Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ ಬಗ್ಗೆ ವಿವಾದಿತ ಪೋಸ್ಟ್​, ದೂರು ದಾಖಲು

ನಾಯಕ ರಾಹುಲ್ ಗಾಂಧಿ ಬಗ್ಗೆ ವಿವಾದಿತ ಪೋಸ್ಟ್​ ಹಾಕಿದ್ದವನ ಪೋಸ್ಟ್‌ ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ದೂರು ದಾಖಲಿಸಿದ್ದಾರೆ. ವ್ಯಂಗ್ಯವಾಗಿ ಅಶ್ಲೀಲವಾಗಿ ರಾಹುಲ್ ಗಾಂಧಿಯನ್ನು ಬಿಂಬಿಸಲಾಗಿದೆ. ಪೋಸ್ಟ್ ಮಾಡಿದವ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಿ ಎಂದು ಎಂ.ಲಕ್ಷ್ಮಣ ಆಗ್ರಹಿಸಿದ್ದಾರೆ. ವಿವಾದಿತ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ ಬಗ್ಗೆ ವಿವಾದಿತ ಪೋಸ್ಟ್​, ದೂರು ದಾಖಲು
ರಾಹುಲ್​ ಗಾಂಧಿ
Follow us
ರಾಮ್​, ಮೈಸೂರು
| Updated By: ವಿವೇಕ ಬಿರಾದಾರ

Updated on:Feb 11, 2025 | 2:42 PM

ಮೈಸೂರು, ಫೆಬ್ರವರಿ 11: ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ (Rahul Gandhi) ಬಗ್ಗೆ ವಿವಾದಿತ ಪೋಸ್ಟ್​ ಹಾಕಿದ್ದವನ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ (M Laxman) ಉದಯಗಿರಿ ಪೊಲೀಸ್ ಠಾಣೆಯಲ್ಲಿ (Udayagiri Police Station) ದೂರು ದಾಖಲಿಸಿದ್ದಾರೆ. “ನಮ್ಮ ನಾಯಕ ರಾಹುಲ್ ಗಾಂಧಿಗೆ ಅವಮಾನ ಮಾಡಲಾಗಿದೆ. ವ್ಯಂಗ್ಯವಾಗಿ ಅಶ್ಲೀಲವಾಗಿ ರಾಹುಲ್ ಗಾಂಧಿಯನ್ನು ಬಿಂಬಿಸಲಾಗಿದೆ. ಪೋಸ್ಟ್ ಮಾಡಿರುವವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಿ” ಎಂದು ಪೊಲೀಸರಿಗೆ ಲಿಖಿತ ರೂಪದಲ್ಲಿ ಎಂ.ಲಕ್ಷ್ಮಣ ನೀಡಿದ್ದಾರೆ.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಂ. ಲಕ್ಷ್ಮಣ ಕಲ್ಲು ತೂರಾಟದ ಹಿಂದೆ ಮಾಜಿ ಸಂಸದ ಪ್ರತಾಪ್ ಸಿಂಹ ಇದ್ದಾರೆ. ಪ್ರತಾಪ್ ​ಸಿಂಹರನ್ನು ಬಂಧಿಸಿ. ಗಲಾಟೆ ಹಿಂದೆ ಬಿಜೆಪಿ, ಆರ್​ಎಸ್​ಎಸ್ ಕೈವಾಡವಿದೆ. ವೇಷ ಬದಲಾಯಿಸಿಕೊಂಡು ಕಲ್ಲು ತೂರಾಟ ಮಾಡಿದ್ದಾರೆ. ಇದಕ್ಕಾಗಿ ಆರ್​ಎಸ್​ಎಸ್​ನ 300 ಜನ ಮೈಸೂರಿಗೆ ಬಂದಿದ್ದಾರೆ. ಕಲ್ಲು ತೂರಾಟ ಮಾಡಿದವರಿಗೆ ಕಂಡಲ್ಲೇ ಗುಂಡು ಹಾರಿಸಬೇಕು ಎಂದರು.

