12 ರಾಶಿಗಳು, ಸೂರ್ಯ-ಚಂದ್ರರ ವಾಸ್ತು ಶಿಲ್ಪ ಪ್ರತಿಷ್ಠಾಪನೆ
ರಾಯಚೂರು ತಾಲ್ಲೂಕಿನ ದೇವಸುಗೂರಿನಲ್ಲಿರೊ ಸುಗೂರೇಶ್ವರ ದೇವಸ್ಥಾನ ಸುಮಾರು 800 ವರ್ಷಗಳ ಇತಿಹಾಸವಿರೊ ಧಾರ್ಮಿಕ ಕೇಂದ್ರ. ಸುಗೂರೇಶ್ವರನು, ಶ್ರೀಶೈಲದಲ್ಲಿ ಅವತಾರ ತಾಳಿ ಕಾಶ್ಮೀರಕ್ಕೆ ಹೋಗಿ, ಅಲ್ಲಿಂದ ಕಲ್ಯಾಣಕ್ಕೆ ಆಗಮಿಸುತ್ತಾರೆ. ನಂತರ ಕೆಲ ಶರಣರ ಜೊತೆ ಗಬ್ಬೂರಿಗೆ ಬಂದು ನೆಲೆಸುತ್ತಾರೆ. ಅಲ್ಲಿಂದ ಕುರುಡು ಕೋಣ, ಕುಂಟೆತ್ತು, ಹರಕುಮುರಕಲು ಹಳೆಯದಾದ ಬಂಡಿ ಜೊತೆ ಸುಗೂರಿಗೆ ಬರುತ್ತಾರೆ. ದೇವರು ಸುಗೂರಿಗೆ ಬಂದ ಅನ್ನೋ ಅರ್ಥದಲ್ಲಿ ಸುಗೂರು ಗ್ರಾಮಕ್ಕೆ ದೇವಸುಗೂರು ಅಂತ ಹೆಸರು ಪಡೆದಿದೆ.
ಕುಷ್ಟ ರೋಗದಿಂದ ಮುಕ್ತನಾಗಿದ್ದ ರಾಜಮನೆತನದ ದೊರೆ
12ನೇ ಶತಮಾನದಲ್ಲಿ ರಾಜಮನೆತನದ ದೊರೆಯೊಬ್ಬರು ಕುಷ್ಟ ರೋಗದಿಂದ ಬಳಲುತ್ತಿದ್ದರು. ನಂತರ ಅವರು ಇದೇ ಸುಗೂರೇಶ್ವರನ ತೀರ್ಥ ಪ್ರಸಾದ ಸೇವಿಸಿ ಕುಷ್ಟ ರೋಗದಿಂದ ಗುಣಮುಖರಾಗಿದ್ದರು. ಆಗ ಆ ದೊರೆ ಸುಗೂರೇಶ್ವರನಿಗೆ ಗರ್ಭಗುಡಿ ನಿರ್ಮಿಸಿದ್ದರು. ಆಗ ಈ ದೇವಸ್ಥಾನ ನಿರ್ಮಾಣದ ವೇಳೆ, ದೇವಸ್ಥಾನಕ್ಕೆ ಗ್ರಹಣದೋಷ ತಟ್ಟಬಾರದು ಅಂತ ವಾಸ್ತು ಶಾಸ್ತ್ರದ ಮೊರೆ ಹೋಗಿದ್ದರು. ಆ ಕಾಲದಲ್ಲೇ ವಾಸ್ತ ಶಾಸ್ತ್ರದ ಪ್ರಕಾರ ದೇವಸ್ಥಾನದ ಸುತ್ತಲೂ 12 ರಾಶಿಗಳ ವಾಸ್ತು ಶಿಲ್ಪದ ವಿನ್ಯಾಸಗಳನ್ನ ಪ್ರತಿಷ್ಠಾಪನೆ ಮಾಡಿದ್ದರು. ಜೊತೆಗೆ ಎರಡು ಬಂಡೆಗಲ್ಲುಗಳನ್ನ ಸೂರ್ಯ,ಚಂದ್ರರ ಸಂಕೇತವಾಗಿ ಗರ್ಭ ಗುಡಿ ಹೊರಗಡೆ ಪ್ರತಿಷ್ಠಾಪಿಸಲಾಗಿದೆ ಅಂತ ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.
ಗ್ರಹಣ ಮುಕ್ತ ದೇವಸ್ಥಾನ ಹಿನ್ನೆಲೆ ಇಂದು ಸಹಸ್ರಾರು ಭಕ್ತರು ದೀಪಾವಳಿ ಅಮವಾಸ್ಯೆ ಪೂಜೆಗಾಗಿ ದೇವಸ್ಥಾನಕ್ಕೆ ಆಗಮಿಸಿ ಸುಗೂರೇಶ್ವರನ ದರ್ಶನ ಪಡೆದಿದ್ದಾರೆ. ಸಂಜೆ ಗ್ರಹಣ ಕಳೆದ ಬಳಿಕ ವಿಶೇಷ ಪೂಜೆ, ಪುರಸ್ಕಾರಗಳು ಇಲ್ಲಿ ನೆರವೇರಲಿವೆ.
ವರದಿ:ಭೀಮೇಶ್ ಪೂಜಾರ್, ಟಿವಿ9 ರಾಯಚೂರು