2024ರ ಹೊತ್ತಿಗೆ ಕರ್ನಾಟಕದ ರಸ್ತೆಗಳು ಅಮೆರಿಕಾದ ರಸ್ತೆಗಳಿಗೆ ಸಮನಾಗಿ ಇರಲಿವೆ: ನಿತಿನ್ ಗಡ್ಕರಿ

ಮೈಸೂರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ 22 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, 2024ರ ಹೊತ್ತಿಗೆ ಕರ್ನಾಟಕದ ರಸ್ತೆಗಳ ಚಿತ್ರಣ ಬದಲಾಗಲಿದ್ದು, ಅಮೆರಿಕಾದ ರಸ್ತೆಗಳಿಗೆ ಸಮನಾಗಿ ಇರಲಿವೆ ಎಂದರು. ಕಾರ್ಯಕ್ರಮದಲ್ಲಿ ರಾಜ್ಯದ ಸಚಿವ ಮಹದೇವಪ್ಪ ಮಾತನಾಡುವ ವೇಳೆ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಘೋಷಣೆ ಕೂಗಿದರು. ಇದಕ್ಕೆ ಮಹದೇವಪ್ಪ ಅವರು ಏನಂದ್ರು ಇಲ್ಲಿದೆ ನೋಡಿ.

2024ರ ಹೊತ್ತಿಗೆ ಕರ್ನಾಟಕದ ರಸ್ತೆಗಳು ಅಮೆರಿಕಾದ ರಸ್ತೆಗಳಿಗೆ ಸಮನಾಗಿ ಇರಲಿವೆ: ನಿತಿನ್ ಗಡ್ಕರಿ
ನಿತಿನ್ ಗಡ್ಕರಿ
Image Credit source: PTI
Edited By: Rakesh Nayak Manchi

Updated on: Mar 15, 2024 | 10:09 AM

ಮೈಸೂರು, ಮಾ.10: 2024 ರ ಹೊತ್ತಿಗೆ ಕರ್ನಾಟಕದ ರಸ್ತೆಗಳ ಚಿತ್ರಣ  ಬದಲಾಗಲಿದ್ದು, ಅಮೆರಿಕಾದ ರಸ್ತೆಗಳಿಗೆ ಸಮನಾಗಿ ಇರಲಿವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದರು. ಮೈಸೂರು (Mysuru) ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ 22 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರು, ಹಾಸನಕ್ಕೆ ರಿಂಗ್ ರಸ್ತೆ ಮಾಡಿಸುತ್ತೇನೆ. ಕುಶಾಲನಗರ- ಮಾಣಿ ರಸ್ತೆಗೆ ಡಿಪಿಆರ್ ಮಾಡಿಸುತ್ತೇವೆ ಎಂದರು.

ಮೈಸೂರು- ನಂಜನಗೂಡು 6 ಪಥದ ರಸ್ತೆ ಕಾಮಗಾರಿ ಶೀರ್ಘದಲ್ಲೇ ಆರಂಭಗೊಳ್ಳಲಿದೆ. ಕರ್ನಾಟಕ ಸಮೃದ್ಧ ರಾಜ್ಯವಾಗಿದೆ. ಸಾಹಿತ್ಯ, ಕಲೆ, ಸಂಗೀತ ಎಲ್ಲದರಲ್ಲೂ ವಿಶೇಷತೆ ಇದೆ. ಕರ್ನಾಟಕದ ವಿಕಾಸಕ್ಕಾಗಿ ಗ್ರೀನ್ ಎಕ್ಸ್‌ಪ್ರೆಸ್ ನಿರ್ಮಾಣ ಮಾಡಲಾಗುವುದು. ಬೆಂಗಳೂರು-ಚೆನ್ನೈ ನಡುವೆ 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಲಿದೆ. ಕೇವಲ 2 ಗಂಟೆಯಲ್ಲಿ ಬೆಂಗಳೂರಿನಿಂದ ಚೆನ್ನೈ ತಲುಪಬಹುದು ಎಂದರು. ಬೆಂಗಳೂರಿನ ರಿಂಗ್ ರಸ್ತೆ ಮುಖ್ಯ. 280 ಕಿ.ಮೀ. ರಿಂಗ್ ರಸ್ತೆ ಡಿಸೆಂಬರ್‌ನಲ್ಲಿ ಪೂರ್ಣವಾಗಲಿದೆ. ಇದರಿಂದ ಬೆಂಗಳೂರು ಟ್ರಾಫಿಕ್ ಜಾಮ್ ಮುಕ್ತವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಮೈಸೂರು ಭಾಗದಲ್ಲಿನ ಅಭಿವೃದ್ಧಿಗೆ ಅಭಿನಂದಿಸುತ್ತೀರಿ. ಇದರ ನಿಜವಾದ ಕ್ರೆಡಿಟ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕ್ರೆಡಿಟ್ ಸಲ್ಲುತ್ತದೆ. ದೇಶಾದ್ಯಂತ ಸಾವಿರಾರು ಕಿ.ಮೀ. ರಸ್ತೆ ಮಾಡಿದ್ದಾರೆ. ದಶಪಥ ಹೆದ್ದಾರಿಗೆ ಹಣ ಕೊಟ್ಟಿದ್ದು ನಿತಿನ್ ಗಡ್ಕರಿ ಎಂದರು. ಅಲ್ಲದೆ, ವಿವಿಧ ಯೋಜನೆಗಳಿಗೆ ಅನುದಾನ ನೀಡುವಂತೆ ಮನವಿ ಮಾಡಿದರು.

