ಮೈಸೂರು, ಸೆ.30: ಮೈಸೂರು ದಸರಾ (Mysuru Dasara) ದಂದು ಜಂಬೂ ಸವಾರಿಗಾಗಿ (Jamboo Savari) ಅರಣ್ಯ ಮತ್ತು ಪೊಲೀಸ್ ಇಲಾಖೆಗಳು ಅಂತಿಮ ಹಂತದ ಭದ್ರತಾ ಸಿದ್ಧತೆಗಳನ್ನು ಪೂರ್ಣಗೊಳಿಸಿವೆ. ಸೆ.2ರಂದು ನಡೆಯುವ ಜಂಬೂ ಸವಾರಿಗೆ ಇಂದು ಕೊನೆಯ ತಾಲಿಮು ನಡೆಸಲಾಗಿದ್ದು, ಗನ್ ಶಾಟ್, ಗೌರವ ವಂದನೆ ಹಾಗೂ ಆನೆ, ಬ್ಯಾಂಡ್ ಮತ್ತು ಕುದುರೆಗಳ ಸಮಗ್ರ ತಾಲೀಮು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಆಯುಕ್ತರು ಹೇಳಿದ್ದಾರೆ. ನಾಳೆಯಿಂದ ಪೊಲೀಸ್ ಬಂದೋಬಸ್ತ್ ಜಾರಿಗೆ ಬರಲಿದೆ. ಭದ್ರತೆಯನ್ನು ಎರಡು ಹಂತಗಳಲ್ಲಿ ಆಯೋಜಿಸಲಾಗಿದ್ದು, ಎರಡನೇ ಹಂತದಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಜಂಬೂ ಸವಾರಿ ಮತ್ತು ಬನ್ನಿಮಂಟಪ ಕಾರ್ಯಕ್ರಮಗಳಿಗೆ ಪ್ರವೇಶಿಸಲು ಪಾಸ್ ಕಡ್ಡಾಯಗೊಳಿಸಲಾಗಿದೆ. ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶವಿದ್ದು, ಕಟ್ಟುನಿಟ್ಟಿನ ಪರಿಶೀಲನೆ ನಡೆಸಲಾಗುತ್ತದೆ. ಪಾಸ್ ಇಲ್ಲದವರಿಗೆ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಅಂಬಾರಿ ಸಾಗುವ ಮಾರ್ಗದಲ್ಲಿರುವ ಕಟ್ಟಡ ಅಥವಾ ಮರಗಳ ಮೇಲೆ ಜನರು ಹತ್ತುವುದನ್ನು ನಿಷೇಧಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾರ್ವಜನಿಕರು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಸಹಕರಿಸಬೇಕೆಂದು ಎಂದು ಜಿಲ್ಲಾ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಹೇಳಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:46 pm, Tue, 30 September 25