ಅಡಿಕೆ ಬೆಳೆಗಾರರಿಗೆ ಗುಡ್​​​ ನ್ಯೂಸ್​​ : ಮಹಾರಾಷ್ಟ್ರ ಸಿಎಂ ಜತೆ ಪ್ರಲ್ಹಾದ್ ಜೋಶಿ ಮಾತುಕತೆ; ಇನ್ಮುಂದೆ ಅಡಿಕೆ ಸಾಗಣೆಗೆ ಇಲ್ಲ ತಡೆ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಪ್ರಯತ್ನದಿಂದ ಕರ್ನಾಟಕದ ಅಡಿಕೆ ಬೆಳೆಗಾರರಿಗೆ ದೊಡ್ಡ ನೆಮ್ಮದಿ ಸಿಕ್ಕಿದೆ. ಮಹಾರಾಷ್ಟ್ರದಲ್ಲಿ ಅನಗತ್ಯವಾಗಿ ತಡೆಹಿಡಿಯಲಾಗಿದ್ದ ಅಡಿಕೆ ಸಾಗಣೆ ವಾಹನಗಳನ್ನು ತಕ್ಷಣ ಬಿಡುಗಡೆ ಮಾಡಲು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಭರವಸೆ ನೀಡಿದ್ದಾರೆ. ಈ ಮೂಲಕ ರೈತರ ಆರ್ಥಿಕ ನಷ್ಟ ತಪ್ಪಿಸಿ, ಅವರ ಹಿತಾಸಕ್ತಿಗಳನ್ನು ರಕ್ಷಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಕಾರದಿಂದ ಈ ಪ್ರಮುಖ ಸಮಸ್ಯೆ ಬಗೆಹರಿದಿದೆ.

ಅಡಿಕೆ ಬೆಳೆಗಾರರಿಗೆ ಗುಡ್​​​ ನ್ಯೂಸ್​​ : ಮಹಾರಾಷ್ಟ್ರ ಸಿಎಂ ಜತೆ ಪ್ರಲ್ಹಾದ್ ಜೋಶಿ ಮಾತುಕತೆ; ಇನ್ಮುಂದೆ ಅಡಿಕೆ ಸಾಗಣೆಗೆ ಇಲ್ಲ ತಡೆ
ಪ್ರಲ್ಹಾದ್ ಜೋಶಿ
Edited By:

Updated on: Jul 08, 2026 | 9:54 AM

ಮುಖ್ಯಾಂಶಗಳು

  • ತಡೆಹಿಡಿಯಲಾಗಿದ್ದ ಕರ್ನಾಟಕದ ಅಡಿಕೆ ಸರಕುಳ್ಳ ವಾಹನಗಳ ತುರ್ತು ಬಿಡುಗಡೆ
  • ದೇವೇಂದ್ರ ಫಡ್ನವೀಸ್ ಅವರೊಂದಿಗೆ ಜೋಶಿ ಅವರು ನಡೆಸಿದ ಮಾತುಕತೆ
  • ಜಂಟಿ ನಿಯೋಗವು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿತ್ತು.

