ಪರಪ್ಪನ ಅಗ್ರಹಾರದಲ್ಲಿ ರೌಡಿಗಳಿಗೆ, ಉಗ್ರರಿಗೆ ರಾಜಾತಿಥ್ಯ: ಗೃಹ ಇಲಾಖೆ ಸತ್ತು ಹೋಗಿದೆ; ಸರ್ಕಾರದ ವಿರುದ್ಧ ಅಶೋಕ್ ವಾಗ್ದಾಳಿ

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್​​​ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ, ಭಯೋತ್ಪಾದಕರಿಗೆ ಮೊಬೈಲ್ ಬಳಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ರಸ್ತೆ ಗುಂಡಿ, ವೋಟ್ ಚೋರಿ ವಿಚಾರವಾಗಿಯೂ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ ರೌಡಿಗಳಿಗೆ, ಉಗ್ರರಿಗೆ ರಾಜಾತಿಥ್ಯ: ಗೃಹ ಇಲಾಖೆ ಸತ್ತು ಹೋಗಿದೆ; ಸರ್ಕಾರದ ವಿರುದ್ಧ ಅಶೋಕ್ ವಾಗ್ದಾಳಿ
ವಿಪಕ್ಷ ನಾಯಕ ಆರ್.ಅಶೋಕ್
Updated By: ಗಂಗಾಧರ​ ಬ. ಸಾಬೋಜಿ

Updated on: Nov 08, 2025 | 3:14 PM

ಬೆಂಗಳೂರು, ನವೆಂಬರ್​ 08: ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು (parappana agrahar ajail) ಅಪರಾಧಿಗಳ ಪಾಲಿನ ಸ್ವರ್ಗ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ನಟೋರಿಯಸ್ ಕ್ರಿಮಿನಲ್ ಉಮೇಶ್ ರೆಡ್ಡಿ ಮತ್ತು ಲಷ್ಕರ್ ಉಗ್ರ ಮೊಬೈಲ್ ಬಳಸುತ್ತಿರುವ ವಿಡಿಯೋಗಳು ಬೆಳಕಿಗೆ ಬಂದಿವೆ. ಸದ್ಯ ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಸರ್ಕಾರದ ಗೃಹ ಇಲಾಖೆ ಸತ್ತು ಹೋಗಿದೆ. ಭಯೋತ್ಪಾದಕರಿಗೆ ಕರ್ನಾಟಕ ಸ್ವರ್ಗ ಆಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್​​ (R Ashoka) ವಾಗ್ದಾಳಿ ಮಾಡಿದ್ದಾರೆ.

ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಸುತ್ತಾರೆ. ಇವರ ಮೇಲಿದ್ದ ಎಲ್ಲಾ ಕೇಸ್​ಗಳನ್ನೂ ವಾಪಸ್ ಪಡೆದರು. ಇದೀಗ ಪರಪ್ಪನ ಅಗ್ರಹಾರ ಜೈಲು ಸೇರಿ ಉಗ್ರ ಕೃತ್ಯದಲ್ಲಿ ಅರೆಸ್ಟ್ ಆದವರಿಗೆ ಮೊಬೈಲ್ ಕೊಡುತ್ತಾರೆ. ರಾಜ್ಯ ಸರ್ಕಾರದ ಗೃಹ ಇಲಾಖೆ ಸತ್ತೇ ಹೋಗಿದೆ ಎಂದು ಕಿಡಿಕಾರಿದ್ದಾರೆ.

ತೆರಿಗೆ ಹಣವನ್ನೆಲ್ಲಾ ತೆಗೆದುಕೊಂಡು ಗ್ಯಾರಂಟಿಗಳಿಗೆ ಹಾಕಿದ್ದಾರೆ

ಬೆಂಗಳೂರಿನ ಪಣತ್ತೂರಿನಲ್ಲಿ ರಸ್ತೆಗಳ ಸಮಸ್ಯೆ ವಿಚಾರವಾಗಿ ಮಾತನಾಡಿದ ಅವರು, ರಸ್ತೆಯಲ್ಲಿ ಕಸ ಇರುವ ಕಾರಣ ರಸ್ತೆಗಳು ಬ್ಲಾಕ್​​ ಆಗಿವೆ. ರಸ್ತೆಗಳು ಬ್ಲಾಕ್ ಆಗಿರುವುದರಿಂದ ಫುಟ್​ಪಾತ್​​ನಲ್ಲಿ ಬೈಕ್ ಸಂಚರಿಸುತ್ತಿದ್ದಾರೆ. ಪಣತ್ತೂರಿನಲ್ಲಿ ಟನಲ್​​ನಲ್ಲಿ ಜನ ಸಂಚಾರ ಮಾಡುತ್ತಿದ್ದಾರೆ. ತೆರಿಗೆ ಹಣವನ್ನೆಲ್ಲಾ ತೆಗೆದುಕೊಂಡು ಗ್ಯಾರಂಟಿಗಳಿಗೆ ಹಾಕಿದ್ದಾರೆ. ಒಂದೊಂದು ರಸ್ತೆಗೆ 25 ಕೋಟಿಯಿಂದ 30 ಕೋಟಿ ರೂ ಬಿಲ್ ಬಾಕಿ ಇದೆ ಎಂದರು.

