ಮುಡಾ ಹಗರಣ: ಆರೋಪ ಒಪ್ಪಿಕೊಂಡ ಸರ್ಕಾರ, ಸಿದ್ದರಾಮಯ್ಯಗೆ ಮತ್ತಷ್ಟು ಸಂಕಷ್ಟ!

ಮುಡಾ ಸೈಟ್ ಪ್ರಕರಣ ಮತ್ತೊಂದು ಮಗ್ಗುಲಿಗೆ ಹೊರಳಿದೆ. ಆರ್ ಟಿ ಐ ಕಾರ್ಯಕರ್ತ ಗಂಗರಾಜು ಮೇಲೆ ಬೆದರಿಕೆ ಹಾಕಲಾಗಿದ್ದು, ಹಿಂದಿನ ಆಯುಕ್ತ ದಿನೇಶ್ ಕುಮಾರ್ ಅಮಾನತು ಈಗ ಸಿದ್ಧರಾಮಯ್ಯಗೆ ಮತ್ತಷ್ಟು ತಲೆ ಬಿಸಿ ತಂದಿದೆ.  ಆರ್ ಟಿಐ ಕಾರ್ಯಕರ್ತನ ಮೇಲೆ ಬೆದರಿಕೆ ಮತ್ತು ದಿನೇಶ್ ಕುಮಾರ್ ಅಮಾನತು ಆದೇಶ ಇಡೀ ಪ್ರಕರಣವನ್ನು ಮತ್ತೊಂದು ದಿಕ್ಕಿಗೆ ಹೊರಳಿಸುವ ಸಾಧ್ಯತೆ ಹೆಚ್ಚಾಗಿದೆ.

ಮುಡಾ ಹಗರಣ: ಆರೋಪ ಒಪ್ಪಿಕೊಂಡ ಸರ್ಕಾರ, ಸಿದ್ದರಾಮಯ್ಯಗೆ ಮತ್ತಷ್ಟು ಸಂಕಷ್ಟ!
ತೆರಿಗೆ ತಾರತಮ್ಯ: ಕೇಂದ್ರದ ನಡೆ ಖಂಡಿಸಿ 8 ರಾಜ್ಯಗಳ ಸಿಎಂಗೆ ಪತ್ರಬರೆದ ಸಿದ್ದರಾಮಯ್ಯ
Follow us
| Updated By: ರಮೇಶ್ ಬಿ. ಜವಳಗೇರಾ

Updated on:Sep 03, 2024 | 8:05 PM

ಬೆಂಗಳೂರು/ಮೈಸೂರು, (ಸೆ.03): ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಸೈಟ್ ಪ್ರಕರಣವನ್ನು ಬಯಲಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರ್ ಟಿಐ ಕಾರ್ಯಕರ್ತ ಗಂಗರಾಜು ಅವರಿಗೆ ಬೆದರಿಕೆ ಹಾಕಲ್ಪಟ್ಟಿರುವ ಆರೋಪ ವ್ಯಕ್ತವಾಗಿದೆ. ಬೆಂಗಳೂರು-ಮೈಸೂರು ಮುಖ್ಯರಸ್ತೆಯಲ್ಲಿ ಬೈಕ್ ಗಳಲ್ಲಿ ಬಂದಿದ್ದ ಅಪರಿಚಿತರು ಬೆದರಿಕೆ ಹಾಕಿದ್ದಾರೆ ಎಂದು ಗಂಗರಾಜು ಆರೋಪ ಮಾಡಿದ್ದಾರೆ. ಹೀಗಾಗಿ ಪ್ರಕರಣ ಹೈಕೋರ್ಟ್ ನಲ್ಲಿ ವಿಚಾರಣಾ ಹಂತದಲ್ಲಿರುವಾಗಲೇ ಬೆದರಿಕೆ ಹಾಕಲ್ಪಟ್ಟಿರುವ ವಿಚಾರ ಇಡೀ ಪ್ರಕರಣಕ್ಕೆ ಮತ್ತೊಂದು ತಿರುವು ಕೊಡುವ ಸಾಧ್ಯತೆ ಇದೆ. ಇದೇ ವೇಳೆ ಗಂಗರಾಜು ಸೇರಿದಂತೆ ದೂರುದಾರರಿಗೆ ಸಿಎಂ ಕಡೆಯಿಂದ ಅಥವಾ ಸಿಎಂ ಹೆಸರಿನಲ್ಲಿ ಅಪಾಯ ಉಂಟಾಗುವ ಆತಂಕ ವ್ಯಕ್ತಪಡಿಸಿರುವ ಬಿಜೆಪಿ ಸೂಕ್ತ ರಕ್ಷಣೆ ಕೊಡುವಂತೆ ಆಗ್ರಹಿಸಿದೆ. ಇನ್ನು ಸಿಎಂ ಸಿದ್ದರಾಮಯ್ಯ ಪತ್ನಿಗೆ 50:50 ಅನುಪಾತದಲ್ಲಿ ಸೈಟ್ ಕೊಟ್ಟಿದ್ದು ತಪ್ಪು ಎಂದು ಅಧಿಕೃತವಾಗಿ ಸರ್ಕಾರ ಒಪ್ಪಿಕೊಂಡಿದೆ. ಈ ಒಂದು ಆದೇಶ ಸಿಎಂಗೆ ಮುಳ್ಳಾಗುತ್ತಾ ಎಂಬ ಪ್ರಶ್ನೆ ಎದುರಾಗಿದೆ.

