ರವಿಶಂಕರ ಗುರೂಜಿಗೆ 2025ರ ವರ್ಲ್ಡ್ ಲೀಡರ್ ಫಾರ್ ಪೀಸ್ ಆಂಡ್ ಸೆಕ್ಯೂರಿಟಿ ಪ್ರಶಸ್ತಿ
ರವಿಶಂಕರ ಗುರೂಜಿಯವರಿಗೆ 2025ರ ವರ್ಲ್ಡ್ ಲೀಡರ್ ಫಾರ್ ಪೀಸ್ ಆಂಡ್ ಸೆಕ್ಯೂರಿಟಿ ಪ್ರಶಸ್ತಿ ಲಭಿಸಿದೆ. ಬೋಸ್ಟನ್ ಗ್ಲೋಬಲ್ ಫೋರಂ (BGF) ಮತ್ತು ಎಐ ವರ್ಲ್ಡ್ ಸೊಸೈಟಿ (AIWS) ಈ ಗೌರವವನ್ನು ನೀಡಿದೆ. ಜಾಗತಿಕ ಶಾಂತಿ, ಸಮನ್ವಯತೆ ಮತ್ತು ಮಾನವೀಯ ನಾಯಕತ್ವಕ್ಕಾಗಿ ಗುರೂಜಿ ನೀಡಿದ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಬೆಂಗಳೂರು, ನವೆಂಬರ್ 04: ಬೋಸ್ಟನ್ ಗ್ಲೋಬಲ್ ಫೋರಂ (BGF) ಮತ್ತು ಎಐ ವರ್ಲ್ಡ್ ಸೊಸೈಟಿ (AIWS) ವತಿಯಿಂದ 2025ರ ವರ್ಲ್ಡ್ ಲೀಡರ್ ಫಾರ್ ಪೀಸ್ ಆಂಡ್ ಸೆಕ್ಯೂರಿಟಿ ಪ್ರಶಸ್ತಿಯನ್ನು ರವಿಶಂಕರ ಗುರೂಜಿ ಅವರಿಗೆ ನೀಡಿ ಗೌರವಿಸಲಾಗಿದೆ. ಜಾಗತಿಕ ಶಾಂತಿಸ್ಥಾಪನೆಗಾಗಿ, ಸಮನ್ವಯತೆಗಾಗಿ ಮತ್ತು ಮಾನವತ್ವದ ನಾಯಕತ್ವಕ್ಕಾಗಿ ಗುರೂಜಿ ನೀಡಿದ ಕೊಡುಗೆ ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
2015ರಿಂದ ಆರಂಭವಾಗಿರುವ ಈ ಪ್ರಶಸ್ತಿಯನ್ನು ಜಾಗತಿಕ ಶಾಂತಿ ಮತ್ತು ನೈತಿಕ ಪ್ರಗತಿಯನ್ನು ಮುನ್ನಡೆಸುವಲ್ಲಿ ನೈತಿಕ ಧೈರ್ಯ, ದೂರದೃಷ್ಟಿಯ ಆಡಳಿತ ಮತ್ತು ಸಹಾನುಭೂತಿಯನ್ನು ಸಾಕಾರಗೊಳಿಸುವ ಜಾಗತಿಕ ನಾಯಕರಿಗೆ ಮಾತ್ರ ವಿಶೇಷ ಗೌರವವನ್ನು ನೀಡುವ ಸಲುವಾಗಿ ನೀಡಲಾಗುತ್ತೆ. 2015ರಲ್ಲಿ ಅಬೆ (ಜಪಾನ್) ಮತ್ತು ಆಂಜೆಲ ಮರ್ಕಲ್ (ಜರ್ಮನಿ), 2016ರಲ್ಲಿ ಯುಎನ್ ನ ಮಾಜಿ ಸೆಕ್ರೆಟರಿ ಜೆನರಲ್ ಬನ್ ಕೀ ಮೂನ್, 2018ರಲ್ಲಿ ಸೌಲಿ ನೀನಿಸ್ತೋ (ಫಿನ್ಲಾಂಡ್), 2022ರಲ್ಲಿ ವೊಲೋದಿಮರ್ ಝೆಲೆನ್ಸ್ಕಿ ಮತ್ತು ಯೂಕ್ರೇನ್ನ ಜನತೆಗೆ ಮತ್ತು 2024 ರಲ್ಲಿ ಇಮ್ಮಾನ್ಯುಯೆಲ್ ಮಾಕ್ರಾನ್ (ಫ್ರಾನ್ಸ್) ಈ ಪ್ರಶಸ್ತಿಗೆ ಭಾಜನರಾಗಿದ್ದರು.
