
ಮೈಸೂರು, ಆಗಸ್ಟ್ 30: ವಿಶ್ವ ವಿಖ್ಯಾತ ಮೈಸೂರು ದಸರಾಗೆ (Mysuru Dasara) ಭರದ ಸಿದ್ಧತೆಗಳು ಆರಂಭಗೊಂಡಿದ್ದು, ಹುಣಸೂರಿನ ವೀರನಹೊಸಳ್ಳಿಯಿಂದ ಹೊರಟು ಮೈಸೂರು ತಲುಪಿರುವ ಮೊದಲ ತಂಡದ ಗಜಪಡೆಯ ತೂಕ ಪರೀಕ್ಷೆ ಕಾರ್ಯ ನಡೆಸಲಾಗಿದೆ. ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಶ್ರೀಕಂಠ, ಲಕ್ಷ್ಮಿ ಹಾಗೂ ಕಾವೇರಿ ಸೇರಿ 9 ಆನೆಗಳ ತೂಕ ಪರೀಕ್ಷೆ ನಡೆದಿದ್ದು, ಬರೋಬ್ಬರಿ 5790 ಕೆಜಿ ತೂಗುವ ಮೂಲಕ ಶ್ರೀಕಂಠ ಆನೆ ತೂಕದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.
ಇದನ್ನೂ ಓದಿ: ಮೈಸೂರು ಅರಮನೆ ಪ್ರವೇಶಿಸುತ್ತಿದ್ದಂತೆ ಜನರನ್ನ ಕಂಡು ಗಾಬರಿಗೊಂಡ ಶ್ರೀರಾಮ ಆನೆ
ಆಗಸ್ಟ್ 26ರಂದು ವೀರನಹೊಸಳ್ಳಿಯಿಂದ ಈ ಗಜಪಡೆಗೆ ಫಲತಾಂಬೂಲ ನೀಡುವ ಮೂಲಕ ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಬಳಿಕ ಆಗಸ್ಟ್ 28ರಂದು ದಸರಾ ಜಗಪಡೆಯು ಜಯಮಾರ್ತಾಂಡ ದ್ವಾರ ಮೂಲಕ ಮೈಸೂರು ಅರಮನೆ ಪ್ರವೇಶಿಸಿತ್ತು. ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ವಿವಿಧ ಕಲಾ ತಂಡಗಳ ಮೂಲಕ ಗಜಪಡೆಗೆ ಭರ್ಜರಿ ಸ್ವಾಗತ ಕೋರಲಾಗಿತ್ತು.
ಈ ಬಾರಿಯ ದಸರಾ ಉತ್ಸವ ವಿಭಿನ್ನವಾಗಿರುತ್ತೆ. ತುಂಬಾ ವಿಶೇಷ, ವಿಶಿಷ್ಟವಾಗಿ ದಸರಾ ಮಹೋತ್ಸವ ಆಚರಿಸ್ತೇವೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಹೊಸ ಸಂಪ್ರದಾಯದ ಅನಾವರಣ ಈ ಬಾರಿಯ ದಸರಾದಲ್ಲಿ ನಡೆಯಲಿದೆ. ಈ ಬಾರಿ ಸ್ಯಾಂಡಲ್ವುಡ್ ಕೂಡ ದಸರಾದಲ್ಲಿ ಭಾಗಿಯಾಗಲಿದ್ದು, ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲ ಅವರ ಜೊತೆಗೆ ಮಾತನಾಡಿದ್ದೇನೆ. ಪೊಲೀಸ್ ಬ್ಯಾಂಡ್ ಜೊತೆ ಆರ್ಮಿ ಬ್ಯಾಂಡ್ ಭಾಗಿಯಾಗಲು ಮನವಿ ಮಾಡಲಾಗಿದ್ದು, ಎಲ್ಲರ ಜೊತೆ ಚರ್ಚಿಸಿ ದಸರಾ ಉದ್ಘಾಟಕರ ಹೆಸರು ಘೋಷಣೆ ಮಾಡೋದಾಗಿ ಅವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:35 am, Sun, 30 August 26