ಮೈಸೂರು: ವಿವಾಹಿತ ಮಹಿಳೆಗೆ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ವ್ಯಕ್ತಿ ಕೊಲೆ: ಅಕ್ಕ-ತಮ್ಮ ಅರೆಸ್ಟ್

| Updated By: ಆಯೇಷಾ ಬಾನು

Updated on: Jun 12, 2024 | 8:06 AM

ಗಂಡ ಸಾವಿನ ಸಮಯದಲ್ಲಿ ಪರಿಚಯವಾಗಿದ್ದ ವ್ಯಕ್ತಿಯ ಜೊತೆ ಸ್ನೇಹ ಬೆಳೆದು ಸ್ನೇಹ ಸಲುಗೆಗೆ ಕಾರಣವಾಗಿತ್ತು. ಆದರೆ ಕೆಲವು ಕಾರಣಗಳಿಂದ ಭಿನ್ನಾಭಿಪ್ರಾಯ ಬೆಳೆದಿದ್ದು ಆ ವ್ಯಕ್ತಿ ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡಲು ಶುರು ಮಾಡಿದ್ದ. ಇದರಿಂದ ಬೇಸತ್ತು ಮಹಿಳೆ ಹಾಗೂ ಆಕೆಯ ಸಹೋದರ ಸೇರಿಕೊಂಡು ಆ ವ್ಯಕ್ತಿಯ ಕೊಲೆ ಮಾಡಿದ್ದಾರೆ.

ಮೈಸೂರು: ವಿವಾಹಿತ ಮಹಿಳೆಗೆ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ವ್ಯಕ್ತಿ ಕೊಲೆ: ಅಕ್ಕ-ತಮ್ಮ ಅರೆಸ್ಟ್
ಸಾಂದರ್ಭಿಕ ಚಿತ್ರ
Follow us on

ಮೈಸೂರು, ಜೂನ್.12: ತನ್ನ ಆಪ್ತೆಗೆ ಅಶ್ಲೀಲಾ ಮೆಸೇಜ್ ಮಾಡಿದ ಎಂಬ ವಿಚಾರಕ್ಕೆ ಕೊಲೆ ಮಾಡಿಸಿದ್ದಾರೆಂದು ನಟ ದರ್ಶನ್ ಜೈಲು ಸೇರಿದ್ದಾರೆ. ಇದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ವಿವಾಹಿತ ಮಹಿಳೆಗೆ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಕೊಲೆ (Murder) ಮಾಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ. ಹೆಚ್.ಡಿ.ಕೋಟೆ ತಾಲೂಕಿನ ಸಿದ್ದಯ್ಯನಹುಂಡಿ ನಿವಾಸಿ ರಾಜೇಶ್​(32) ಕೊಲೆ ಆದ ವ್ಯಕ್ತಿ.

ಪ್ರೇಮಾ ಎಂಬ ವಿವಾಹಿತ ಮಹಿಳೆಗೆ ಮೃತ ರಾಜೇಶ್ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಹೀಗಾಗಿ ಪ್ರೇಮಾ ಹಾಗೂ ಆಕೆಯ ಸಹೋದರ ಶಿವು ಇಬ್ಬರೂ ಸೇರಿಕೊಂಡು ಕೃತ್ಯ ಎಸಗಿದ್ದು ಪೊಲೀಸರು ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ. 15 ವರ್ಷದ ಹಿಂದೆ ಪ್ರೇಮಾಗೆ ಮದುವೆ ಆಗಿತ್ತು. ಮೈಸೂರಿನ ಕ್ಯಾತಮಾರನಹಳ್ಳಿಯ ನಿವಾಸಿಯಾಗಿರುವ ಪ್ರೇಮಾ ನಂಜನಗೂಡಿನ ಶ್ರೀರಾಂಪುರ ನಿವಾಸಿ ಜೊತೆ ಮದುವೆ ಮಾಡಿಕೊಂಡಿದ್ದರು. ಒಂದು ತಿಂಗಳ ಹಿಂದೆ ಪ್ರೇಮಾ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ವೇಳೆ ಪ್ರೇಮಾ ಪತಿಯ ಸ್ನೇಹಿತ ರಾಜೇಶ್​ ಪರಿಚಯ ಆಗಿತ್ತು.