ಬಿಜೆಪಿ ಆರೋಪವನ್ನು ಒಪ್ಪಿಕೊಂಡಿತೇ ರಾಜ್ಯ ಸರ್ಕಾರ?

ಈ ಮಧ್ಯೆ ಹಿಂದಿನ ಆಯುಕ್ತರಾಗಿದ್ದ ಜಿ.ಟಿ. ದಿನೇಶ್ ಕುಮಾರ್ ರನ್ನು ಅಮಾನತು ಮಾಡಿ ರಾಜ್ಯ ಸರ್ಕಾರವೇ ಹೊರಡಿಸಿರುವ ಆದೇಶ ಈಗ ಸಿಎಂಗೆ ತಲೆನೋವಾಗುವ ಸಾಧ್ಯತೆಗಳಿವೆ. ಆರಂಭದಿಂದಲೂ 50:50 ರ ಅನುಪಾತದಲ್ಲಿ ಸೈಟ್ ಹಂಚಿಕೆ ಆಗಿದೆ ಎಂಬ ಆರೋಪವನ್ನು ವಿಪಕ್ಷ ಬಿಜೆಪಿ ಮಾಡುತ್ತಲೇ ಬಂದಿತ್ತು. ಆದರೆ ನಿನ್ನೆ(ಸೆ.02) ಹೊರಡಿಸಲ್ಪಟ್ಟಿರುವ ಅಮಾನತು ಆದೇಶದಲ್ಲಿ 50:50 ಅನುಪಾತದಲ್ಲಿ ನಿಯಮ ಬಾಹಿರವಾಗಿ ನಡೆದುಕೊಂಡಿರುವ ಕಾರಣವನ್ನು ಕೊಡಲಾಗಿದೆ. ಇದರಿಂದಾಗಿ ಬಿಜೆಪಿ ಮತ್ತು ದೂರುದಾರರ ಆರೋಪವನ್ನು ರಾಜ್ಯ ಸರ್ಕಾರವೇ ಒಪ್ಪಿಕೊಂಡಂತಾಗಿದೆ.

ಇದನ್ನೂ ಓದಿ: ಮುಡಾ ಹಗರಣ: ಹೈಕೋರ್ಟ್​ನಲ್ಲಿ ವಿರುದ್ಧ ತೀರ್ಪು ಬಂದರೆ ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು?

ದಿನೇಶ್ ಸಸ್ಪೆಂಡ್ ಆದೇಶದಲ್ಲೇನಿದೆ?

50:50 ಅನುಪಾತ 2009 ರಲ್ಲಿ ಜಾರಿಗೆ ಬಂದಿದೆ. 2009 ಕ್ಕಿಂತ ಹಿಂದಿನ ಹಳೆ ಬಡಾವಣೆಗಳಿಗೆ 50:50 ಅನುಪಾತ ಅನ್ವಯವಾಗುವುದಿಲ್ಲ. ಆದರೆ ಪ್ರಾಧಿಕಾರ 2009 ಹಿಂದಿನ ಬಡಾವಣೆಗಳ ಬದಲಿ ನಿವೇಶನಗಳಿಗಾಗಿ ಮಂಜೂರಾತಿಗಾಗಿ 50:50 ಅನುಪಾತ ಕೈಗೊಂಡಿರುವುದು ಕಾನೂನು ಬಾಹಿರ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲ ಸಿಎಂ ಸಿದ್ದರಾಮಯ್ಯ ಪತ್ನಿಗೆ 50:50 ಅನುಪಾತದಲ್ಲಿ ಸೈಟ್ ಕೊಟ್ಟಿದ್ದು ತಪ್ಪು ಎಂದು ಅಧಿಕೃತವಾಗಿ ಸರ್ಕಾರ ಒಪ್ಪಿಕೊಂಡಿದೆ. ಈ ಒಂದು ಆದೇಶ ಸಿಎಂಗೆ ಮುಳ್ಳಾಗುತ್ತಾ ಎಂಬ ಪ್ರಶ್ನೆ ಎದುರಾಗಿದೆ.

