Coronavirus Returns: ಆಂಧ್ರಪ್ರದೇಶಗಲ್ಲಿ ಕೊರೊನಾಗೆ ಇಬ್ಬರು ಬಲಿ; ಕರ್ನಾಟಕಕ್ಕೆ ಮತ್ತೆ ಒಕ್ಕರಿಸಲಿದೆಯೇ ಕೋವಿಡ್ ಮಹಾಮಾರಿ?
ನಾಲ್ಕು ವರ್ಷಗಳ ಬಳಿಕ ದೇಶದಲ್ಲಿ ಮತ್ತೆ ಕೊರೊನಾ ಹೆಮ್ಮಾರಿಯ ಆತಂಕ ಶುರುವಾಗಿದೆ. ಪಕ್ಕದ ಆಂಧ್ರಪ್ರದೇಶದ ಕಡಪಾದಲ್ಲಿ ಇಬ್ಬರು ಕೋವಿಡ್ಗೆ ಬಲಿಯಾಗಿದ್ದು, ಕರ್ನಾಟಕದಲ್ಲೂ ಜುಲೈ ತಿಂಗಳಿನಲ್ಲಿ ಪ್ರಕರಣಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಸೋಂಕಿನ ಗಂಭೀರತೆ ಹಾಗೂ ಹೊಸ ರೂಪಾಂತರದ ಶಂಕೆ ಕುರಿತು ಆರೋಗ್ಯ ಇಲಾಖೆ ಆಯುಕ್ತರು ನೀಡಿರುವ ಮಹತ್ವದ ಮಾಹಿತಿ ನೀಡಿದ್ದು, ಸದ್ಯಕ್ಕೆ ಪರಿಸ್ಥಿತಿ ಗಂಭೀರವಾಗಿಲ್ಲ ಎಂದಿದ್ದಾರೆ. ಆದರೆ ಮತ್ತೊಮ್ಮೆ ಕೊರೊನಾ ಕಂಟಕ ರಾಜ್ಯಕ್ಕೆ ತಗುಲುವ ಆತಂಕ ಸೈಷ್ಟಿಯಾಗಿದೆ.

ಮುಖ್ಯಾಂಶಗಳು
- ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ಕೋವಿಡ್ಗೆ ಇಬ್ಬರು ಬಲಿಯಾಗಿರುವುದು ತೀವ್ರ ಆತಂಕ ಮೂಡಿಸಿದೆ.
- ಕರ್ನಾಟಕದಲ್ಲಿ ಕಳೆದ ಹತ್ತು ದಿನಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.
- ಸದ್ಯಕ್ಕೆ ಪರಿಸ್ಥಿತಿ ಗಂಭೀರವಾಗಿಲ್ಲ ಎಂದು ಆರೋಗ್ಯ ಇಲಾಖೆ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು, ಜುಲೈ 14: ನಾಲ್ಕು ವರ್ಷಗಳ ಹಿಂದೆ ಜಗತ್ತನ್ನೇ ನಡುಗಿಸಿದ್ದ ಹೆಮ್ಮಾರಿ ಕೊರೊನಾ (Coronavirus) ಈಗ ಮತ್ತೆ ಅಬ್ಬರಿಸಲು ಹೊಂಚು ಹಾಕುತ್ತಿದೆ. ನೆರೆರಾಜ್ಯ ಆಂಧ್ರಪ್ರದೇಶದಲ್ಲಿ ಕೊವಿಡ್ ಆತಂಕ ಸೃಷ್ಟಿಸಿದ್ದು, ಕರ್ನಾಟಕದ ಗಡಿಯಲ್ಲೂ ಆತಂಕದ ನೆರಳು ಆವರಿಸಿದೆ. ರಾಜ್ಯದಲ್ಲಿ ಈಗಾಗಲೇ 30ಕ್ಕೂ ಹೆಚ್ಚು ಜನರಿಗೆ ಕೋವಿಡ್ ಪಾಸಿಟಿವ್ ಬಂದಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ಆಂಧ್ರದ ಕಡಪಾದಲ್ಲಿ ಇಬ್ಬರ ಬಲಿ!
