ಗಣೇಶ ವಿಸರ್ಜನೆ ಗಲಾಟೆ: ಹಿಂದೂ ಮುಸ್ಲಿಂ ಜಗಳವೆಂದು ಬಿಂಬಿಸಲು ಯತ್ನ, ಬಿಜೆಪಿ ಕಾರ್ಯಕರ್ತನ ವಿರುದ್ಧ ದೂರು

ಶಿವಮೊಗ್ಗದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಒಂದು ಸಣ್ಣ ಗಲಾಟೆ ನಡೆದಿದೆ. ಮೆರವಣಿಗೆ ವೇಳೆ ಹಿಂದೂಗಳ ಗುಂಪುಗಳ ನಡುವೆಯೇ ಜಗಳವಾಗಿದೆ. ಆದ್ರೆ, ಇದನ್ನು ಹಿಂದೂ-ಮುಸ್ಲಿಂ ಗಲಾಟೆ ಎಂದು ಬಿಂಬಿಸಲು ಯತ್ನಿಸಿರುವ ಆರೋಪ ಕೇಳಿಬಂದಿದೆ. ಬಿಜೆಪಿ ಕಾರ್ಯಕರ್ತನ ಮೇಲೆ ಸ್ಥಳೀಯರು ಆರೋಪಿಸಿದ್ದು, ಈ ಸಂಬಂಧ ಶಿವಮೊಗ್ಗದ ತುಂಗಾ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಣೇಶ ವಿಸರ್ಜನೆ ಗಲಾಟೆ: ಹಿಂದೂ ಮುಸ್ಲಿಂ ಜಗಳವೆಂದು ಬಿಂಬಿಸಲು ಯತ್ನ, ಬಿಜೆಪಿ ಕಾರ್ಯಕರ್ತನ ವಿರುದ್ಧ ದೂರು
Shivamogga Ganesh
Updated By: ರಮೇಶ್ ಬಿ. ಜವಳಗೇರಾ

Updated on: Sep 01, 2025 | 7:01 PM

ಶಿವಮೊಗ್ಗ, (ಸೆಪ್ಟೆಂಬರ್ 01): ಮಲೆನಾಡು ಮತ್ತು ಕರಾವಳಿ ಭಾಗಗಳಾದ ಶಿವಮೊಗ್ಗ (Shivamogga), ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಕೋಮುಭಾವನೆಗೆ ಅತಿ ಸೂಕ್ಷ್ಮ ಜಿಲ್ಲೆಗಳೆಂದು ರಾಜ್ಯ ಸರ್ಕಾರ ಗುರುತಿಸಿದೆ. ಈ ಮೂರು ಜಿಲ್ಲೆಗಳಲ್ಲಿ ಕೋಮು ಹಿಂಸಾಚಾರ ತಡೆಗೆ ವಿಶೇಷ ಕಾರ್ಯಪಡೆ ರಚನೆ ಮಾಡಲಾಗಿದೆ. ಇದರ ನಡುವೆಯೇ ಒಂದು ಗಲಾಟೆಯನ್ನು ಹಿಂದೂ ಮುಸ್ಲಿಂ (Hindu And Muslim) ಜಗಳವೆಂದು ಬಿಂಬಿಸುವ ಯತ್ನ ಪಡೆದಿದೆ. ಹೌದು.. ಶಿವಮೊಗ್ಗದ ಆಶ್ರಯ ಬಡಾವಣೆಯಲ್ಲಿ ಗಣೇಶ ವಿಸರ್ಜನೆ ವೇಳೆ ಹಿಂದೂಗಳ ನಡುವೆ ಗಲಾಟೆಯಾಗಿದ್ದು, ಇದನ್ನು ಹಿಂದೂ ಮುಸ್ಲಿಂ ಗಲಾಟೆ ಎಂದು ಬಿಂಬಿಸಲು ಬಿಜೆಪಿ ಕಾರ್ಯಕರ್ತರ ಯತ್ನಿಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂದ ಬಿಜೆಪಿ ಕಾರ್ಯಕರ್ತ ಶಂಕರ್​ ಎನ್ನುವಾತನನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂದು ಪೊಲೀಸರು ದೂರು ನೀಡಿದ್ದಾರೆ.

