ಸ್ವಕ್ಷೇತ್ರ ಕನಕಪುರಕ್ಕೆ ಡಿಕೆ ಶಿವಕುಮಾರ್ ಭೇಟಿ: ನಿಮ್ಮೊಂದಿಗೆ ಸದಾ ಇರ್ತೆನೆ ಎಂಬ ಸಂದೇಶ ರವಾನಿಸಿದ ಸಿಎಂ

ಡಿಕೆ ಶಿವಕುಮಾರ್​ ಸಿಎಂ ಆದ ನಂತರ ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ಮೊದಲ ಬಾರಿಗೆ ಭೇಟಿ ನೀಡಿದರು. ಕ್ಷೇತ್ರದ ಜನ ನನ್ನನ್ನ ಇಲ್ಲಿಯವರೆಗೆ ಕರೆತಂದಿದ್ದಾರೆ. ಮೊದಲು ಅವರಿಗೆ ಕೃತಜ್ಞತೆ ಸಲ್ಲಿಸುವುದು ಕರ್ತವ್ಯ. ಅದಕ್ಕೆ ಮೊದಲ ಭೇಟಿ ನನ್ನ ಕ್ಷೇತ್ರ, ನನ್ನ ಜನತೆಗೆ ಎಂದು ಹೇಳಿದ್ದಾರೆ.

ಸ್ವಕ್ಷೇತ್ರ ಕನಕಪುರಕ್ಕೆ ಡಿಕೆ ಶಿವಕುಮಾರ್ ಭೇಟಿ: ನಿಮ್ಮೊಂದಿಗೆ ಸದಾ ಇರ್ತೆನೆ ಎಂಬ ಸಂದೇಶ ರವಾನಿಸಿದ ಸಿಎಂ
ಡಿಕೆ ಶಿವಕುಮಾರ್​
Image Credit source: tv9 kannada
Edited By:

Updated on: Jun 07, 2026 | 1:27 PM

ರಾಮನಗರ, ಜೂನ್​​ 07: ಸಿಎಂ ಆಗಿ ಅಧಿಕಾರದ ಗದ್ದುಗೆ ಏರಿರುವ ಡಿಕೆ ಶಿವಕುಮಾರ್ (DK Shivakumar), ತಮ್ಮ ಸೀಮೆಯ ಜನರಿಗೆ ಇಂದು ಕೃತಜ್ನತೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಪಟ್ಟಕ್ಕೇರಿದ ಬಳಿಕ ಮೊದಲ ಬಾರಿಗೆ, ಸ್ವಕ್ಷೇತ್ರ ಕನಕಪುರಕ್ಕೆ (Kanakapura) ಭೇಟಿ ಕೊಟ್ಟಿದ್ದಾರೆ. ಜನರ ನಡುವೆ ನಿಂತು, ನಾನು ನಿಮ್ಮ ಮನೆ ಮಗ, ನಿಮ್ಮೊಂದಿಗೆ ಸದಾ ಇರುತ್ತೇನೆ ಎನ್ನುವ ಸಂದೇಶ ರವಾನಿಸಿದ್ದಾರೆ.

ಮೆಟ್ರೋದಲ್ಲಿ ಪ್ರಯಾಣ

ಇನ್ನು ಕನಕಪುರಕ್ಕೆ ತೆರಳುವ ಮುನ್ನ ಸಿಎಂ ಡಿಕೆ ಶಿವಕುಮಾರ್, ಮಾದರಿ ಹೆಜ್ಜೆಯೊಂದನ್ನ ಇಟ್ಟರು. ಝೀರೋ ಟ್ರಾಫಿಕ್ ತಪ್ಪಿಸುವುದಕ್ಕಾಗಿ ವಿಧಾನಸೌಧದದಿಂದ ರೇಷ್ಮೆ ಸಂಸ್ಥೆವರೆಗೆ ಮೆಟ್ರೋದಲ್ಲಿಯೇ ತೆರಳಿದರು. ಮೆಟ್ರೋದಲ್ಲಿ ಪ್ರಯಾಣ ವೇಳೆ, ಜನರೊಂದಿಗೆ ಆತ್ಮೀಯವಾಗಿ ಬೆರೆತು, ಮಾತುಕತೆ ಮಾಡಿದರು. ಸಿಲ್ಕ್ ಇನ್‌ಸ್ಟಿಟ್ಯೂಟ್​ನಿಂದ ಕನಕಪುರಕ್ಕೆ ಕಾರಿನಲ್ಲಿ ಸಿಎಂ ಡಿಕೆ ಶಿವಕುಮಾರ್​ ಪ್ರಯಾಣ ಬೆಳಸಿದರು. ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿಗೆ ಆಗಮಿಸಿದ ಸಿಎಂರನ್ನ ಶಾಸಕ ಇಕ್ಬಾಲ್​​ ಸ್ವಾಗತಿಸಿದರು. ಆಂಜನೇಯ ಸ್ವಾಮಿ ದೇವಸ್ಥಾನದಿಂದ ಬಸ್ ನಿಲ್ದಾಣದ ಸರ್ಕಲ್​ವರೆಗೆ ಮೆರವಣಿಗೆ ಮಾಡಿದರು.

