ಲೋಕಸಭೆಯಲ್ಲಿ ಭದ್ರತಾ ಲೋಪ: ಪಾಸ್​ ನೀಡುವಂತೆ ಮೈಸೂರು ಕಚೇರಿಯಿಂದಲೇ ಹೋಗಿತ್ತು ಫೋನ್ ಕರೆ

| Updated By: ರಮೇಶ್ ಬಿ. ಜವಳಗೇರಾ

Updated on: Dec 13, 2023 | 10:17 PM

Security breach In parliament: ಲೋಕಸಭೆಯಲ್ಲಿ ಉಂಟಾದ ಭದ್ರತಾ ಲೋಪ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಇನ್ನು ಪ್ರತಾಪ್ ಸಿಂಹ ಅವರ ಪಾಸು ಪಡೆದುಕೊಂಡು ಲೋಕಸಭೆಗೆ ಪ್ರವೇಶಿಸಿದ್ದ ಇಬ್ಬರು ಯುವಕರು ಏಕಾಏಕಿ ಸದನದೊಳಗೆ ಪ್ರವೇಶಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದಾರೆ. ಅಷ್ಟಕ್ಕೂ ಯುವಕರಿಗೆ ಪ್ರತಾಪ್ ಸಿಂಹ ಅವರ ಪಾಸ್ ಸಿಕ್ಕಿದ್ದೇಗೆ? ಎನ್ನುವ ವಿವರ ಇಲ್ಲಿದೆ.

ಲೋಕಸಭೆಯಲ್ಲಿ ಭದ್ರತಾ ಲೋಪ: ಪಾಸ್​ ನೀಡುವಂತೆ ಮೈಸೂರು ಕಚೇರಿಯಿಂದಲೇ ಹೋಗಿತ್ತು ಫೋನ್ ಕರೆ
Follow us on

ಮೈಸೂರು, (ಡಿಸೆಂಬರ್ 13): ಭಾರೀ ಭದ್ರತೆಯನ್ನು (Security) ಭೇದಿಸಿ, ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿರುವಾಗ ಸದನದೊಳಗೆ ಜಿಗಿದು ಆತಂಕ ಸೃಷ್ಠಿಸಿದ್ದ ಇಬ್ಬರು ಯುವಕರನ್ನ ಸೇರಿದಂತೆ ಒಟ್ಟು 6 ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಮನೋರಂಜನ್ ಎನ್ನುವಾತ ಮೈಸೂರಿನವನು. ಸದನದೊಳಗೆ ನುಗ್ಗಿದ್ದ ಸಾಗರ್ ಶರ್ಮಾ ಹಾಗೂ ಮನೋರಂಜನ್​ ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರಿಂದ ಪಾಸ್‌ ಪಡೆದಿದ್ದರು ಎನ್ನುವ ವಿಚಾರ ಬಹಿರಂಗವಾಗಿದೆ. ಪ್ರತಾಪ್ ಸಿಂಹ ಅವರ ಪಾಸಿನ ಮೇಲೆ ಸಾಗರ್ ಶರ್ಮಾ ಎಂದು ಹೆಸರು ಬರೆದು ಕೊಡಲಾಗಿದ್ದು, ಇದೀಗ ಪಾಸ್​ ಪೋಟೋ ವೈರಲ್ ಆಗಿದೆ.

ಕಲಾಪ ವೀಕ್ಷಣೆ ಮಾಡಲು ಪಾಸ್​ ನೀಡುವಂತೆ ಮೈಸೂರು ಕಚೇರಿಯಿಂದ ಪ್ರತಾಪ್ ಸಿಂಹ ಅವರ ಆಪ್ತ ಸಹಾಯಕನಿಗೆ (ಪಿಎ)ಕರೆ ಮಾಡಲಾಗಿತ್ತು. ಬಳಿಕ ಮೈಸೂರಿನವರು ಎನ್ನುವ ಕಾರಣಕ್ಕೆ ಪ್ರತಾಪ್ ಸಿಂಹ ಅವರು ಪಾಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ಮೈಸೂರು ಕಚೇರಿಯಿಂದ ಯಾರು ಫೋನ್​ ಮಾಡಿ ಪಾಸ್ ನೀಡುವಂತೆ ಹೇಳಿದ್ದವ ಹೆಸರು ತಿಳಿದುಬಂದಿಲ್ಲ.

ಇದನ್ನೂ ಓದಿ: ಲೋಕಸಭೆಗೆ ನುಗ್ಗಿದ ಮೈಸೂರಿನ ಮನೋರಂಜನ್‌ ಯಾರು? ಈತನಿಗೆ ರಾಜಕೀಯ ನಂಟು ಇತ್ತಾ? ಇಲ್ಲಿದೆ ವಿವರ

ಇನ್ನು ಸಂಸತ್ ಒಳಗಡೆ ಹೋಗಲು ಒಬ್ಬ ಸಂಸದ ಇಬ್ಬರಿಗೆ ಪಾಸ್ ಕೊಡಬಹುದು. ಹೀಗಾಗಿ ಸಾಗರ್ ಶರ್ಮಾ ಹಾಗೂ ಮನೋರಂಜನ್ ಮಾತ್ರ ಸಂಸತ್ ಒಳಗೆ ಪ್ರವೇಶಿಸಿದ್ದರು.ಇನ್ನು ಇವರ ತಂಡದ ಕೆಲವರು ಸಂಸತ್​ ಆವರಣದ ಹೊರಗಡೆ ಇದ್ದುಕೊಂಡು ಪ್ರತಿಭಟನೆ ಮಾಡಿದ್ದಾರೆ. ಇದೀಗ ಒಟ್ಟು ಆರು ಜನರನ್ನು ಬಂಧಿಸಲಾಗಿದ್ದು, ತನಿಖೆ ನಡೆಸಿದ್ದಾರೆ.

ಅಷ್ಟಕ್ಕೂ ಲಖನೌ ಮೂಲದ ಸಾಗರ್ ಶರ್ಮಾ ಮೈಸೂರು ಪ್ರತಾಪ್ ಸಿಂಹ ಕಚೇರಿಯವರಿಗೆ ಹೇಗೆ ಪರಿಚಯ ಎನ್ನುವ ಪ್ರಶ್ನೆ ಉದ್ಭಸಿವೆ. ಯಾಕಂದ್ರೆ ಪಾಸ್ ಮೇಲಿರುವುದು ಸಾಗರ್ ಶರ್ಮಾ ಹೆಸರು. ಹೀಗಾಗಿ ಪಾಸ್ ಕೊಡುವಂತೆ ಕರೆ ಮಾಡಿದ್ದವರು ಯಾರು?  ಸಾಗರ್ ಶರ್ಮಾಗೆ ಹೇಗೆ ಪಾಸ್ ಸಿಕ್ತು ಎನ್ನುವುದೇ ನಿಗೂಢವಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:23 pm, Wed, 13 December 23