ಮೈಸೂರು: ಹಕ್ಕಿ ಗೂಡ ಹೊಡೆದು 24 ಮರಿಗಳನ್ನು ಕೊಂದ ವ್ಯಕ್ತಿಯ ಬಂಧನ

| Updated By: ಆಯೇಷಾ ಬಾನು

Updated on: Aug 09, 2023 | 8:05 AM

ಮರದ ಮೇಲೆ ಗೂಡು ಕಟ್ಟಿದ್ದ ಎರಡು ಜಾತಿಯ ಪಕ್ಷಿಯ ಗೂಡನ್ನು ನಾಶ ಮಾಡಿ ಅದರಲ್ಲಿದ್ದ ಮರಿಗಳನ್ನು ಕೊಂದು ಹಾಕಿದ ಕಾರಣಕ್ಕೆ ಮೈಸೂರಿನಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ.

ಮೈಸೂರು: ಹಕ್ಕಿ ಗೂಡ ಹೊಡೆದು 24 ಮರಿಗಳನ್ನು ಕೊಂದ ವ್ಯಕ್ತಿಯ ಬಂಧನ
ಆರೋಪಿ ರವಿ
Follow us on

ಮೈಸೂರು, ಆ.09: ಮೈಸೂರಿನ(Mysuru) ಜಿಲ್ಲೆ ನಂಜನಗೂಡು ತಾಲ್ಲೂಕಿನ ಸಿಂಧುವಳ್ಳಿ ಗ್ರಾಮದಲ್ಲಿ ಎರಡು ಜಾತಿಯ ಪಕ್ಷಿಗಳ ಗೂಡುಗಳನ್ನು(Two Bird Species) ಹೊಡೆದು 24 ಮರಿಗಳನ್ನು ಕೊಂದ ಆರೋಪದ ಮೇಲೆ ಮೇಸ್ತ್ರಿಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೈಸೂರಿನ ಅರಣ್ಯಾಧಿಕಾರಿಗಳ ಪ್ರಕಾರ, ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದ ರವಿ ಎಂಬಾತನ ಮೇಲೆ 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಮಂಗಳವಾರ ಬಂಧಿಸಲಾಗಿದೆ.

ಆರೋಪಿ ರವಿ ತಮ್ಮ ಗ್ರಾಮದ ಮರವೊಂದರ ಮೇಲೆ ಕಾರ್ಮೋರೆಂಟ್ ಹಾಗೂ ಈಗ್ರೆಟ್ ಜಾತಿಯ ಹಕ್ಕಿಗಳು ಗೂಡು ಕಟ್ಟಿದ್ದನ್ನು ಗಮನಿಸಿ ಅವುಗಳನ್ನು ಕೆಡವಿದ್ದಾನೆ. ಹಾಗೂ ಗೂಡಿನಲ್ಲಿದ್ದ 24 ಮರಿಗಳನ್ನು ಕೊಂದಿದ್ದಾನೆ. ಹಾಗೂ 7ಮರಿಗಳಿಗೆ ಗಾಯಗೊಳಿಸಿದ್ದಾನೆ. ಗಾಯಗೊಂಡಿದ್ದ ಮರಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಈ ಸಂಬಂಧ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರ್ ಎಫ್ ಓ ಸುರೇಂದ್ರ, ಡಿಆರ್‌ಎಫ್‌ಓ ಮೋಹನ್ ಕುಮಾರ್‌ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದಾಗ ರವಿ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಹಕ್ಕಿಗಳು ಮರದ ಕಳಗಿನ ಪ್ರದೇಶವನ್ನು ಗಲೀಜು ಮಾಡುತ್ತಿದ್ದವು. ಇದರಿಂದ ಅಸಮಾಧಾನಗೊಂಡ ರವಿ ಈ ರೀತಿ ಮಾಡಿರುವುದಾಗಿ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದಾನೆ.

