ಶಿರೂರು ಗುಡ್ಡ ಕುಸಿತ: ಅರ್ಜುನ ಓಡಿಸುತ್ತಿದ್ದ ಲಾರಿ ಕ್ರ್ಯಾಶ್ ಗಾರ್ಡ್ ನದಿಯಲ್ಲಿ ಪತ್ತೆ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 23, 2024 | 10:38 PM

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಗಂಗಾವಳಿ ನದಿಯಲ್ಲಿ 3ನೇ ಹಂತದ ಶೋಧ ಕಾರ್ಯ ನಡೆಯುತ್ತಿದೆ. ನಿನ್ನೆ ಕೇರಳ ಮೂಲದ ಅರ್ಜುನ್ ಓಡಿಸುತ್ತಿದ್ದ ಲಾರಿಯ ಕಟ್ಟಿಗೆ ತುಂಡು ಪತ್ತೆ ಆಗಿತ್ತು. ಇಂದು ಆತನ ಲಾರಿಗೆ ಅಳವಡಿಸಿದ್ದ ಕ್ರ್ಯಾಶ್ ಗಾರ್ಡ್ ಪತ್ತೆ ಆಗಿದೆ. ಡ್ರೆಜ್ಜರ್ ಯಂತ್ರದ ಮೂಲಕ ಕಾರ್ಯಾಚರಣೆ ವೇಳೆ ಲಾರಿ ಗಾರ್ಡ್ ಪತ್ತೆ ಆಗಿದೆ.

ಶಿರೂರು ಗುಡ್ಡ ಕುಸಿತ: ಅರ್ಜುನ ಓಡಿಸುತ್ತಿದ್ದ ಲಾರಿ ಕ್ರ್ಯಾಶ್ ಗಾರ್ಡ್ ನದಿಯಲ್ಲಿ ಪತ್ತೆ
ಶಿರೂರು ಗುಡ್ಡ ಕುಸಿತ: ಅರ್ಜುನ ಓಡಿಸುತ್ತಿದ್ದ ಲಾರಿ ಕ್ರ್ಯಾಶ್ ಕಾರ್ಡ್ ನದಿಯಲ್ಲಿ ಪತ್ತೆ
Follow us on

ಕಾರವಾರ, ಸೆಪ್ಟೆಂಬರ್ 23: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ (Shiroor hill collapse) ಸಂಬಂಧಿಸಿದಂತೆ ಗಂಗಾವಳಿ ನದಿಯಲ್ಲಿ 3ನೇ ಹಂತದ ಶೋಧ ಕಾರ್ಯ ನಡೆಯುತ್ತಿದೆ. ಈ ವೇಳೆ ಕೇರಳದ ಚಾಲಕ ಅರ್ಜುನ್ ಓಡಿಸುತ್ತಿದ್ದ ಲಾರಿಗೆ ಅಳವಡಿಸಿದ್ದ ಕ್ರ್ಯಾಶ್ ಗಾರ್ಡ್ ಪತ್ತೆ ಆಗಿದೆ. ಡ್ರೆಜ್ಜರ್ ಯಂತ್ರದ ಮೂಲಕ ಕಾರ್ಯಾಚರಣೆ ವೇಳೆ ಲಾರಿ ಕ್ರ್ಯಾಶ್ ಪತ್ತೆ ಆಗಿದೆ.

