ತಿಂಗಳ ಹಿಂದೆಯೇ ಬಾಡಿಗೆ ಕೇಳುವ ನೆಪದಲ್ಲಿ ‘ಲಂಚ ಕೃಷಿಕ’ ರುದ್ರೇಶಪ್ಪ ಮನೆ ಕದ ತಟ್ಟಿದ್ದ ಎಸಿಬಿ ಅಧಿಕಾರಿಗಳು! ಆಗ ಏನಾಯಿತು?

ಎಸಿಬಿ ಅಧಿಕಾರಿಗಳು ಟಿ.ಎಸ್.ರುದ್ರೇಶಪ್ಪನ ಮನೆ ಮೇಲೆ ದಾಳಿ ನಡೆಸುವ ಮೊದಲು ಒಂದು ತಿಂಗಳ ಹಿಂದೆ ಮನೆ ಬಾಡಿಗೆ ಕೇಳುವ ನೆಪದಲ್ಲಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ಶಿವಮೊಗ್ಗದ ಚಾಲುಕ್ಯ ನಗರದಲ್ಲಿರುವ ರುದ್ರೇಶಪ್ಪನ ಮನೆಗೆ ಬಂದ ಅಧಿಕಾರಿಗಳು ಮನೆ ಬೇಕಿದ್ದು ಬಾಡಿಗೆ ಕೊಡುತ್ತೀರಾ ಎಂದು ಕೇಳಿದ್ದರು.

ತಿಂಗಳ ಹಿಂದೆಯೇ ಬಾಡಿಗೆ ಕೇಳುವ ನೆಪದಲ್ಲಿ ‘ಲಂಚ ಕೃಷಿಕ’ ರುದ್ರೇಶಪ್ಪ ಮನೆ ಕದ ತಟ್ಟಿದ್ದ ಎಸಿಬಿ ಅಧಿಕಾರಿಗಳು! ಆಗ ಏನಾಯಿತು?
ಗದಗ ಜಿಲ್ಲೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕನಾಗಿರುವ ಟಿ.ಎಸ್.ರುದ್ರೇಶಪ್ಪ
Edited By: ಆಯೇಷಾ ಬಾನು

Updated on: Nov 26, 2021 | 10:04 AM

ಶಿವಮೊಗ್ಗ: ಗದಗ ಜಿಲ್ಲೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕನಾಗಿರುವ ಟಿ.ಎಸ್.ರುದ್ರೇಶಪ್ಪನ ಮನೆ ಮೇಲೆ ಎಸಿಬಿ ದಾಳಿ ನಡೆಸಿ ಈತನ ನಿವಾಸದಲ್ಲಿರುವ ಸುಮಾರು 6,65,03,782 ರೂ.ಗಳ ಮೌಲ್ಯದ ಚಿನ್ನದ ಒಡವೆಗಳು, ನಗದು, ನಿವೇಶನ, ಕಟ್ಟಡ, ಭೂಮಿ, ಬ್ಯಾಂಕ್ ಠೇವಣಿ, ಹಣ ಪತ್ತೆ ಹಚ್ಚಿದೆ. ರುದ್ರೇಶಪ್ಪ ಆದಾಯಕ್ಕಿಂತಲೂ ಶೇ. 400ರಷ್ಟು ಅಕ್ರಮ ಆಸ್ತಿ ಇರೋದು ಪತ್ತೆ ಮಾಡಿದೆ. ಆದ್ರೆ ಈ ಸಂಬಂಧ ಮತ್ತೊಂದು ಮಾಹಿತಿ ಬಯಲಾಗಿದೆ. ಎಸಿಬಿ ಅಧಿಕಾರಿಗಳು ಟಿ.ಎಸ್.ರುದ್ರೇಶಪ್ಪನ ಬೇಟೆಯಾಡಿದ ರೋಚಕ ಸಂಗತಿ ಬಯಲಾಗಿದೆ.

