ಆಪರೇಷನ್ ಹಸ್ತಕ್ಕೆ ಬಿಜೆಪಿ ಕೌಂಟರ್: ಮೈಸೂರಿಗೆ ಡಿಕೆಶಿ ಭೇಟಿ ವೇಳೆ ನಡೆಯಲಿದೆ ಮಹತ್ವದ ಬೆಳವಣಿಗೆ

ಮೈಸೂರು, ಕೊಡುಗು ಲೋಕಸಭಾ ಕ್ಷೇತ್ರವನ್ನು ಗೆಲ್ಲುವ ಪಣ ತೊಟ್ಟಿರುವ ಸಿಎಂ ಸಿದ್ದರಾಮಯ್ಯ ಮೈಸೂರಿನ ರೆಸಾರ್ಟ್​ನಲ್ಲಿ ಕೂತು ಆಪರೇಷನ್ ಹಸ್ತಕ್ಕೆ ಮುಂದಾಗಿದ್ದಾರೆ. ಈಗಾಗಲೇ ಬಿಎಸ್​ಯಡಿಯೂರಪ್ಪರ ಆಪ್ತರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಬಿಜೆಪಿ ಕೂಡ ಕೌಂಡರ್ ಕೊಡಲು ಮುಂದಾಗಿದ್ದು ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಸೆಳೆಯುತ್ತಿದೆ. ನಾಳೆ ಡಿಕೆ ಶಿವಕುಮಾರ್ ಮೈಸೂರಿಗೆ ಬರುವ ವೇಳೆ ಬಿ.ವೈ. ವಿಜಯೇಂದ್ರ ಮತ್ತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕರೆಸಿ ಕೌಂಟರ್ ಕೊಡೋಕೆ ಬಿಜೆಪಿ ಮುಂದಾಗಿದೆ.

ಆಪರೇಷನ್ ಹಸ್ತಕ್ಕೆ ಬಿಜೆಪಿ ಕೌಂಟರ್: ಮೈಸೂರಿಗೆ ಡಿಕೆಶಿ ಭೇಟಿ ವೇಳೆ ನಡೆಯಲಿದೆ ಮಹತ್ವದ ಬೆಳವಣಿಗೆ
ಬಿ.ವೈ. ವಿಜಯೇಂದ್ರ
Edited By: ಆಯೇಷಾ ಬಾನು

Updated on: Mar 26, 2024 | 12:18 PM

ಮೈಸೂರು, ಮಾರ್ಚ್​.26: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಮೈಸೂರು ಗೆಲ್ಲೋಕೆ ರಣತಂತ್ರ ರೂಪಿಸಿರುವ ಸಿಎಂ ಸಿದ್ದರಾಮಯ್ಯ (Siddaramaiah) ಶತಾಯಗತಾಯವಾಗಿ ಮೈತ್ರಿ ಅಭ್ಯರ್ಥಿ ಯದುವೀರ್ ಒಡೆಯರ್​ ಸೋಲಿಸೋಕೆ ತೆರೆಮರೆಯಲ್ಲೇ ಕಸರತ್ತು ನಡೆಸ್ತಿದ್ದಾರೆ. ತಮ್ಮ ತವರು ಜಿಲ್ಲೆಯಲ್ಲಿ ಗೆಲುವು ಸಾಧಿಸುವುದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಸಿಎಂ ಮೈಸೂರಿನ ರೆಸಾರ್ಟ್​ನಲ್ಲಿ ಕುಳಿತುಕೊಂಡೇ ಆಪರೇಷನ್ ಹಸ್ತಕ್ಕೆ (Operation Hasta) ಮುಂದಾಗಿದ್ದಾರೆ. ಅದ್ರಲ್ಲೂ ಯಡಿಯೂರಪ್ಪ (BS Yediyurappa) ಆಪ್ತರಿಗೆ ಗಾಳ ಹಾಕಿದ್ದಾರೆ. ಇದು ಒಂದು ಕಡೆಯಾದರೆ ಮತ್ತೊಂದೆಡೆ ಆಪರೇಷನ್ ಹಸ್ತಕ್ಕೆ ಕೌಂಟರ್ ಕೊಡಲು ಬಿಜೆಪಿ ಕೂಡ ಪ್ಲಾನ್ ಮಾಡಿದೆ (Operation Kamala). ಇತ್ತ ಕಾಂಗ್ರೆಸ್ ಸ್ಥಳೀಯ ನಾಯಕರನ್ನ ಸೆಳೆಯಲು ಬಿಜೆಪಿ ತಂತ್ರ ಹೆಣೆಯುತ್ತಿದೆ.

