AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೇ ಅನ್ನಭಾಗ್ಯ ಅಕ್ಕಿ ದುರುಪಯೋಗ: ದಂಧೆಕೋರರಿಂದ ಮನೆ ಮನೆಗೆ ತೆರಳಿ ಅಕ್ಕಿ ಖರೀದಿ

ಯರಗನಹಳ್ಳಿ ಸೇರಿದಂತೆ ಮೈಸೂರಿನ ಹಲವು ಕಡೆ ಎಗ್ಗಿಲ್ಲದೆ ಅನ್ನಭಾಗ್ಯ ಅಕ್ಕಿಯನ್ನು ಖರೀದಿಸಿ, ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸ್ತಿದೆ. ಅಪ್ರಾಪ್ತರನ್ನೇ ದಂಧೆಗೆ ಇಳಿಸಿದ್ದು, ಬಾಲಕರು ಆಟೋ, ಬೈಕ್​ಗಳಲ್ಲಿ ಬಂದು ಅನ್ನಭಾಗ್ಯ ಅಕ್ಕಿಯನ್ನ ಕೆಜಿಗೆ 15 ರೂಪಾಯಿಯಂತೆ ಖರೀದಿ ಮಾಡ್ತಿದ್ದಾರೆ. ಕಾಳಸಂತೆಯಲ್ಲಿ 50-60 ರೂಪಾಯಿಗೆ ಮಾರಾಟ ಮಾಡ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೇ ಅನ್ನಭಾಗ್ಯ ಅಕ್ಕಿ ದುರುಪಯೋಗ: ದಂಧೆಕೋರರಿಂದ ಮನೆ ಮನೆಗೆ ತೆರಳಿ ಅಕ್ಕಿ ಖರೀದಿ
ಅನ್ನಭಾಗ್ಯ ಅಕ್ಕಿ
ರಾಮ್​, ಮೈಸೂರು
| Updated By: Ganapathi Sharma|

Updated on: Nov 14, 2023 | 9:37 PM

Share

ಮೈಸೂರು, ನವೆಂಬರ್ 14: ಬೈಕ್ ಏರಿ ಏರಿಯಾ ಏರಿಯಾದಲ್ಲೂ ಓಡಾಡುತ್ತಿದ್ದಾರೆ. ಮನೆ ಬಾಗಿಲಲ್ಲೇ ತೂಕ ಹಾಕಿ ಅಕ್ಕಿ (Rice) ಖರೀದಿ ಮಾಡುತ್ತಿದ್ದಾರೆ. ಆಟೋಗಳಲ್ಲೂ ಮೂಟೆಗಟ್ಟಲೇ ಅಕ್ಕಿ ಸಾಗಾಟವಾಗ್ತಿದೆ. ಬಡವರು ಹೊಟ್ಟೆ ತುಂಬಾ ಊಟ ಮಾಡಲಿ ಎಂದು ಸರ್ಕಾರ ಕೊಡುತ್ತಿರುವ ಅನ್ನಭಾಗ್ಯ ಅಕ್ಕಿಯಲ್ಲೇ (Anna Bhagya Rice) ಅಕ್ರಮವಾಗಿ ಹಣ ಮಾಡುತ್ತಿದ್ದಾರೆ. ಹೌದು, ಸಿಎಂ ಸಿದ್ದರಾಮಯ್ಯ (Siddaramaiah) ಅವರ ತವರು ಜಿಲ್ಲೆ ಮೈಸೂರಿನಲ್ಲೇ ಇಂಥದ್ದೊಂದು ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ.

