
ಬೆಂಗಳೂರು, (ಆಗಸ್ಟ್ 11): ತೀವ್ರ ಕುತೂಹಲ ಮೂಡಿಸಿರುವ ನೂತನ ಸಚಿವರಿಗೆ ಖಾತೆ ಹಂಚಿಕೆ ಗೊಂದಲ ಕೊನೆಗೂ ಬಗೆಹರಿದಿದೆ. ಎರಡನೇ ಹಂತದ ಸಂಪುಟ ಪುನಾರಚನೆಯಲ್ಲಿ ಡಿಕೆ ಶಿವಕುಮಾರ್ ಕ್ಯಾಬಿನೆಟ್ ಸೇರಿದ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಹೌದು….ಆಗಸ್ಟ್ 3ರಂದು ಸಂಪುಟ ಪುನಾರಚನೆ (Karnataka Cabinet Expansion) ವೇಳೆ ಪ್ರಮಾಣವಚನ ಸ್ವೀಕರಿಸಿದ 19 ನೂತನ ಸಚಿವರಿಗೆ ಖಾತೆ (Portfolios) ನೀಡಬೇಕೆಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪಟ್ಟಿಯನ್ನು ಅಂತಿಮಗೊಳಿಸಿದ್ದು, ರಾಜಭವನದ ಅಂಕಿತ ಹಾಗೂ ಸರ್ಕಾರದ ಅಧಿಕೃತ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಆದ್ರೆ, ಇದರಲ್ಲಿ ಕೆಲ ಮಹತ್ವ ಬದಲಾವಣೆ ಮಾಡಲಾಗಿದೆ. ರಾಮಲಿಂಗಾರೆಡ್ಡಿ ಹಾಗೂ ಮುನಿಯಪ್ಪನವರ ಖಾತೆಗಳನ್ನ ಬದಲಾವಣೆ ಮಾಡಲಾಗಿದೆ.
ಖಾತೆ ಹಂಚಿಕೆಗಾಗಿ ಸಚಿವ ಆಕಾಂಕ್ಷಿಗಳು ಹಾಗೂ ಹಿರಿಯ ನಾಯಕರು ನಡೆಸುತ್ತಿದ್ದ ಕಸರತ್ತು, ದೆಹಲಿ ಮಟ್ಟದ ಸಭೆಗಳು ಹಾಗೂ ಮುಖ್ಯಮಂತ್ರಿಗಳ ಜೊತೆಗಿನ ಸುದೀರ್ಘ ಚರ್ಚೆಗಳ ನಂತರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪ್ರಮುಖ ಇಲಾಖೆಗಳಿಗೆ ಅನುಭವ ಹಾಗೂ ಪ್ರಾದೇಶಿಕ ಸಮತೋಲನವನ್ನು ಆಧರಿಸಿ ನಾಯಕರಿಗೆ ಜವಾಬ್ದಾರಿ ನೀಡಲಾಗಿದ್ದು, ಕೆಲ ಸಚಿವರ ಖಾತೆಗಳನ್ನೂ ಸಹ ಬದಲಾವಣೆ ಮಾಡಲಾಗಿದೆ.
ಪ್ರಮುಖವಾಗಿ ಮೊದಲ ಹಂತದಲ್ಲೇ ಸಚಿವರಾಗಿದ್ದ ಮುನಿಯಪ್ಪ ಹಾಗೂ ರಾಮಲಿಂಗಾರೆಡ್ಡಿ ಅವರು ಖಾತೆ ಬಗ್ಗೆ ಅಸಮಾಧಾನಗೊಂಡಿದ್ದರು. ಆಹಾರ ಇಲಾಖೆ ಕೊಟ್ಟಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರು ಖುದ್ದು ರಾಹುಲ್ ಗಾಂಧಿ ಭೇಟಿ ಮಾಡಿ ಖಾತೆ ಬದಲಾವಣೆಗೆ ಮನವಿ ಮಾಡಿದ್ದರು. ಇನ್ನು ಜಲಸಂಪನ್ಮೂಲ ಖಾತೆ ನೀಡಿದ್ದಕ್ಕೆ ಅಸಮಾಧಾನಗೊಂಡಿದ್ದ ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಹಂತಕ್ಕೆ ಹೋಗಿದ್ದರು. ಆದ್ರೆ, ಇದೀಗ ಇವರಿಬ್ಬರ ಖಾತೆ ಬದಲಾವಣೆ ಮಾಡಲಾಗಿದ್ದು, ಮುನಿಯಪ್ಪ ಅವರಿಗೆ ಆಹಾರ ಸರಬರಾಜು ಬದಲಿಗೆ ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿ ನೀಡಿದ್ದರೆ, ಇನ್ನು ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಜಲಸಂಪನ್ಮೂಲ ಬದಲಿಗೆ ಅರಣ್ಯ ಖಾತೆ ನೀಡಲಾಗಿದೆ.