ಕಳೆದ ಮೂರು ವರ್ಷಗಳ ಹಿಂದೆ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ ಚೀನಾದ ವುಹಾನ್ ವೈರಸ್ ರೂಪಾಂತರದ ಭೀತಿ ಈಗ ಮತ್ತೆ ಶುರುವಾಗಿದೆ. ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ಕೋವಿಡ್ಗೆ ಇಬ್ಬರು ಬಲಿಯಾಗಿರುವ ಸುದ್ದಿ ವೈರಲ್ ಆಗಿದ್ದು, ಎಂಟು ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಹೊಸ ರೂಪಾಂತರದ ಶಂಕೆಯಿಂದಾಗಿ ರೋಗಿಗಳ ಐದು ಸ್ಯಾಂಪಲ್ಗಳನ್ನು ಪುಣೆಯ ಎನ್ಐವಿ (NIV) ಲ್ಯಾಬ್ಗೆ ಕಳುಹಿಸಲಾಗಿದ್ದು, ವರದಿಗಾಗಿ ಅಲ್ಲಿನ ಆರೋಗ್ಯ ಇಲಾಖೆ ಕಾಯುತ್ತಿದೆ.
ರಾಜ್ಯದಲ್ಲಿ ಹೆಚ್ಚಿದ ಕೋವಿಡ್ ಪ್ರಕರಣಗಳು!
ನೆರೆರಾಜ್ಯದ ಭೀತಿಯ ಬೆನ್ನಲ್ಲೇ ಕರ್ನಾಟಕದಲ್ಲೂ ಕೋವಿಡ್ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿದೆ. ಜೂನ್ ತಿಂಗಳಲ್ಲಿ ಕೇವಲ 14 ಪಾಸಿಟಿವ್ ಪ್ರಕರಣಗಳಿದ್ದರೆ, ಜುಲೈನ ಕಳೆದ ಹತ್ತು ದಿನಗಳಲ್ಲಿಯೇ ಈ ಸಂಖ್ಯೆ 32ಕ್ಕೆ ತಲುಪಿದೆ. ಒಟ್ಟು 193 ಶಂಕಿತರನ್ನು ಪರೀಕ್ಷೆಗೆ ಒಳಪಡಿಸಿದಾಗ 32 ಜನರಲ್ಲಿ ಸೋಂಕು ದೃಢಪಟ್ಟಿದೆ.
ಇದನ್ನೂ ಓದಿ ಆಂಧ್ರದಲ್ಲಿ ಮತ್ತೆ ಕೋವಿಡ್ ಆತಂಕ: 2022 ರ ನಂತರ ಮೊದಲ ಸಾವು ದಾಖಲು, ಕಡಪದಲ್ಲಿ ಇಬ್ಬರು ಬಲಿ, ನಾಲ್ವರಿಗೆ ಪಾಸಿಟಿವ್
ಆತಂಕ ಬೇಡ ಎಂದ ಆರೋಗ್ಯ ಇಲಾಖೆ ಆಯುಕ್ತರು
ಈ ಕೋವಿಡ್ ಆತಂಕದ ಕುರಿತು ಸ್ಪಷ್ಟನೆ ನೀಡಿರುವ ಆರೋಗ್ಯ ಇಲಾಖೆ ಆಯುಕ್ತರಾದ ಗುರುದತ್ತ್ ಹೆಗಡೆ, ಕಡಪಾದಲ್ಲಿ ಸಂಭವಿಸಿರುವ ಸಾವುಗಳು ಶಂಕಿತ ಪ್ರಕರಣಗಳಾಗಿವೆ. ಈ ಬಗ್ಗೆ ಆಂಧ್ರ ಸರ್ಕಾರದೊಂದಿಗೆ ನಾವು ಮಾಹಿತಿ ಪಡೆಯುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ ಸದ್ಯ ಪತ್ತೆಯಾಗಿರುವ ಪ್ರಕರಣಗಳು ಅಷ್ಟೊಂದು ಗಂಭೀರವಾಗಿಲ್ಲ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕಡ್ಡಾಯ ಪರೀಕ್ಷೆ ನಡೆಸಿದಾಗ ಮಾತ್ರ ಲಕ್ಷಣ ರಹಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ, ಆರೋಗ್ಯ ಇಲಾಖೆ ದಿನನಿತ್ಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಧೈರ್ಯ ತುಂಬಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:38 am, Tue, 14 July 26