ಯಾರೊಬ್ಬರೂ ಹಸಿವಿನಿಂದ ಇರಬಾರದು ಅಂತ ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದಾರೆ. ಕೇಂದ್ರ ಸರ್ಕಾರ 5 ಕೆಜಿ ಅಕ್ಕಿಯನ್ನ ಉಚಿತವಾಗಿ ಕೊಡ್ತಿದೆ. ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ಬದಲು ಹಣವನ್ನು ಜನರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಿದೆ. ಆದರೆ, ದಂಧೆಕೋರರು ಅನ್ನಭಾಗ್ಯ ಅನ್ನಕ್ಕೆ ಕನ್ನ ಹಾಕ್ತಿದ್ದಾರೆ. ಅದೂ ಸಿಎಂ ತವರು ಜಿಲ್ಲೆ ಮೈಸೂರಿನಲ್ಲೇ.

ಯರಗನಹಳ್ಳಿ ಸೇರಿದಂತೆ ಮೈಸೂರಿನ ಹಲವು ಕಡೆ ಎಗ್ಗಿಲ್ಲದೆ ಅನ್ನಭಾಗ್ಯ ಅಕ್ಕಿಯನ್ನು ಖರೀದಿಸಿ, ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸ್ತಿದೆ. ಅಪ್ರಾಪ್ತರನ್ನೇ ದಂಧೆಗೆ ಇಳಿಸಿದ್ದು, ಬಾಲಕರು ಆಟೋ, ಬೈಕ್​ಗಳಲ್ಲಿ ಬಂದು ಅನ್ನಭಾಗ್ಯ ಅಕ್ಕಿಯನ್ನ ಕೆಜಿಗೆ 15 ರೂಪಾಯಿಯಂತೆ ಖರೀದಿ ಮಾಡ್ತಿದ್ದಾರೆ. ಕಾಳಸಂತೆಯಲ್ಲಿ 50-60 ರೂಪಾಯಿಗೆ ಮಾರಾಟ ಮಾಡ್ತಿದ್ದಾರೆ. ಇದೇ ಅಕ್ಕಿ ಹೋಟೆಲ್​ಗಳಿಗೂ ಸರಬರಾಜಾಗ್ತಿದೆ.

5, 36, 37, 38ನೇ ವಾರ್ಡ್​ಗಳಲ್ಲಿ ಕಳೆದ 3-4 ತಿಂಗಳಿನಿಂದ ಈ ದಂಧೆ ಎಗ್ಗಿಲ್ಲದೆ ನಡೀತಿದೆ. ಆಟೋಗಳಲ್ಲಿ ಗುಜರಿ ವ್ಯಾಪಾರದ ಹೆಸ್ರಲ್ಲಿ ಬರೋ ಹುಡುಗರು ಅಕ್ಕಿ ಖರೀದಿಸಿ ಹೋಗ್ತಿದ್ದಾರೆ.

ಇದನ್ನೂ ಓದಿ: ಅಕ್ಕಿ ಕಳ್ಳರ ವಿರುದ್ಧ ಸಮರ ಸಾರಿದ ಆಹಾರ ಇಲಾಖೆ, ಅಕ್ರಮ ಅಕ್ಕಿ ಸಾಗಾಟಗಾರರ ಗಡಿಪಾರಿಗೆ ಪ್ಲ್ಯಾನ್​​

ಮತ್ತೊಂದೆಡೆ, ಬೆಂಗಳೂರಿನಲ್ಲಿ ಕೂಡ ಅನ್ನಭಾಗ್ಯ ಅಕ್ಕಿ ಕಳ್ಳಸಾಗಣೆ ವೇಳೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹೊಸಕೆರೆಹಳ್ಳಿ ಕೆಇಬಿ ಜಂಕ್ಷನ್ ಬಳಿ ಅಕ್ಕಿ, ರಾಗಿಯನ್ನ ಅಕ್ರಮವಾಗಿ ಸಾಗಾಟ ಮಾಡುವಾಗ ರೆಡ್ ಹ್ಯಾಂಡ್ ಆಗಿ ಹಿಡಿದು ವಾಹನವನ್ನ ಸೀಜ್ ಮಾಡಿದ್ದಾರೆ. ಎರಡೂವರೆ ಟನ್ ಅಕ್ಕಿ ಮತ್ತು ರಾಗಿಯನ್ನ ವಶಕ್ಕೆ ಪಡೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