ಮೈಸೂರು, (ಮಾರ್ಚ್ 15): 4 ಬಾಲ್ ಗೆ 20 ರನ್. ಸಿಕ್ಸರ್ ಮೇಲೆ ಸಿಕ್ಸರ್.. ಕೈ ಬಿಟ್ಟು ಹೋಗಿದ್ದ ಪಂದ್ಯವನ್ನು ಗೆಲ್ಲಿಸಿದ್ದು ದಿವ್ಯಾ ಕುಮಾರ್ ಎನ್ನುವಾತ. ಈ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದ. ಈತ ಮೈಸೂರು (Mysuru) ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿ ವಡ್ಡರಗುಡಿ ನಿವಾಸಿಯಾಗಿರುವ ದಿವ್ಯಾ ಕುಮಾರ್ ಸೋಲು ಹಂತದಲ್ಲಿದ್ದ ತಂಡವನ್ನು ಗೆಲ್ಲಿಸಿ ಹೀರೋ ಆಗಿ ಮಿಂಚಿದ್ದಾರೆ. ಆದ್ರೆ, ಪಂದ್ಯ ಗೆದ್ದ ಬಳಿಕ ದಿವ್ಯಾ ಕುಮಾರ್ ಸದ್ಯ ಅನುಮಾನಾಸ್ಪದವಾಗಿ ಸಾವನಪ್ಪಿದ್ದು, ಇದೊಂದು ಕೊಲೆ. ಸೋಲು ಭೀತಿಯಲ್ಲಿದ್ದ ತಂಡವನ್ನು ಗೆಲ್ಲಿಸಿದ್ದಕ್ಕೆ ಹತ್ಯೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿದ್ದಾರೆ. ಹೀಗಾಗಿ ದಿವ್ಯಾ ಕುಮಾರ್ ಸಾವಿನ ಸುತ್ತ ಅನುಮಾನಗಳ ಹುತ್ತ ಹುಟ್ಟಿಕೊಂಡಿವೆ.
ಕುಮಾರ್ ಜೀವನಕ್ಕೆ ಅಂತ ಕೂಲಿ ಕೆಲಸ ಮಾಡಿಕೊಂಡಿದ್ದ. ಆದ್ರೆ ಕ್ರಿಕೆಟ್ ಅಂದ್ರೆ ಈತನಿಗೆ ಹುಚ್ಚು. ಅಷ್ಟೆ ಅಲ್ಲದೆ ತಾಲೂಕಿನಲ್ಲೇ ಉತ್ತಮ ಟೆನಿಸ್ ಬಾಲ್ ಕ್ರಿಕೆಟರ್ ಎಂದು ಹೆಸರು ಪಡೆದಿದ್ದ. ಇದಕ್ಕಾಗಿ ಎಲ್ಲೆ ಕ್ರಿಕೆಟ್ ಟೂರ್ನಮೆಂಟ್ ಇದ್ರು ಆತನನ್ನ ಕರೆದುಕೊಂಡು ಹೋಗಿ ಕ್ರಿಕೆಟ್ ಆಡಿಸುತ್ತಿದ್ದರು. ಹೀಗೆ ಕಳೆದ ತಿಂಗಳು ಕೂಡ ಈತ ನೇರಳೆ ಪ್ರೀಮಿಯರ್ ಲೀಗ್ ಹೆಸರಿನಲ್ಲಿ ಆಯೋಜನೆ ಮಾಡಿದ್ದ ಕ್ರಿಕೆಟ್ ಪಂದ್ಯಾವಳಿ.ಜೆಪಿ ವಾರಿಯರ್ಸ್ ತಂಡ ಪರ ಕ್ರಿಕೆಟ್ ಆಡಿದ್ದ. ಡೆವಿಲ್ಸ್ ಸೂಪರ್ ಕಿಂಗ್ ತಂಡದ ವಿರುದ್ಧ 4 ಬಾಲ್ ಗೆ 20 ರನ್ ಹೊಡೆದು ಸೋಲುವ ಪಂದ್ಯವನ್ನು ಗೆಲ್ಲಿಸಿದ್ದಾನೆ.
ಇದಾದ ಬಳಿಕ ಪಂದ್ಯ ಗೆದ್ದ ಖುಷಿಯಲ್ಲಿ ಪಾರ್ಟಿ ಮಾಡಿ ಬೈಕ್ ನಲ್ಲಿ ಮನೆಗೆ ಹೋಗುತ್ತಿದ್ದವನ್ನು ರಸ್ತೆ ಬದಿಯ ಪೊದೆಯಲ್ಲಿ ಕೋಮ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, 20 ದಿನದ ನಂತರ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾನೆ. ಈತನ ಸಾವಿನ ಬಗ್ಗೆ ಕುಟುಂಬಸ್ಥರ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಮೊದಲಿಗೆ ಕುಟುಂಬಸ್ಥರ ಬೈಕ್ ಅಪಘಾತವಾಗಿರಬಹದು ಎಂದುಕೊಂಡಿದ್ದರಂತೆ. ಆದ್ರೆ ಘಟನೆ ನಡೆದ ಸ್ಥಳದಲ್ಲಿ ಯಾವುದೇ ಕಲ್ಲುಗಳಿಲ್ಲ. ಸಮತಟ್ಟಾದ ಸ್ಥಳವಾಗಿದೆ. ಬೈಕ್ ಬಿದ್ದಿರುವುದಕ್ಕೂ ಆತ ಕೋಮಸ್ಥಿತಿಯಲ್ಲಿ ಬಿದ್ದಿರುವ ಸ್ಥಳಕ್ಕೂ ಸಾಕಷ್ಟು ದೂರ ಇದೆ. ಇದರಿಂದ ಪಂದ್ಯ ಗೆಲ್ಲಿಸಿದ್ದ ದ್ವೇಷಕ್ಕೋ ಅಥವಾ ಪಾರ್ಟಿಯಲ್ಲಿ ಏನಾದ್ರು ಗಲಾಟೆಯಾಗಿ ಕೊಲೆ ಮಾಡಿರಬಹದು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಹೆಚ್.ಡಿ.ಕೋಟೆ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ.
ಒಟ್ಟಾರೆ ಈ ಸಾವಿನ ಸುತ್ತ ಸಾಕಷ್ಟು ಅನುಮಾನದ ಹುತ್ತ ಇದ್ದು, ಪೊಲೀಸರ ಸರಿಯಾದ ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ.