ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣ: ಡಿಆರ್​​​ಐಗೆ ಸಿಕ್ಕ ಡಿಜಿಟಲ್ ಸಾಕ್ಷಿಯಲ್ಲಿ ಸ್ಮಗ್ಲಿಂಗ್ ರಹಸ್ಯ ಬಯಲು

| Updated By: Ganapathi Sharma

Updated on: Mar 31, 2025 | 2:59 PM

ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮೂರನೇ ಆರೋಪಿ ಸಾಹಿಲ್ ಜೈನ್ ವಿಚಾರಣೆಯಿಂದ ಹಲವು ಮಹತ್ವದ ಮಾಹಿತಿಗಳು ಬೆಳಕಿಗೆ ಬಂದಿವೆ. ಡಿಆರ್​ಐ ಅಧಿಕಾರಿಗಳು ಪಡೆದ ಡಿಜಿಟಲ್ ಸಾಕ್ಷ್ಯಗಳು ಚಿನ್ನ ಕಳ್ಳಸಾಗಣೆಯ ರಹಸ್ಯವನ್ನು ಬಯಲು ಮಾಡಿವೆ. ಸಾಹಿಲ್ ಜೈನ್ ಚಿನ್ನದ ಮಾರಾಟಕ್ಕೆ ಸಹಾಯ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ ಮತ್ತು ಹಲವು ಬಾರಿ ಚಿನ್ನ ಕಳ್ಳಸಾಗಣೆಯಲ್ಲಿ ಶಾಮೀಲಾಗಿರುವ ಬಗ್ಗೆ ಹೇಳಿಕೆ ನೀಡಿದ್ದಾನೆ ಎಂಬುದು ತಿಳಿದುಬಂದಿದೆ.

ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣ: ಡಿಆರ್​​​ಐಗೆ ಸಿಕ್ಕ ಡಿಜಿಟಲ್ ಸಾಕ್ಷಿಯಲ್ಲಿ ಸ್ಮಗ್ಲಿಂಗ್ ರಹಸ್ಯ ಬಯಲು
ರನ್ಯಾ ರಾವ್ ಹಾಗೂ ಸಾಹಿಲ್ ಜೈನ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು, ಮಾರ್ಚ್ 31: ನಟಿ ರನ್ಯಾ ರಾವ್ (Ranya Rao) ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ (Gold Smuggling) ಮೂರನೇ ಆರೋಪಿಯಾಗಿರುವ ಸಾಹಿಲ್ ಜೈನ್ (Sahil Jain) ವಿಚಾರಣೆ ವೇಳೆ ಹಲವು ಮಹತ್ವದ ವಿಚಾರಗಳು ಬೆಳಕಿಗೆ ಬಂದಿವೆ ಎಂದು ಡಿಆರ್​​​ಐ ಮೂಲಗಳು ತಿಳಿಸಿವೆ. ಡಿಆರ್​​​ಐಗೆ ಸಿಕ್ಕಿರುವ ಡಿಜಿಟಲ್ ಸಾಕ್ಷಿಯಲ್ಲಿ ಚಿನ್ನ ಕಳ್ಳಸಾಗಣೆ ರಹಸ್ಯ ಬಯಲಾಗಿದೆ. ಇಷ್ಟೇ ಅಲ್ಲದೆ, ಕಳ್ಳಸಾಗಣೆ ಮಾಡಿದ್ದ ಚಿನ್ನ ಮಾರಾಟಕ್ಕೆ ಸಹಾಯ ಮಾಡಿರುವುದಾಗಿ ಸಾಹಿಲ್ ಜೈನ್ ಒಪ್ಪಿಕೊಂಡಿದ್ದಾನೆ. ಈ ಹಿಂದೆ‌ ಹಲವು ಬಾರಿ‌ ಚಿನ್ನ ಕಳ್ಳಸಾಗಣೆಗೆ ಸಹಾಯ ಮಾಡಿದ್ದಾಗಿಯೂ ಹೇಳಿಕೆ ನೀಡಿದ್ದಾನೆ.

ಸಾಹಿಲ್ ವಾಟ್ಸ್​ಆ್ಯಪ್​ ಚಾಟ್​ನಲ್ಲಿ ದುಬೈಗೆ ಹಣ ವರ್ಗಾವಣೆ ಮಾಡಿದ್ದನ್ನು ಡಿಆರ್​ಐ ಪತ್ತೆಮಾಡಿದೆ. ಚಿನ್ನ ಮಾರಾಟ ಮಾಡಿದ್ದು ಕೂಡ ವಾಟ್ಸ್​ಆ್ಯಪ್​ ಚಾಟ್​ನಿಂದ ಬಹಿರಂಗವಾಗಿದೆ. ಮಾರ್ಚ್ 3ರಂದು ರನ್ಯಾ ರಾವ್, ದುಬೈ ನಂಬರ್​​ನಿಂದ ಸಾಹಿಲ್​ಗೆ ಕರೆ ಮಾಡಿದ್ದ ವೇಳೆ ಚಿನ್ನ ವಿಲೇವಾರಿ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದು ಪತ್ತೆಯಾಗಿದೆ.

