
ರಾಯಚೂರು, ಜನವರಿ 18: ಅವರೆಲ್ಲಾ ವ್ಯವಸ್ಥೆ ವಿರುದ್ಧ ತೊಡೆ ತಟ್ಟಿ ಶಸ್ತ್ರ ಸಜ್ಜಿತರಾಗಿ ನಕ್ಸಲರು (Naxals) ಅನ್ನೋ ಹಣೆ ಪಟ್ಟಿಕೊಂಡಿರುವವರು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ಎದುರು ಕಳೆದ ವರ್ಷ ಶರಣಾಗಿರುವ ಆರು ಜನ ನಕ್ಸಲರಿಗೆ ಈವರೆಗೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಹೀಗಾಗಿ ರಾಯಚೂರಿನ ನಕ್ಸಲ್ ಮಾರೆಪ್ಪ ಅರೋಲಿ ಕುಟುಂಬ ಮಗನ ಬಿಡುಗಡೆಗಾಗಿ ಅಂಗಲಾಚುತ್ತಿದೆ. ಸಾಯುವುದರೊಳಗೆ ಹೆತ್ತ ಮಗನನ್ನ ನೋಡುವ ಬಯಕೆಯಲ್ಲಿ ತಾಯಿ ನಿತ್ಯ ಕಣ್ಣೀರಿಡುತ್ತಿದ್ದಾರೆ.
ಶಾಂತಿಗಾಗಿ ನಾಗರಿಕ ವೇದಿಕೆ ಮೂಲಕ 2025ರಲ್ಲಿ ಶರಣಾಗತಿಯಾಗಿ ಸಾರ್ವಜನಿಕ ಜೀವನಕ್ಕೆ ಕಾಲಿಡಲು ಮುಂದಾಗಿರುವ ಆರು ಜನ ನಕ್ಸಲರನ್ನ ಜೈಲಿನಿಂದ ಬಿಡುಗಡೆ ಮಾಡುವಂತೆ ಕುಟುಂಬಸ್ಥರು ಸರ್ಕಾರಕ್ಕೆ ಅಂಗಲಾಚುತ್ತಿದ್ದಾರೆ. ರಾಯಚೂರಿನ ಮಾರೆಪ್ಪ ಅರೋಲಿ ತಾಯಿ ಗೌರಮ್ಮ ಮಗನ ಬರುವಿಕೆಗಾಗಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾಳೆ. ನಮಗೆ ಸರ್ಕಾರದ ಸವಲತ್ತು ಬೇಡ ಮಗ ಬೇಕು ಅಂತ ತಾಯಿ ಕಣ್ಣೀರಿಡುತ್ತಿದ್ದಾರೆ.
ಇದನ್ನೂ ಓದಿ: ಶರಣಾಗತಿ ಆಯ್ತು, ಆದರೆ ನಕ್ಸಲರ ಬಳಿ ಇದ್ದ ಶಸ್ತ್ರಾಸ್ತ್ರ ಎಲ್ಲಿ ಹೋಯ್ತು!?
ರಾಯಚೂರು ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆಗಳು ಗರಿಗೆದರಿದ್ದ ಕಾಲದಲ್ಲಿ ಹೊರಾಟಗಳಲ್ಲಿ ತೊಡಗಿದ್ದ ಯುವಕ ಮಾರೆಪ್ಪ ಅರೋಲಿ. ರಾಯಚೂರಿನ ಮಾನ್ವಿ ತಾಲ್ಲೂಕಿನ ಅರೋಲಿ ಗ್ರಾಮದ ಮಾರೆಪ್ಪ, ನಕ್ಸಲ್ ಚಟುವಟಿಕೆಗಳತ್ತ ಆಕರ್ಷಿತನಾಗಿ ಊರನ್ನ ತೊರೆದು ಹೋಗಿದ್ದ. ಸುಮಾರು 25 ವರ್ಷಗಳ ಬಳಿಕ ಶರಣಾಗತಿ ಮೂಲಕ 2025 ರ ಜನವರಿ 8 ರಂದು ಮುಖ್ಯವಾಹಿನಿಗೆ ಬಂದಿದ್ದರು. ರಾಯಚೂರಿನ ಮಾನ್ವಿ ತಾಲೂಕಿನ ಅರೋಲಿ ಗ್ರಾಮದ ಮಾರೆಪ್ಪನ ಜೊತೆ ಮುಂಡಗಾರು ಲತಾ, ಸುಂದರಿ ಕುತ್ತೂರು, ವನಜಾಕ್ಷಿ ಬಾಳೆಹೊಳೆ, ಕೆ.ವಸಂತ, ಟಿ.ಎನ್.ಜಿಷಾ ಸೇರಿ ಆರು ಜನ ನಕ್ಸಲರು ಮುಖ್ಯವಾಹಿನಿಗೆ ಮರಳಿ ಒಂದು ವರ್ಷವಾಗಿದೆ. ಖುದ್ದು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲೇ ಈ ಆರು ಜನ ನಕ್ಸಲರು ಶರಣಾಗಿದ್ದರು. ಆದರೆ ಸರ್ಕಾರ ಒಂದು ವರ್ಷವಾದ್ರೂ ಮಗನ ಬಿಡುಗಡೆ ಮಾಡಿಲ್ಲ ಅಂತ ನಕ್ಸಲ್ ಮಾರೆಪ್ಪ ಕುಟುಂಬ ಕಣ್ಣೀರಿಡುತ್ತಿದೆ.
