ಚನ್ನಪಟ್ಟಣದಲ್ಲಿ ಜಾತಿ ಲೆಕ್ಕಾಚಾರ: ಮುಸ್ಲಿಂ ಮತಗಳ ಮೇಲೆ ಯೋಗೇಶ್ವರ್, ಜೆಡಿಎಸ್ ಕಣ್ಣು

| Updated By: ಗಣಪತಿ ಶರ್ಮ

Updated on: Oct 26, 2024 | 3:42 PM

ಚನ್ನಪಟ್ಟಣದ ಉಪಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿದೆ. ಒಕ್ಕಲಿಗ ಮತಗಳು ನಿರ್ಣಾಯಕವಾಗಿದ್ದರೂ, ಅಲ್ಪಸಂಖ್ಯಾತ ಮತಗಳ ಪಾತ್ರವೂ ಮಹತ್ವದ್ದಾಗಿದೆ. ನಿಖಿಲ್ ಕುಮಾರಸ್ವಾಮಿ ಅವರ ಗೆಲುವಿಗಾಗಿ ಜೆಡಿಎಸ್ ವಿವಿಧ ಸಮುದಾಯಗಳ ಮತಗಳನ್ನು ಸೆಳೆಯಲು ತಂತ್ರಗಳನ್ನು ರೂಪಿಸಿದೆ. ಕಾಂಗ್ರೆಸ್ ಕೂಡ ತನ್ನದೇ ಆದ ತಂತ್ರಗಳನ್ನು ಅನುಸರಿಸುತ್ತಿದೆ.

ಚನ್ನಪಟ್ಟಣದಲ್ಲಿ ಜಾತಿ ಲೆಕ್ಕಾಚಾರ: ಮುಸ್ಲಿಂ ಮತಗಳ ಮೇಲೆ ಯೋಗೇಶ್ವರ್, ಜೆಡಿಎಸ್ ಕಣ್ಣು
ಸಿಪಿ ಯೋಗೇಶ್ವರ್ ಮತ್ತು ನಿಖಿಲ್ ಕುಮಾರಸ್ವಾಮಿ
Follow us on

ರಾಮನಗರ, ಅಕ್ಟೋಬರ್ 26: ಕರ್ನಾಟಕದ ಮೂರು ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯ ಪೈಕಿ ಚನ್ನಪಟ್ಟಣದಲ್ಲಿ ಹೈವೋಲ್ಟೇಜ್​ ಕದನ ಏರ್ಪಡಲಿದೆ. ಎನ್​ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅಖಾಡಕ್ಕಿಳಿದಿದ್ದಾರೆ. ಆದರೆ ಇದು ಜೆಡಿಎಸ್​ ವರ್ಸಸ್​ ಕಾಂಗ್ರೆಸ್​ ಮಧ್ಯೆಯ ಯುದ್ಧವಾಗಿದೆ. ಹೇಳಿ ಕೇಳಿ ಚನ್ನಪಟ್ಟಣ ಜೆಡಿಎಸ್​ ಭದ್ರಕೋಟೆಯಾಗಿದೆ. ಇಲ್ಲಿ ಒಕ್ಕಲಿಗ ಮತಗಳೇ ನಿರ್ಣಾಯಕ, ಆದರೆ ಅಲ್ಪಸಂಖ್ಯಾತ ಮತಗಳು ಗೆಲುವಿನಲ್ಲಿ ಹೆಚ್ಚು ಪಾತ್ರವಹಿಸುತ್ತವೆ. ಇದನ್ನು ಅರಿತಿರುವ ಕುಮಾರಸ್ವಾಮಿ ತೆರೆಮರೆಯಲ್ಲೇ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಇದಕ್ಕೆ ಇಂಬು ಕೊಡುವಂತೆ ಶುಕ್ರವಾರ ನಾಮಪತ್ರ ಸಲ್ಲಿಕೆ ವೇಳೆ ಕುಮಾರಸ್ವಾಮಿ ಮುಸ್ಲಿಂ ಮತದಾರರಿಗೆ ಕಾಂಗ್ರೆಸ್ ಕುತಂತ್ರಕ್ಕೆ ಬಲಿಯಾಗಬೇಡಿ ಎಂದಿದ್ದರು.

