ಮೈಸೂರಿನಲ್ಲಿ ಕಿದ್ವಾಯಿ ಆಸ್ಪತ್ರೆಗೆ ಶಂಕು ಸ್ಥಾಪನೆ: ತಮ್ಮ ಕಾಲದ ನೆನಪು ಮೆಲುಕು ಹಾಕಿದ ಸಿಎಂ ಸಿದ್ದರಾಮಯ್ಯ

ಇಂದಿನಿಂದ 2 ದಿನ ಮೈಸೂರು ಜಿಲ್ಲಾ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರು ಇಂದು ಬರೊಬ್ಬರಿ 49 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೈಸೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಬಳಿಕ ಮಾತನಾಡಿದ ಅವರು, ನಾನು ವೈದ್ಯನಾಗಬೇಕೆಂಬ ಆಸೆ ಇತ್ತು, ಅದರೆ ಮಾರ್ಕ್ಸ್​ ಬರಲಿಲ್ಲ. ಹೀಗಾಗಿ ಸಿಎಂ ಆದೆ ಎಂದು ತಮ್ಮ ಹಳೆ ನೆನಪು ಮೆಲುಕು ಹಾಕಿದ್ದಾರೆ.

ಮೈಸೂರಿನಲ್ಲಿ ಕಿದ್ವಾಯಿ ಆಸ್ಪತ್ರೆಗೆ ಶಂಕು ಸ್ಥಾಪನೆ: ತಮ್ಮ ಕಾಲದ ನೆನಪು ಮೆಲುಕು ಹಾಕಿದ ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Edited By:

Updated on: Dec 22, 2023 | 3:56 PM

ಮೈಸೂರು, ಡಿಸೆಂಬರ್​ 22: ಇಂದಿನಿಂದ 2 ದಿನ ಮೈಸೂರು ಜಿಲ್ಲಾ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಕಿದ್ವಾಯಿ ಆಸ್ಪತ್ರೆ (Kidwai Cancer Hospital) ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಬಳಿಕ ಮಾತನಾಡಿದ ಅವರು, ನಾನು ವೈದ್ಯನಾಗಬೇಕೆಂಬ ಆಸೆ ಇತ್ತು, ಅದರೆ ಮಾರ್ಕ್ಸ್​ ಬರಲಿಲ್ಲ. ಆಗ ನನಗೆ ಮೆಡಿಕಲ್​ ಸೀಟ್ ಸಿಗದೆ ಇರುವುದೇ ಒಳ್ಳೆಯದಾಯ್ತು. ಈಗ ಸಿಎಂ ಆದೆ ಎಂದು ತಮ್ಮ ಹಿಂದಿನ ಕಾಲದ ನೆನಪು ಮೆಲುಕು ಹಾಕಿದ್ದಾರೆ.

ನಾನು ಓದುತ್ತಿದ್ದ ಕಾಲೇಜಿನ ಬಳಿಯೇ ಮೈಸೂರು ಮೆಡಿಕಲ್ ಕಾಲೇಜ್ ಇತ್ತು. ಕಾಲೇಜ್ ಬಳಿ ಒಂದು ಕ್ಯಾಟೀನ್ ಇತ್ತು. ಅಲ್ಲಿ ದೋಸೆ ತಿನ್ನಲು ಹೋಗುತ್ತಿದ್ದೆ. ಆಗ 19 ಪೈಸೆಗೆ ಒಂದು ಮಸಾಲೆ ದೋಸೆ ಸಿಗುತ್ತಿತ್ತು. ನಾನು ಕಾಫಿ ಕುಡಿಯುವುದು ಬಿಟ್ಟು ಎರಡು ಸೆಟ್ ದೋಸೆ ತಿನ್ನುತ್ತಿದ್ದೆ ಎಂದು ನೆನಪು ಮೆಲುಕು ಹಾಕಿದರು.

ಇದನ್ನೂ ಓದಿ: ಮೈಸೂರಿನ ಕಿದ್ವಾಯಿ ಆಸ್ಪತ್ರೆಯ ಶಂಕು ಸ್ಥಾಪನೆಯಲ್ಲಿ ಶೂ ಧರಿಸಿಯೇ ಸಿಎಂ ಭೂಮಿ ಪೂಜೆ; ಇಲ್ಲಿದೆ ವಿಡಿಯೋ

ಬೆಂಗಳೂರು ಬಿಟ್ಟರೆ ವೇಗವಾಗಿ ಬೆಳೆಯುತ್ತಿರುವ ನಗರ ಮೈಸೂರು. ಬೆಂಗಳೂರು ಹಾಗೂ ಕಲಬುರಗಿಯಲ್ಲಿ ಕಿದ್ವಾಯಿ ಆಸ್ಪತ್ರೆ ಇದೆ. ಕ್ಯಾನ್ಸರ್ ರೋಗಿಗಳಿಗೆ ಕಡಿಮೆ ಬೆಲೆಯಲ್ಲಿ ಚಿಕಿತ್ಸೆ ಸಿಗಬೇಕು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಹೆಚ್ಚಿನ ಒತ್ತಡವಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕ್ಯಾನ್ಸರ್ ಆಸ್ಪತ್ರೆ ತೆರೆಯಬೇಕು ಎಂದಿದ್ದಾರೆ.

ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಆರಂಭಿಸಿದ್ದು ನಾನೇ: ಸಿಎಂ

ಜಯದೇವ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ಸಿಗುತ್ತೆ ಅಂತಾ ಕೇಳಿದ್ದೇನೆ. ಈ ರೀತಿಯ ಚಿಕಿತ್ಸೆ ವ್ಯವಸ್ಥೆ ಬೇರೆ ಆಸ್ಪತ್ರೆಯಲ್ಲಿ ಯಾಕೆ ಸಾಧ್ಯವಿಲ್ಲ? ನಾನು ಸಿಎಂ ಆಗುವವರೆಗೂ ಇಲ್ಲಿ ಒಂದು ಜಿಲ್ಲಾ ಆಸ್ಪತ್ರೆ ಇರಲಿಲ್ಲ. ಹಿಂದಿನ ಸರ್ಕಾರ ಕಿದ್ವಾಯಿ ಮಾಡಿರಬಹುದು, ಆದರೆ ಹಣ ಕೊಟ್ಟಿಲ್ಲ. ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಆರಂಭಿಸಿದ್ದು ನಾನೇ. ವೈದ್ಯರು ಮನುಷ್ಯತ್ವ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕೆಲಸ ಮಾಡುತ್ತೇವೆ. ಮೈಸೂರು ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ. ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ಹೈವೇ ಮಾಡಿಸಿದ್ದು ನಾವು. ಆದರೆ ಬೇರೆಯವರು ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ ಹೋಗುತ್ತಾರೆ. ಸುಳ್ಳು ಹೇಳುವವರು ಸಮಾಜಕ್ಕೆ ಅಪಾಯ ಎಂದು ಪರೋಕ್ಷವಾಗಿ ಸಂಸದ ಪ್ರತಾಪ್​ ಸಿಂಹ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 3:55 pm, Fri, 22 December 23

Loading...
Unable to load recommendations.
Follow Us