ರಾಮೇಶ್ವರಂ ಕೆಫೆ ಘಟನೆ: ಅದೊಂದು ಸುಧಾರಿತ ಸ್ಫೋಟ ಪ್ರಕರಣವಾಗಿದೆ- ಶಾಕಿಂಗ್​ ಸ್ಟೇಟ್ಮೆಂಟ್​ ಕೊಟ್ಟ ಸಿಎಂ ಸಿದ್ದರಾಮಯ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 01, 2024 | 5:52 PM

ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟವಾಗಿದೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಇದೊಂದು ಸುಧಾರಿತ ಸ್ಪೋಟ ಪ್ರಕರಣವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇಂತಹ ಘಟನೆಗಳು ನಡೆಯಬಾರದು, ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರು, ಮಾರ್ಚ್​​ 1: ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ (Rameswaram cafe) ಯಲ್ಲಿ ನಿಗೂಢ ಸ್ಫೋಟ ಸಂಭವಿಸಿದ್ದು, ಬೆಂಗಳೂರಿಗರು ಬೆಚ್ಚಿ ಬಿದ್ದಿದ್ದಾರೆ. ಮಧ್ಯಾಹ್ನ 1.30ರ ಸುಮಾರಿಗೆ ಕೆಫೆಯ ಮುಂಭಾಗ ಸ್ಫೋಟವಾಗಿದೆ. ಮಹಿಳೆ ಸೇರಿದಂತೆ ಐವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವೈಟ್​ಫೀಲ್ಡ್, ಹೆಚ್​ಎಎಲ್, ಇಂದಿರಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ವಿಚಾರವಾಗಿ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಇದೊಂದು ಸುಧಾರಿತ ಸ್ಪೋಟ ಪ್ರಕರಣವಾಗಿದೆ. ಇಂತಹ ಘಟನೆಗಳು ನಡೆಯಬಾರದು, ತನಿಖೆ ನಡೆಸುತ್ತಿದ್ದಾರೆ. ಗೃಹ ಸಚಿವ ಪರಮೇಶ್ವರ್​ರಿಂದ ಮಾಹಿತಿ ಪಡೆದಿದ್ದೇನೆ ಎಂದರು.

ಸದ್ಯ ಸಿಸಿಟಿವಿ ಪರಿಶೀಲನೆ‌ ನಡೆಯುತ್ತಿದೆ. ಯಾರೋ ಒಬ್ಬರು ಬ್ಯಾಗ್ ಇಟ್ಟಿರುವುದು ತಿಳಿದಿದೆ. ಈ ಕುರಿತು ಪೊಲೀಸರು ತನಿಖೆ‌ ನಡೆಸುತ್ತಿದ್ದಾರೆ. ಇದು ಟೆರರಿಸ್ಟ್ ಮಾಡಿರುವ ಬಗ್ಗೆ ಇನ್ನು ಗೊತ್ತಿಲ್ಲ. ಸ್ವಲ್ಪ ಸಮಯದಲ್ಲೇ ಸಂಪೂರ್ಣ ಮಾಹಿತಿ ಗೊತ್ತಾಗುತ್ತದೆ. ಸ್ಫೋಟಕ ಭಾರೀ ಪ್ರಮಾಣದಲ್ಲಿ ನಡೆದಿಲ್ಲ. ಸಣ್ಣ ಪ್ರಮಾಣದದ್ದರೂ ಅದು ಪರಿಣಾಮಕಾರಿಯಾಗಿದೆ ಎಂದಿದ್ದಾರೆ.