ಮತ್ತೊಂದೆಡೆ, ಹವಾಲಾ ದಂಧೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾಗಿ ಜೈನ್ ತನಿಖಾಧಿಕಾರಿಗಳ ಬಳಿ ಹೇಳಿಕೆ ನೀಡಿದ್ದಾನೆ. ಇದರಿಂದಾಗಿ, ದುಬೈನಲ್ಲಿ ಚಿನ್ನ ಖರೀದಿಗೆ ಹವಾಲಾ ಮೂಲಕ ಹಣ ನೀಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸದ್ಯ, ಡಿಆರ್​​ಐ ಅಧಿಕಾರಿಗಳು ಸಾಹಿಲ್ ಜೈನ್ ವಿಚಾರಣೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ
ರಂಜಾನ್​ ಹಬ್ಬ: ಮಾ.31 ರಂದು ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ
ಬೆಂಗಳೂರಿನ ಆ ಸ್ಥಳದಲ್ಲಿ ಸ್ಫೋಟಕ ಇಡಲು ಪ್ಲಾನ್: ಬಾಯ್ಬಿಟ್ಟ ಅಬ್ದುಲ್
ಬ್ರಿಟಿಷ್ ಕಾಲದ ಟೋಪಿಗೆ ನಿವೃತ್ತಿ: ಪೊಲೀಸರ ತಲೆ ಮೇಲೆ ಸ್ಮಾರ್ಟ್​ ಹ್ಯಾಟ್​
ರನ್ಯಾ ಗೋಲ್ಡ್ ಸ್ಮಗ್ಲಿಂಗ್: ಬಳ್ಳಾರಿ ಜ್ಯುವೆಲ್ಲರಿ ಅಂಗಡಿ ಮಾಲೀಕ ಬಂಧನ

ಯಾರು ಈ ಸಾಹಿಲ್ ಜೈನ್?

ಬಳ್ಳಾರಿ ಮೂಲದ ಸಾಹಿಲ್ ಜೈನ್ ಜ್ಯುವೆಲ್ಲರಿ ಅಂಗಡಿ ಮಾಲೀಕ. ಮಹೇಂದ್ರ ಜೈನ್‌ ಎಂಬ ಬಟ್ಟೆ ವ್ಯಾಪಾರಿಯ ಮಗನಾಗಿರುವ ಸಾಹಿಲ್, ಆರಂಭದಲ್ಲಿ ಸೋದರ ಮಾವನ ಜೊತೆ ಮುಂಬೈನಲ್ಲಿ ವಾಸವಿದ್ದ. ನಂತರ ಚಿನ್ನದ ಉದ್ಯಮ ಆರಂಭಿಸಿದ್ದ. ಆ ಸಂದರ್ಭದಲ್ಲಿ ಸ್ಮಗ್ಲಿಂಗ್ ಪ್ರಕರಣವೊಂದರಲ್ಲಿ ಆತನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದರು. ನಂತರ ಪ್ರಕರಣದಿಂದ ಬಚಾವಾಗಿದ್ದ ಸಾಹಿಲ್ ಜೈನ್ ಇದೀಗ ರನ್ಯಾ ಪ್ರಕರಣದಲ್ಲೂ ಚಿನ್ನ ಮಾರಾಟಕ್ಕೆ ಸಹಾಯ ಮಾಡಿರುವ ಆರೋಪ ಕೇಳಿಬಂದಿತ್ತು. ಹೀಗಾಗಿ ಆತನನ್ನು ಡಿಆರ್​ಐ ಅಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸದ್ಯ ಸಾಹಿಲ್ ಡಿಆರ್​​ಐ ಕಸ್ಟಡಿಯಲ್ಲಿದ್ದಾನೆ.

ಇದನ್ನೂ ಓದಿ: ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್‌: ಬಳ್ಳಾರಿ ಜ್ಯುವೆಲ್ಲರಿ ಅಂಗಡಿ ಮಾಲೀಕ, ಉದ್ಯಮಿ ಸಾಹಿಲ್ ಜೈನ್ ಬಂಧನ

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ರಾವ್ ಮೊದಲ ಆರೋಪಿಯಾಗಿದ್ದರೆ, ಆಕೆಯ ಮಾಜಿ ಬಾಯ್‌ಫ್ರೆಂಡ್ ತರುಣ್‌ ರಾಜ್ ಎರಡನೇ ಆರೋಪಿಯಾಗಿದ್ದಾನೆ. ಸಾಹಿಲ್ ಜೈನ್ ಮೂರನೇ ಆರೋಪಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