ಕಳೆದ ಮೂರು ದಿನಗಳಿಂದ ಮೈಸೂರಿನಲ್ಲೇ ವಾಸ್ತವ್ಯ ಹೂಡಿರೋ ಸಿಎಂ ಸಿದ್ದರಾಮಯ್ಯ, ಇದೀಗ ರೆಸಾರ್ಟ್​ನಲ್ಲೇ ಕೂತು ಬಿ.ಎಸ್​. ಯಡಿಯೂರಪ್ಪ ಆಪ್ತರಿಗೂ ಗಾಳ ಹಾಕಿದ್ದಾರೆ. ಬಿಎಸ್​ವೈ ಆಪ್ತ ಹೆಚ್​.ವಿ.ರಾಜೀವ್​ ಬಳಿಕ ಮತ್ತೊಬ್ಬರಿಗೆ ಗಾಳ ಹಾಕಿದ್ದಾರೆ. ಯಡಿಯೂರಪ್ಪ ಆಪ್ತ ಸದಾನಂದ ಅವರನ್ನು ಸೆಳೆಯೋಕೆ ಸರ್ಕಸ್​ ನಡೆಸ್ತಿದ್ದಾರೆ. ಬಿಜೆಪಿಯಿಂದ ವರುಣಾ ಕ್ಷೇತ್ರದ ಆಕಾಂಕ್ಷಿಯೂ ಆಗಿದ್ದ ಸದಾನಂದ್​​ರನ್ನ ಕಾಂಗ್ರೆಸ್​ಗೆ ಸೆಳೆಯುವಲ್ಲಿ ಸಿಎಂ ಸಕ್ಸಸ್ ಆಗಿದ್ದಾರೆ. ವೀರಶೈವ ಸಮುದಾಯದ ಮುಖಂಡ ಆಗಿರೋದ್ರಿಂದ, ವೀರಶೈವ ಮತಗಳನ್ನ ಕ್ರೋಢೀರಣಕ್ಕೂ ಸಿಎಂ ಪ್ಲ್ಯಾನ್ ಮಾಡಿದ್ದಾರೆ. ಈ ಮಧ್ಯೆ ಪಾಲಿಕೆಯ ಮಾಜಿ ಸದಸ್ಯರುಗಳು ಕೂಡ ಕಾಂಗ್ರೆಸ್​ಗೆ ಸೇರ್ಪಡೆಯಾಗಿರೋದು ಮತ್ತಷ್ಟು ಬಲ ಬಂದಂತಾಗಿದೆ.

ಇದನ್ನೂ ಓದಿ: ಮೈಸೂರು ರೆಸಾರ್ಟ್​​ನಲ್ಲಿ ಕುಳಿತು ಸಿಎಂ ಸಿದ್ದರಾಮಯ್ಯ ಆಪರೇಷನ್ ಹಸ್ತ: ಯಡಿಯೂರಪ್ಪ ಆಪ್ತರಿಗೆ ಗಾಳ