ಮುಖ್ಯಮಂತ್ರಿ ಆಗಿದ್ದರೂ ನಾನು ನಿಮ್ಮ ಸೇವಕ: ಡಿಕೆ ಶಿವಕುಮಾರ್

ಈ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್​, ನೀವು ಗೆಲ್ಲಿಸಿದ್ದಕ್ಕೆ ನಾನು ಮುಖ್ಯಮಂತ್ರಿ ಆಗಿದ್ದೇನೆ. ಮುಖ್ಯಮಂತ್ರಿ ಆಗಿದ್ದರೂ ನಾನು ನಿಮ್ಮ ಸೇವಕ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಸಫಲವಾಗಿದ್ದೇನೆ. ನಿಮ್ಮ ಏನೇ ಸಮಸ್ಯೆ ಇದ್ದರೂ ನಮ್ಮ ಮನೆಯ ಬಾಗಿಲು ತೆರೆದಿರುತ್ತೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇನೆ ಎಂದರು. ನನ್ನ ಮೇಲೆ ವಿಶ್ವಾಸ ಇಟ್ಟು ಇಕ್ಬಾಲ್ ಹುಸೇನ್​​ರನ್ನು ಗೆಲ್ಲಿಸಿದ್ದೀರಿ. ಇಕ್ಬಾಲ್ ಹುಸೇನ್ ಹೆಸರಿಗೆ ಮಾತ್ರ, ರಾಮನಗರಕ್ಕೆ ನಾನೇ ಶಾಸಕ ಎಂದು ಹೇಳಿದ್ದಾರೆ.

ಇದನ್ನೂ ಓದಿ: CM DKS in Metro: ಮೆಟ್ರೋ ಪ್ರಯಾಣಿಕರ ಜೊತೆ ಸಿಎಂ ಡಿ.ಕೆ ಶಿವಕುಮಾರ್ ಫೋಟೋ !

ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಘೋಷಿಸಿದ್ದು ಐತಿಹಾಸಿಕ ನಿರ್ಧಾರ. ಹೆಸರು ಬದಲಾವಣೆಯಿಂದ ನಿಮ್ಮ ಭೂಮಿಯ ಬೆಲೆ ಹೆಚ್ಚಾಯಿತು. ಬೆಂಗಳೂರು ದಕ್ಷಿಣ ಜಿಲ್ಲೆ ಮಾಡೋದಕ್ಕೆ ಕೆಲವರು ವಿರೋಧಿಸಿದರು. ಜಿಲ್ಲೆಯ ಹೆಸರು ಬದಲಾವಣೆಯಿಂದ ಈಗ ಎಲ್ಲರಿಗೂ ಅರ್ಥವಾಗುತ್ತಿದೆ. ಹಾರೋಹಳ್ಳಿ ಅಭಿವೃದ್ಧಿಗೆ ಪ್ರತ್ಯೇಕ ಮೀಟಿಂಗ್ ಮಾಡುತ್ತೇನೆ. ಕನಕಪುರದಲ್ಲಿ ಶೀಘ್ರದಲ್ಲೇ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುತ್ತೇವೆ. ತುಮಕೂರು, ಬೆಂಗಳೂರು ಗ್ರಾಮಾಂತರ ಭಾಗದವರಿಗೂ ಅನುಕೂಲವಾಗುತ್ತದೆ. ಇಲ್ಲಿನ ಜನರು ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸುತ್ತೇವೆ. ಉತ್ತಮ ವಿದ್ಯಾಭ್ಯಾಸ ಇಲ್ಲೇ ದೊರಕುವಂತೆ ಮಾಡುತ್ತೇವೆ ಎಂದರು.

ದೇವರು ಅವಕಾಶ ಮಾತ್ರ ಕೊಡುತ್ತಾನೆ: ಸಿಎಂ

ಇನ್ನು ಬಿಜೆಪಿ ದೂರ ಇಡಬೇಕು ಎಂದು ಅನಿತಾ ಕುಮಾರಸ್ವಾಮಿಗೆ ಬೆಂಬಲ ನೀಡಿದ್ದೆ. ಜೆಡಿಎಸ್ ಪಕ್ಷದವರಿಗೆ ಕಾಂಗ್ರೆಸ್ ಪಕ್ಷದ ಬಾಗಿಲು ತೆಗೆದಿದೆ. ದೇವರು ವರ, ಶಾಪ ಕೊಡಲ್ಲ, ಅವಕಾಶ ಮಾತ್ರ ಕೊಡುತ್ತಾನೆ. ಮುಂದಿನ ಬಾರಿ 136 ಸೀಟ್​​ಗಿಂತಲೂ ಹೆಚ್ಚು ಬೆಂಬಲ ನೀಡಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Prashantha B

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More
Follow Us