Pahalgam Terror Attack: ಪಹಲ್ಗಾಮ್ನಲ್ಲಿ ಉಗ್ರರ ಗುಂಡಿನ ದಾಳಿ, 13 ಕನ್ನಡಿಗರ ಜೀವ ಉಳಿಸಿದ ಗುಡ್ಡ!
ಜಮ್ಮು ಮತ್ತು ಕಾಶ್ಮೀರದ (Jammu Kashmir) ಪಹಲ್ಗಾಮ್ನಲ್ಲಿ (Pahalgam) ನಡೆದ ಭಯೋತ್ಪಾದಕರ ಪೈಶಾಚಿಕ ಕೃತ್ಯ ನಡೆಸಿದ್ದಾರೆ. ಉಗ್ರರ ಗುಂಡಿನ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ ಒಟ್ಟು 30ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆಂದು ಹೋಗಿದ್ದಾರೆ. ಯಾವ್ಯಾವ ಜಿಲ್ಲೆಗಳಿಂದ ಹೋಗಿದ್ದಾರೆ? ಅಲ್ಲಿ ಹೇಗಿದ್ದಾರೆ? ಅಲ್ಲಿ ಈಗ ಸ್ಥಿತಿ ಹೇಗಿದೆ ಎನ್ನುವ ವಿವರ ಇಲ್ಲಿದೆ.

ಶ್ರೀನಗರ/ಬಾಗಲಕೋಟೆ, (ಏಪ್ರಿಲ್ 23): ಜಮ್ಮು ಮತ್ತು ಕಾಶ್ಮೀರದ (Jammu Kashmir) ಪಹಲ್ಗಾಮ್ನಲ್ಲಿ (Pahalgam) ನಡೆದ ಭಯೋತ್ಪಾದಕರ ಪೈಶಾಚಿಕ ದಾಳಿಯಲ್ಲಿ (Terrorist Attack) ಇಬ್ಬರು ಕನ್ನಡಿಗರು ಬಲಿಯಾಗಿದ್ದಾರೆ. ಇನ್ನು ಕರ್ನಾಟಕದ(Karnataka) ವಿವಿಧ ಜಿಲ್ಲೆಗಳಿಂದ ಪ್ರವಾಸಕ್ಕೆಂದು ತೆರಳಿದ್ದವರು ಸಹ ಸೇಫ್ ಆಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಬಾಗಲಕೋಟೆಯ 13 ಜನರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೇನು ಗುಂಡಿನ ದಾಳಿ ನಡೆದಿದ್ದ ಪಹಲ್ಗಾಮ್ಗೆ ಹೋಗುವವರಿದ್ದರು. ಆದ್ರೆ, ಮಾರ್ಗ ಮಧ್ಯೆ ಗುಡ್ಡಕುಸಿತವಾಗಿದೆ. ಇದರಿಂದ 13 ಜನರ ಜೀವ ಉಳಿದಿದ್ದು. ಎಲ್ಲರೂ ಗುಡ್ಡವೇ ನಮ್ಮ ಪ್ರಾಣ ಉಳಿಸಿದೆ ಎಂದು ನಿಟ್ಟುಸಿರುಬಿಟ್ಟಿದ್ದಾರೆ.
ಕಿಶೋರ್ ಕಾಸಟ್,ಸೂರಜ್ ಕಾಸಟ್, ಗಿರೀಶ್ ಕಾಸಟ್, ನಿತೀಶ್ ಬಂಗ್ ನಾಲ್ಕು ಜನ ದಂಪತಿ ಹಾಗೂ ಮಕ್ಕಳು ಪ್ರವಾಸಕ್ಕೆಂದು ಕಾಶ್ಮೀರಕ್ಕೆ ತೆರಳಿದ್ದು, ಗುಡ್ಡ ಕುಸಿದಿರುವ ಪರಿಣಾಮ ಗುಂಡಿನ ದಾಳಿ ನಡೆದಿದ್ದ ಸ್ಥಳಕ್ಕೆ ಹೋಗಲಾಗದೇ ಬಚಾವ್ ಆಗಿದ್ದಾರೆ. ಇನ್ನು ಈ ಬಗ್ಗೆ ಟಿವಿ9ಗೆ ಗಿರೀಶ್ ಸಹೋದರ ಆನಂದ ಕಾಸಟ್ ಪ್ರತಿಕ್ರಿಯಿಸಿದ್ದು, ಉಗ್ರರ ದಾಳಿ ಸುದ್ದಿ ತಿಳಿದು ಬಹಳ ಭಯ ಆಗಿತ್ತು. ಕೂಡಲೇ ಸಹೋದರ ಗಿರೀಶ್ ಗೆ ಕಾಲ್ ಮಾಡಿದೆವು. ಆದರೆ ಲೈನ್ ಸಿಗ್ತಿರಲಿಲ್ಲ. ಇದರಿಂದ ಬಹಳ ಆತಂಕವಾಗಿತ್ತು. ಆದರೆ ನಂತರದ ಲೈನ್ ಸಿಕ್ತು. ವಿಡಿಯೊ ಕಾಲ್ ಕೂಡ ಮಾಡಿ ಮಾತಾಡಿದರು ಆಗ ಸಮಾಧಾನವಾಯಿತು ಎಂದರು.
