ಸರ್ಕಾರಿ ಆಂಬ್ಯುಲೆನ್ಸ್​​ನಲ್ಲಿ ಆಕ್ಸಿಜನ್ ಕೊರತೆ: ಹಸುಗೂಸು ದುತಂತ ಸಾವು, ಸಿಎಂ ತವರಿನಲ್ಲಿ ಇದೆಂಥಾ ಸ್ಥಿತಿ!

ಅತ್ತ ವಿಧಾನಸಭೆಯಲ್ಲಿ ಜನರ ಹಾಗೂ ಕ್ಷೇತ್ರಗಳ ಮೂಲಸೌಕರ್ಯಗಳ ಬಗ್ಗೆ ಚರ್ಚೆ ಮಾಡದೇ ತಮ್ಮ ಮೇಲೆ ಆಗಿರುವ ಹನಿಟ್ರ್ಯಾಪ್‌ಗಳ ಬಗ್ಗೆ ಚರ್ಚೆಯಲ್ಲಿ ತೊಡಗಿದ್ದಾರೆ. ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನಲ್ಲಿ ಆಕ್ಸಿಜನ್ ಕೊರತೆಯಿಂದ ಹಸುಗೂಸು ಬಲಿಯಾಗಿದೆ. ತಾಯಿ ಗರ್ಭದಿಂದ ಹೊರ ಬಂದು ಜಗತ್ತು ನೋಡಬೇಕಿದ್ದ ಕಂದಮ್ಮ ದುರಂತ ಸಾವು ಕಂಡಿದೆ.

ಸರ್ಕಾರಿ ಆಂಬ್ಯುಲೆನ್ಸ್​​ನಲ್ಲಿ ಆಕ್ಸಿಜನ್ ಕೊರತೆ: ಹಸುಗೂಸು ದುತಂತ ಸಾವು, ಸಿಎಂ ತವರಿನಲ್ಲಿ ಇದೆಂಥಾ ಸ್ಥಿತಿ!
Government Ambulance
Updated By: ರಮೇಶ್ ಬಿ. ಜವಳಗೇರಾ

Updated on: Mar 20, 2025 | 7:43 PM

ಮೈಸೂರು, (ಮಾರ್ಚ್​ 20): ಸರ್ಕಾರಿ ಆಂಬ್ಯುಲೆನ್ಸ್​​ (Government ambulance) ಬಗ್ಗೆ ಪದೇ ಪದೇ ದೂರುಗಳು ಕೇಳಿಬರುತ್ತಲೇ ಇವೆ. ಏನಾದರೂ ಅಪಘಾತ ಸಂಭವಿಸಿದರೂ ಸಹ ಕರೆ ಮಾಡಿದರೆ ಸರಿಯಾದ ಸಮಯಕ್ಕೆ ಬರಲ್ಲ, ಆಂಬ್ಯುಲೆನ್ಸ್​​ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲು ಏನು ಇರಲ್ಲ ಅಂತೆಲ್ಲಾ ಸಾರ್ವಜನಿಕ ವಲಯದಿಂದ ದೂರುಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕವೆಂಬಂತೆ ಸರ್ಕಾರಿ ಆಂಬ್ಯುಲೆನ್ಸ್​​ನಲ್ಲಿ ಆಕ್ಸಿಜನ್ ಕೊರತೆಯಿಂದ ಮಗು ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ಮೈಸೂರು (Mysuru) ಜಿಲ್ಲೆಯ ನಂಜನಗೂಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಿಂದ ಮೈಸೂರಿನ ದೊಡ್ಡಸ್ಪತ್ರೆಗೆ ತೆರಳುತ್ತಿದ್ದ ವೇಳೆ ಮಗು ಆಂಬ್ಯುಲೆನ್ಸ್​ನಲ್ಲಿ ಮೃತಪಟ್ಟಿದ್ದು,  ಆಂಬ್ಯುಲೆನ್ಸ್​ನಲ್ಲಿಆಕ್ಸಿಜನ್(oxygen) ಇಲ್ಲದಿರುವುದೇ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ನಂಜನಗೂಡು ಪಟ್ಟಣದ ಶ್ರೀರಾಂಪುರ ಬಡಾವಣೆಯ ರತ್ನಮ್ಮ ಎನ್ನುವರ ಮಾರ್ಚ್​ 17ರಂದು ಹೆರಿಗೆಗಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದು, ಹೆರಿಯಾದ ಬಳಿಕ ಮಗು ನೀಲಿ ಬಣ್ಣಕ್ಕೆ ತಿರುಗಿದೆ. ಇದರಿಂದ ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಮಕ್ಕಳ ಆಸ್ಪತ್ರೆಗೆ ತೆರಳುತ್ತಿದ್ದರು. ಆದ್ರೆ, ದುರದೃಷ್ಟವಶಾತ್​ ಮೈಸೂರು ತಲುಪುವ ಮುನ್ನವೇ ಮಗು ಮಾರ್ಗ ಮಧ್ಯೆ ಕೊನೆಯುಸಿರೆಳೆದಿದೆ. ಮಗು ಹುಟ್ಟಿದ ಖುಷಿಯಲ್ಲಿದ್ದ ಪೋಷಕರಿಗೆ ಕೇಲವೇ ಕ್ಷಣದಲ್ಲಿ ಆ ಖುಷಿ ಮಾಯವಾಗಿದೆ.

ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಕೊರತೆ ತಿಳಿದಿದ್ದರೂ ಸಹ ಆಸ್ಪತ್ರೆ ಸಿಬ್ಬಂದಿ ಮಗುವಿನ ಜೀವವನ್ನು ಲೆಕ್ಕಿಸದೇ ಅದೇ ಆಂಬುಲೆನ್ಸ್‌ನಲ್ಲಿ ಮೈಸೂರಿಗೆ ರವಾನಿಸಲು ಮುಂದಾಗಿದ್ದಾರೆ. ಆದರೆ, ಮೈಸೂರಿಗೆ ತೆರಳುತ್ತಿದ್ದ ಮಾರ್ಗ ಮಧ್ಯದಲ್ಲಿ ಮಗುವಿನ ಉಸಿರು ನಿಂತಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ನಂಜನಗೂಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಮಗುವಿನ ಸಾವಿಗೆ ಕಾರಣವೆಂದು ಪೋಷಕರು ಆರೋಪ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