ಇನ್ನು ಹಕ್ಕಿಗಳು ಗಲೀಜು ಮಾಡುತ್ತಿದ್ದ ಜಾಗ ಆರೋಪಿ ರವಿಯ ಹ್ಯಾಂಗ್‌ಔಟ್ ಜಾಗವಾಗಿತ್ತು. ಆತ ಪ್ರತಿ ದಿನ ಇಲ್ಲಿಗೆ ಬಂದು ಹರಟೆ ಹೊಡೆಯುತ್ತಿದ್ದ. ಆದ್ರೆ ಹಕ್ಕಿಗಳು ಗಲೀಜು ಮಾಡುತ್ತಿದ್ದದ್ದು ಆತನಿಗೆ ಬೇಸರ ತಂದಿತ್ತು. ಹೀಗಾಗಿ ಕೋಲುಗಳನ್ನು ಬಳಸಿ ಮರದಿಂದ ಹಕ್ಕಿ ಗೂಡುಗಳನ್ನು ಕೆಳಗಿಳಿಸಿದ್ದು, 24 ಮರಿ ಹಕ್ಕಿಗಳನ್ನು ಕೊಂದಿದ್ದಾನೆ. ಹೊಸದಾಗಿ ಮೊಟ್ಟೆಯೊಡೆದ ಮರಿಗಳು ಕೂಡ ಸಾವನ್ನಪ್ಪಿವೆ. ಘಟನೆಯನ್ನು ನೋಡುವುದು ಹೃದಯ ವಿದ್ರಾವಕವಾಗಿದೆ ಎಂದು ಅಧಿಕಾರಿಯೊಬ್ಬರು ಘಟನೆ ವಿವರಿಸಿದರು.

ಇದನ್ನೂ ಓದಿ: ಧಾವಂತದಲ್ಲಿದ್ದ ರಾಮನಗರ ಆಯುಕ್ತ: ಹಿಂದಿನಿಂದ ಬೈಕ್​​ಗೆ ಗುದ್ದಿದ ಆಯುಕ್ತ ನಾಗೇಶ್ ಕಾರು, 21 ವರ್ಷದ ಯುವತಿ ಸ್ಥಳದಲ್ಲೇ ಸಾವು

ಗೂಳಿ ದಾಳಿ ವೃದ್ದೆಗೆ ಗಂಭೀರ ಗಾಯ

ಮೈಸೂರಿನಲ್ಲಿ ಬೀದಿ ನಾಯಿಗಳು, ದನಗಳ ಹಾವಳಿ‌ ಹೆಚ್ಚಾಗಿದೆ. ಜಿಲ್ಲೆಯ ಸರಸ್ವತಿಪುರಂ ಪಾರ್ಕ್ ಬಳಿ ವೃದ್ಧೆಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಗೂಳಿ ದಾಳಿ ನಡೆಸಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಜುಳಾ (64) ಗಾಯಗೊಂಡ ವೃದ್ಧೆ. ಗಾಯಾಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಗೂಳಿ ದಾಳಿ ನಡೆಸಿದ ದೃಶ್ಯ ಪಾರ್ಕ್​ ಮುಂಭಾಗದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ನಾಯಿ ಮತ್ತು ದನಗಳು ಅಡ್ಡಾದಿಡ್ಡಿ ಓಡಾಡುವುದು, ರಸ್ತೆ ಮಧ್ಯದಲ್ಲೇ ಮಲಗುವುದು ಹೆಚ್ಚಾಗಿದೆ. ಇದರಿಂದ ವಾಹನ ಸವಾರರಿಗೆ ಜನರಿಗೆ ತೊಂದರೆಯಾಗುತ್ತಿದೆ. ಬೀದಿ ನಾಯಿ, ಬೀದಿ ದನಗಳ ಹಾವಳಿ ತಪ್ಪಿಸಬೇಕೆಂದು ನಗರ ಪಾಲಿಕೆ ಅಧಿಕಾರಿಗಳಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:56 am, Wed, 9 August 23