ಸರ್ಕಾರ ನಕ್ಸಲ್ ಮುಕ್ತ ರಾಜ್ಯ ಘೋಷಣೆ ಮಾಡಿ ಒಂದು ವರ್ಷವಾಗಿದೆ. ಹೀಗಾಗಿ ಮಾರೆಪ್ಪನ ಬರುವಿಕೆಗಾಗಿ ಆತನ ಹುಟ್ಟೂರು ಅರೋಲಿ ಗ್ರಾಮದಲ್ಲಿ 81 ವರ್ಷದ ಆತನ ತಾಯಿ ಗೌರಮ್ಮ ಕೊನೆಗಾಲದಲ್ಲಿದ್ದಾರೆ. ಕೊನೆ ಘಳಿಗೆಯಲ್ಲಿ ಮಗನನ್ನ ನೋಡುವ ಅವಕಾಶ ಸಿಗುತ್ತಿದೆ ಅಂತ ನಿಲ್ಲದ ಕಣ್ಣಿರಲ್ಲಿ ಕೈ ತೊಳೆಯುತ್ತಿದ್ದಾರೆ. ಸರ್ಕಾರದಿಂದ ನಮಗೆ ಯಾವುದೇ ಸಹಾಯ ಬೇಡ, ನನ್ನ ಮಗ ಕೊನೆಗಾಲದಲ್ಲಿ ನನ್ನ ಜೊತೆ ಇರಲಿ ಸಾಕು ಅಂತ ಮಗನಿಗಾಗಿ ಕಾಯುತ್ತಿದ್ದಾರೆ.
ಶರಣಾಗತಿಯಾದವರನ್ನ ಬಿಡುಗಡೆ ಮಾಡದೆ ಜೈಲಿನಿಂದ ಜೈಲಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಅವರ 18 ಬೇಡಿಕೆಗಳನ್ನೂ ಈಡೇರಿಸಿಲ್ಲ. ಮುಖ್ಯಮಂತ್ರಿಗಳು ಘೋಷಿಸಿದಂತೆ ಆದಷ್ಟು ಬೇಗ ಶರಣಾದ ಆರು ಜನರನ್ನು ಬಿಡುಗಡೆ ಮಾಡಬೇಕು ಅಂತ ಜಯಣ್ಣನ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಅವರ ಮೇಲಿನ ಮೊಕದ್ದಮೆಗಳನ್ನ ಹಿಂಪಡೆದು ಸಾರ್ವಜನಿಕವಾಗಿ ಬದುಕಲು ಅನುವು ಮಾಡಿಕೊಡುವುದಾಗಿ ಸರ್ಕಾರ ಹೇಳಿತ್ತು. ಈಗ ಅದಕ್ಕೆ ಅವಕಾಶ ಮಾಡಬೇಕು ಅಂತ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸಿಎಂ ಮುಂದೆ 6 ನಕ್ಸಲರು ಶರಣಾಗತಿ, ಕರ್ನಾಟಕದ ಇತಿಹಾಸದಲ್ಲಿಯೇ ಇದೇ ಮೊದಲು
ನಕ್ಸಲ್ ಚಟುವಟಿಕೆಯಲ್ಲಿ ಸೇರಿ 25 ವರ್ಷಗಳಿಂದ ದೂರವಾಗಿದ್ದ ಮಗ ಈಗಲಾದರೂ ಮನೆಗೆ ಬರ್ತಾನೆ ಅಂತ ಕಾಯುತ್ತಿದ್ದ ಮಾರೆಪ್ಪನ ತಾಯಿ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಸರ್ಕಾರ ಕೊಟ್ಟ ಮಾತಿನ ಕಡೆ ಗಮನ ಹರಿಸಬೇಕು ಅಂತ ಕುಟುಂಬಸ್ಥರು ಮನವಿ ಮಾಡುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.