ರಾಯಚೂರು: ಕೆಳ ಭಾಗದ ಕಾಲುವೆಗಳಿಗೆ ಬಾರದ ನೀರು; ಸಂಕಷ್ಟಕ್ಕೆ ಸಿಲುಕಿದ ರೈತರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 13, 2024 | 4:29 PM

ತುಂಗಭದ್ರಾ ನದಿ ನೀರಿನ ಮೇಲೆ ಆಧಾರವಾಗಿರುವ ಕೃಷಿ ಪ್ರದೇಶ. ಆದ್ರೆ, ಆ ಭಾಗದಲ್ಲಿ ಪ್ರತಿ ವರ್ಷ ನೀರಿಗಾಗಿ ಹೋರಾಟಗಳೇ ನಡೆಯುತ್ತವೆ. ಕೆಳ ಭಾಗದ ರೈತರಂತೂ ಅಕ್ಷರಶಃ ಬೀದಿಗಿಳಿದು ಹೋರಾಡಲೇ ಬೇಕು. ಅಷ್ಟಕ್ಕೂ ಆ ಕೆಳ ಭಾಗದ ರೈತರ್ಯಾರು. ಅವರ ಸ್ಥಿತಿ ಹೇಗಿದೆ ಅಂತೀರಾ? ಈ ಸ್ಟೋರಿ ಓದಿ.

ರಾಯಚೂರು: ಕೆಳ ಭಾಗದ ಕಾಲುವೆಗಳಿಗೆ ಬಾರದ ನೀರು; ಸಂಕಷ್ಟಕ್ಕೆ ಸಿಲುಕಿದ ರೈತರು
ರಾಯಚೂರಿನ ಕೆಳ ಭಾಗದ ಕಾಲುವೆಗಳಿಗೆ ಬಾರದ ನೀರು
Follow us on

ರಾಯಚೂರು, ಅ.13: ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಿಗೆ ತುಂಗಭದ್ರಾ ನದಿಯೇ ಆಧಾರವಾಗಿದೆ. ಅದರಲ್ಲೂ ತುಂಗಭದ್ರಾ(Tungabhadra)ದಿಂದ ಹರಿಸಲಾಗುವ ನೀರಿನಿಂದಲೇ ರಾಯಚೂರು ಜಿಲ್ಲೆಯಲ್ಲಿ ಭತ್ತವನ್ನು ಸಮೃದ್ಧವಾಗಿ ಬೆಳೆಯಲಾಗುತ್ತದೆ. ನದಿಯಿಂದ ಎಡದಂಡೆ ಹಾಗೂ ಬಲದಂಡೆ ನಾಲೆಗಳಿಗೆ ನೀರು ಹರಿಸಲಾಗುತ್ತದೆ. ಇದೇ ಕಾಲುವೆ ನೀರಿನ ಆಧಾರದಲ್ಲಿ ಲಕ್ಷಾಂತರ ಹೆಕ್ಟೆರ್ ಪ್ರದೇಶದಲ್ಲಿ ನೀರಾವರಿ ಸೌಲಭ್ಯವನ್ನ ರೈತರು ಪಡೆದಿದ್ದಾರೆ. ಆದರೆ, ತುಂಗಭದ್ರಾ ಎಡದಂಡೆ ಕಾಲುವೆಗಳು ರಾಯಚೂರು ತಾಲ್ಲೂಕು, ಸಿರವಾರ ಹಾಗೂ ಮಾನ್ವಿ ತಾಲ್ಲೂಕು ವ್ಯಾಪ್ತಿಯಲ್ಲಿ  ಬರುತ್ತವೆ. ಈ ಮೂರು ತಾಲ್ಲೂಕುಗಳು ಕೆಳ ಭಾಗದಲ್ಲಿದ್ದು, ಈ ಭಾಗದ ಕಾಲುವೆಗಳಿಗೆ ನೀರು ಹರಿಸುತ್ತಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ.