ಲಕ್ಷ್ಮಣ ಸವದಿ- ಸಹಕಾರ ಇಲಾಖೆ
ರಾಮಲಿಂಗರೆಡ್ಡಿ-ಅರಣ್ಯ (ಈ ಹಿಂದೆ ಜಲ ಸಂಪನ್ಮೂಲ)
ಕೆ.ಹೆಚ್.ಮುನಿಯಪ್ಪ-ಸಮಾಜ ಕಲ್ಯಾಣ ಇಲಾಖೆ
ಸಂತೋಷ್ ಲಾಡ್- ಕಾರ್ಮಿಕ ಇಲಾಖೆ
ಯು.ಟಿ.ಖಾದರ್- ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಶಿವರಾಜ್ ತಂಗಡಗಿ- ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ
ಬಸವರಾಜ ರಾಯರೆಡ್ಡಿ-ಉನ್ನತ ಶಿಕ್ಷಣ
ಎಚ್.ಸಿ.ಬಾಲಕೃಷ್ಣ-ಪೌರಾಡಳಿತ
ಕೆ.ಎಸ್.ಬಸವಂತಪ್ಪ-ಮುಜರಾಯಿ, ಮೀನುಗಾರಿಕೆ
ಎನ್.ಚಲುವರಾಯಸ್ವಾಮಿ- ಜಲಸಂಪನ್ಮೂಲ ಇಲಾಖೆ
ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಎಸ್.ಎಸ್.ಮಲ್ಲಿಕಾರ್ಜುನ್- ಗಣಿ ಮತ್ತು ಭೂವಿಜ್ಞಾನ ಇಲಾಖೆ
ಬಿ.ನಾಗೇಂದ್ರ-ಯೋಜನೆ & ಸಾಂಖ್ಯಿಕ ಇಲಾಖೆ
ಪಿ.ಎಂ.ನರೇಂದ್ರಸ್ವಾಮಿ-ಕೃಷಿ ಇಲಾಖೆ
ಸಿ.ಪುಟ್ಟರಂಗಶೆಟ್ಟಿ-ಪಶು ಸಂಗೋಪನಾ ಇಲಾಖೆ, ರೇಷ್ಮೆ
ಟಿ.ರಘುಮೂರ್ತಿ-ಪರಿಶಿಷ್ಟ ಪಂಗಡ ಕಲ್ಯಾಣ ಖಾತೆ
ರಿಜ್ವಾನ್ ಅರ್ಷದ್-ಆಹಾರ & ನಾಗರಿಕ ಪೂರೈಕೆ ಇಲಾಖೆ
ರುದ್ರಪ್ಪ ಲಮಾಣಿ- ಸಕ್ಕರೆ ಮತ್ತು ಜವಳಿ
ಶಿವಲಿಂಗೇಗೌಡ-ಅಬಕಾರಿ ಖಾತೆ
ವಿಜಯಾನಂದ ಕಾಶಪ್ಪನವರ್-ಸಣ್ಣ ಕೈಗಾರಿಕೆ
ಜಮೀರ್ ಅಹ್ಮದ್ ಖಾನ್-ವಸತಿ
ಅಜಯ್ ಸಿಂಗ್-ಸಣ್ಣ ನೀರಾವರಿ, ಐಟಿ ಬಿಟಿ.
ಹೌದು..ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಸಚಿವರಾಗಿ ನಿಭಾಯಿಸಿದ್ದ ಖಾತೆಗಳ ಜವಾಬ್ದಾರಿ ನೀಡಲಾಗಿದೆ. ಸತೋಷ್ ಲಾಡ್ (ಕಾರ್ಮಿಕ ಇಲಾಖೆ), ಜಮೀರ್ ಅಹ್ಮದ್ ಖಾನ್ (ವಸತಿ), ಶಿವರಾಜ್ ತಂಗಡಗಿ ( ಕನ್ನಡ ಮತ್ತು ಸಂಸ್ಕೃತಿ), ಎಸ್ಎಸ್ ಮಲ್ಲಿಕಾರ್ಜುನ (ಗಣಿ ಮತ್ತು ಭೂವಿಜ್ಞಾನ), ಮಧುಬಂಗಾರಪ್ಪ (ಪ್ರಾಥಮಿಕ ಶಿಕ್ಷಣ), ಅವರಿಗೆ ಸಿದ್ದರಾಮಯ್ಯ ಸಂಪುಟದಲ್ಲಿ ಹೊಂದಿದ್ದ ಖಾತೆಗಳನ್ನೇ ಮತ್ತೆ ನೀಡಿರುವುದು ಗಮನಾರ್ಹವಾಗಿದೆ.
Published On - 5:36 pm, Wed, 12 August 26