ಇದನ್ನೂ ಓದಿ: ಪಹಲ್ಗಾಮ್ ಉಗ್ರ ದಾಳಿ: ಕರ್ನಾಟಕದ ಪ್ರವಾಸಿಗರ ಸ್ಥಿತಿ ಹೇಗಿದೆ ಈಗ? ಇಲ್ಲಿದೆ ಮಾಹಿತಿ
ನಿನ್ನೆ ಪಹಲ್ಗಾಂವ್ ಹೊರಟಿದ್ದರು. ಮಾರ್ಗ ಮಧ್ಯೆ ಗುಡ್ಡ ಕುಸಿದ ಹಿನ್ನೆಲೆಯಲ್ಲಿ ಹೋಗಲು ಆಗಲಿಲ್ಲ. ಗುಡ್ಡ ಕುಸಿದಿದ್ದೆ ಇವರು ಉಳಿದಿದ್ದಾರೆ. ಇಲ್ದಿದ್ದರೆ ಅನಾಹುತ ಆಗುವ ಸಾಧ್ಯತೆ ಇತ್ತು. ವೈಷ್ಣೋದೇವಿ ಕೃಪೆಯಿಂದ ಸುರಕ್ಷಿತವಾಗಿದ್ದಾರೆ. ಮಕ್ಕಳು ದಂಪತಿ ಎಲ್ಲರೂ ಸುರಕ್ಷಿತವಾಗಿ ಬರುತ್ತಿರುವುದರಿಂದ ಖುಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲೆಯ 10 ಜನರು ಸೇಫ್
ಇನ್ನು ಮೈಸೂರಿನಿಂದ ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದ 10 ಜನರು ಶ್ರೀನಗರದಲ್ಲಿ ಸೇಫ್ ಆಗಿದ್ದಾರೆ. ದೆಹಲಿ ಹಾಗೂ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಮೈಸೂರಿಗರು, ಏಪ್ರಿಲ್ 28ಕ್ಕೆ ವಾಪಸ್ ಬರಬೇಕಿತ್ತು. ಆದ್ರೆ, ಕಾಶ್ಮೀರದಲ್ಲಿ ಉಗ್ರ ದಾಳಿಯಾಗಿರುವ ಹಿನ್ನೆಲೆಯಲ್ಲಿ ಪ್ರವಾಸ ಮೊಟಕುಗೊಳಿಸಿದ್ದು, ಸದ್ಯ ಶ್ರೀನಗರದ ಟ್ರೇಡೆಂಟ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇನ್ನು ಇವರನ್ನು ಸಚಿವ ಸಂತೋಷ್ ಲಾಡ್ ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.
ಹಾನಗಲ್ನ 27 ಜನರು ಸುರಕ್ಷಿತ
ಇನ್ನು ಕಾಶ್ಮೀರಕ್ಕೆ ತೆರಳಿದ್ದ ಹಾವೇರಿ ಜಿಲ್ಲೆ ಹಾನಗಲ್ನ 27 ಜನರು ಸುರಕ್ಷಿತವಾಗಿದ್ದಾರೆ. ಶಂಕರ್ ಹಾದಿಮನಿ, ಕುಮಾರ್ ಹತ್ತಿಕಾಳ, ನಾಗರಾಜ ಮಿರ್ಜಿ, ವೀರೇಶ್ ಹಾವೇರಿ, ಪಿ.ರುದ್ರಗೌಡ, ಕೆ.ಪಿ.ಕೆರೆಸ್ವಾಮಿ, ಮನೋಹರ್, ಸುರೇಶ್ ಸಿಂಧೂರ, ಜಾಧವ್ ಉಪ್ಪಿನ ಕುಟುಂಬ ಶಿವಮೊಗ್ಗದ ಮೂಲದ ಗುರುಶಾಂತೇಶ್ವರ ಟ್ರಾವಲ್ ಏಜೆನ್ಸಿಯಿಂದ ಏಪ್ರಿಲ್ 17ರಂದು ಹುಬ್ಬಳ್ಳಿಯಿಂದ ಅಮೃತಸರ, ಜಮ್ಮು ಕಾಶ್ಮೀರ ಪ್ರವಾಸಕ್ಕೆ ತೆರಳಿತ್ತು. ಸದ್ಯ ಎಲ್ಲರೂ ವೈಷ್ಣೋದೇವಿ ದೇವಸ್ಥಾನದಲ್ಲಿ ಸೇಫ್ ಆಗಿ ಉಳಿದುಕೊಂಡಿದ್ದಾರೆ.