ಈ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದ ಸಿಎಂ

ಎಲ್ಲರ ಕಾಲದಲ್ಲೂ ಕೂಡ ಘಟನೆಗಳು ನಡೆದಿವೆ ಆದರೆ ಇಂತಹ ಘಟನೆ ನಡೆಯಬಾರದು. ಇತ್ತೀಚೆಗೆ ಇಂತಹ ಘಟನೆ ನಡೆದಿರಲಿಲ್ಲ. ಮಂಗಳೂರಲ್ಲಿ ಘಟನೆ ನಡೆದಿತ್ತು. ಹಿಂದಿನ ಸರ್ಕಾರದಲ್ಲಿ ಹಲವು ಸ್ಫೋಟಗಳು ನಡೆದಿತ್ತು. ನಮ್ಮ ಸರ್ಕಾರದಲ್ಲಿ ಈವಾಗ ಈ ಘಟನೆ ನಡೆದಿದೆ. ಆರೋಪಿಗಳನ್ನ ಪತ್ತೆ ಹಚ್ಚಿ ಶಿಕ್ಷಿಸಲಾಗುವುದು. ಬ್ಲಾಸ್ಟ್ ಆಗಿರುವುದು ಸತ್ಯವಾಗಿದೆ. ಬ್ಲಾಸ್ಟ್ ಮಾಡಿರುವವರ ವಿರುದ್ಧ ಶಿಸ್ತಿನ, ಕಠಿಣ ಕ್ರಮ ಆಗಲಿದೆ. ಈ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ನಿಗೂಢ ಸ್ಫೋಟ: ರಾಮೇಶ್ವರಂ ಕೆಫೆಯಲ್ಲಿ ಇದಕ್ಕೂ ಮೊದಲು ಸಹ ಸ್ಫೋಟಕಗಳನ್ನಿಡುವ ಪ್ರಯತ್ನ ನಡೆದಿತ್ತೇ?

ಬ್ಲಾಸ್ಟ್ ಆಗಿದೆ ಎಂಬ ಮಾಹಿತಿ ಬಂದಿದೆ. ಪೊಲೀಸರು ಸೂಕ್ತ ತನಿಖೆ ನಡೆಸುತ್ತಿದ್ದಾರೆ. ಯಾರೂ, ಏನೂ ಅಂತ ಯಾರಿಗೂ ಗೊತ್ತಿಲ್ಲ. ಕ್ಯಾಷಿಯರ್ ಬಳಿ ಹೋಗಿ ಟೋಕನ್ ತೆಗೆದುಕೊಂಡಿದ್ದಾನೆ. ಅವರ ಬಳಿ ಬ್ಯಾಗ್ ಇಟ್ಟಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಘಟನೆ ಬಗ್ಗೆ ಪೂರ್ಣ ಮಾಹಿತಿ ಪಡೆದ ಬಳಿಕ ಮಾತಾಡುವೆ ಎಂದಿದ್ದಾರೆ.

ಗೃಹ ಸಚಿವ ಪರಮೇಶ್ವರ್ ಹೇಳಿದ್ದಿಷ್ಟು 

ತುಮಕೂರು ಜಿಲ್ಲೆಯ ಕುಣಿಗಲ್​ನಲ್ಲಿ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ರಾಮೇಶ್ವರಂ ಕೆಫೆಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಏನು ಸ್ಫೋಟವಾಗಿದೆ ಅಂತಾ ಇನ್ನೂ ಖಚಿತವಾಗಿ ಗೊತ್ತಾಗಿಲ್ಲ. ಗಾಯಗೊಂಡ 9 ಜನರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಜೆ ಅಥವಾ ನಾಳೆ ಸ್ಥಳಕ್ಕೆ ಭೇಟಿ ನೀಡಿ ನಾನೂ ಪರಿಶೀಲಿಸುತ್ತೇನೆ. ಈಗ ಸ್ಯಾಂಪಲ್ ಕಲೆಕ್ಟ್ ಮಾಡಿಕೊಂಡಿದ್ದಾರೆ, ಪರಿಶೀಲನೆ ನಡೀತಿದೆ ಎಂದರು.

ಇದನ್ನೂ ಓದಿ: ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಬಿಗ್ ಟ್ವಿಸ್ಟ್: ಸ್ಫೋಟಕ ಅಂಶ ಬಿಚ್ಚಿಟ್ಟ ಕೆಫೆ ಎಂಡಿ!

ಒಂದು ವೇಳೆ ಕುರುಹುಗಳು ಸಿಕ್ಕಲ್ಲಿ ಮುಂದಿನ ತನಿಖೆ ಮಾಡಲಾಗುತ್ತೆ. ಬ್ಯಾಗ್ ಇತ್ತು ಅಂತಿದ್ದಾರೆ, ಆದರೆ ನಿರ್ದಿಷ್ಟ ಮಾಹಿತಿ ಇನ್ನೂ ಬರಬೇಕಿದೆ. ನಿರ್ದಿಷ್ಟ ಮಾಹಿತಿ ಪೊಲೀಸ್ ಇಲಾಖೆಯಿಂದ ಬರಬೇಕಿದೆ. ನಮ್ಮ ಇಲಾಖೆ ವರದಿ ಬರೋವರೆಗೂ ನಾನು ಏನೂ ಹೇಳಲು ಆಗಲ್ಲ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:43 pm, Fri, 1 March 24