ಪ್ರತಾಪ್ ಸಿಂಹ ಓಡಿ ಹೋಗುವ ಮುನ್ನ ಕೂಡಲೇ ಬಂಧಿಸಬೇಕು. ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವುದು‌ ಬಿಜೆಪಿಯ ಉದ್ದೇಶ. ಬಿಜೆಪಿಯ ಯಾವ ನಾಯಕರನ್ನೂ ಇಲ್ಲಿಗೆ ಬರಲು ಬಿಡಬಾರದು. ಯಾವ ಕಾರಣಕ್ಕೆ ಆರ್.ಅಶೋಕ್, ಛಲವಾದಿ ಇಲ್ಲಿಗೆ ಬರಬೇಕು? ಪೋಸ್ಟ್ ಹಾಕಿದ ಸುರೇಶ್ ಪ್ರತಾಪ್ ಸಿಂಹ ಬೆಂಬಲಿಗ, RSS ಕಾರ್ಯಕರ್ತ. ಪ್ರತಾಪ್ ಸಿಂಹಗೆ ಯಾಕೆ ಮುಸ್ಲಿಮರ ಮೇಲೆ ಅಷ್ಟು ಕೋಪ? ಮುಸ್ಲಿಮರು ಈ ದೇಶದ ಮಣ್ಣಿನ ಮಕ್ಕಳು, ಅವರೇನು ಹೊರದೇಶದವರಾ? ಎಂದು ಪ್ರಶ್ನಿಸಿದರು.

ಪೋಸ್ಟ್​ನಲ್ಲಿ ಏನಿತ್ತು?

ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಯುವಕನೋರ್ವ ಸಂಸದ ರಾಹುಲ್ ಗಾಂಧಿ, ಮಾಜಿ ಸಿಎಂಗಳಾದ ಅಖಿಲೇಶ್ ಯಾದವ್ ಹಾಗೂ ಅರವಿಂದ ಕೇಜ್ರಿವಾಲ್ ಅವರ ಭಾವಚಿತ್ರವನ್ನು ವ್ಯಂಗ್ಯವಾಗಿ ಹಾಕಿದ್ದನು. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ದೂರು ನೀಡಿದ್ದಾರೆ.

ಗಲಾಟೆಗೆ ಕಾರಣವಾಯ್ತು ಪೋಸ್ಟ್​ನಲ್ಲಿ ವಾಕ್ಯ

ಯುವಕ ವ್ಯಂಗ್ಯವಾಗಿ ಪೋಸ್ಟ್‌ ಮಾತ್ರ ಹಾಕದೆ ಒಂದು ಧರ್ಮಕ್ಕೆ ಅವಮಾನ ಮಾಡುವ ರೀತಿ ವಾಕ್ಯಗಳನ್ನು ಬರೆದಿದ್ದನು. ಇದು ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿತ್ತು.

ಇದನ್ನೂ ಓದಿ: ಮೈಸೂರು ಉದಯಗಿರಿ ಗಲಾಟೆ: ಅಸಲಿಗೆ ಅಲ್ಲಿ ನಡೆದಿದ್ದೇನು? ಎಡಿಜಿಪಿ ಆರ್ ಹಿತೇಂದ್ರ ಹೇಳಿದ್ದಿಷ್ಟು

ಉದ್ರಿಕ್ತರಿಂದ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ

ಯಾವಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತೋ ಉದಯಗಿರಿ ಪೊಲೀಸರು ಸ್ವಯಂಪ್ರೇರಿತ ಕೇಸ್‌ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆ ಪೋಸ್ಟ್ ಒಂದು ಸಮುದಾಯದ ಯುವಕರನ್ನು ರೊಚ್ಚಿಗೆಬ್ಬಿಸಿತ್ತು. ತಕ್ಷಣ ಅವರು ಉದಯಗಿರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಪೊಲೀಸರು, ಕೆಲ ಧಾರ್ಮಿಕ ಮುಖಂಡರು ಹಾಗೂ ರಾಜಕೀಯ ಮುಖಂಡರು ಅಲ್ಲಿದ್ದ ಯುವಕರಿಗೆ ಶಾಂತಿ ಕಾಪಾಡುವಂತೆ ಮನವರಿಕೆ ಮಾಡಲು ಪ್ರಯತ್ನಿಸಿದ್ದರು. ಆದರೆ ಅಲ್ಲಿದ್ದ ಗುಂಪು ಇದನ್ನು ಕೇಳಲು ಸಿದ್ಧರಿರಲಿಲ್ಲ.‌ ಏಕಾಏಕಿ ಘೋಷಣೆ ಕೂಗುತ್ತಾ ಪೊಲೀಸರು ಹಾಗೂ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:32 pm, Tue, 11 February 25