ಶಾಸಕಿ ಪುತ್ರ, ಪಿಎಯಿಂದ ಕಾನ್ಸ್ಟೇಬಲ್ ಮೇಲೆ ಹಲ್ಲೆ; ಸಹಿ ಆಂದೋಲನ ಶುರು ಮಾಡಿದ ಕಾನ್ಸ್ಟೇಬಲ್​ಗಳು

| Updated By: ಆಯೇಷಾ ಬಾನು

Updated on: Feb 15, 2024 | 9:39 AM

ರಾಯಚೂರು ಜಿಲ್ಲೆ ದೇವದುರ್ಗ ಕ್ಷೇತ್ರದ ಶಾಸಕಿ ಕರೆಮ್ಮಾ ನಾಯಕ್​ರ ಪುತ್ರ ಸಂತೋಷ್ ಹಾಗೂ ಅವರ ಪಿಎ ಇಲಿಯಾಸ್ ಸೇರಿ ಎಂಟು ಜನ ದೇವದುರ್ಗ ಠಾಣೆ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ್ರು. ಈ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿಯ ವರೆಗೂ ಶಾಸಕಿ ಪುತ್ರನ ಬಂಧನವಾಗಿಲ್ಲ. ಸದ್ಯ ಪೊಲೀಸ್ ಸಿಬ್ಬಂದಿ ಸಹಿ ಆಂದೋಲನ ಹಮ್ಮಿಕೊಂಡಿದ್ದಾರೆ.

ಶಾಸಕಿ ಪುತ್ರ, ಪಿಎಯಿಂದ ಕಾನ್ಸ್ಟೇಬಲ್ ಮೇಲೆ ಹಲ್ಲೆ; ಸಹಿ ಆಂದೋಲನ ಶುರು ಮಾಡಿದ ಕಾನ್ಸ್ಟೇಬಲ್​ಗಳು
ದೇವದುರ್ಗ ಪೊಲೀಸ್ ಠಾಣೆ
Follow us on

ರಾಯಚೂರು, ಫೆ.15: ಶಾಸಕಿ ಪುತ್ರ, ಪಿಎ ಇಬ್ಬರೂ ಸೇರಿಕೊಂಡು ಪೊಲೀಸ್ ಕಾನ್ಸ್ಟೇಬಲ್ (Police Constable) ಮೇಲೆ ಹಲ್ಲೆ (Assault) ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿಯ ವರೆಗೂ ಶಾಸಕಿ ಪುತ್ರನ ಬಂಧನವಾಗಿಲ್ಲ. ಹಾಗೂ ಕೆಲ ಸಿಬ್ಬಂದಿ ವರ್ಗಾವಣೆಗೊಳಿಸುವಂತೆ ಶಾಸಕಿ ಕರೆಮ್ಮಾ ಬೇಡಿಕೆ ಇಟ್ಟ ವಿಚಾರ ಸಂಬಂಧ ಇಲಾಖೆ ವಿರುದ್ಧವೇ ಬೇಸರ ವ್ಯಕ್ತಪಡಿಸಿ ಪೊಲೀಸ್ ಸಿಬ್ಬಂದಿ ಸಹಿ ಆಂದೋಲನ ಹಮ್ಮಿಕೊಂಡಿದ್ದಾರೆ. ತಮಗೂ, ತಮ್ಮ ಕುಟುಂಬಕ್ಕೂ ರಕ್ಷಣೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಅವರಿಗೆ ಮನವಿ ಸಲ್ಲಿಸಲಾಗಿದೆ.

ದೇವದುರ್ಗ ಎಲ್ ಆ್ಯಂಡ್ ಓ ಹಾಗೂ ಟ್ರಾಫಿಕ್ ಠಾಣೆ ಎಲ್ಲಾ ಪೊಲೀಸ್ ಕಾನ್ಸ್ಟೇಬಲ್​ಗಳು ಸಹಿ ಆಂದೋಲನ ಮಾಡುತ್ತಿದ್ದಾರೆ. ಘಟನೆ ನಡೆದು ಹಲವು ದಿನಗಳೇ ಕಳೆದರೂ ರಾಜಕೀಯ ಒತ್ತಡಕ್ಕೆ ಶಾಸಕಿ‌ ಪುತ್ರ ಸಂತೋಷ್ ಬಂಧಿಸದೇ ಇರೋದಕ್ಕೆ ಕಿಡಿಕಾರಿದ್ದಾರೆ. ಎಲ್ ಆ್ಯಂಡ್ ಓ ಠಾಣೆಯ 36 ಹಾಗೂ ಟ್ರಾಫಿಕ್ ಠಾಣೆಯ 23 ಪೊಲೀಸ್ ಕಾನ್ಸ್ಟೇಬಲ್​ಗಳು ಸೇರಿ‌ 59 ಸಿಬ್ಬಂದಿಯಿಂದ ಎಸ್​ಪಿಗೆ ದೂರು ನೀಡಲಾಗಿದೆ.