ಕಾಶ್ಮೀರದ ಪರಿಸ್ಥಿತಿ ವಿವರಿಸಿದ ಕನ್ನಡಿಗ
ಉಡುಪಿಯ ಬ್ರಹ್ಮಾವರ, ಕುಂದಾಪುರ ಭಾಗದ 20 ಜನರ ತಂಡ ಜಮ್ಮು ಕಾಶ್ಮೀರ ಪ್ರವಾಸದಲ್ಲಿದ್ದು, ಇಂದು (ಏಪ್ರಿಲ್ 23) ದಾಳಿ ನಡೆದ ಪೆಹೆಲ್ಗಾವ್ ಗೆ ಹೋಗಬೇಕಾಗಿತ್ತು. ಆದ್ರೆ, ಉಗ್ರರು ಕೃತ್ಯದಿಂದ ಪ್ರವಾಸ ರದ್ದುಗೊಳಿಸಿದ್ದು, ಶ್ರೀನಗರಕ್ಕೆ ವಾಪಸ್ ಆಗಿ ಅಲ್ಲಿಂದ ಉಡುಪಿಗೆ ಮರಳುತ್ತಿದ್ದಾರೆ.
ಈ ಬಗ್ಗೆ ತಂಡದ ಸದಸ್ಯ ಭಿರ್ತಿ ರಾಜೇಶ ಶೆಟ್ಟಿ ಟಿವಿ9 ಜತೆ ಮಾತನಾಡಿ, ನಾವು ಎಲ್ಲಾ ಸದಸ್ಯರು ಸೇಫ್ ಆಗಿದ್ದೇವೆ. ಶ್ರೀನಗರದ ಆಸು ಪಾಸು ಪ್ರವಾಸ ಮುಂದುವರಿಸಿದ್ದು, ಎಲ್ಲಿ ನೋಡಿದರೂ ಬಿಗಿ ಭದ್ರತೆ ಇದೆ. ಸೇಫ್ ಅನಿಸುವ ಜಾಗದಲ್ಲಿ ಪ್ರವಾಸ ನಡೆಸುತ್ತೇವೆ. ಪ್ರತಿ ಹೆಜ್ಜೆ ಹೆಜ್ಜೆಗೂ ಸೈನಿಕರನ್ನು ನಿಯೋಜಿಸಲಾಗಿದೆ. ಕುಂದಾಪುರ, ಬ್ರಹ್ಮಾವರ ಭಾಗದಿಂದ ಪ್ಯಾಕೇಜ್ ಟೂರ್ ನಲ್ಲಿ ಬಂದಿದ್ದೇವೆ. ಘಟನೆ ನಡೆದ ಸ್ಥಳದಿಂದ 150 ಕಿ.ಮೀ ದೂರ ಇದ್ದೇವೆ. ನಮ್ಮ ಪ್ರವಾಸೋದ್ಯಮ ಎಲ್ಲ ನಷ್ಟವಾಯ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಬಂದ್ ವಾತಾವರಣ ಇದೆ, ಕೆಲವೆಡೆ ಪ್ರತಿಭಟನೆ ನಡೆಯುತ್ತಿದೆ ಎಂದು ಅಲ್ಲಿನ ಪರಿಸ್ಥಿತಿ ವಿವರಿಸಿದರು.
ಏಪ್ರಿಲ್ 21ರಂದು ನಾವು ಕಾಶ್ಮೀರಕ್ಕೆ ಬಂದಿದ್ದೇವೆ ಪ್ರವಾಸ ಯಾವ ರೀತಿ ಮುಂದುವರಿಯುತ್ತೆ ಗೊತ್ತಿಲ್ಲ. ಶನಿವಾರದವರೆಗೂ ಇಲ್ಲೇ ಇರಲು ಉದ್ದೇಶಿಸಿದ್ದೆವು. ನಿನ್ನೆ ಕಾಶ್ಮೀರ ಶ್ರೀನಗರದಲ್ಲಿ ವಿವಿಧ ಕಡೆ ತಿರುಗಾಟ ನಡೆಸಿದ್ದೇವೆ. ಇವತ್ತು ನಾವು ಪೆಹಲ್ಗಾವ್ ಗೆ ಹೋಗಬೇಕಾಗಿತ್ತು. ಈ ದುರ್ಘಟನೆ ನಡೆದ ಕಾರಣ ಪ್ರವಾಸ ರದ್ದಾಗಿದೆ. ಈಗ ನಾವು ಸೋನಾ ಮಾರ್ಗ್ ಗೆ ಹೋಗುತ್ತಿದ್ದೇವೆ. ಶನಿವಾರ ಶ್ರೀನಗರಕ್ಕೆ ಬಂದು ಉಡುಪಿಗೆ ವಾಪಸ್ ಆಗುತ್ತೇವೆ. ಓಡಾಡಿದ ಸ್ಥಳದಲ್ಲೆಲ್ಲಾ ಭದ್ರತೆ ಕಾಣುತ್ತಿದ್ದೇವೆ ಎಂದರು.