ಲಾರಿ ಕ್ರ್ಯಾಶ್ ಗಾರ್ಡ್ ಪತ್ತೆ ಹಿನ್ನೆಲೆಯಲ್ಲಿ ನಿವೃತ್ತ ಸೇನಾಧಿಕಾರಿ ಇಂದ್ರಬಾಲನ್​ ನಿರ್ದೇಶನದಂತೆ ಕಾರ್ಯಾಚರಣೆ ಮುಂದುವರೆದಿದೆ. ಹೀಗಾಗಿ ಶಾಸಕ ಸತೀಶ್ ಸೈಲ್ ಮತ್ತು ಎಸ್​ಪಿ ನಾರಾಯಣ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ನಿವೃತ್ತ ಸೇನಾಧಿಕಾರಿ ಇಂದ್ರಬಾಲನ್ ಹೇಳಿದ್ದಿಷ್ಟು 

ಈ ಬಗ್ಗೆ ನಿವೃತ್ತ ಸೇನಾಧಿಕಾರಿ ಇಂದ್ರಬಾಲನ್​ ಪ್ರತಿಕ್ರಿಯಿಸಿದ್ದು, ನಾವು ಈ ಹಿಂದೆ ಸೂಚಿಸಿದ್ದ ಸ್ಥಳದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಡ್ರೋನ್ ಕಾರ್ಯಾಚಾರಣೆಯಿಂದ ನಾಲ್ಕು ಪಾಯಿಂಟ್ ಗುರುತಿಸಿದ್ದೇವು. ನಮ್ಮ ತಂಡದ ಮಾಹಿತಿ ಪ್ರಕಾರ ನಾಲ್ಕನೇ ಪಾಯಿಂಟ್​​ನಲ್ಲಿ ಲಾರಿ ಇದೆ. ಈ ನಾಲ್ಕನೇ ಪಾಯಿಂಟ್ ನದಿಯ ಆಳದಲ್ಲಿ ಇದ್ದು ಅಲ್ಲಿ ಅಪಾರ ಮಣ್ಣು ಇದೆ ಎಂದಿದ್ದಾರೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: 3ನೇ ಹಂತದ ಶೋಧ ಕಾರ್ಯಾಚರಣೆಯಲ್ಲಿ ಪತ್ತೆಯಾಯ್ತು ಅರ್ಜುನ್ ಲಾರಿ

ನದಿಯ ಮೇಲ್ಪದರದಿಂದ ಐದು ಅಡಿಯಲ್ಲಿ ಲಾರಿ ತರಹದ ಕಬ್ಬಿಣ ಡಿಟೆಕ್ಟ್ ಆಗಿತ್ತು. ಲಾರಿಯ ಮೇಲೆ ಎರಡು ಅಡಿ ಮಣ್ಣು ಬಿದ್ದಿದೆ. ಮಣ್ಣು ತೆರವು ಮಾಡಿ ಲಾರಿ ಮೇಲೆ ಎತ್ತಬೇಕಿದೆ. ಡ್ರೆಜ್ಜರ್​ ಸಾಮರ್ಥ್ಯ ಎಷ್ಟಿದೆ ಎಂಬುವುದು ನನಗೆ ಗೊತ್ತಿಲ್ಲ. ಅದರ ಸಾಮರ್ಥ್ಯ ನೋಡಿ ಲಾರಿ ಮೇಲೆತ್ತುವ ಬಗ್ಗೆ ಪ್ಲ್ಯಾನ್ ಮಾಡಲಾಗುವುದು ಎಂದು ಹೇಳಿದ್ದಾರೆ.