ಇದನ್ನೂ ಓದಿ: ಜೂನ್ 16ನ್ನು ಶ್ರೀ ಶ್ರೀ ರವಿಶಂಕರ್ ಶಾಂತಿ, ಸ್ವಾಸ್ಥ್ಯ ದಿನವನ್ನಾಗಿ ಘೋಷಿಸಿದ ಫ್ಲೋರಿಡಾದ ಜಾಕ್ಸನ್ವಿಲ್ಲೆ
ರವಿಶಂಕರ ಗುರೂಜಿ ಅವರಿಗೆ ನೀಡಲಾಗಿರುವ ಈ ಮನ್ನಣೆಯು, ಜಾಗತಿಕ ವೇದಿಕೆಯಲ್ಲಿ ಭಾರತದ ‘ವಿಶ್ವಗುರು’ ಪಾತ್ರವನ್ನು ಎತ್ತಿಹಿಡಿದಿದೆ. ಪ್ರಾಚೀನ ಜ್ಞಾನವು ಆಧುನಿಕ ನೈತಿಕತೆ ಹಾಗೂ ಆಡಳಿತದ ಮೇಲೆ ಈಗಲೂ ತನ್ನ ಪ್ರಭಾವವನ್ನು ಬೀರುತ್ತಿರುವುದನ್ನ ಸ್ಪಷ್ಟಪಡಿಸಿದೆ. ಶಾಂತಿ ಮತ್ತು ಸಮನ್ವಯತೆಗಾಗಿ 180+ ದೇಶಗಳಲ್ಲಿ ಗುರೂಜಿ ಬೀರಿರುವ ಮಾನವೀಯ ಪ್ರಭಾವಕ್ಕಾಗಿ ಮತ್ತು ಕೃತಕ ಬುದ್ಧಿಮತ್ತೆ, ಡಿಜಿಟಲ್ ಪರಿವರ್ತನೆಯ ಯುಗದಲ್ಲಿ ಅವರು ನೀಡಿರುವ ನೈತಿಕ ಮಾರ್ಗದರ್ಶನಕ್ಕಾಗಿ ಬಿಜಿಎಫ್ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಯಾವ ಪೂರ್ವೋದ್ದೇಶ ಅಥವಾ ಪಕ್ಷಪಾತ ಹೊಂದಿರದಂತಹ ವ್ಯಕ್ತಿ ಎಂದು ರವಿಶಂಕರ ಗುರೂಜಿ ಅವರನ್ನು ಫೋರಂ ಬಣ್ಣಿಸಿದೆ. ಸಂಘರ್ಷ-ಪೀಡಿತ ಪ್ರದೇಶಗಳಲ್ಲಿ ಅವರು ನಿರ್ವಹಿಸಿದ ಪಾತ್ರ – ಕೊಲಂಬಿಯಾ (ಇಲ್ಲಿ ಗುರೂಜಿ ಮಧ್ಯಸ್ಥಿಕೆ ವಹಿಸಿ, 52 ವರ್ಷಗಳಿಂದ ಫಾರ್ಕ್ ಹಾಗೂ ಕೊಲಂಬಿಯಾ ಸರ್ಕಾರದ ನಡುವೆ ನಡೆಯುತ್ತಿದ್ದ ಸಶಸ್ತ್ರ ಕದನವನ್ನು ಅಂತ್ಯಗೊಳಿಸಿದರು), ಇರಾಕ್, ಶ್ರೀಲಂಕಾ, ಮಯಾನ್ಮಾರ್, ವೆನಿಜುವೆಲ್ಲಾ ಮತ್ತು ಕಾಶ್ಮೀರದಲ್ಲಿ ಅವರು ನಿರ್ವಹಿಸಿದ ಪಾತ್ರ ಅವರ ಪ್ರಾಯೋಗಿಕ ಮತ್ತು ಕರುಣಾಮಯ ವಿಧಾನಕ್ಕೆ ಉದಾಹರಣೆಗಳಾಗಿವೆ. ಪ್ರಶಸ್ತಿ ಸ್ವೀಕರಿಸಿದ ರವಿಶಂಕರ ಗುರೂಜಿ, ಜಾಗತಿಕ ಆಡಳಿತದಲ್ಲಿ ಆಧ್ಯಾತ್ಮಿಕ ಹಾಗೂ ಶಾಂತಿ ಶಿಕ್ಷಣವನ್ನೂ ಅಳವಡಿಸಬೇಕೆಂಬುದರ ಬಗ್ಗೆ ಒತ್ತಾಯಿಸಿದ್ದಾರೆ. ಶಾಂತಿಯು ಮಾತುಗಳಿಂದ ಬರಲು ಸಾಧ್ಯವಿಲ್ಲ. ಅದನ್ನು