ಎಸಿಬಿ ಅಧಿಕಾರಿಗಳು ಟಿ.ಎಸ್.ರುದ್ರೇಶಪ್ಪನ ಮನೆ ಮೇಲೆ ದಾಳಿ ನಡೆಸುವ ಮೊದಲು ಒಂದು ತಿಂಗಳ ಹಿಂದೆ ಮನೆ ಬಾಡಿಗೆ ಕೇಳುವ ನೆಪದಲ್ಲಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ಶಿವಮೊಗ್ಗದ ಚಾಲುಕ್ಯ ನಗರದಲ್ಲಿರುವ ರುದ್ರೇಶಪ್ಪನ ಮನೆಗೆ ಬಂದ ಅಧಿಕಾರಿಗಳು ಮನೆ ಬೇಕಿದ್ದು ಬಾಡಿಗೆ ಕೊಡುತ್ತೀರಾ ಎಂದು ಕೇಳಿದ್ದರು. ಈ ವೇಳೆ ರುದ್ರೇಶಪ್ಪ ಅವರು ದೊಡ್ಡ ಮನೆ ಏಕೆ ಬೇಕೆಂದು ಪ್ರಶ್ನಿಸಿದ್ದರು. ಆಗ ಎಸಿಬಿ ಅಧಿಕಾರಿಗಳು ನಮ್ಮದು ದೊಡ್ಡ ಕುಟುಂಬ, ಗಾಜನೂರು ಬಳಿ ಅಡಕೆ ತೋಟವಿದ್ದು ದೊಡ್ಡ ಮನೆ ಬೇಕಿದೆ. ಹಾಗಾಗಿ ದೊಡ್ಡಮನೆಯನ್ನೇ ಬಾಡಿಗೆಗೆ ಹುಡುಕುತ್ತಿದ್ದೇವೆ ಎಂದು ಹೇಳಿದ್ದರು. ಈ ರೀತಿ ಅಕ್ರಮ ಆಸ್ತಿ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ ನಂತರವೇ ಎಸಿಬಿ ದಾಳಿ ನಡೆಸಿದೆ.

ದಾವಣಗೆರೆ ಎಸಿಬಿ ಎಸ್ಪಿ ಜಯಪ್ರಕಾಶ್‌ ನೇತೃತ್ವದಲ್ಲಿ ಡಿವೈಎಸ್ಪಿ ಲೋಕೇಶ್, ಇನ್‌ಸ್ಪೆಕ್ಟರ್‌ ವಸಂತಕುಮಾರ್ ತಂಡ ರುದ್ರೇಶಪ್ಪ ಅವರ ಎರಡು ಮನೆಗಳ ಮೇಲೆ ದಾಳಿ ಮಾಡಿತ್ತು. 30 ಅಧಿಕಾರಿಗಳು 2 ತಂಡಗಳಲ್ಲಿ ಚಾಲುಕ್ಯನಗರ ಮತ್ತು ಗೋಪಾಳದ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿತ್ತು. ಚಾಲುಕ್ಯನಗರದ ಮನೆಯಲ್ಲಿ ರುದ್ರೇಶಪ್ಪ ಅವರ ಅತ್ತೆ ಸುವರ್ಣಮ್ಮ (ಪತ್ನಿಯ ತಾಯಿ) ವಾಸವಿದ್ದರು. ರುದ್ರೇಶಪ್ಪ ಮತ್ತು ಅವರ ಪತ್ನಿ, ಮಕ್ಕಳು ಆಗಾಗ್ಗೆ ಬಂದು ಹೋಗುತ್ತಿದ್ದರು. ರುದ್ರೇಶಪ್ಪ ಅವರ ಕುಟುಂಬ ಗೋಪಾಳದ ಮನೆಯಲ್ಲಿ ವಾಸವಿದ್ದರು. ಇತ್ತೀಚೆಗಷ್ಟೇ ಚಾಲುಕ್ಯನಗರದಲ್ಲಿ ಹೊಸ ಮನೆ ನಿರ್ಮಾಣ ಮಾಡಿದ್ದರು. ಮನೆಯ ಕಾಮಗಾರಿ ಇನ್ನೂ ನಡೆಯುತ್ತಿದೆ. ಎರಡ್ಮೂರು ತಿಂಗಳ ಹಿಂದಷ್ಟೇ ಹೊಸ ಮನೆಗೆ ಬಂದಿದ್ದರು. ಗೋಪಾಳದ ಹಳೆ ಮನೆ ಖಾಲಿ ಬಿಟ್ಟಿದ್ದರು. ಎಸಿಬಿ ನಿರಂತರವಾಗಿ ರುದ್ರೇಶಪ್ಪನ ಎಲ್ಲ ಚಲನವಲನ ನಿಗಾ ಇಟ್ಟಿದ್ದರು.

ಇದನ್ನೂ ಓದಿ: ಕೃಷಿ ಇಲಾಖೆ ಜಂಟಿ ನಿರ್ದೇಶಕ ನಿವಾಸದಲ್ಲಿ ಭಾರಿ ಪ್ರಮಾಣದ ಚಿನ್ನದ ಗಟ್ಟಿ ಪತ್ತೆ; ರುದ್ರೇಶಪ್ಪ ಎಸಿಬಿ ವಶಕ್ಕೆ

Published On - 9:14 am, Fri, 26 November 21

Web contact

TV9 Kannada

Read More
Follow Us