ಕೋಲಾರ: ವಿಶ್ವದಾದ್ಯಂತ ವ್ಯಾಪಿಸಿರುವ ಕೊರೊನಾ ನಿಯಂತ್ರಣಕ್ಕೆ ವೈದ್ಯಕೀಯ ವಿಜ್ಞಾನ ಜಗತ್ತು ಏನೆಲ್ಲ ಹರಸಾಹಸ ಮಾಡುತ್ತಿದ್ದರೂ ಪರಿಸ್ಥಿತಿ ಹಾಗೆಯೇ ಮುಂದುವರೆದಿದೆ. ಕೊರೊನ ನಿಯಂತ್ರಣಕ್ಕೆ ವೈಯಕ್ತಿಕ ಸ್ವಚ್ಛತೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆ, ಮಾಸ್ಕ್ ಬಳಕೆ ಹಾಗೂ ಲಸಿಕೆ ಪಡೆಯುವಿಕೆ ಸೇರಿದಂತೆ ಅಲವು ಕಠಿಣ ಮುನ್ನೆಚ್ಚರಿಕೆಗಳನ್ನು ಅನುಸರಿಸುವಂತೆ ಆರೋಗ್ಯ ಇಲಾಖೆ ನಿರ್ದೇಶನಗಳನ್ನು ನೀಡುತ್ತಿದೆ. ಇದರ ನಡುವೆ ಗ್ರಾಮೀಣ ಪ್ರದೇಶಗಳಲ್ಲಿ ಪುರಾತನ ಕಾಲದಿಂದ ರೋಗ-ರುಜಿನಗಳ ನಿಯಂತ್ರಣಕ್ಕೆ ಅವರದೇ ಆದ ನಂಬಿಕೆ ಪದ್ದತಿಯಂತೆ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಆಚರಣೆಗಳು ಈಗಲೂ ಬಹುತೇಕ ಕಡೆ ಮುಂದುವರೆದುಕೊಂಡು ಬಂದಿದೆ.
ಬಹು ವರ್ಷಗಳ ಹಿಂದೆ ಕಾಲರ, ಪ್ಲೆಗ್, ಸಿಡುಬು ಸೇರಿದಂತೆ ಹಲವು ರೀತಿಯ ಸಾಂಕ್ರಾಮಿಕ ರೋಗಗಳು ವ್ಯಾಪಿಸಿದಾಗ, ಆಯಾ ಗ್ರಾಮೀಣ ಭಾಗದ ಸಾಂಪ್ರದಾಯಿಕ ಆಚರಣೆಯಂತೆ ಗ್ರಾಮಸ್ಥರು ವಿಶಿಷ್ಟ ಪೂಜಾ ಪದ್ದತಿಗಳನ್ನು ಅನುಸರಿಸುತ್ತಿದ್ದರು. ಇಲ್ಲಿ ಜನ ಹಾಗೂ ಜಾನುವಾರಗಳ ಜೀವ ರಕ್ಷಣೆ ಮೊದಲ ಆದ್ಯತೆಯಾಗಿತ್ತು. ಕಾಲಾನಂತರ ವೈದ್ಯಕೀಯ ವಿಜ್ಞಾನ ಮುಂದುವರೆದಂತೆ ಮಾರಕ ಖಾಯಲೆಗಳು ಹಂತ ಹಂತವಾಗಿ ಮರೆಯಾಗದೊಡಗಿದವು, ಇದರ ನಡುವೆ ಅಲ್ಲಲ್ಲಿ ಅಪರೂಪಕ್ಕೆ ಕಂಡುಬರುವ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಗ್ರಾಮಸ್ಥರು ಮುಂದಾಗುತ್ತಿದ್ದಾರೆ.ಹಿಂದಿನ ತಲೆಮಾರುಗಳ ನಂಬಿಕೆಯ ಪದ್ದತಿಯಂತೆ ಅವುಗಳ ಆಚರಣೆ ಈಗಲೂ ಮುಂದುವರೆಯುತ್ತಿದೆ.
ಶಕ್ತಿ ದೇವತೆಯನ್ನು ಪೂಜಿಸಿ ಶಾಂತಗೊಳಿಸುವ ಪೂಜೆ ಈ ನಡುವೆ ಕೋಲಾರ ತಾಲ್ಲೂಕು ವೇಮಗಲ್ ಹೋಬಳಿಯ ಚೌಡದೇನಹಳ್ಳಿಯಲ್ಲಿ ಈರೀತಿಯ ಮಾರಕ ಕಾಯಿಲೆಗಳನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ವಿಶಿಷ್ಟ ಆಚರಣೆಯೊಂದು ನಡೆಯಿತು. ಶಾಂತಕಾರಕ ಕುಂಬಳಿಗುಳಿ ಸುರಿಯುವ ಪೂಜೆ ಎಂದು ಕರೆಯುವ ಈ ಪೂಜೆಯನ್ನು ಮಾಡುವ ಮೂಲಕ ಗ್ರಾಮದಲ್ಲಿ ಜನ ಜಾನುವಾರುಗಳಿಗೆ ಯಾವುದೇ ತೊಂದರೆ ಇಲ್ಲದೆ ಜೀವಿಸಲು, ಹಾಗೂ ಸದ್ಯ ಜೀವ ಕಂಟಕವಾಗಿರುವ ಕೊರೊನ ವ್ಯಾಧಿಯ ವಿರುದ್ದ ಈ ಪೂಜಾ ಪದ್ದತಿಯನ್ನು ನಡೆಸಲಾಯಿತು.
