ಕರ್ನಾಟಕ ಕೈ ಶಾಸಕರ ಪ್ರತಿಭಟನೆ ಲೋಕಸಭೆಯಲ್ಲಿ ಪ್ರಸ್ತಾಪ: ನಿರ್ಮಲಾ ಸೀತಾರಾಮನ್ ಹೇಳಿದ್ದಿಷ್ಟು

ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಯಾವ ರೀತಿ ಅನ್ಯಾಯ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಸಾಲು ಸಾಲು ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ ಕೇಂದ್ರದ ತಾರತಮ್ಯ ನೀತಿಯ ವಿರುದ್ಧ ಸಮರದ ರಹಣಕಹಳೆ ಮೊಳಗಿಸಿದ್ದು, ದೆಹಲಿಯಲ್ಲಿ ಪ್ರತಿಭಟನೆ ಮಾಡಲು ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ. ಇನ್ನು ಈ ಬಗ್ಗೆ ಸಂಸತ್​ ಪ್ರಸ್ತಾಪವಾಗಿದ್ದು, ಇದಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಉತ್ತರಿಸಿ, ಜಿಎಸ್ಟಿ ಸಂಪೂರ್ಣವಾಗಿ ರಾಜ್ಯಗಳಿಗೆ ಹೋಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ಕೈ ಶಾಸಕರ ಪ್ರತಿಭಟನೆ ಲೋಕಸಭೆಯಲ್ಲಿ ಪ್ರಸ್ತಾಪ: ನಿರ್ಮಲಾ ಸೀತಾರಾಮನ್ ಹೇಳಿದ್ದಿಷ್ಟು
ನಿರ್ಮಲಾ ಸೀತಾರಾಮನ್
Follow us
|

Updated on:Feb 05, 2024 | 10:06 PM

ನವದೆಹಲಿ/ಬೆಂಗಳೂರು, (ಫೆಬ್ರವರಿ 05): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅನುದಾನ (allocation of grants ) ತಾರತಮ್ಯದ ವಿರುದ್ಧದ ಕರ್ನಾಟಕ ಕಾಂಗ್ರೆಸ್​ ಸರ್ಕಾರ (Karnataka Congress Government ) ಸಮರ ಸಾರಿದ್ದು, ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ನಾಡಿದ್ದು ಅಂದರೆ ಫೆಬ್ರವರಿ 7 ರಂದು ದೆಹಲಿಯ ಜಂತರ್ ಮಂತರ್​ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಇನ್ನು ಈ ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಇಂದು(ಫೆ.05) ಸಂಸತ್​ನಲ್ಲಿ ಲೋಕಸಭೆ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಪ್ರಸ್ತಾಪಿಸಿದರು.

ಬಾಕಿ ಹಣಕ್ಕಾಗಿ ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮೌನವಾಗಿರುತ್ತಿದ್ದರು. ಬಿಜೆಪಿಯೇತರ ಸರ್ಕಾರಗಳು ಪ್ರತಿಭಟಿಸುತ್ತಿವೆ ಎಂದು ಅಧೀರ್ ರಂಜನ್ ಸಂಸತ್​ನಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಪ್ರತಿಕ್ರಿಯಿಸಿ, ಹಣಕಾಸು ಆಯೋಗದ ಶಿಫಾರಸು ಆಧರಿಸಿ ರಾಜ್ಯಗಳಿಗೆ ಅನುದಾನ ನೀಡಲಾಗುತ್ತಿದೆ. ರಾಜ್ಯಗಳ ಜಿಎಸ್​ಟಿ ಸಂಪೂರ್ಣವಾಗಿ ಆಯಾ ರಾಜ್ಯಗಳಿಗೆ ಹೋಗುತ್ತಿದೆ. ಹಣಕಾಸು ಆಯೋಗದ ಶಿಫಾರಸು ಉಲ್ಲಂಘಿಸಲು ಸಾಧ್ಯವಿಲ್ಲ. ಹಣಕಾಸು ಸಚಿವೆಯಾಗಿ ಶಿಫಾರಸು ಅನ್ವಯ ನೆರವು ನೀಡಲಾಗುತ್ತಿದೆ. ಯಾವುದೇ ರಾಜ್ಯದ ಪರ ಅಥವಾ ವಿರೋಧ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕೇಂದ್ರದ ವಿರುದ್ಧ ರಾಜ್ಯ ಕಾಂಗ್ರೆಸ್​ ಸರ್ಕಾರದಿಂದ ಪ್ರತಿಭಟನೆ: ದಿಲ್ಲಿಯಲ್ಲಿ ಸ್ಥಳ ಪರಿಶೀಲಿಸಿದ ಡಿಕೆಶಿ

ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಗಂಭೀರ ಆರೋಪ

ಇತ್ತ ಸಿಎಂ ಸಿದ್ದರಾಮಯ್ಯ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ದಾಖಲೆಗಳ ಮೂಲಕವೇ ಗುದ್ದು ಕೊಟ್ಟಿದ್ದಾರೆ. ಕೇಂದ್ರದ ಅನುದಾನ ತಾರತಮ್ಯ ಮಾಡ್ತಿದೆ. ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಅಂತಾ ಆರೋಪಗಳ ಚಾರ್ಜ್​ಶೀಟ್ ಬಿಡುಗಡೆ ಮಾಡಿದ್ದಾರೆ. ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರ ಬಿಟ್ರೆ ಕರ್ನಾಟಕವೇ ಎರಡನೇ ಸ್ಥಾನದಲ್ಲಿದೆ. ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಹಣ ಹೋಗುತ್ತೆ. ಆದ್ರೆ ರಾಜ್ಯಕ್ಕೆ ಬರೋ ತೆರಿಗೆ ಹಣದಲ್ಲಿ ಸುಮಾರು 62 ಸಾವಿರದ 98 ಕೋಟಿ ಕಡಿಮೆ ಆಗಿದೆ ಎಂದಿದ್ದಾರೆ.

ಜಿಎಸ್​ಟಿಯಿಂದ ರಾಜ್ಯದ ತೆರಿಗೆಯಲ್ಲಿ ನಷ್ಟವಾಗುತ್ತಿದೆ.ನಮ್ಮಿಂದ 100 ರೂಪಾಯಿ ಪಡೆದು ನಮಗೆ ಕೇವಲ 12 ರೂಪಾಯಿ ಕೊಡುತ್ತಿದ್ದಾರೆ ಎಂದು ಗುಡುಗಿದ್ದಾರೆ. ಇನ್ನು 2018 ರಿಂದ ಇಲ್ಲಿವರೆಗೂ ಬಜೆಟ್ ಗಾತ್ರ ಹೆಚ್ಚಾಗುತ್ತಲೇ ಇದೆ. ಆದ್ರೆ ರಾಜ್ಯಕ್ಕೆ ಸಿಗುವ ಮೊತ್ತ ಮಾತ್ರ ಕಡಿಮೆ ಆಗುತ್ತಿದೆ ಎಂದು ವರದಿಯನ್ನ ಓದಿ ಹೇಳಿದ್ದಾರೆ.

Published On - 10:05 pm, Mon, 5 February 24