ಇದೇ ಕಾರಣಕ್ಕೆ ರೈತರು ಸರಣಿ ಹೋರಾಟ ನಡೆಸಿದರೂ ಯಾವುದೇ ಪ್ರಯೋಜವಾಗುತ್ತಿಲ್ಲ. ಇತ್ತೀಚೆಗೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಹೆದ್ದಾರಿ ತಡೆದು ರೈತರು ಬೃಹತ್ ಹೋರಾಟ ನಡೆಸಿದ್ದರು. ರೈತರ ಹೋರಾಟದಿಂದ ಗಂಟೆ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಮೂಲಕ ರೈತರ ಹೋರಾಟದ ಬಿಸಿ ತಟ್ಟಿತ್ತು. ರಾಯಚೂರಿನ ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಬರುತ್ತಿಲ್ಲ ಎನ್ನುವುದು ಒಂದು ಸಮಸ್ಯೆಯಾದರೆ, ಮತ್ತೊಂದು ಕಡೆ ಕೃಷ್ಣಾ ನದಿಯಿಂದ ನೀರು ಹರಿಸುವ ನಾರಾಯಣಪುರ ಬಲದಂಡೆ ಕಾಲುವೆಗಳ ಆಧುನೀಕರಣ ಕಾಮಗಾರಿಯಲ್ಲಿ ಕಳಪೆ ಆಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ಐದು ದಶಕಗಳ ಹೋರಾಟದ ಫಲವಾಗಿ ಕೆರೆಗೆ ಬಂತು ತುಂಗಭದ್ರಾ ನದಿ ನೀರು

ಹಾಳಾಗುವ ಸ್ಥಿತಿ ತಲುಪಿದ ಬೆಳೆಗಳು

ಇತ್ತ ತುಂಗಭದ್ರಾ ಎಡದಂಡೆ ಕಾಲುವೆಗಳಿಗೆ ನೀರು ಸಮರ್ಪಕವಾಗಿ ಬರುತ್ತಿಲ್ಲ. ಕೆಲವೆಡೆ ನೀರೇ ಸಿಕ್ಕಿಲ್ಲ, ಹೀಗಾಗಿ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕು, ಸಿರವಾರ ಹಾಗೂ ರಾಯಚೂರು ತಾಲ್ಲೂಕುಗಳ ವ್ಯಾಪ್ತಿಯ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಮುಖ್ಯ ಕಾಲುವೆಗಳು, ಉಪ ಕಾಲುವೆಗಳಿಗೆ ನೀರು ಹರಿಸದ ಹಿನ್ನೆಲೆ ಹತ್ತಿ,ಭತ್ತ ಸೇರಿ ವಿವಿಧ ಬೆಳೆಗಳು ಹಾಳಾಗುವ ಸ್ಥಿತಿಗೆ ತಲುಪಿವೆ. ಪ್ರತಿ ವರ್ಷ ಕೊನೆಯ ಭಾಗದ ರೈತರಿಗೆ ಜಮೀನುಗಳಿಗೆ ನೀರು ತಲುಪದೆ ಇರುವುದರಿಂದ ರೈತರು ಕಣ್ಣೀರಿಡುವ ಸ್ಥಿತಿ ಬಂದಿದೆ.

ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಕಾರಣದಿಂದ ಈ ಭಾಗದಲ್ಲಿ ರೈತರ ಸಮಸ್ಯೆ ಪರಿಹಾರವಾಗಿಲ್ಲ ಎಂದು ರೈತ ಮುಖಂಡರು ಹೇಳುತ್ತಿದ್ದಾರೆ. ಹೌದು, ಕಳೆದ 10-15 ವರ್ಷಗಳಿಂದ ಇದೇ ರೀತಿ ಹೋರಾಟ ಮಾಡಿಯೇ ನೀರು ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ಹೋರಾಟ ಮಾಡಿದಾಗ ನಾಲ್ಕು ದಿನ ನೀರು ಬಿಟ್ಟು ಬಂದ್​ ಮಾಡುವುದು ಬಳಿಕ ಮತ್ತೆ ಅದೇ ಪರಿಸ್ಥಿತಿ. ಬಂಡ ಅಧಿಕಾರಿಗಳು, ಜನಪ್ರತಿನಿಧಿಗಳಿಂದಲೇ ಇಂಥ ಸಮಸ್ಯೆ ಉಲ್ಭಣಿಸಿದೆ ಎಂದು ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ. ಅದೆನೆ ಇರಲಿ ಈಗಲಾದರೂ ಸರ್ಕಾರವಾಗಲಿ, ಡಿಸಿಎಂ ಹಾಗೂ ನೀರಾವರಿ ಸಚಿವರು ಎಚ್ಚೆತ್ತುಕೊಂಡು ಈ ಭಾಗದ ರೈತರಿಗೆ ಶಾಶ್ವತ ಪರಿಹಾರ ಒದಗಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