ಎಸ್​ಐಟಿ ಅಧಿಕಾರಿಗಳಿಂದ ಸಾಲು ಸಾಲು ಪ್ರಶ್ನೆ: ಕಿಡ್ನ್ಯಾಪ್​ಗೂ ನನಗೂ ಸಂಬಂಧವಿಲ್ಲ ಎಂದ ರೇವಣ್ಣ

ಎಸ್​​ಐಟಿ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡದ ರೇವಣ್ಣ, ಕಿಡ್ನ್ಯಾಪ್​​ಗೂ ನನಗೂ ಸಂಬಂಧವಿಲ್ಲ. ಕಿಡ್ನ್ಯಾಪ್ ಮಾಡಿ ಅಂತಾ ಯಾರಿಗೂ ಹೇಳಿಲ್ಲ ಎಂದಿದ್ದಾರೆ. ಜತೆಗೆ, ಸ್ವಇಚ್ಛಾ ಹೇಳಿಕೆಗೆ ಸಹಿ ಹಾಕಲು ಹಿಂದೇಟು ಹಾಕಿದ್ದಾರೆ. ಇನ್ನು, ರೇವಣ್ಣ ಎಸ್​ಐಟಿ ಕಸ್ಟಡಿ ವೇಳೆಯಲ್ಲಿ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಎಸ್​ಐಟಿ ಅಧಿಕಾರಿಗಳಿಂದ ಸಾಲು ಸಾಲು ಪ್ರಶ್ನೆ: ಕಿಡ್ನ್ಯಾಪ್​ಗೂ ನನಗೂ ಸಂಬಂಧವಿಲ್ಲ ಎಂದ ರೇವಣ್ಣ
ಹೆಚ್​ಡಿ ರೇವಣ್ಣ
Follow us
| Updated By: ಗಣಪತಿ ಶರ್ಮ

Updated on: May 06, 2024 | 2:37 PM

ಬೆಂಗಳೂರು, ಮೇ 6: ಲೈಂಗಿಕ ದೌರ್ಜನ್ಯ ಮತ್ತು ಕಿಡ್ನ್ಯಾಪ್ ಕೇಸ್​ನಲ್ಲಿ (Kidnap Case) ಎಸ್​ಐಟಿ ಬಂಧನದಲ್ಲಿರುವ ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣ (HD Revanna) ವಿಚಾರಣೆ ತೀವ್ರಗೊಂಡಿದೆ. ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಮನೆಯಿಂದ ರೇವಣ್ಣರನ್ನು ಬಂಧಿಸಿದ್ದ ಎಸ್​ಐಟಿ (SIT) ನಿನ್ನೆ ಸಂಜೆ ಜಡ್ಜ್ ಎದುರು ಹಾಜರುಪಡಿಸಿತ್ತು. ಈ ವೇಳೆ ರಾಜಕೀಯ ಭವಿಷ್ಯವನ್ನು ನೆನಪಿಸಿಕೊಂಡು ರೇವಣ್ಣ ಕೈ ಮುಗಿದು ಕಣ್ಣೀರು ಹಾಕಿದ್ದರು. ರಾಜಕೀಯ ಷಡ್ಯಂತ್ರ ನಡೆಸಿ ನನ್ನ ಬಂಧನವಾಗಿದೆ ಅಂತ ಅಳಲು ತೋಡಿಕೊಂಡಿದ್ದರು. ಸದ್ಯ 4 ದಿನಗಳ ಕಾಲ ಎಸ್​ಐಟಿ ಕಸ್ಟಡಿಯಲ್ಲಿರುವ ರೇವಣ್ಣಗೆ ಎಸ್​​ಐಟಿ ಅಧಿಕಾರಿಗಳು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.

ಮಹಿಳೆಯನ್ನು ಬಲವಂತವಾಗಿ ದೈಹಿಕವಾಗಿ ಬಳಸಿಕೊಂಡಿದ್ದರು ಎಂದು ಎಸ್​ಐಟಿ ಹೇಳಿಕೆ ದಾಖಲಿಸಿಕೊಂಡಿದೆ. ಆದ್ರೆ, ಎಸ್​​ಐಟಿ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡದ ರೇವಣ್ಣ, ಕಿಡ್ನ್ಯಾಪ್​​ಗೂ ನನಗೂ ಸಂಬಂಧವಿಲ್ಲ. ಕಿಡ್ನ್ಯಾಪ್ ಮಾಡಿ ಅಂತಾ ಯಾರಿಗೂ ಹೇಳಿಲ್ಲ ಅಂತಾ ಒಂದೇ ಉತ್ತರ ನೀಡಿದ್ದಾರೆ.