ಬೆಂಗಳೂರು, ಜು.8: ಕರ್ನಾಟಕದ ಅಡಿಕೆ ಬೆಳೆಗಾರರ ಮತ್ತು ವರ್ತಕರ ಹಿತರಕ್ಷಣೆಗೆ ಕೇಂದ್ರ ಆಹಾರ, ಗ್ರಾಹಕ ವ್ಯವಹಾರಗಳು ಮತ್ತು ಸಾರ್ವಜನಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಅವರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರಯೋಗಾಲಯದ ಪರೀಕ್ಷೆಯ (Laboratory Testing) ನೆಪದಲ್ಲಿ ದಿನಗಟ್ಟಲೆ ತಡೆಹಿಡಿಯಲಾಗಿದ್ದ ಕರ್ನಾಟಕದ ಅಡಿಕೆ ಸರಕುಳ್ಳ ವಾಹನಗಳ ತುರ್ತು ಬಿಡುಗಡೆಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಜೋಶಿ ಅವರು ನಡೆಸಿದ ಮಾತುಕತೆ ಅತ್ಯಂತ ಯಶಸ್ವಿಯಾಗಿದೆ. ಈ ಸಭೆಯಲ್ಲಿ ಕರ್ನಾಟಕದ ಸಂಸದರು ಹಾಗೂ ಶಾಸಕರ ಪ್ರಮುಖ ನಿಯೋಗವೂ ಭಾಗವಹಿಸಿತ್ತು.
ಕರ್ನಾಟಕದ ಪ್ರಮುಖ ಅಡಿಕೆ ಸಹಕಾರಿ ಸಂಸ್ಥೆಗಳಾದ ಕ್ಯಾಂಪ್ಕೋ (CAMPCO), ಮಾಮ್ಕೋಸ್ (MAMCOS), ತುಮ್ಕೋಸ್ (TUMCOS) ಹಾಗೂ ‘ಕರ್ನಾಟಕ ರಾಜ್ಯ ಅಡಿಕೆ ಸಹಕಾರಿ ಮಹಾಮಂಡಳ’ದ ಜಂಟಿ ನಿಯೋಗವು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿತ್ತು. ಮಹಾರಾಷ್ಟ್ರದಲ್ಲಿ ಕರ್ನಾಟಕದ ಅಡಿಕೆ ಸಾಗಣೆ ವಾಹನಗಳನ್ನು ಅನಗತ್ಯವಾಗಿ ತಡೆಹಿಡಿಯುತ್ತಿರುವುದರಿಂದ ಉತ್ತರ ಭಾರತದ ಮಾರುಕಟ್ಟೆಗಳಿಗೆ ತಲುಪಬೇಕಾದ ಸರಕು ಹಾಳಾಗುವ ಭೀತಿ ಎದುರಾಗಿದೆ ಮತ್ತು ಇದರಿಂದ ರೈತರು ಭಾರಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ ಎಂದು ನಿಯೋಗ ವಿವರಿಸಿತ್ತು.

ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಎಕ್ಸ್​ ಪೋಸ್ಟ್​


ಸಮಸ್ಯೆಯ ಗಂಭೀರತೆಯನ್ನು ಅರಿತ ಸಚಿವ ಪ್ರಲ್ಹಾದ್ ಜೋಶಿ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಈ ವಿಷಯದ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಕೇಂದ್ರ ಸಚಿವರ ಮನವಿಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ತಮ್ಮ ರಾಜ್ಯದಲ್ಲಿ ಸದ್ಯ ತಡೆಹಿಡಿಯಲಾಗಿರುವ ಕರ್ನಾಟಕದ ಅಧಿಕೃತ ಅಡಿಕೆ ಸರಕನ್ನು ತಕ್ಷಣವೇ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಸಾಗಣೆ ಕಾರ್ಯಾಚರಣೆಗಳಿಗೆ ಅಡ್ಡಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಮತ್ತು ಸೂಕ್ತ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಕರಾವಳಿ, ಮಲೆನಾಡಿನಲ್ಲಿ ಅತ್ಯುತ್ತಮ ಏರ್ ಕ್ವಾಲಿಟಿ; ಬೆಂಗಳೂರಿನಲ್ಲೂ ಶುದ್ಧ ಗಾಳಿ

ಈ ಯಶಸ್ವಿ ಮಾತುಕತೆಯ ನಂತರ ಟ್ವೀಟ್ ಮಾಡಿರುವ ಸಚಿವ ಪ್ರಲ್ಹಾದ್ ಜೋಶಿ ಅವರು, “ರಾಜ್ಯದ ಸಮಸ್ತ ರೈತ ಬಾಂಧವರ ಪರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ನಮ್ಮ ಸರ್ಕಾರವು ಅಡಿಕೆ ಬೆಳೆಗಾರರ ಪರವಾಗಿ ದೃಢವಾಗಿ ನಿಂತಿರುವುದನ್ನು ಈ ನಿರ್ಧಾರ ಮತ್ತೊಮ್ಮೆ ಸಾಬೀತುಪಡಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಈ ಸಕಾರಾತ್ಮಕ ಸಹಕಾರವು ರೈತರ ಜೀವನೋಪಾಯವನ್ನು ರಕ್ಷಿಸಿದೆ” ಎಂದು ಹೇಳಿದ್ದಾರೆ. ಮಾತುಕತೆಯ ಸಂದರ್ಭದಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ, ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕ ರಾಜೇಶ್ ನಾಯ್ಕ್ ಉಪಸ್ಥಿತರಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:25 am, Wed, 8 July 26

Follow Us