ಅಪರೇಷನ್ ಹಸ್ತಕ್ಕೆ ಕೌಂಟರ್ ಆಪರೇಷನ್ ಪ್ಲಾನ್ ಮಾಡಿದ ಬಿಜೆಪಿ

ಇನ್ನು ಅಪರೇಷನ್ ಹಸ್ತಕ್ಕೆ ಕೌಂಟರ್ ಆಪರೇಷನ್ ಮಾಡಲು ಬಿಜೆಪಿ ಮುಂದಾಗಿದೆ. ಆಪರೇಷನ್ ಕಮಲ ಮೂಲಕ ಕಾಂಗ್ರೆಸ್​ನ ಸ್ಥಳೀಯ ನಾಯಕರನ್ನ ಸೆಳೆಯಲು ಬಿಜೆಪಿ ತಂತ್ರ ಹೆಣೆಯುತ್ತಿದೆ. ನಾಳೆಯೇ ಕೆಲ ಮುಖಂಡರು ಹಾಗೂ ಕಾರ್ಯಕರ್ತರನ್ನ ಬಿಜೆಪಿ ಸೇರಿಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಇದಕ್ಕಾಗಿ ಬಿಜೆಪಿ ಹಲವು ಕಾಂಗ್ರೆಸ್ ಮುಖಂಡರನ್ನ ಸಂಪರ್ಕ ಮಾಡಿದೆ. ನಾಳೆ ಕಾಂಗ್ರೆಸ್ ನಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮ ಇದೆ. ಇದಕ್ಕಾಗಿ ನಾಳೆ‌ ಮೈಸೂರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಬರುತ್ತಿದ್ದಾರೆ. ಹೀಗಾಗಿ ನಾಳೆಯೇ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕರೆಸಿ ಕೌಂಟರ್ ಕೊಡೋಕೆ ಬಿಜೆಪಿ ಮುಂದಾಗಿದೆ.

ಸಿದ್ದರಾಮಯ್ಯ ಕೈಬಲಪಡಿಸಲು ಕಾಂಗ್ರೆಸ್​ ಸೇರುತ್ತಿದ್ದೇನೆ ಎಂದ ಬಿಜೆಪಿ ಮುಖಂಡ H.V.ರಾಜೀವ್

ಆಪರೇಷನ್ ಹಸ್ತದ ಬಳಿಕ ಕಾಂಗ್ರೆಸ್ ನತ್ತ ಮುಖ ಮಾಡಿದ ಬಿಜೆಪಿ ಮುಖಂಡ H.V.ರಾಜೀವ್ ಮೈಸೂರಿನಲ್ಲಿ ಟಿವಿ9 ಜೊತೆ ಮಾತನಾಡಿದ್ದು, ಸಿಎಂ ಸಿದ್ದರಾಮಯ್ಯ ಕೈಬಲಪಡಿಸಲು ಕಾಂಗ್ರೆಸ್​ ಸೇರುತ್ತಿದ್ದೇನೆ. ಸಿಎಂ ಸಿದ್ದರಾಮಯ್ಯ ಜನಪರ ಕಾರ್ಯಕ್ರಮ ಮೆಚ್ಚಿ ಕಾಂಗ್ರೆಸ್ ಸೇರುತ್ತಿದ್ದೇನೆ. ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್ ನನಗೆ ಆತ್ಮೀಯರು‌. ಎಸ್​ಟಿಎಸ್ ಆತ್ಮೀಯರಾಗಿದ್ದಕ್ಕೆ ಫ್ಲೆಕ್ಸ್​ನಲ್ಲಿ ಫೋಟೋ ಹಾಕಿದ್ದಾರೆ. ನಾಳಿನ ಕಾರ್ಯಕ್ರಮಕ್ಕೆ ಸೋಮಶೇಖರ್​ಗೆ ಆಹ್ವಾನ ನೀಡಿದ್ದೇನೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Dileep CP

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಅದನ್ನು ಹೊರತು ಪಡಿಸಿದರೆ ಒಂದಷ್ಟು ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More
Follow Us