ನೋಟಿಸ್​ ಕೊಟ್ಟರೂ ತಣ್ಣಗಾದದ ಕಿಚ್ಚು: ಯತ್ನಾಳ್​ಗೆ ಎರಡಲ್ಲಿ ಒಂದಾಗಬೇಕೆಂದು ಪಟ್ಟು

ಕರ್ನಾಟಕ ಬಿಜೆಪಿಯಲ್ಲಿ‌ನ ಕಿತ್ತಾಟ ಈಗ ಶೋಕಾಸ್ ನೋಟೀಸ್ ಹಂತದವರೆಗೂ ತಲುಪಿದೆ. ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ನೋಟೀಸ್ ನೀಡಿದ್ದು, ಇದಕ್ಕೆ ಯತ್ನಾಳ್ ಸಹ ನನ್ನ ಉತ್ತರ ರೆಡಿ ಇದೆ ಎಂದಿದ್ದಾರೆ. ಇದರ ಮಧ್ಯ ಇತ್ತ ಜಿಲ್ಲಾಧ್ಯಕ್ಷರ ಸಭೆ ನಡೆದಿದ್ದು, ಯತ್ನಾಳ್​ ವಿಚಾರದಲ್ಲಿ ಎರಡರಲ್ಲಿ ಒಂದು ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ.

ನೋಟಿಸ್​ ಕೊಟ್ಟರೂ ತಣ್ಣಗಾದದ ಕಿಚ್ಚು: ಯತ್ನಾಳ್​ಗೆ ಎರಡಲ್ಲಿ ಒಂದಾಗಬೇಕೆಂದು ಪಟ್ಟು

Updated on: Dec 02, 2024 | 10:19 PM

ಬೆಂಗಳೂರು, (ಡಿಸೆಂಬರ್ 02): ಕರ್ನಾಟಕ ಬಿಜೆಪಿ ಅಂತರ್ಯುದ್ಧ ಮತ್ತೊಂದು ಹಂತಕ್ಕೆ ಹೊರಳಿದೆ. ಹೋದಲ್ಲಿ ಬಂದಲ್ಲಿ ರಾಜ್ಯ ನಾಯಕತ್ವದ ವಿರುದ್ಧ ಹರಿ ಹಾಯುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟೀಸ್ ನೀಡಿದೆ. ಹತ್ತು ದಿನಗಳ ಒಳಗಾಗಿ ಉತ್ತರಿಸಬೇಕಿರುವ ನೋಟೀಸ್ ಗೆ ನನ್ನ ಬಳಿ ಉತ್ತರ ರೆಡಿ ಇದ್ದು, ಬಿಜೆಪಿ‌ಯ ವಸ್ತು ಸ್ಥಿತಿಯನ್ನೇ ವಿವರಿಸುತ್ತೇನೆ ಎಂದು ಖಡಕ್​ ಆಗಿ ಪ್ರತಿಕ್ರಿಯಿಸಿದ್ದಾರೆ. ಇದರ ಮಧ್ಯ ಇತ್ತ ಬಿಜೆಪಿಯ ಜಿಲ್ಲಾಧ್ಯಕ್ಷರುಗಳು ಬೆಂಗಳೂರಿನಲ್ಲಿ ಸಭೆ ಸೇರಿ ಯತ್ನಾಳ್ ವಿರುದ್ಧ ಕ್ರಮ ಆಗಲೇಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರುವ ಕುರಿತಾಗಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಯತ್ನಾಳ್ ಗೆ ಕೇವಲ ಶೋಕಾಸ್ ನೋಟೀಸ್ ನೀಡಿ ಉತ್ತರ ಪಡೆದು ಹೈಕಮಾಂಡ್ ಸುಮ್ಮನಾಗಬಹುದು ಎಂಬ ಅನುಮಾನ ವಿಜಯೇಂದ್ರ‌ ಆಪ್ತರಲ್ಲಿ ಮನೆ ಮಾಡಿದೆ. ಶೋಕಾಸ್ ನೋಟೀಸ್ ವಿಚಾರದಲ್ಲಿ ಬೆಳಗಾವಿ ಅಧಿವೇಶನದಲ್ಲಿ ಸದನದಲ್ಲೇ ಯತ್ನಾಳ್, ಬಿಜೆಪಿಗೆ ಮುಜುಗರ ಉಂಟು ಮಾಡುವ ಎಲ್ಲಾ ಸಾಧ್ಯತೆಗಳೂ ಇವೆ. ಹೀಗಾಗಿ ಯತ್ನಾಳ್ ಗೆ ಕೇವಲ ನೋಟೀಸ್ ಕೊಡದೇ ಪಕ್ಷದಿಂದಲೇ ಉಚ್ಚಾಟನೆ ಮಾಡಬೇಕು ಎಂಬ ಒತ್ತಾಯವನ್ನು ವಿಜಯೇಂದ್ರ‌ ನಿಷ್ಠರು ಶುರು ಮಾಡಿದ್ದಾರೆ.

