
ಬೆಂಗಳೂರು: ಕಮಲ ಪಾಳಯದ ಒಳಗೊಳಗೇ ಮತ್ತೊಂದು ಸುತ್ತಿನ ಫೈಟ್ ಶುರುವಾಗಿದೆ. ವಲಸೆ ಹಕ್ಕಿಗಳ ದಿಢೀರ್ ಸಭೆ ಇದೀಗ ಕುತೂಹಲ ಕೆರಳಿಸಿದ್ದು, ದೆಹಲಿಗೆ ತೆರಳಿರುವ ಸಾಹುಕಾರ್ ವಿರುದ್ಧ ಮಿತ್ರ ಮಂಡಳಿಯಲ್ಲೇ ಆಕ್ರೋಶ ಮೊಳಗಿದೆ.
ಬಿಜೆಪಿ ಪಕ್ಷ ಹಾಗೂ ರಾಜ್ಯ ಸರ್ಕಾರದಲ್ಲಿ ದಿಢೀರ್ ಬೆಳವಣಿಗೆಗಳು ಶುರುವಾಗಿವೆ. ನಾಯಕತ್ವ ಬದಲಾವಣೆ ಕೂಗು ಏಳ್ತಿದ್ದಂತೆ ಸಿಎಂ ಯಡಿಯೂರಪ್ಪ ಒಂದಷ್ಟು ರಣತಂತ್ರ ಹೆಣೆದು ತಾವೇ ಪ್ರಶ್ನಾತೀತ ನಾಯಕರೆಂಬ ಸಂದೇಶ ರವಾನಿಸಿದ್ರು. ಪವರ್ ಕಿಂಚಿತ್ತೂ ಕಡಿಮೆಯಾಗಿಲ್ಲ ಅಂತ ಸಿಎಂ ಬಿಎಸ್ವೈ ಬಾಣದ ಮೇಲೆ ಬಾಣ ಹೂಡಿ ಎಲ್ಲರನ್ನು ಚಕಿತರನ್ನಾಗಿಸಿದ್ರು.
ನಿಗಮ ಮಂಡಳಿ ನೇಮಕಾತಿಯಿಂದ ಹಿಡಿದು ಹೊಸ ಜಿಲ್ಲೆಗಳ ರಚನೆಯವರೆಗೆ ಸಿಎಂ ಹೂಡಿದ ಬಾಣ ಕರೆಕ್ಟಾಗಿಯೇ ನೆಟ್ಟಿದೆ. ಆದರೆ ಇದರ ಬೆನ್ನಲ್ಲೇ ವಲಸಿಗರ ಹೆಣೆದ ಮತ್ತೊಂದು ತಂತ್ರಗಾರಿಕೆ ಯಾರಿಗೆ ಲಾಭ, ಹಾಗೂ ಯಾರಿಗೆ ನಷ್ಟ ಅನ್ನೋ ಕುತೂಹಲವನ್ನ ಹುಟ್ಟು ಹಾಕಿದೆ.
ಮತ್ತೊಂದು ಸುತ್ತಿನ ಬೆಳವಣಿಗೆಗೆ ಕಾರಣವಾಯ್ತು ಡಿನ್ನರ್ ಮೀಟಿಂಗ್..!
ಬರುವಾಗ ಒಗ್ಗಟ್ಟಾಗಿ ಬಂದ ವಲಸಿಗ ಶಾಸಕರ ನಡುವೆ ಈಗ್ಯಾಕೋ ಎಲ್ಲವೂ ಸರಿಯಿಲ್ಲವೇನೋ ಎಂಬಂತಹ ವಾತಾವರಣ ಮೂಡಿದೆ. ಅದರಲ್ಲೂ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ನಡೆದುಕೊಳ್ತಿರೋ ರೀತಿ, ಆಗಾಗ್ಗೆ ದೆಹಲಿಗೆ ಹೋಗಿ ಮಾಡ್ತಿರೋ ವರ್ಕೌಟ್, ವಲಸಿಗನಾದ್ರೂ ಶಕ್ತಿಕೇಂದ್ರ ಎಂಬಂತೆ ಬಿಂಬಿಸಿಕೊಳ್ತಿರುವುದು ಮಿತ್ರಮಂಡಳಿ ಸದಸ್ಯರನ್ನು ರೊಚ್ಚಿಗೆಬ್ಬಿಸಿದೆ.
ಹೀಗಾಗಿ ಪಕ್ಷದೊಳಗಿನ ಮೂಲ ಬಿಜೆಪಿಗರಿಗೂ, ಅತ್ತ ಜಾರಕಿಹೊಳಿಗೂ ಪರೋಕ್ಷ ಸಂದೇಶ ಕೊಡಲು ವಲಸಿಗ ಶಾಸಕರು, ಸಚಿವರ ಮಿತ್ರಮಂಡಳಿ ನಿನ್ನೆ ಡಿನ್ನರ್ ಮೀಟಿಂಗ್ ಅನ್ನ ನಡೆಸಿದೆ. ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ನಡೆದ ಮೀಟಿಂಗ್ನಲ್ಲಿ ಸಚಿವ ಎಸ್.ಟಿ. ಸೋಮಶೇಖರ್, ಗೋಪಾಲಯ್ಯ, ಭೈರತಿ ಬಸವರಾಜ್, ಬಿ.ಸಿ. ಪಾಟೀಲ್, ಆನಂದ್ ಸಿಂಗ್, ಎಂಟಿಬಿ ನಾಗರಾಜ್, ಸಚಿವ ಹೆಚ್. ನಾಗೇಶ್, ಆರ್. ಶಂಕರ್, ವಿಶ್ವನಾಥ್, ಶಿವರಾಂ ಹೆಬ್ಬಾರ್, ನಾರಾಯಣಗೌಡ ಭಾಗಿಯಾಗಿದ್ರು.