ಬೇರೆಬೇರೆ ಸಮುದಾಯಗಳ ಮತ ಸೆಳೆಯಲು ದಳ ತಂತ್ರ

ಮಿನಿ ಕುಸ್ತಿಯಲ್ಲಿ ದಳಪತಿಗಳಿಗೆ ಗಲುವು ಪ್ರತಿಷ್ಠೆಯಾಗಿದೆ. ಸಿಪಿಯೋಗೇಶ್ವರ್ ಆಟ, ಡಿಕೆ ಸಹೋದರರ​ ತಂತ್ರಕ್ಕೆ ತಕ್ಕ ಪಾಠ ಕಲಿಸುವುದು ಕುಮಾರಸ್ವಾಮಿಯ ಉದ್ದೇಶ ಆಗಿದೆ. ಈಗಾಗಲೇ ಕೆಲ ಮುಸ್ಲಿಂ ಮುಖಂಡರು ನಿಖಿಲ್​ಗೆ ಬೆಂಬಲವನ್ನೂ ಸೂಚಿಸಿದ್ದಾರೆ. ಹೀಗಾಗಿ ಶತಾಯಗತಾಯ ನಿಖಿಲ್​ನನ್ನ ಗೆಲ್ಲಿಸಲೇಬೇಕು ಎಂದು ಪಣತೊಟ್ಟಿರುವ ಹೆಚ್​ಡಿ ಕುಮಾರಸ್ವಾಮಿ, ಹೊಸ ಟಾಸ್ಕ್​ ಕೊಟ್ಟಿದ್ದಾರೆ.

ಗೆಲುವಿಗೆ ಹೆಚ್​ ಕುಮಾರಸ್ವಾಮಿ ಟಾಸ್ಕ್

ಪಕ್ಷದ ಮುಖಂಡರಿಗೆ ನಿಖಿಲ್​ ಗೆಲ್ಲಿಸಲು ಕುಮಾರಸ್ವಾಮಿ ಟಾಸ್ಕ್​ ಕೊಟ್ಟಿದ್ದಾರೆ. ಹಾಲಿ, ಮಾಜಿ ಶಾಸಕರು, ಮುಖಂಡರ ಜೊತೆ ಹೆಚ್​ಡಿಕೆ ಸಭೆ ಮಾಡಿದ್ದಾರೆ. ಒಬ್ಬ ಶಾಸಕನಿಗೆ ಒಂದೊಂದು ಗ್ರಾಮ ಪಂಚಾಯ್ತಿಯ ಜವಾಬ್ದಾರಿ ಕೊಡಲಾಗಿದೆ. ತಳಮಟ್ಟದಿಂದಲೇ ಮತಬೇಟೆಗೆ ಸೂಚನೆ ನೀಡಲಾಗಿದೆ. ಇನ್ನು ಬೇರೆ ಬೇರೆ ಸಮುದಾಯದ ಮತ ಸೆಳೆಯಲು ತಂತ್ರ ಮಾಡಲಾಗಿದೆ. ಅನಗತ್ಯವಾಗಿ ಹೇಳಿಕೆ ಕೊಡದಂತೆ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ಸೋಮವಾರದಿಂದಲೇ ದಳ ನಾಯಕರು ಅಖಾಡದಲ್ಲಿ ಮತ ಶಿಕಾರಿಗೆ ಇಳಿಯಲಿದ್ದಾರೆ.

ಜೆಡಿಎಸ್ ತಂತ್ರಕ್ಕೆ ಕಾಂಗ್ರೆಸ್​ ಅಭ್ಯರ್ಥಿ ಸಿಪಿವೈ ಪ್ರತಿತಂತ್ರ

ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿ ಜೆಡಿಎಸ್ ದಾಳ ಉರುಳಿಸುತ್ತಿದ್ದಂತೆಯೇ ಇದೀಗ ಸಿಪಿ ಯೋಗೇಶ್ವರ್ ಫುಲ್​ ಅಲರ್ಟ್​ ಆಗಿದ್ದಾರೆ. ಚನ್ನಪಟ್ಟಣದ ಸ್ವಗೃಹದಲ್ಲಿ ಮುಸ್ಲಿಂ ನಾಯಕರ ಸಭೆ ಮಾಡಿದ್ದಾರೆ. ಬೆಂಬಲ ಸೂಚಿಸುವಂತೆ ಮನವಿ ಮಾಡಿದ್ದಾರೆ.

ಚನ್ನಪಟ್ಟಣ ಜಾತಿ ಲೆಕ್ಕಾಚಾರ

ಚನ್ನಪಟ್ಟಣದಲ್ಲಿ ಒಟ್ಟು 2,32,375 ಮತದಾರರು ಇದ್ದಾರೆ. ಇನ್ನು 1.5 ಲಕ್ಷದಷ್ಟು ಒಕ್ಕಲಿಗ ಸಮುದಾಯದ ಮತಗಳು ಇದೆ. ಶೇ 48ರಷ್ಟು ಒಕ್ಕಲಿಗರ ಮತಗಳ ಪ್ರಾಬಲ್ಯ ಇದೆ. ಇನ್ನು ಪರಿಶಿಷ್ಟ ಪಂಗಡದಲ್ಲಿ 40 ಸಾವಿರ ಮತದಾರರು ಇದ್ದಾರೆ. 2ನೇ ಅತಿ ಹೆಚ್ಚು ಸ್ಥಾನದಲ್ಲಿ ಪರಿಶಿಷ್ಟ ಪಂಗಡ ಮತ ಇದೆ. ಇನ್ನು ಮುಸ್ಲಿಂ ಸಮುದಾಯದ ಮತಗಳು 32 ಸಾವಿರ ಇವೆ. ತಿಗಳರು 10 ಸಾವಿರ, ಬೆಸ್ತರು 10 ಸಾವಿರ, ಬ್ರಾಹ್ಮಣರು 2 ಸಾವಿರ, ಲಿಂಗಾಯತ 3 ಸಾವಿರ, ಕುರುಬ ಸಮುದಾಯದಿಂದ 8 ಸಾವಿರ ಮತಗಳು ಇದೆ. ಇನ್ನು ಇತರೆ ಹಿಂದುಳಿದ ವರ್ಗ 20 ಸಾವಿರ ಮತಗಳು ಇವೆ.