ಶಾಸಕಿ ಮಗನ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ ಪ್ರತಿಭಟನೆ ನಡೆಸಿ, ಕೆಲ ಪೊಲೀಸ್ ಸಿಬ್ಬಂದಿ ವರ್ಗಾಯಿಸುವಂತೆ ದೇವದುರ್ಗ ಶಾಸಕಿ ಕರೆಮ್ಮಾ ನಾಯಕ್ ಷರತ್ತು ವಿಧಿಸಿದ್ದರು. ಈ ಹಿನ್ನೆಲೆ ಯಾರೋ ಓರ್ವ ಸಿಬ್ಬಂದಿ ವಿರುದ್ಧ ಕ್ರಮವಾದರೂ, ದೇವದುರ್ಗ ಠಾಣೆಯ ಉಳಿದ ಎಲ್ಲಾ ಸಿಬ್ಬಂದಿಯನ್ನು ವರ್ಗಾಯಿಸಬೇಕು ಅಂತ ಪಟ್ಟು ಹಿಡಿದಿದ್ದರು. ಮತ್ತೊಂದೆಡೆ ಪೊಲೀಸ್ ಕಾಲೋನಿ ಬಳಿ ಶಾಸಕಿ ನಿವಾಸ ಹಾಗೂ ಜೆಡಿಎಸ್ ಕಚೇರಿ ಇರೋದ್ರಿಂದ ಕುಟುಂಬಸ್ಥರಿಗೆ ನಿತ್ಯ ಕಿರಿಕಿರಿಯಾಗುತ್ತಿರುವ ಆರೋಪ ಕೇಳಿ ಬಂದಿದೆ. ಇದಲ್ಲದೇ ಶಾಸಕಿ ಬೆಂಬಲಿಗರು ಪೊಲೀಸ್ ಕಾಲೋನಿಯಲ್ಲೇ ಓಡಾಡುತ್ತಾ, ಕಾಲೋನಿ ಬಳಿಯೇ ಮೂತ್ರವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಮುಜುಗರವಾಗುತ್ತಿದೆ ಎಂದು ಎಸ್ಪಿಗೆ ನೀಡಲಾದ ದೂರಿನಲ್ಲಿ ಉಲ್ಲೀಖಿಸಲಾಗಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಹನಿ ನೀರಿಗೂ ಹಾಹಾಕಾರ; ಶಾಲೆ ಬಿಟ್ಟು ನೀರಿಗಾಗಿ ಓಡುತ್ತಿರುವ ಮಕ್ಕಳು

ಅಕ್ರಮ ಮರಳುಗಾರಿಕೆ ಪ್ರಕರಣ ಇಡೀ ರಾಜ್ಯಾದ್ಯಂತ ಭಾರೀ ಸದ್ದು ಮಾಡಿದೆ. ರಾಯಚೂರು ಜಿಲ್ಲೆ ದೇವದುರ್ಗ ಕ್ಷೇತ್ರದ ಶಾಸಕಿ ಕರೆಮ್ಮಾ ನಾಯಕ್​ರ ಪುತ್ರ ಸಂತೋಷ್ ಹಾಗೂ ಅವರ ಪಿಎ ಇಲಿಯಾಸ್ ಸೇರಿ ಎಂಟು ಜನ ದೇವದುರ್ಗ ಠಾಣೆ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ್ರು. ಈ ಬಗ್ಗೆ ಹಲ್ಲೆಗೊಳಗಾದ ಕಾನ್ಸ್ಟೇಬಲ್ ಹನಮಂತರಾಯ ಕೃತ್ಯದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಅಕ್ರಮ ಮರಳುಗಾರಿಕೆ ಟ್ರಾಕ್ಟರ್ ವಶಕ್ಕೆ ಪಡೆದ ವಿಚಾರವಾಗಿ ಶಾಸಕಿ ಪುತ್ರ ಐಬಿಗೆ ಕರೆಸಿಕೊಂಡು ಕೂಡಿ ಹಾಕಿ ಹಲ್ಲೆ ನಡೆಸಿರೊ ಬಗ್ಗೆ ಕಾಕಾನ್ಸ್ಟೇಬಲ್ ಹನಮಂತರಾಯ ಆರೋಪಿಸಿದ್ರು. ಶಾಸಕಿ ಪುತ್ರನ ದರ್ಪದ ವಿರುದ್ಧ ನಿನ್ನೆ ಕಾಂಗ್ರೆಸ್ ಮಹಿಳಾ ಘಟಕ ಕೆರಳಿತ್ತು. ಕನ್ನಡ ಪರ ಸಂಘಟನೆಗಳು ಶಾಸಕಿ ಪುತ್ರ ಸಂತೋಷ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಶಾಸಕಿ ಪುತ್ರ ಸಂತೋಷ್ ವಿರುದ್ಧ ರೌಡಿ ಶೀಟ್ ಓಪನ್ ಮಾಡಿ ಗಡಿ ಮಾಡಬೇಕು ಅಂತ ಕರವೇ ಆಗ್ರಹಿಸಿದೆ. ಈ ಬಗ್ಗೆ ವಿವಿಧ ಸಂಘಟನೆಗಳ ಪ್ರಮುಖರು ನಗರದ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