4 ದಿನದ ಕಾರ್ಯಾಚರಣೆಯಲ್ಲಿ ಕೆಲವು ವಸ್ತುಗಳು ಸಿಕ್ಕಿವೆ: ಎಸ್​ಪಿ ಎಂ.ನಾರಾಯಣ

ಉತ್ತರ ಕನ್ನಡ ಎಸ್​ಪಿ ಎಂ.ನಾರಾಯಣ ಪ್ರತಿಕ್ರಿಯಿಸಿದ್ದು, 4 ದಿನದಿಂದ ಕಾರ್ಯಾಚರಣೆ ವೇಳೆ ಕೆಲವು ವಸ್ತುಗಳು ಸಿಕ್ಕಿವೆ. ಸಿಕ್ಕ ವಸ್ತುಗಳೆಲ್ಲ ಹೋಟೆಲ್​​, ಲಾರಿ ಟ್ಯಾಂಕರ್​​ಗೆ ಸಂಬಂಧಿಸಿವೆ. ಇನ್ನೂ ಆರು ಸ್ಥಳಗಳಲ್ಲಿ ಕಾರ್ಯಾಚರಣೆಯನ್ನ ಮಾಡಬೇಕಿದೆ. ಅರ್ಜುನ್​ ಲಾರಿ ಇದೆ ಎಂಬ ಗುರುತಿಸಿದ ಸ್ಥಳದಲ್ಲಿ ಶೋಧ ಮಾಡಿದ್ದು ಆದರೆ ಆ ಸ್ಥಳದಲ್ಲಿ ಯಾವುದೇ ಕಬ್ಬಿಣದ ವಸ್ತು ಪತ್ತೆಯಾಗಿಲ್ಲ. ನದಿ ಒಳ ಹರಿವಿನ ರಭಸಕ್ಕೆ ಲಾರಿ ಮುಂದೆ ಹೋಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಈಗ ಒಸಿಯನ್ ಫೋಟೋಗ್ರಫಿ ಮಾಡಲಾಗುತ್ತಿದೆ. ಒಸಿಯನ್ ಫೋಟೋಗ್ರಫಿಯಿಂದ ನದಿ ಆಳದ ವಸ್ತುಗಳ ಚಿತ್ರ ಸಿಗುತ್ತೆ. ಬಳಿಕ ಮುಂದಿನ ಕಾರ್ಯಾಚರಣೆ ಬಗ್ಗೆ ಪ್ಲ್ಯಾನ್​ ಮಾಡುತ್ತೇವೆ. ಸರ್ಕಾರ 10 ದಿನ ಕಾರ್ಯಾಚರಣೆಗೆ ಅನುಮತಿ ನೀಡಿದೆ. ತಜ್ಞರ ಸಲಹೆ ಪಡೆದು ವೈಜ್ಞಾನಿಕವಾಗಿ ಕಾರ್ಯಾಚರಣೆ ಮಾಡುತ್ತಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತದಲ್ಲಿ ಕಾಣೆಯಾಗಿರುವ ಜಗನಾಥ್​ ಪುತ್ರಿಗೆ ನೌಕರಿ ಕೊಡಿಸಿದ ಹೆಚ್​ಡಿ ಕುಮಾರಸ್ವಾಮಿ

ಗಂಗಾವಳಿ ನದಿಯಲ್ಲಿ ತಮಿಳುನಾಡು ಮೂಲದ ಚಿನ್ನಣ್​ರವರ ಗ್ಯಾಸ್ ಟ್ಯಾಂಕರ್​ನ ಹಿಂಭಾಗದ ಎಕ್ಸೆಲ್ ಸಮೇತ ನಾಲ್ಕು ಚಕ್ರ ಪತ್ತೆ ಆಗಿದೆ. ಕೆಲ ದಿನದ ಹಿಂದೆ ಕಾರ್ಯಾಚರಣೆಯಲ್ಲಿ ಮುಂಭಾಗದ ಚಕ್ರ ಮತ್ತು ಬಾನೆಟ್ ಪತ್ತೆ ಆಗಿತ್ತು. ನಿನ್ನೆ ಕೇರಳ ಮೂಲದ ಅರ್ಜುನ್ ಲಾರಿಯಲ್ಲಿದ್ದ ಕಟ್ಟಿಗೆ ತುಂಡು, ಮೃತ ಲಕ್ಷಣ್ ರವರ ಸ್ಕೂಟಿ, ಹಾಗೂ ಹೋಟೆಲ್​ ಪಾತ್ರೆಗಳು ಪತ್ತೆ ಆಗಿತ್ತು. ಇನ್ನೂ ಆರು ದಿನಗಳ ಕಾರ್ಯಾಚಾರಣೆ ಮುಂದುವರೆಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:11 pm, Mon, 23 September 24