ಗ್ರಾಮದಲ್ಲಿ 23 ಕ್ಕೂ ಪಾಸಿಟಿವ್ ಪ್ರಕರಣಗಳು ಕಂಡು ಬಂದು ಇದರಲ್ಲಿ ಒಂದು ಜೀವವನ್ನೇ ಕಳೆದುಕೊಂಡಿದ್ದು, ಮುಂದುವರೆದಂತೆ ಕೊರೊನ ಚಹರೆ ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಶಾಂತಕಾರಕ ಪೂಜೆ ನಡೆಸಿದ್ದು ಇದು ವೈದ್ಯಕೀಯ ವಿಜ್ಞಾನಕ್ಕೆ ವಿರುದ್ಧವಾಗಲಿ ಇಲ್ಲವೇ ಪರ್ಯಾಯವಾಗಲಿ ಅಲ್ಲವೇ ಅಲ್ಲ.
ಇದೊಂದು ಅನಾದಿಕಾಲದಿಂದ ವಾಡಿಕೆ ನಂಬಿಕೆಯ ಪದ್ದತಿಯಂತೆ ಈ ಆಚರಣೆಯನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ಗ್ರಾಮದಲ್ಲಿ ಆದಿಕಾಲದಿಂದ ನೆಲೆಸಿರುವ ಶಕ್ತಿ ದೇವತೆಯಾದ ಗಂಗಮ್ಮ ದೇವಿಯನ್ನು ಪೂಜಿಸಿ ನಮಿಸಿ ಅಮುದು ಇಡುವ ಆಚರಣೆ ಇದಾಗಿದೆ.
ಕೋಲಾರದಲ್ಲಿ ಶಾಂತಕಾರಕ ಪೂಜೆ
ಶಕ್ತಿ ದೇವತೆಗಳ ಕ್ರೋಧ ತಣಿಸುವ ಸಲುವಾಗಿ ಕುರಿ, ಕೋಳಿ, ಮೇಕೆ ಬಲಿದಾನ ನಡೆಯುವುದು ಹಲವೆಡೆ ನಡೆಯುತ್ತದೆ. ಆದರೆ ಇಲ್ಲಿ ಯಾವುದೇ ಹಿಂಸೆ ಬಲಿದಾನವಿಲ್ಲದೇ ಮಾಡುವ ಶಾಂತಪ್ರಿಯ ಆಚರಣೆ ಇದಾಗಿದೆ. ಅನ್ನ ಹಾಲಿನ ಎಡೆಯನ್ನು ಮೂರು ದಾರಿ ಕೂಡುವ ಜಾಗದಲ್ಲಿ ಸಗಣಿಯಿಂದ ಸಾರಿಸಿ, ರಂಗೋಲಿ ಬಿಡಿಸಿ ಅದರ ನಡುವೆ ಬೇವಿನ ಸೊಪ್ಪು ಇಟ್ಟು ಅದರಡಿಯಲ್ಲಿ ಅಮುದು ಅರ್ಪಿಸಿ ಪೂಜಿಸಲಾಗುವುದು. ಈ ಸಂದರ್ಭದಲ್ಲಿ ಗೋವಿಂದ ಘೋಷಣೆಗಳು ಜೈಕಾರಗಳ ನಡುವೆ ಅಮದನ್ನು ತಲೆಯ ಮೇಲೆ ಹೊತ್ತು ಗ್ರಾಮದಲ್ಲಿ ಮೆರವಣಿಗೆ ನಡೆಸಿ ನಂತರ ನೀರು ಇರುವ ಜಾಗಗಳಾದ ಕೆರೆ-ಬಾವಿ-ಕುಂಟೆಗಳಲ್ಲಿ ಬಿಡುವ ಇದನ್ನು ಕುಂಬಳಿಗುಳಿ ಸರಿಯುವ ಪೂಜೆ ಎನ್ನುತ್ತಾರೆ.
ವರದಿ: ರಾಜೇಂದ್ರಸಿಂಹ
ಇದನ್ನೂ ಓದಿ: ಕೋಲಾರ ಜಿಲ್ಲೆಯಲ್ಲಿ ಶುರುವಾಗಿದೆ ನೇರಳೆ ಕ್ರಾಂತಿ, ಎಕರೆಗಟ್ಟಲೆ ಪ್ರದೇಶದಲ್ಲಿ ಬೆಳೆದ ರೈತರ ಮುಖದಲ್ಲಿ ಮಂದಹಾಸ