ಪರಿಚಯ ಸಲುಗೆಯಾಗಿ ಇಬ್ಬರು ಆತ್ಮೀಯವಾಗಿದ್ದರು. ಕೆಲ ದಿನಗಳ ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ಆಗಿತ್ತು. ರಾಜೇಶ್, ಪ್ರೇಮಾಗೆ ಬ್ಲ್ಯಾಕ್​ಮೇಲ್ ಮಾಡಿ ಬೆದರಿಸುತ್ತಿದ್ದ. ಇದರಿಂದ ಬೇಸತ್ತು ಸಿಮೆಂಟ್​​ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಪ್ರೇಮಾ, ಆಕೆಯ ಸೋದರ ಶಿವು ಸೇರಿಕೊಂಡು ರಾಜೇಶ್​ ಕೊಲೆ ಮಾಡಿದ್ದಾಗಿ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Karnataka Rains: ಬೆಳಗಾವಿ, ಬೀದರ್, ರಾಯಚೂರು ಸೇರಿದಂತೆ ಕರ್ನಾಟಕದ ಉತ್ತರ ಒಳನಾಡಿನಲ್ಲಿ ಭಾರಿ ಮಳೆಯ ನಿರೀಕ್ಷೆ

ಹೆಣ್ಣು ಮಕ್ಕಳಿಗೆ ಪಾಲು ನೀಡಿದಕ್ಕೆ ಮಗನಿಂದ ತಂದೆ ಮೇಲೆ ಹಲ್ಲೆ

ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಗ್ರಾಮದಲ್ಲಿ ಜವರಯ್ಯ ಎಂಬುವವರ ಮೇಲೆ ಸ್ವಂತ ಮಗನೇ ಹಲ್ಲೆ ನಡೆಸಿದ್ದಾನೆ. ಜವರಯ್ಯ ಅವರಿಗೆ ಮೂರು ಹೆಣ್ಣು, ನಾಲ್ಕು ಗಂಡು ಮಕ್ಕಳಿದ್ದಾರೆ. ಜವರಯ್ಯ ಅವರು ತಲಾ ಒಂದು ಎಕರೆ ಜಮೀನನ್ನು ತಮ್ಮ ಮಕ್ಕಳಿಗೆ ಹಂಚಿದ್ದರು. ಇದನ್ನು ವಿರೋಧಿಸಿ ಹಿರಿಯ ಮಗ ಸಿದ್ದಲಿಂಗಯ್ಯ ಕೋರ್ಟ್ ಮೊರೆ ಹೋಗಿದ್ದ. ನಿನ್ನೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಂದೆ ಜವರಯ್ಯ ಬಳಿ ಬಂದು ಹೆಣ್ಣು ಮಕ್ಕಳಿಗೆ ಪಾಲು ಕೊಡಬೇಡಿ ಎಂದು ಧಮ್ಕಿ ಹಾಕಿ ಜಗಳ ಮಾಡಿದ್ದ. ಜಗಳದ ವೇಳೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಜವರಯ್ಯಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಿದ್ದಲಿಂಗಯ್ಯ ವಿರುದ್ಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಡಹಗಲೇ ರೌಡಿಶೀಟರ್​​ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಜೂ.10ರಂದು ಬೆಂಗಳೂರಿನ ಹನುಮಂತನಗರದಲ್ಲಿ ರೌಡಿಶೀಟರ್​ ರಾಜೇಶ್​ ಅಲಿಯಾಸ್​ ಕರಿಯಾ ರಾಜೇಶ್ ಮೇಲೆ ಹಲ್ಲೆ ನಡೆದಿದೆ. ಕಾರಿನಲ್ಲಿ ಬಂದ ಐವರು ದುಷ್ಕರ್ಮಿಗಳು ರಾಜೇಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಭಿಷೇಕ್​​, ಪೃಥ್ವಿಕ್​, ಮಂಜು, ಪ್ರಮೋದ್​, ಚೇತನ್​ ಬಂಧಿತ ಆರೋಪಿಗಳು.

ಹಳೇ ವೈಷಮ್ಯ ಹಿನ್ನೆಲೆ ರಾಜೇಶ್​ ಮೇಲೆ ದಾಳಿ ನಡೆದಿತ್ತು. ಆರೋಪಿಗಳ ಹಲ್ಲೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:05 am, Wed, 12 June 24