ಸಿಎಂ ಸಿದ್ದರಾಮಯ್ಯಗೆ ಮತ್ತಷ್ಟು ಬಿಗಿಯಾದ ಮುಡಾ ಸಂಕಷ್ಟ; ನ್ಯಾಯವಾದಿ ರಾಘವನ್ ಮಂಡಿಸಿದ್ದ ವಾದದಲ್ಲಿದೆ ಬಲಿಷ್ಠ ಸಾಕ್ಷಿ

| Updated By: ಆಯೇಷಾ ಬಾನು

Updated on: Sep 04, 2024 | 11:21 AM

ಹಿರಿಯ ನ್ಯಾಯವಾದಿ ರಾಘವನ್ ಅವರು ನ್ಯಾಯಾಧೀಶರ ಮುಂದೆ ಮಂಡಿಸಿದ ವಾದ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯರಿಗೆ ಮುಳುವಾಗಲಿದೆ. ಮುಡಾದಿಂದ ಬದಲಿ ನಿವೇಶನ ಪಡೆದ ಬಹುತೇಕ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದರು ಎಂದು ವಾದಿಸಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಮತ್ತಷ್ಟು ಬಿಗಿಯಾದ ಮುಡಾ ಸಂಕಷ್ಟ; ನ್ಯಾಯವಾದಿ ರಾಘವನ್ ಮಂಡಿಸಿದ್ದ ವಾದದಲ್ಲಿದೆ ಬಲಿಷ್ಠ ಸಾಕ್ಷಿ
ಸಿಎಂ ಸಿದ್ದರಾಮಯ್ಯ
Follow us on

ಮೈಸೂರು, ಸೆ.04: ಮುಡಾ ಪ್ರಕರಣಕ್ಕೆ ಸಂಬಂಧಿಸಿ ಮುಡಾ (MUDA) ಮಾಜಿ ಆಯುಕ್ತ ಜಿ.ಟಿ ದಿನೇಶ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ಇದು ಸಿದ್ದರಾಮಯ್ಯನವರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಆದರೆ ನಿನ್ನೆ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯನವರು (Siddaramaiah), ಸುಳ್ಳು ಹೇಳಿಲ್ಲ, ತಪ್ಪು ಮಾಡಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಇದರ ನಡುವೆ ಹಿರಿಯ ನ್ಯಾಯವಾದಿ ರಾಘವನ್ ಅವರು ನ್ಯಾಯಾಧೀಶರ ಮುಂದೆ ಮಂಡಿಸಿದ ವಾದ ಸಿದ್ದರಾಮಯ್ಯರಿಗೆ ಮುಳುವಾಗಲಿದೆ.

ಮುಡಾದಿಂದ ಬದಲಿ ನಿವೇಶನ ಪಡೆದ ಬಹುತೇಕ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದರು. 1997ರಲ್ಲಿ ಮುಡಾದಿಂದ ಸರ್ವೇ ನಂ 464 3.16 ಗುಂಟೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಬಳಿಕ 1998ರಲ್ಲಿ ಭೂಸ್ವಾಧೀನ ಕೈ ಬಿಡಲಾಗಿದೆ. ಈ ವೇಳೆ ಸಿದ್ದರಾಮಯ್ಯನವರು ಡಿಸಿಎಂ ಆಗಿದ್ದರು. 2004ರಲ್ಲಿ ಸಿದ್ದರಾಮಯ್ಯ ಪತ್ನಿ ಸಹೋದರನಿಂದ ಜಮೀನು ಖರೀದಿ ಮಾಡಿದ್ದಾರೆ. 2005ರಲ್ಲಿ ಕೃಷಿಯಿಂದ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲಾಗಿದೆ. ಈ ವೇಳೆಯೂ ಸಿದ್ದರಾಮಯ್ಯನವರು ಡಿಸಿಎಂ ಆಗಿದ್ದರು ಎಂಬುವುದು ಗಮನರ್ಹ ವಿಚಾರ.

ಇದನ್ನೂ ಓದಿ: ಮುಡಾ ಹಗರಣ: ಆರೋಪ ಒಪ್ಪಿಕೊಂಡ ಸರ್ಕಾರ, ಸಿದ್ದರಾಮಯ್ಯಗೆ ಮತ್ತಷ್ಟು ಸಂಕಷ್ಟ!

2014ರಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಮುಡಾಗೆ ಅರ್ಜಿ ಸಲ್ಲಿಸಿದ್ದರು. ನಮ್ಮ ಜಮೀನನ್ನು ಮುಡಾ ವಶಕ್ಕೆ ಪಡೆದು ಅಭಿವೃದ್ದಿ ಕಾರ್ಯ ಬಳಸಿಕೊಂಡಿದೆ. ರಸ್ತೆ, ಪಾರ್ಕ್, ನಿವೇಶನ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಬದಲಿ ಭೂಮಿ‌ ನೀಡುವಂತೆ ಪಾರ್ವತಿ ಅವರು ಮನವಿ ಪತ್ರ ಬರೆದಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಸಿಎಂ ಆಗಿದ್ದರು. ಇನ್ನು 2017ರಲ್ಲಿ ಬದಲಿ ಜಮೀನು ನೀಡಲು ಸಭೆ ನಡೆಸಿ ನಿರ್ಣಯ ತೆಗೆದುಕೊಳ್ಳಲಾಯಿತು. ಈ ವೇಳೆಯೂ ಸಿದ್ದರಾಮಯ್ಯ ಸಿಎಂ ಆಗಿದ್ದರು. ಈ ಎಲ್ಲಾ ಕಾರಣಗಳಿಂದ ಸಿದ್ದರಾಮಯ್ಯ ಪ್ರಭಾವ ಕೆಲಸ ಮಾಡಿರುವ ಆರೋಪ ಕೇಳಿ ಬಂದಿದೆ.

2004ರಲ್ಲಿ ಖರೀದಿ ಮಾಡಿದ್ದ ಜಮೀನು 2010ರಲ್ಲಿ ದಾನ ರೂಪವಾಗಿ ಸಿದ್ದರಾಮಯ್ಯ ಪತ್ನಿಗೆ ಸಿಕ್ಕದೆ. 2001ರಲ್ಲಿ ಮುಡಾ ಸದರಿ ಜಮೀನಿನಲ್ಲಿ ನಿವೇಶನ, ರಸ್ತೆ, ಉದ್ಯಾನವನ ನಿರ್ಮಾಣದ ಬಗ್ಗೆ ಖುದ್ದು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದರೂ 2014ರವರೆಗೂ ಅರ್ಜಿ ಯಾಕೆ ನೀಡಿರಲಿಲ್ಲ? ಎಂಬ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇವೆಲ್ಲವೂ ನ್ಯಾಯಾಲಯದಲ್ಲಿ ಸಿದ್ದರಾಮಯ್ಯಗೆ ಮುಳುವಾಗುವ ಸಾಧ್ಯತೆ ಇದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:18 am, Wed, 4 September 24