ಇದನ್ನೂ ಓದಿ: ಹೈಕಮಾಂಡ್ ವಿಜಯೇಂದ್ರ ಪರವೂ ಇಲ್ಲ..ಯತ್ನಾಳ್‌ ವಿರುದ್ಧವೂ ಇಲ್ಲ: ನೊಟೀಸ್​ಗೆ ಸೀಮಿತವಾಗುತ್ತಾ ಕ್ರಮ?

ವಿಜಯೇಂದ್ರ ಬೆನ್ನಿಗೆ ನಿಲ್ಲಲು ಪರೋಕ್ಷ ಸಂದೇಶ ರವಾನೆ

ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ತಾರಕಕ್ಕೇರಿರುವ ಬೆನ್ನಲ್ಲೇ ಡಿಸೆಂಬರ್ 3ರಂದು ಮಹತ್ವದ ಕೋರ್ ಕಮಿಟಿ ಸಭೆ ನಡೆಯಲಿದೆ. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಈ ಸಭೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರು ಭಾಗವಹಿಸಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಸೇರಿದಂತೆ ಮತ್ತಿತರರು ಭಾಗಿಯಾಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆಯ ಸಭೆಯಲ್ಲಿ ಮಂಡಿಸಬೇಕಾದ ವಿಚಾರಗಳ ಬಗ್ಗೆ ಜಿಲ್ಲಾಧ್ಯಕ್ಷರ ಸಭೆ ನಡೆದಿದ್ದು, ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಈ ಮೂಲಕ ಸಭೆಯಲ್ಲಿ ಪರೋಕ್ಷವಾಗಿ ಬಿವೈ ವಿಜಯೇಂದ್ರ ಅವರ ಬೆನ್ನಿಗೆ ನಿಲ್ಲುವ ಸಂದೇಶವನ್ನು ರವಾನಿಸಲಾಗಿದೆ.

ನಾಳೆ ಎರಡರಲ್ಲಿ ಒಂದು ಆಗಬೇಕು

ಇನ್ನು ಜಿಲ್ಲಾಧ್ಯಕ್ಷರ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬೆಂಗಳೂರು ದಕ್ಷಿಣ ಜಿಲ್ಲಾ BJP ಅಧ್ಯಕ್ಷ ಸಿ.ಕೆ.ರಾಮಮೂರ್ತಿ, ಶಾಸಕ ಯತ್ನಾಳ್​ ವಿರುದ್ಧ ಕ್ರಮ ಅಥವಾ ಉಚ್ಚಾಟನೆ ಮಾಡಬೇಕು. ನಾಳೆ ಸಭೆಗೂ ಮುನ್ನ ತರುಣ್ ಚುಗ್​ಗೆ ಮನವಿ ಪತ್ರ ಕೊಡುತ್ತೇವೆ. ಶಾಸಕ ಬಸನಗೌಡ ಯತ್ನಾಳ್​ ವಿರುದ್ಧ ಕ್ರಮಕ್ಕೆ ಮನವಿ ಮಾಡುತ್ತೇವೆ. ನಾಳೆ ಎರಡರಲ್ಲಿ ಒಂದು ಆಗಬೇಕು ಎಂದರು.

ಮುಲಾಜಿಲ್ಲದೇ ಯತ್ನಾಳ್​ರನ್ನು ಬಿಜೆಪಿಯಿಂದ ಹೊರಹಾಕಬೇಕು. ಮಾಜಿ ಸಿಎಂಗಳಾದ B.S​.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ನಳಿನ್​ಕುಮಾರ್​ ಕಟೀಲು, ಕೇಂದ್ರ ಸಚಿವೆ ಶೋಭಾ ಸೇರಿ ಎಲ್ಲರಿಗೂ ಯತ್ನಾಳ್​ ಬೈಯ್ಯುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಬೈದರೆ ಜಿಲ್ಲಾಧ್ಯಕ್ಷರಿಗೂ ಕೂಡ ಬೈಯ್ದಂತೆ. ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಪಕ್ಷಕ್ಕಿಂತ ದೊಡ್ಡವರಾ? ಪಕ್ಷ ತಾಯಿ ಇದ್ದಂತೆ, ಆ ತಾಯಿಗೆ ಅವಮಾನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:04 pm, Mon, 2 December 24

Loading...
Unable to load recommendations.
Follow Us