ಮಹದೇವಪ್ಪ ಭಾಷಣದ ವೇಳೆ ಮೊಳಗಿದ ಮೋದಿ ಘೋಷಣೆ

ಸಚಿವ ಎಚ್​ ಸಿ ಮಹದೇವಪ್ಪ ಭಾಷಣ ಆರಂಭಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಮೋದಿ‌ ಮೋದಿ ಎಂದು ಘೋಷಣೆ ಕೂಗಿದರು. ಈ ವೇಳೆ ಮಹದೇವಪ್ಪ ಅವರು ಓಕೆ ಪೈನ್ ಪೈನ್ ಎಂದರು. ಅಲ್ಲದೆ, ನಾನು ಮಾತನಾಡಿದ ನಂತರ ನೀವು ಘೋಷಣೆ ಕೂಗಿ ಎಂದು ಕಿವಿ ಮಾತು ಹೇಳಿದರು.

ಇದನ್ನೂ ಓದಿ: ಮೈಸೂರು ಕೊಡಗು ಕ್ಷೇತ್ರದಲ್ಲಿ ನಾನು ಗೆದ್ದರೆ ಸಿದ್ದರಾಮಯ್ಯ ಸೀಟು ಅಲುಗಾಡುತ್ತದೆ: ಪ್ರತಾಪ್ ಸಿಂಹ

ಮಾತು ಮುಂದುವರಿಸಿದ ಮಹದೇವಪ್ಪ, ಬೆಂಗಳೂರು-ಮೈಸೂರು ಹೈವೆ ವಿಚಾರ ಪ್ರಸ್ತಾಪ ಮಾಡಿದರು. ಈ ರಸ್ತೆ ನಮ್ಮ ಅವಧಿಯಲ್ಲಿ ಆಯ್ತಾ ಅಥವಾ ನಿಮ್ಮ ಅವಧಿಯಲ್ಲಿ ಆಯ್ತು ಅಂತಾ ನೋಡುವುದಲ್ಲ. ನಾನು 2013 ರ ಅವಧಿಯಲ್ಲಿ ಲೋಕೋಪಯೋಗಿ ಸಚಿವನಾಗಿ ಈ ರಸ್ತೆ ವಿಚಾರವನ್ನು ಗಡ್ಕರಿ ಅವರ ಬಳಿ ಪ್ರಸ್ತಾಪ ಮಾಡಿದ್ದೆ. ನಂತರ ಈಗ ರಸ್ತೆ ಆಗಿದೆ. ಜನರಿಗೆ ಒಳ್ಳೆಯ ಅಭಿವೃದ್ಧಿ ಕಾರ್ಯ ಕೊಡುವುದು ಮುಖ್ಯ. ಆ ಕೆಲಸವನ್ನು ಎಲ್ಲಾ ಪ್ರಜಾಪ್ರಭುತ್ವ ಸರಕಾರಗಳು ಒಟ್ಟಾಗಿ ಸೇರಿ ಮಾಡೋಣ ಎಂದರು.

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಮೋದಿಯವರ ಬಗ್ಗೆ ನಾನು ಮಾತನಾಡಬೇಕಾದ ಅವಶ್ಯಕತೆ ಇಲ್ಲ. ನಿಮ್ಮ ಘೋಷಣೆಗಳು ಜೈಕಾರಗಳು ಮೋದಿಯವರ ಅಭಿವೃದ್ಧಿ ಬಗ್ಗೆ ಮಾತನಾಡುತ್ತವೆ. ದಿನದ 24 ಗಂಟೆ ದೇಶಕ್ಕೋಸ್ಕರ ಕೆಲಸ ಮಾಡುವ ನಾಯಕ. 2047 ಕ್ಕೆ ನಂಬರ್ 1 ದೇಶ ಆಗಲು ಶ್ರಮಿಸುತ್ತಿರುವ ನಾಯಕ ಎಂದರು.

ನಿತಿನ್ ಗಡ್ಕರಿ ರಸ್ತೆ ಮಾಂತ್ರಿಕ

ನಿತಿನ್ ಗಡ್ಕರಿಯವರು ಕೇವಲ ರಸ್ತೆ ಸಚಿವರಲ್ಲ ರಸ್ತೆ ಮಾಂತ್ರಿಕ. ನನ್ನ ಕ್ಷೇತ್ರದ ಅನೇಕ ಸಮಸ್ಯೆಗಳನ್ನ ತಿಳಿಸಿದಾಗ ಸಹಕಾರ ನೀಡಿರುವಂತಹ ನಾಯಕ. ನನಗೆ ಪಕ್ಷ ಇಲ್ಲ, ಪಕ್ಷೇತರ ಸಂಸದೆ. ಆದರೆ ನನಗೆ ಸಾಕಷ್ಟು ಬೆಂಬಲ ಕೊಟ್ಟು ಹಲವು ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ನಮ್ಮ ಮತಗಳು ಯಾವಾಗಲು ಅಭಿವೃದ್ಧಿ ಪರವಾಗಿ ಇರಬೇಕು. ಮುಂದೆಯೂ ಅಭಿವೃದ್ಧಿ ಪರವಾಗಿ ನಮ್ಮ ಮತ ಇರಲಿ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Sun, 10 March 24

Dileep CP

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಅದನ್ನು ಹೊರತು ಪಡಿಸಿದರೆ ಒಂದಷ್ಟು ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More
Follow Us