ಸ್ವಇಚ್ಛಾ ಹೇಳಿಕೆಗೆ ಸಹಿ ಹಾಕಲು ರೇವಣ್ಣ ಹಿಂದೇಟು

ಇಷ್ಟೇ ಅಲ್ಲ ನನಗೂ ಕಿಡ್ನ್ಯಾಪ್​ಗೂ ಸಂಬಂಧವಿಲ್ಲ ಎಂದಿರುವ ರೇವಣ್ಣ, ಸ್ವಇಚ್ಛಾ ಹೇಳಿಕೆಗೆ ಸಹಿ ಹಾಕಲು ಹಿಂದೇಟು ಹಾಕಿದ್ದಾರೆ. ಮಹಿಳೆ ಕಿಡ್ನ್ಯಾಪ್ ಕೇಸ್​​ನಲ್ಲಿ ಬಂಧನವಾಗಿರುವ ರೇವಣ್ಣ ಕಸ್ಟಡಿ ವೇಳೆಯಲ್ಲಿ ರೇವಣ್ಣ ಬೇಲ್ ಅರ್ಜಿ ಸಲ್ಲಿಸಬಹುದು. ಕಸ್ಟಡಿ ಅವಧಿ ಮುಗಿದ ಬಳಿಕವೇ ಬೇಲ್ ಬಗ್ಗೆ ತೀರ್ಮಾನವಾಗಲಿದೆ. ಕಸ್ಟಡಿ ಅವಧಿ ನಂತರ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸ್​ಐಟಿ ಸಿದ್ಧತೆ ಮಾಡಿಕೊಂಡಿದೆ. ಬೇಲ್ ಅರ್ಜಿಗೆ ಎಸ್​ಐಟಿ ಆಕ್ಷೇಪಣೆಯನ್ನು ಕೋರ್ಟ್ ಪರಿಗಣಿಸಲಿದೆ. ಎರಡೂ ಕಡೆ ವಾದಮಂಡನೆ ನಂತರವೇ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.

ಈ ಎಲ್ಲ ಪ್ರಕ್ರಿಯೆಯು ಕನಿಷ್ಠ ಒಂದು ವಾರ ನಡೆಯಬಹುದು. ಬೇಲ್ ಸಿಕ್ಕರೆ ಸೆರೆವಾಸದಿಂದ ರೇವಣ್ಣ ರಿಲೀಸ್ ಆಗ್ತಾರೆ. ಅಕಸ್ಮಾತ್ ಜನಪ್ರತಿನಿಧಿಗಳ ಕೋರ್ಟ್​ನಲ್ಲಿ ಬೇಲ್ ಸಿಗದಿದ್ದರೆ ರೇವಣ್ಣ ಹೈಕೋರ್ಟ್ ಮೊರೆ ಹೋಗಬಹುದು. ಹೈಕೋರ್ಟ್ ನಲ್ಲೂ ಬೇಲ್ ಸಿಗದಿದ್ದರೆ ಸುಪ್ರೀಂಗೆ ಮೊರೆ ಹೋಗಬಹುದು. ಆದ್ರೆ ಜಾಮೀನು ಸಿಗುವವರೆಗೆ ರೇವಣ್ಣ ಬಂಧನದಲ್ಲಿರಬೇಕಾಗಿದೆ.

ಬಧನದ ಬಳಿಕ ಮಾನಸಿಕವಾಗಿ ಕುಗ್ಗಿರುವ ರೇವಣ್ಣ

ಎಸ್​ಐಟಿ ಬಂಧನದ ಬಳಿಕ ರೇವಣ್ಣ ಮಾನಸಿಕವಾಗಿ ಕುಗ್ಗಿದ್ದಾರೆ. ಪ್ರತಿದಿನ 9.30ರಿಂದ 10.30ರ ಸಮಯದಲ್ಲಿ ಒಂದು ಗಂಟೆ ವಕೀಲರ ಭೇಟಿಗೆ ಅವಕಾಶ ಇದೆ. ವಕೀಲರ ಭೇಟಿಗೆ ಅವಕಾಶ ನೀಡಿ ಜಡ್ಜ್ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆ ಇಂದು ಸಿಐಡಿ ಎಸ್​ಐಟಿ ಕಚೇರಿಯಲ್ಲಿ ಭೇಟಿಗೆ ಅನುವು ಮಾಡಿಕೊಡಲಾಗಿದೆ.

