ಮೀಸಲಾತಿ ಘೋಷಣೆ ಮಕ್ಕಳ ಆಟಿಕೆಯಾಗಿದೆ, ಯಾರ ಸಲಹೆ ಪಡೆದು ಮೀಸಲಾತಿ ಘೋಷಣೆ ಮಾಡಿದ್ದೀರಾ? -ಹೆಚ್ಡಿ ಕುಮಾರಸ್ವಾಮಿ
ಮೀಸಲಾತಿ ಘೋಷಣೆ ಮಕ್ಕಳ ಆಟಿಕೆಯಂತೆ ಆಗಿದೆ. ರಾಜ್ಯ ಸರ್ಕಾರ ಯಾವ ಆಧಾರದಲ್ಲಿ ಮೀಸಲಾತಿ ಘೋಷಣೆ ಮಾಡಿದೆ ಎಂದು ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಮೈಸೂರು: ಜೆಡಿಎಸ್ ಪಂಚರತ್ನ ಯಾತ್ರೆ ಸಮಾರೋಪ ಯಶಸ್ವಿ ಹಿನ್ನೆಲೆ ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮಾಧ್ಯಮಗೋಷ್ಠಿ ನಡೆಸಿದರು. ಈ ವೇಳೆ ಮೀಸಲಾತಿ ಘೋಷಣೆ ಮಕ್ಕಳ ಆಟಿಕೆಯಂತೆ ಆಗಿದೆ. ರಾಜ್ಯ ಸರ್ಕಾರ ಯಾವ ಆಧಾರದಲ್ಲಿ ಮೀಸಲಾತಿ ಘೋಷಣೆ ಮಾಡಿದೆ. ಮೀಸಲಾತಿ ಘೋಷಣೆಗೆ ಮುನ್ನ ವೈಜ್ಞಾನಿಕವಾಗಿ ಅಧ್ಯಯನ ಮಾಡಿದ್ದೀರಾ? ಯಾರ ಸಲಹೆ ಪಡೆದು ಮೀಸಲಾತಿ ಘೋಷಣೆ ಮಾಡಿದ್ದೀರಾ? ಎಂದು ಮೀಸಲಾತಿ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ HDK ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಹೆಚ್ಡಿ ಕುಮಾರಸ್ವಾಮಿ, ಸಮಾವೇಶಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಮುಂದಿನ ಏಪ್ರಿಲ್ 10ರವೆಗೂ ಪಂಚರತ್ನ ಯಾತ್ರೆ ಮುಂದುವರೆಯಲಿದೆ. ಬೆಂಗಳೂರ ನಗರದ ಕ್ಷೇತ್ರದಲ್ಲಿ ನಾಳೆಯಿಂದ ರಥಯಾತ್ರೆ ನಡೆಯಲಿದೆ. 6ರಂದು ಮೈಸೂರಿನ ಪಿರಿಯಾಪಟ್ಟಣ, 7 ರಂದು ಕೆಆರ್ ನಗರ ನಂತರ ಕೊಳ್ಳೇಗಾಲ ಹನೂರು ಗುಂಡ್ಲುಪೇಟೆ ಕ್ಷೇತ್ರದಲ್ಲಿ ರಥಯಾತ್ರೆ ನಡೆಸುತ್ತೇವೆ. ಸರ್ಕಾರದ ಸಾಧನೆ ಬಣ್ಣ ಬಣ್ಣದ ಜಾಹೀರಾತಿಗೆ ಸೀಮಿತವಾಗಿದೆ. ಉತ್ತರ ಕರ್ನಾಟಕ ಸಿಎಂ ಕ್ಷೇತ್ರದ ಬಡತನದ ಬಗ್ಗೆ ಕೇಂದ್ರ ವರದಿ ಮಾಡಿದೆ. ಅಪೌಷ್ಟಿಕತೆಯ ಬಗ್ಗೆಯೂ ಕೇಂದ್ರ ಸರ್ಕಾರ ವರದಿ ನೀಡಿದೆ. ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಹೇಳುತ್ತಾರೆ. ಬಡತನ ಅಪೌಷ್ಟಿಕತೆ ನಿವಾರಿಸುವಲ್ಲಿ ಸರ್ಕಾರ ವಿಫಲವಾಗಿದೆ. ರಾಜ್ಯ ಸರ್ಕಾರ ವಿಫಲವಾಗಿದೆ ಆದರೆ ಕೇಂದ್ರ ಸರ್ಕಾರ ಏನು ಮಾಡುತ್ತಿದೆ? ರಾಜ್ಯಕ್ಕೆ ಬಂದು ಈ ಬಗ್ಗೆ ಕ್ರಮ ವಹಿಸಲು ಮುಂದಾಗಿದ್ದಾರಾ? ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಮೈಸೂರು: ಜೆಡಿಎಸ್ ಪಂಚರತ್ನ ಸಮಾರೋಪ ಸಮಾರಂಭದಲ್ಲಿ ಹೆಚ್ಡಿ ಕುಮಾರಸ್ವಾಮಿ ಭರಸವಸೆಗಳ ಸುರಿಮಳೆ
ಮೋದಿ ಸಮಾಧಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ, ನಿಮ್ಮನ್ನು ಸಮಾಧಿ ಮಾಡಲು ಯಾರಿಗೆ ಆಗುತ್ತದೆ. ಅಂಬೇಡ್ಕರ್ ಅವರ ಸಂವಿಧಾನ ಸಮಾಧಿ ಮಾಡಲು ಹೊರಟಿರುವುದು ನೀವು. ಒಬ್ಬ ಪ್ರಧಾನಿ ಬಾಯಿಂದ ಈ ರೀತಿಯ ಮಾತು ಎಷ್ಟರಮಟ್ಟಿಗೆ ಸರಿ? ಕನ್ನಡಿಗರು ಜೀವ ಉಳಿಸಿ ಅಂತಿದ್ದಾರೆ. ಮಹರಾಷ್ಟ್ರದವರು ದಬ್ಬಾಳಿಕೆ ಮಾಡಿದರು. ಕನಿಷ್ಠ ಸೌಜನ್ಯಕ್ಕೂ ನಮ್ಮ ಪರ ವಹಿಸಲಿಲ್ಲ. ನಿಮಗೆ ಕನ್ನಡಿಗರ ಮತ ಬೇಕು ಕನ್ನಡಿಗರಿಗೆ ನಿಮ್ಮ ಕೊಡುಗೆ ಏನು? ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಇನ್ನು ರಾಮನಗರದಲ್ಲಿ ವಿವಿಧ ಕಾಮಗಾರಿಗಳಿಗೆ ಸಿಎಂ ಚಾಲನೆ ವಿಚಾರಕ್ಕೆ ಸಂಬಂಧಿಸಿ, ಕಾರ್ಯಕ್ರಮಗಳಿಗೆ ಜನರನ್ನು ಕರೆತರಲು ಅಧಿಕಾರಿಗಳಿಗೇ ತಾಕೀತು ಮಾಡಿದ್ದಾರೆ. ಸರ್ಕಾರದ ಕಾರ್ಯಕ್ರಮದಲ್ಲಿ ಕೇಸರಿ ಬಾವುಟ ಏಕೆ? 3 ವರ್ಷ ಸುಮ್ಮನಿದ್ದ ಸರ್ಕಾರ ಈಗ ಏಕೆ ಶಂಕುಸ್ಥಾಪನೆ ಮಾಡ್ತಿದೆ. ಯಾವ ಪುರುಷಾರ್ಥಕ್ಕೆ ಶಂಕುಸ್ಥಾಪನೆ ಮಾಡುತ್ತಿದೆ. ಬಿಜೆಪಿಯವರು ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದ್ಯಾವುದು ಹೆಚ್ಚು ದಿನ ನಡೆಯುವುದಿಲ್ಲ. ಉತ್ತರಪ್ರದೇಶದ ರೀತಿ ಕರ್ನಾಟಕವನ್ನು ಮಾಡಲು ಸಾಧ್ಯವಿಲ್ಲ ಎಂದು ಶಂಕುಸ್ಥಾಪನೆ ಕಾರ್ಯಕ್ಕೆ ಹೆಚ್.ಡಿ.ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:20 pm, Mon, 27 March 23