ನಿನ್ನೆ (ಆಗಸ್ಟ್ 31) ಆಶ್ರಯ ಬಡಾವಣೆಯಲ್ಲಿ ಗಣೇಶೋತ್ಸವದ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಆದ್ರೆ, ಇದನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತ ಶಂಕರ್ ಎನ್ನುವರು ಹಿಂದೂ ಮುಸ್ಲಿಂ ಗಲಾಟೆ ಎಂದು ಬಿಂಬಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದು, ಈ ಸಂಬಂಧ ಬಡವಾವಣೆ ಸ್ಥಳೀಯರು, ಬಿಜೆಪಿ ಕಾರ್ಯಕರ್ತ ಶಂಕರ್​ ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ತುಂಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: 9ನೇ ಕ್ಲಾಸ್ ವಿದ್ಯಾರ್ಥಿನಿಗೆ ಹೆರಿಗೆ! ಫೋಕ್ಸೋ ಕೇಸ್ ದಾಖಲು

ಗೋವಿಂದಾಪುರ ಆಶ್ರಯ ಬಡಾವಣೆ ನಿವಾಸಿಗಳ ಸಂಘದ ಅಧ್ಯಕ್ಷ ಶಂಕರ ಎನ್ನುವಾತ ಅನ್ಯೋನ್ಯವಾಗಿರುವ ಹಿಂದೂ ಮತ್ತು ಮುಸ್ಲೀಂ ನಡುವೆ ಜಗಳ ಹಚ್ಚುವ ಷಡ್ಯಂತ್ರ ಮಾಡಿದ್ದಾರೆ ಎಂದು ಸ್ಥಳೀಯ ಬಡಾವಣೆ ಜನರ ಆಕ್ರೋಶ ಹೊರಹಾಕಿದ್ದು, ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಆಗ್ರಹಿಸಿದ್ದಾರೆ.

ಬಿಜೆಪಿ ಕಾರ್ಯಕರ್ತ ಶಂಕರ್ ಹೇಳಿದ್ದೇನು?

ಇನ್ನು ಈ ಬಗ್ಗೆ ಸ್ವತಃ ಟಿವಿ9ಗೆ ಬಿಜೆಪಿ ಕಾರ್ಯಕರ್ತರ ಶಂಕರ್ ಪ್ರತಿಕ್ರಿಯಿಸಿದ್ದು, ನಾನು ಆಶ್ರಯ ಬಡಾವಣೆಯಲ್ಲಿ ಅನೇಕ ಕೆಲಸ ಮಾಡಿರುವೆ. ರಸ್ತೆ, ನೀರು, ಕಸದ ವಿಲೇವಾರಿ, ಧ್ವಜಸ್ತಂಭ ಅನೇಕ ಸೌಲಭ್ಯ ಹೋರಾಟದ ಮೂಲಕ ತಂದಿರುವೆ. ನಿನ್ನೆ ಹಿಂದುಗಳ ನಡುವೆ ಗಲಾಟೆ ಆಗಿತ್ತು. ನಿನ್ನೆ ರಾಘವೇಂದ್ರ ಮತ್ತು ಆತನ ಸ್ನೇಹಿತರಿಂದ ಹಲ್ಲೆ ಆಗಿತ್ತು . ಈ ಸಮಸ್ಯೆ ನಾನು ಬಗೆಹರಿಸಿದ್ದೆ. ಎಲ್ಲ ಸಮಾಜದವರ ವಿಶ್ವಾಸದಿಂದ ಬಡಾವಣೆಯ ಅಭಿವೃದ್ಧಿ ಮಾಡಿರುವೆ. ಆದರೆ, ಈಗ ನನ್ನ ವಿರುದ್ದ ಅಸೂಯೆಯಿಂದ ಈ ರೀತಿ ಆರೋಪ ಮಾಡಿದ್ದಾರೆ. ನಾನು ಯಾವುದೇ ಹಿಂದೂ ಮುಸ್ಲಿಮರ ಗಲಾಟೆ ಎಂದು ಹೇಳಿಲ್ಲ. ಕೇವಲ ಅಪಪ್ರಚಾರ ಎಂದು ಸ್ಪಷ್ಟಪಡಿಸಿದರು.

ಕುಂಟ ದೇವರಾಜ್ ಎನ್ನುವ ವ್ಯಕ್ತಿ ಈ ಕಿತಾಪತಿ ಮಾಡಿದ್ದಾನೆ. ಆತ ಆಶ್ರಯ ಬಡಾವಣೆಯಲ್ಲಿ ಅಕ್ರಮವಾಗಿ ಮನೆಯಲ್ಲಿ ಅಂಗಡಿ ಓಪನ್ ಮಾಡಿದ್ದಾನೆ. ಇದಕ್ಕೆ ವಿರುದ್ಧ ಮಾಡಿದ್ದ ಹಿನ್ನೆಲೆಯಲ್ಲಿ ನನ್ನ ವಿರುದ್ಧ ಸ್ಥಳೀಯರನ್ನು ಎತ್ತಿ ಕಟ್ಟುತ್ತಿದ್ದಾರೆ. ಯಾರೇ ತಪ್ಪು ಮಾಡಿದರು ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:00 pm, Mon, 1 September 25