ಗುಂಡಿಗಳಲ್ಲಿ ಜನರನ್ನು ಹಾಕಿ ಮುಚ್ಚುತ್ತಿದ್ದಾರೆ

ಇನ್ನು ಮತಗಳ್ಳತನದ ವಿರುದ್ಧ ಕಾಂಗ್ರೆಸ್​ನಿಂದ ಸಹಿ ಸಂಗ್ರಹ ಅಭಿಯಾನ ವಿಚಾರವಾಗಿ ಮಾತನಾಡಿದ್ದು, ಕಾಂಗ್ರೆಸ್​ನವರಿಗೆ ಯಾವುದು ಆದ್ಯತೆ ಅಂತ ಗೊತ್ತಾಯ್ತು ಅಲ್ವಾ? ಕಾಂಗ್ರೆಸ್​ನವರಿಗೆ ರಸ್ತೆಗಳು, ಕಸದ ಸಮಸ್ಯೆ ಆದ್ಯತೆ ಆಗಲಿಲ್ಲ. ಆದರೆ ಇವರಿಗೆ ರಾಜ್ಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ಮೆಚ್ಚಿಸಬೇಕು. ಯೋಗ್ಯತೆ ಇದ್ದರೆ ದೂರು ಕೊಡಲಿ, ನ್ಯಾಯಾಲಯಕ್ಕೆ ಹೋಗಲಿ. ಮಾನ ಮರ್ಯಾದೆ ಇದ್ದರೆ ಬಂದು ರಸ್ತೆ ಗುಂಡಿ ಮುಚ್ಚಬೇಕಿತ್ತು. ಆದರೆ ಗುಂಡಿಗಳಲ್ಲಿ ಜನರನ್ನು ಹಾಕಿ ಮುಚ್ಚುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರರಿಗೂ ಸಿಗುತ್ತೆ ಮೊಬೈಲ್: ಲಷ್ಕರ್ ಉಗ್ರನ ಬಿಂದಾಸ್ ಲೈಫ್ ಹೀಗಿದೆ ನೋಡಿ!

ಎರಡು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಬರೀ ಗ್ಯಾರಂಟಿ ಯೋಜನೆಯೊಂದೇ ಸಾಧನೆ ಅಂತ ಹೇಳುತ್ತಿದೆ. ರಸ್ತೆ ಗುಂಡಿ ಮುಚ್ಚಲು 1800 ಕೋಟಿ ರೂ. ಖರ್ಚು ಮಾಡಿದ್ದೇವೆ ಅಂತಾರೆ. ರಸ್ತೆ ಗುಂಡಿಗಳನ್ನು ಮುಚ್ಚಿದ್ದರೆ ಯಾಕೆ ಗುಂಡಿಗಳಿವೆ. ಬಿಜೆಪಿ ಹಿಂದೆ ಗುಂಡಿ ಮುಚ್ಚಿಲ್ಲ ಅಂತಾರೆ, ಒಂದು ವಾರ ಗಡುವು ಕೊಡಿ ಅಂತ ಸಿಎಂ ಹೇಳುತ್ತಾರೆ. 1 ವಾರ ಆದ ಮೇಲೆ ಡಿ.ಕೆ.ಶಿವಕುಮಾರ್ ಕೇಳಿ ಅಂತಾರೆ. ಜವಾಬ್ದಾರಿ ಇಲ್ಲದೇ ಮಾತಾಡುವ ಸರ್ಕಾರ ಜನರ ಪಾಲಿಗೆ ಸತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಗಳು, ಉಗ್ರರಿಗೆ ರಾಜಾತಿಥ್ಯದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಬೆಂಗಳೂರಿನ ಜನರ ಶಾಪ ಕಾಂಗ್ರೆಸ್​ನವರಿಗೆ ತಟ್ಟೇ ತಟ್ಟುತ್ತದೆ. ಮಾಲೂರು ಪ್ರಕರಣದಲ್ಲಿ ನ್ಯಾಯಾಲಯ ಛೀಮಾರಿ ಹಾಕಿದೆ. ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಮತ್ತು ಟೀಮ್ ವೋಟ್ ಚೋರಿ ಮಾಡಿದೆ ಅಂತಾ ಸ್ಪಷ್ಟವಾಗಿ ನ್ಯಾಯಾಲಯದ ಆದೇಶ ಬಂದಿದೆ. ಅಲ್ಲಿನ ಡಿಸಿ ಮತದಾನದ ಎಲ್ಲಾ ವಿಡಿಯೋಗಳು ನಾಶಪಡಿಸಿದ್ದಾರೆ. ಕಾಂಗ್ರೆಸ್ ಮಾಡಿರುವ ಮತಗಳ್ಳತನ ಬಿಜೆಪಿ ಮೇಲೆ ಹಾಕ್ತಿದ್ದಾರೆ ಅಷ್ಟೇ ಎಂದು ಆರ್.ಅಶೋಕ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.