ಕಾರ್ಯರೂಪಕ್ಕೆ ತರಬೇಕು. ಭದ್ರತೆಗಾಗಿ ಬಹಳಷ್ಟು ಮಾಡುತ್ತೇವೆ. ಆದರೆ ಶಾಂತಿಯ ಮೇಲೆ ಬಹಳ ಕಡಿಮೆ ಗಮನವನ್ನು ಕೊಡುತ್ತೇವೆ. ಶಾಂತಿ ಸ್ಥಾಪನೆ ಅವಶ್ಯಕ. ಒತ್ತಡಮುಕ್ತ, ಹಿಂಸಾಮುಕ್ತ ಜಗತ್ತಿನ ಕನಸನ್ನು ಕಾಣೋಣ ಎಂದಿದ್ದಾರೆ.
1981ರಲ್ಲಿ ಸ್ಥಾಪನೆಯಾದ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಮೂಲಕ ರವಿಶಂಕರ ಗುರೂಜಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ. ಒತ್ತಡವನ್ನು ಕಡಿಮೆ ಮಾಡುವ ಮತ್ತು ಭಾವನಾತ್ಮಕ ಸಹಿಷ್ಣುತೆಯನ್ನು ಬೆಳೆಸುವ ಸ್ಕೈ ಬ್ರೆತ್ ಮೆಡಿಟೇಶನ್ (ಸುದರ್ಶನ ಕ್ರಿಯಾ) ನಂತಹ ಪ್ರಾಯೋಗಿಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಸಂಘರ್ಷ ವಲಯಗಳಲ್ಲಿ ಶಾಂತಿ ಪ್ರಕ್ರಿಯೆಗಳಿಗೆ ಮಧ್ಯಸ್ಥಿಕೆ, ಧ್ಯಾನ ಕಾರ್ಯಕ್ರಮಗಳ ಮೂಲಕ 8 ಲಕ್ಷಕ್ಕೂ ಹೆಚ್ಚು ಕೈದಿಗಳಿಗೆ ಪುನರ್ವಸತಿ, ಪರಿಸರ ಯೋಜನೆಗಳ ಮೂಲಕ 70ಕ್ಕೂ ಹೆಚ್ಚು ನದಿಗಳು ಮತ್ತು ಸಾವಿರಾರು ಜಲಮೂಲಗಳನ್ನು ಪುನರುಜ್ಜೀವನ, ಭಾರತದ 1,300 ಶಾಲೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಸವಲತ್ತು ರಹಿತ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಪೋಷಣೆಯನ್ನು ನೀಡುವ ಮಹತ್ತರ ಕಾರ್ಯ ಮಾಡಿದ್ದಾರೆ. ಇತ್ತೀಚೆಗೆ ಗುರೂಜಿ ಕೈಗೊಂಡ ಉತ್ತರ ಅಮೆರಿಕದ ಪ್ರವಾಸ ಸಂದರ್ಭದಲ್ಲಿ ವ್ಯಾಂಕೂವರ್, ಸಿಯಾಟಲ್ ಮತ್ತು ಪೋರ್ಟ್ಲ್ಯಾಂಡ್ ನಗರಗಳು ‘ಗುರುದೇವ್ ಶ್ರೀ ಶ್ರೀ ರವಿ ಶಂಕರ್ ದಿವಸ’ ಎಂದು ಅಧಿಕೃತವಾಗಿ ಘೋಷಿಸುವ ಮೂಲಕ ಅವರನ್ನು ಗೌರವಿಸಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:36 pm, Tue, 4 November 25




