ಮೈಸೂರು ಪಾಲಿಕೆಯಿಂದಲೇ ಫುಟ್​ಪಾತ್ ಒತ್ತುವರಿ! ಅರಮನೆ ಮುಂಭಾಗದ ರಾಜಮಾರ್ಗ ಒಡೆದು ಟಾಂಗಾ ಸ್ಟ್ಯಾಂಡ್​

ಸಾಂಸ್ಕೃತಿಕ ಹಾಗೂ ಪಾರಂಪರಿಕ ನಗರಿ ಮೈಸೂರಿನಲ್ಲಿ ಈಗ ಫುಟ್​ಪಾತ್ ರಾಜಕೀಯ ಶುರುವಾಗಿದೆ. ಸಾರ್ವಜನಿಕರು ಓಡಾಡುವ ಜಾಗದಲ್ಲಿ ಟಾಂಗಾ ಸ್ಟ್ಯಾಂಡ್ ನಿರ್ಮಿಸಲು ಮುಂದಾಗಿರುವ ಪಾಲಿಕೆ ವಿರುದ್ಧ ಜನ ಕೆಂಡಾಮಂಡಲವಾಗಿದ್ದಾರೆ. ಅರಮನೆ ಮುಂಭಾಗದ ಮತ್ತು ದಸರಾ ಮೆರವಣಿಗೆ ಸಾಗುವ ಪಾರಂಪರಿಕ ರಾಜಮಾರ್ಗವನ್ನು ಒಡೆದು, ಪಾದಚಾರಿಗಳ ಹಾದಿಗೆ ಮುಳ್ಳು ಹಾದಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ತೀವ್ರ ವಿರೋಧ ವ್ಯಕ್ತವಾಗಿದೆ.

ಮೈಸೂರು ಪಾಲಿಕೆಯಿಂದಲೇ ಫುಟ್​ಪಾತ್ ಒತ್ತುವರಿ! ಅರಮನೆ ಮುಂಭಾಗದ ರಾಜಮಾರ್ಗ ಒಡೆದು ಟಾಂಗಾ ಸ್ಟ್ಯಾಂಡ್​
ಅರಮನೆ ಮುಂಭಾಗದ ಚಾಮರಾಜೇಂದ್ರ ವೃತ್ತ ಹಾಗೂ ಫುಟ್​ಪಾತ್​ನಲ್ಲಿ ಕಾಮಗಾರಿ ನಡೆಯುತ್ತಿರುವುದು
Image Credit source: tv9
Edited By:

Updated on: Mar 18, 2026 | 9:09 AM

ಮೈಸೂರು, ಮಾರ್ಚ್ 18: ಮೈಸೂರು (Mysuru) ಅಂದರೆ ಅದು ಪಾರಂಪರಿಕ ಕಟ್ಟಡಗಳ ತವರು. ಇಲ್ಲಿನ ಪ್ರತಿ ರಸ್ತೆಯಿಗೂ ಒಂದು ಇತಿಹಾಸವಿದೆ. ಆದರೆ ಈಗ ಅದೇ ಇತಿಹಾಸಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ. ‘ಸ್ವದೇಶ್ ದರ್ಶನ 2.0’ ಯೋಜನೆಯಡಿ ನಗರದ 10 ಕಡೆ ಟಾಂಗಾ ಸ್ಟ್ಯಾಂಡ್ ನಿರ್ಮಿಸಲು ಪಾಲಿಕೆ ಮುಂದಾಗಿದೆ. ಆದರೆ ಈ ಯೋಜನೆ ಈಗ ವಿವಾದದ (Tonga stand controversy) ಕೇಂದ್ರಬಿಂದುವಾಗಿದೆ. ಅರಮನೆ ಮುಂಭಾಗದ ಚಾಮರಾಜೇಂದ್ರ ವೃತ್ತದ ಬಳಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ರಾಜಮಾರ್ಗವನ್ನು ಒಡೆದು, ಫುಟ್‌ಪಾತ್ ಮೇಲೆಯೇ ಟಾಂಗಾ ಸ್ಟ್ಯಾಂಡ್ ನಿರ್ಮಿಸಲಾಗುತ್ತಿದೆ.