ಸಿಎಂ ಬೆಂಬಲಿಗರಿಗೆ ಸ್ನೇಹಮಯಿ‌ ಕೃಷ್ಣ ಟಾಂಗ್

ಇನ್ನು ಈ ಬಗ್ಗೆ ದೂರುದಾರ ಸ್ನೇಹಮಯಿ‌ ಕೃಷ್ಣ ಪ್ರತಿಕ್ರಿಯಿಸಿದ್ದು, ಸಿಎಂ 50:50 ಅನುಪಾತದಲ್ಲಿ ಅಕ್ರಮವಾಗಿ ನಿವೇಶನ ಪಡೆದುಕೊಂಡಿದ್ದಾರೆ ಎಂಬ ನನ್ನ ಆರೋಪ ಸುಳ್ಳು ಎಂದು ಹಲವು ಮಹಾನುಭಾವರು ಬೊಬ್ಬೆ ಹೊಡೆದಿದ್ದೇ ಹೊಡೆದಿದ್ದು ಅವರಿಗೆ ತಕ್ಕ ಉತ್ತರವನ್ನು ಸಿದ್ದರಾಮಯ್ಯನವರ ಸರ್ಕಾರವೇ ನೀಡಿದೆ. ಮುಡಾದ ಹಿಂದಿನ ಆಯುಕ್ತ ದಿನೇಶ್ ಕುಮಾರ್ ಅವರನ್ನು ಅಮಾನತ್ತು ಮಾಡಿರುವ ಆದೇಶ ಆದೇಶದಲ್ಲಿ50:50೦ ಅನುಪಾತದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿರುವುದು ನಿಯಮಬಾಹಿರ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಸಿದ್ದರಾಮಯ್ಯ ಬೆಂಬಲಿಗರಿಗೆ ಟಾಂಗ್ ಕೊಟ್ಟಿದ್ದಾರೆ.

ಸಿದ್ದರಾಮಯ್ಯನವರು ನಿಯಮಾನುಸಾರ ನಿವೇಶನಗಳನ್ನು ಪಡೆಯಲಾಗಿದೆ ಎಂದಿದ್ದರು. ಮಹಾನುಭಾವರ ಪ್ರಕಾರ ರೌಡಿಯಾದ ನನ್ನ ಮಾತು ನಿಜವಾಯಿತು. ಮುಖ್ಯಮಂತ್ರಿ ಹೇಳಿದ ಮಾತು ಸುಳ್ಳಾಯಿತು. ನನ್ನನ್ನು ರೌಡಿ ಆಸಾಮಿ ಎಂದು ಹೇಳಿದ ಮಹಾನುಭಾವರು ಇದಕ್ಕೇನು ಹೇಳುತ್ತಾರೊ ? ಕಾದು ನೋಡಬೇಕಿದೆ ಎಂದು ಲೇವಡಿ ಮಾಡಿದ್ದಾರೆ.

ಇದೇ ವೇಳೇ ದಿನೇಶ್ ಕುಮಾರ್ ಅಮಾತಿನ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಅಮಾನತು ಮಾಡಿರುವ ಬಗ್ಗೆ ಮಾತ್ರ ಗೊತ್ತಿದ್ದು, ಆದೇಶದಲ್ಲಿರುವ ಅಂಶಗಳ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ. ಅಲ್ಲದೇ ಮತ್ತೋರ್ವ ಆಯುಕ್ತ ನಟೇಶ್ ವಿರುದ್ಧ ಕ್ರಮ ಯಾಕಿಲ್ಲ ಎಂಬ ವಿಪಕ್ಷಗಳ ಪ್ರಶ್ನೆಗೆ ತನಿಖಾ ವರದಿ ಇನ್ನೂ ಬರಬೇಕಲ್ಲವೇ ಎಂದು ಉತ್ತರಿಸಿದ್ದಾರೆ.

ಒಟ್ಟಾರೆಯಾಗಿ ಆರ್ ಟಿಐ ಕಾರ್ಯಕರ್ತ ಗಂಗರಾಜು ಮೇಲೆ ಬೆದರಿಕೆ ಮತ್ತು ಅಧಿಕಾರಿ ದಿನೇಶ್ ಕುಮಾರ್ ಅಮಾನತು ಆದೇಶ ಇಡೀ ಪ್ರಕರಣವನ್ನು ಮತ್ತೊಂದು ದಿಕ್ಕಿಗೆ ಹೊರಳಿಸುವ ಸಾಧ್ಯತೆ ಹೆಚ್ಚಾಗಿದೆ. ಸಿಎಂ ರಾಜೀನಾಮೆಗೆ ಒತ್ತಡ ಹಾಕುತ್ತಿರುವ ವಿಪಕ್ಷದ ಹೋರಾಟಕ್ಕೆ ರಾಜ್ಯ ಸರ್ಕಾರವೇ ತನ್ನ ಆದೇಶದ ಮೂಲಕ ಸಾಕ್ಷಿ ಕೊಟ್ಟಂತಾಗಿದೆ. ಈ ಮೂಲಕ ನೈತಿಕತೆಯ ಪ್ರಶ್ನೆ ಮುಂದಿಟ್ಟಿದ್ದ ಬಿಜೆಪಿ ಧ್ವನಿಗೆ ಮತ್ತಷ್ಟು ಬಲವನ್ನು ರಾಜ್ಯ ಸರ್ಕಾರವೇ ತುಂಬಿದಂತಾಗಿದ್ದರೆ, ಅಮಾನತು ಆದೇಶ ಸಿಎಂಗೆ ಮತ್ತಷ್ಟು ಇಕ್ಕಟ್ಟಿನ ಪರಿಸ್ಥಿತಿ ತಂದಿಡುಬಹುದಾದ ಸಾಧ್ಯತೆಗಳು ಹೆಚ್ಚಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:02 pm, Tue, 3 September 24