇ ಅಲ್ಲಿಗೆ ಹೋಗಿದ್ದೆ. ಆಗ ಕೊವಿಡ್-19 ಬಗ್ಗೆ ಜನರು ಹೆಚ್ಚು ಭಯಭೀತರಾಗಿದ್ದರು. ನಾನೇ ಮುಂದೆ ನಿಂತು ಎಲ್ಲಾ ಕೆಲಸ ಮಾನಿಟರ್ ಮಾಡಿ ವಾಪಸಾಗಿದ್ದೆ,’’ ಎಂದರು.
‘‘ಈ ವ್ಯಾಧಿಯನ್ನು ಸಂಪೂರ್ಣ ಹೊಗಲಾಡಿಸಲು ನಮ್ಮಿಂದ ಆಗಲ್ಲ. ನಾವೆಲ್ಲ ನಿಮಿತ್ತ ಮಾತ್ರ. ರಾಜ್ಯ ಸರ್ಕಾರ ಸಾಧ್ಯವಾದಷ್ಟು ಉತ್ತಮ ಕೆಲಸ ಮಾಡುತ್ತಿದೆ. ಟೆಕ್ನಾಲಜಿ ಮುಂದುವರಿದ ರಾಷ್ಟ್ರಗಳಲ್ಲೂ ಲಸಿಕೆ ಕಂಡುಹಿಡಿಯಲಾಗಿಲ್ಲ. ಆದರೂ ಸರ್ಕಾರಗಳು ಕೊವಿಡ್-19 ಸೋಂಕನ್ನು ನಿಯಂತ್ರಣ ಮಾಡುತ್ತಿವೆ. ಬಿಜೆಪಿ ಸರ್ಕಾರಗಳು ಅಧಿಕಾರದಲ್ಲಿರುವ ಕಡೆ ಮಾತ್ರ ಈ ರೋಗ ಬಂದಿಲ್ಲ, ಎಲ್ಲ ರಾಜ್ಯಗಳಲ್ಲೂ ಅದು ವ್ಯಾಪಿಸಿದೆ. ನಮ್ಮ ಸರ್ಕಾರ ಪಿಡುಗನ್ನು ಸಮರ್ಪಕವಾಗಿ ನಿಭಾಯಿಸಿದೆ,’’ ಎಂದು ಶ್ರೀರಾಮುಲು ಹೇಳಿದರು.