‘ಪಾಲಿಕೆ ಆಯುಕ್ತರಿಗೆ ಮೈಸೂರು ನಗರದ ವಾಸ್ತವವೇ ಗೊತ್ತಿಲ್ಲ. ಎಸಿ ಹಾಕಿಕೊಂಡು ಕಚೇರಿಯಲ್ಲಿ ಕೂತಿರುವ ಅವರಿಗೆ ಪಾದಚಾರಿ ಮಾರ್ಗ ಯಾವುದು, ಖಾಲಿ ಜಾಗ ಯಾವುದು ಎಂಬುದು ಹೇಗೆ ತಿಳಿಯುತ್ತದೆ? ಸಿಎಂ ಬಂದಾಗ ಹೂಗುಚ್ಚ ಕೊಡುವುದೇ ಅವರ ಕೆಲಸವಲ್ಲ. ಮೊದಲು ನಗರದಲ್ಲಿ ಓಡಾಡಿ ಸಮಸ್ಯೆ ಅರ್ಥ ಮಾಡಿಕೊಳ್ಳಲಿ. ಕೂಡಲೇ ಈ ಕಾಮಗಾರಿ ನಿಲ್ಲಿಸಿ, ಹಾಳಾದ ರಸ್ತೆ ಸರಿಪಡಿಸಲಿ’ ಎಂದು ಬಿಜೆಪಿ ನಾಯಕ ಪ್ರತಾಪ್ ಸಿಂಹ ಒತ್ತಾಯಿಸಿದ್ದಾರೆ.

ಟಾಂಗಾ ಸವಾರಿಗೆ ಉತ್ತೇಜನ ನೀಡುವ ಹೆಸರಿನಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಗಾಳಿಗೆ ತೂರಲಾಗುತ್ತಿದೆ ಎಂಬುದು ಸ್ಥಳೀಯರ ಆಕ್ರೋಶ. ದಿನನಿತ್ಯ ಸಾವಿರಾರು ಪ್ರವಾಸಿಗರು ಮತ್ತು ಜನಸಾಮಾನ್ಯರು ಸಂಚರಿಸುವ ಈ ಪ್ರದೇಶದಲ್ಲಿ ಸ್ಟ್ಯಾಂಡ್ ನಿರ್ಮಿಸಿದರೆ ಪಾದಚಾರಿಗಳು ರಸ್ತೆಗೆ ಇಳಿಯಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಪಾಲಿಕೆಯೇ ಫುಟ್‌ಪಾತ್ ಒತ್ತುವರಿ ಮಾಡುತ್ತಿದೆ ಎಂದು ಮಾಜಿ ಮೇಯರ್ ಎಂ.ಜೆ. ರವಿಕುಮಾರ್ ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಫುಟ್​ಪಾತ್​ನಲ್ಲಿ ಕಾಮಗಾರಿಯ ವಿಡಿಯೋ ನೋಡಿ

‘ಪಾಲಿಕೆಯು ಮೈಸೂರನ್ನು ಶೆಲ್ಟರ್‌ಗಳ ನಗರವನ್ನಾಗಿ ಮಾಡಲು ಹೊರಟಿದೆ. ಫುಟ್‌ಪಾತ್ ತೆರವು ಮಾಡಬೇಕಾದ ಪಾಲಿಕೆಯೇ ಇಲ್ಲಿ ಒತ್ತುವರಿ ಮಾಡಿಸುತ್ತಿರುವುದು ದುರಂತ. ಯಾವುದೇ ಕಾರಣಕ್ಕೂ ಇಲ್ಲಿ ಟಾಂಗಾ ಸ್ಟ್ಯಾಂಡ್ ನಿರ್ಮಿಸಲು ಬಿಡುವುದಿಲ್ಲ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹುಟ್ಟಿದ್ದೇ ಒಂದು ಭೀಕರ ಅಗ್ನಿದುರಂತದಿಂದ! ಇದರ ಹಿಂದಿರುವ ಅರಮನೆಯ ಆ ರಹಸ್ಯ ನಿಮಗೆ ಗೊತ್ತೇ?

ಒಟ್ಟಿನಲ್ಲಿ, ಪರಂಪರೆ ಉಳಿಸುವ ಹೆಸರಿನಲ್ಲಿ ನಡೆಯುತ್ತಿರುವ ಈ ಅವೈಜ್ಞಾನಿಕ ಕಾಮಗಾರಿ ಮೈಸೂರಿಗರ ನಿದ್ದೆಗೆಡಿಸಿದೆ. ಇನ್ನಾದರೂ ಪಾಲಿಕೆ ಎಚ್ಚೆತ್ತುಕೊಂಡು ಪರ್ಯಾಯ ಜಾಗ ಹುಡುಕುತ್ತದೆಯೇ ಅಥವಾ ಸಾರ್ವಜನಿಕರ ಆಕ್ರೋಶಕ್ಕೆ ಮಣಿಯುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:08 am, Wed, 18 March 26

Follow Us