ಇನ್ನು ಹೊಳೆನರಸೀಪುರದಲ್ಲಿ ದೂರು ನೀಡಿದ್ದ ಸಂತ್ರಸ್ತ ಮಹಿಳೆಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ರೇವಣ್ಣ ನಿವಾಸಕ್ಕೆ ಕರೆತಂದು ಸ್ಥಳ ಮಹಜರು ಮಾಡಲಾಯ್ತು. ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಪಟ್ಟಂತೆ ಸಂತ್ರಸ್ತೆಯಿಂದ ಎಸ್​ಐಟಿ ಅಧಿಕಾರಿಗಳು ಹೇಳಿಕೆ ದಾಖಲು ಮಾಡಿದ್ರು. ಸಂತ್ರಸ್ತೆ ಹೇಳಿಕೆ ಆಧರಿಸಿ ಮನೆಯಲ್ಲಿ ಸಂಪೂರ್ಣ ಮಹಜರು ಮಾಡಲಾಯ್ತು. ನಾಲ್ವರು ಮಹಿಳಾ ಅಧಿಕಾರಿಗಳು ಸೇರಿ 6 ಅಧಿಕಾರಿಗಳ ತಂಡ ಮಹಜರು ನಡೆಸಿದರು.

ರೇವಣ್ಣರನ್ನ ಇಂದು ಹಾಸನ ಅಥವಾ ಕೆ.ಆರ್. ನಗರಕ್ಕೆ ಕರೆದೊಯ್ದು ಸ್ಥಳ ಮಹಜರು ಮಾಡುವ ಸಾಧ್ಯತೆಯಿದೆ. ಮಹಿಳೆಯನ್ನು ಕರೆದುಕೊಂಡು ಹೋಗಿದ್ದ ಸ್ಥಳ, ಕೂಡಿಟ್ಟ ಸ್ಥಳ, ಮಹಿಳೆಯ ಕರೆತಂದ ಸತೀಶ್ ಬಾಬು-ರೇವಣ್ಣ ಭೇಟಿಯಾದ ಗೌಪ್ಯ ಸ್ಥಳದ ಬಗ್ಗೆಯೂ ತನಿಖೆ ನಡೆಯಲಿದೆ.

ಇದನ್ನೂ ಓದಿ: ಮೇ 7ರ ಚುನಾವಣೆ ಬಳಿಕ ಪ್ರಜ್ವಲ್ ಭಾರತಕ್ಕೆ: ಉನ್ನತ ಮೂಲಗಳಿಂದ ಮಾಹಿತಿ

ರೇವಣ್ಣ, ಪ್ರಜ್ವಲ್ ವಿರುದ್ಧ ದಾಖಲಾಗಿರುವ ಕೇಸ್​ಗಳಿಂದ ರೇವಣ್ಣ ಪತ್ನಿ ಭವಾನಿಗೂ ಸಂಕಷ್ಟ ಎದುರಾಗಿದೆ. ಲೈಂಗಿಕ ಕಿರುಕುಳ, ಕಿಡ್ನ್ಯಾಪ್ ಎರಡೂ ಕೇಸ್​ನಲ್ಲೂ ಭವಾನಿ ರೇವಣ್ಣ ಹೆಸರು ಉಲ್ಲೇಖವಾಗಿದೆ. ಭವಾನಿ ಕರೆದರು ಎಂದು ಹೇಳಿಯೇ ಕಿಡ್ನ್ಯಾಪ್ ಮಾಡಿರುವ ಆರೋಪವಿದೆ. ಭವಾನಿಗೆ ನೋಟಿಸ್ ನೀಡಿ ಎಸ್​ಐಟಿ ಮಾಹಿತಿ ಪಡೆದಿದೆ. ತನಿಖೆ ವೇಳೆ ಭವಾನಿ ವಿರುದ್ಧ ಸಾಕ್ಷಿ ಸಿಕ್ಕರೆ ಅವರಿಗೂ ಸಂಕಷ್ಟ ಕಟ್ಟಿಟ್ಟ ಬುತ್ತಿಯಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