ಡಿನ್ನರ್ ಮೀಟಿಂಗ್ ಬರೀ ಊಟಕ್ಕೆ ಸೀಮಿತವಾಗಲಿಲ್ಲ. ಬದಲಾಗಿ ಡಿನ್ನರ್ ಜೊತೆ ಟೇಬಲ್ನಲ್ಲಿ ಕೂತ ವಲಸಿಗ ಮಿತ್ರ ಮಂಡಳಿ ಒಂದಷ್ಟು ನಿರ್ಣಯ ತೆಗೆದುಕೊಂಡಿದೆ. ಹಾಗಾದ್ರೆ ಮಿತ್ರಮಂಡಳಿಯ ಡಿನ್ನರ್ ಮೀಟಿಂಗ್ನ ಹೈಲೈಟ್ಸ್ ನೋಡೋದಾದ್ರೆ.
ಒಗ್ಗಟ್ಟಿನಲ್ಲಿ ಬಲವಿದೆ..!
ವಲಸಿಗ ಸಚಿವರು ಹಾಗೂ ಶಾಸಕರಿಂದ ಪಕ್ಷಕ್ಕೆ ಪರೋಕ್ಷ ಸಂದೇಶ ರವಾನಿಸುವ ಪ್ರಯತ್ನ ನಡೆದಿದೆ. ಹಾಗೇ ಸರ್ಕಾರ ರಚನೆಯಾಗಿದ್ದು ಎಲ್ಲಾ 17 ಮಂದಿ ಶಾಸಕರಿಂದಲೇ ಎಂಬ ಸಂದೇಶವೂ ಹೊರಹೊಮ್ಮಿದೆ. ಕೇವಲ ರಮೇಶ್ ಜಾರಕಿಹೊಳಿ ಮಾತ್ರ ನಮ್ಮ ನಾಯಕರಲ್ಲ ಎಂಬುದನ್ನು ಮಿತ್ರಮಂಡಳಿ ಸಾಬೀತುಪಡಿಸಿದೆ. ಹಾಗೂ ಎಲ್ಲಾ ಸಂದರ್ಭದಲ್ಲೂ ಸಿಎಂ ಯಡಿಯೂರಪ್ಪ ಬೆಂಬಲಕ್ಕೆ ನಿಲ್ಲಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ.
ಸರ್ಕಾರ ರಚನೆಗೆ ಕಾರಣರಾದ ಎಲ್ಲರಿಗೂ ಮಂತ್ರಿಗಿರಿ ಸಿಗಬೇಕು. ರಮೇಶ್ ಜಾರಕಿಹೊಳಿ ಪಾತ್ರದಷ್ಟೇ ಉಳಿದವರ ಶ್ರಮ ಕೂಡ ಇದೆ. ಈ ಒತ್ತಡ ತಂತ್ರದ ಭಾಗವಾಗಿಯೇ ಸಿಎಂ ಭೇಟಿ ಮಾಡಲು ಸಿದ್ಧತೆ ಕೂಡ ನಡೆದಿದೆ. ಅಗತ್ಯವಿದ್ರೆ ಎಲ್ಲಾ 17 ಜನರೂ ಸಿಎಂ ಭೇಟಿ ಮಾಡಬೇಕಿದೆ ಎಂದು ಮಿತ್ರಮಂಡಳಿ ನಿರ್ಣಯ ಕೈಗೊಂಡಿದೆ. ನಿನ್ನೆ ನಡೆದ ಅನೌಪಚಾರಿಕ ಚರ್ಚೆಯ ವೇಳೆ ಇಷ್ಟೂ ನಿರ್ಧಾರಗಳನ್ನು ವಲಸಿಗ ಶಾಸಕರು ಹಾಗೂ ಸಚಿವರು ಕೈಗೊಂಡಿದ್ದಾರೆ.
ಒಟ್ಟಾರೆ ಹೇಳುವುದಾದರೆ ಇದಿಷ್ಟೂ ಬೆಳವಣಿಗೆಗಳು ಕೇವಲ ಡಿನ್ನರ್ಗೆ ಮಾತ್ರ ಸೀಮಿತವಾಗುವಂತೆ ಕಾಣ್ತಿಲ್ಲ. ಡಿನ್ನರ್ ಮೀರಿ ಬಿಜೆಪಿಯೊಳಗೆ ಒಂದಿಷ್ಟು ಬೆಳವಣಿಗೆಗಳಿಗೆ ಇದೇ ಡಿನ್ನರ್ ಮೀಟಿಂಗ್ ನಾಂದಿ ಹಾಡುವಂತೆ ಕಾಣ್ತಿದೆ. ರಮೇಶ್ ಜಾರಕಿಹೊಳಿ ಇದೆಲ್ಲವನ್ನ ಹೇಗೆ ನಿಭಾಯಿಸ್ತಾರೆ ಅನ್ನೋದೇ ಈಗ ಕುತೂಹಲ ಮೂಡಿಸುತ್ತಿರುವ ಸಂಗತಿ.
ಇದನ್ನೂ ಓದಿ: ನನ್ನ ಹಣೆಬರಹ ಕೆಟ್ಟಿರಬೇಕು.. ಅದಕ್ಕೆ ಮಂತ್ರಿಯಾಗಿಲ್ಲ -MTB ನಾಗರಾಜ್ ಮನದಾಳದ ನೋವು
Published On - 7:42 am, Sat, 28 November 20