ಸಿಎಂ ನಿವಾಸದಲ್ಲಿ ಅಜ್ಜಂಪೀರ್ ಖಾದ್ರಿ ಸಂಧಾನ ಸಕ್ಸಸ್

ಶಿಗ್ಗಾಂವಿ ಕಾಂಗ್ರೆಸ್​ನಲ್ಲಿ ನಿನ್ನೆ ದೊಡ್ಡ ಹೈಡ್ರಾಮಾ ನಡೆದಿತ್ತು. ನಾಮಪತ್ರ ಸಲ್ಲಿಕೆಗೆ ಕೊನೆ ಕ್ಷಣದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಅಜ್ಜಂಪೀರ್ ಖಾದ್ರಿ ಓಡೋಡಿ ಬಂದು ನಾಮಿನೇಷನ್ ಮಾಡಿದ್ದರು. ಯಾರೇ ಹೇಳಿದ್ರೂ ನಾಮಪತ್ರ ವಾಪಸ್ ಮಾತೇ ಇಲ್ಲ ಅಂದಿದ್ದರು. ಆದರೆ, ಇವತ್ತು ಇದೇ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿಯನ್ನ ಸಚಿವ ಜಮೀರ್ ಅಹ್ಮದ್ ಸಿಎಂ ಸಿದ್ದರಾಮಯ್ಯ ಮನೆಗೆ ಕರೆತಂದಿದ್ದಾರೆ. ಖಾದ್ರಿ ಬಂಡಾಯ ಒಂದೇ ದಿನದಲ್ಲಿ ಥಂಡಾ ಆಗಿದೆ. ಸಿದ್ದರಾಮಯ್ಯ ಸಂಧಾನ ಯಶಸ್ವಿಯಾಗಿದ್ದು, ಖಾದ್ರಿ ಬಂಡಾಯದ ಬಾವುಟ ಕೆಳಗಿಟ್ಟಿದ್ದಾರೆ.

ಶಿಗ್ಗಾಂವಿ ಜಾತಿ ಲೆಕ್ಕಾಚಾರ

ಶಿಗ್ಗಾಂವಿ ಕ್ಷೇತ್ರದಲ್ಲಿ ಲಿಂಗಾಯತರ ಮತಗಳೇ ನಿರ್ಣಾಯಕ ಆಗಿದೆ. ಬರೋಬ್ಬರಿ 70,000 ಸಾವಿರ ಲಿಂಗಾಯತ ಸಮುದಾಯದ ಮತಗಳು ಇವೆ. ಇನ್ನು ಎರಡನೇ ಸ್ಥಾನದಲ್ಲಿ ಮುಸ್ಲಿಂ ಸಮುದಾಯದ ಮತಗಳು ಇದೆ 55 ಸಾವಿರ ಮುಸ್ಲಿಂ ಸಮುದಾಯದ ಮತ ಇದೆ. ಇನ್ನು ಕುರುಬ 25,000, ಲಂಬಾಣಿ 22,000, ಎಸ್​​ಸಿ 20,000, ಎಸ್​ಟಿ 20,000, ಇತರೆ 14,000 ಮತಗಳು ಇವೆ.

ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ: ಎನ್​ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ

ಒಟ್ಟಾರೆಯಾಗಿ ಚನ್ನಪಟ್ಟಣದಲ್ಲಿ ಒಕ್ಕಲಿಗ ಮತಗಳು ನಿರ್ಣಾಯಕ ಆಗಿರುವುದರಿಂದ ಮಹಾ ಕದನ ನಡೆಯುತ್ತಿದೆ. ಶಿಗ್ಗಾಂವಿಯಲ್ಲಿ ಲಿಂಗಾಯತ ಮತಗಳು ನಿರ್ಣಾಯಕ ಆಗಿದೆ. ಆದ್ರೆ ಫಲಿತಾಂಶದಲ್ಲಿ ಮತದಾರ ಯಾರಿಗೆ ಗೆಲುವಿನ ಹಾರ ಹಾಕುತ್ತಾನೆ ಎಂಬುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