ರಾಜಕಾರಣದಲ್ಲಿ ಸರ್ವಾಧಿಕಾರಿ ಧೋರಣೆ ಮಾಡಬೇಡಿ: ಪರೋಕ್ಷವಾಗಿ BL ಸಂತೋಷ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

ಬಿ.ಎಸ್.ಯಡಿಯೂರಪ್ಪನವರ ಕಣ್ಣೀರೇ ಬಿಜೆಪಿಗೆ ಶಾಪ. ಅವರು ಕಣ್ಣೀರು ಹಾಕಿದ್ದರಿಂದಲೇ ರಾಜ್ಯದಲ್ಲಿ ಬಿಜೆಪಿ ನೆಲಕಚ್ಚಿದೆ.ಬಿಜೆಪಿಗೆ ನಿಮ್ಮ ಕೊಡುಗೆ ಏನು? ಆತ್ಮಾವಲೋಕನ ಮಾಡಿಕೊಳ್ಳಿ. ರಾಜಕಾರಣದಲ್ಲಿ ಯಾವತ್ತೂ ಸರ್ವಾಧಿಕಾರಿ ಧೋರಣೆ ಮಾಡಬೇಡಿ ಎಂದು ಪರೋಕ್ಷವಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್​ ಸಂತೋಷ್ ವಿರುದ್ಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ಮಾಡಿದ್ದಾರೆ.

ಶಿವಮೊಗ್ಗ, ಅಕ್ಟೋಬರ್​ 09: ರಾಜಕೀಯವಾಗಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ (BS Yadiyurappa) ಅವರನ್ನು ಮುಗಿಸಿದರಲ್ಲಾ. ಈಗ ನಾಯಕತ್ವ ಎಲ್ಲಿದೆ. ಆತ್ಮಾವಲೋಕನ ಮಾಡಿಕೊಳ್ಳಿ. ರಾಜಕಾರಣದಲ್ಲಿ ಯಾವತ್ತೂ ಸರ್ವಾಧಿಕಾರಿ ಧೋರಣೆ ಮಾಡಬೇಡಿ ಎಂದು ಪರೋಕ್ಷವಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್​ ಸಂತೋಷ್ ವಿರುದ್ಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತಮಾಡಿದ ಅವರು, ಬಿಎಸ್ ಯಡಿಯೂರಪ್ಪ ನಿರ್ಲಕ್ಷಿಸಿದರೆ ರಾಜ್ಯದಲ್ಲಿ ಬಿಜೆಪಿ ಇನ್ನಷ್ಟು ನೆಲಕಚ್ಚುತ್ತೆ ಎಂದು ಹೇಳಿದ್ದಾರೆ.

ಬಿಜೆಪಿಗೆ ನಿಮ್ಮ ಕೊಡುಗೆ ಏನು?

ಬಿ.ಎಸ್.ಯಡಿಯೂರಪ್ಪನವರ ಕಣ್ಣೀರೇ ಬಿಜೆಪಿಗೆ ಶಾಪ. ಅವರು ಕಣ್ಣೀರು ಹಾಕಿದ್ದರಿಂದಲೇ ರಾಜ್ಯದಲ್ಲಿ ಬಿಜೆಪಿ ನೆಲಕಚ್ಚಿದೆ. ಸೈಕಲ್, ಬೈಕ್, ಕಾರು ಮೂಲಕ ಬಿಎಸ್​ವೈ ಪಕ್ಷ ಸಂಘಟಿಸಿದ್ದಾರೆ. 2005-06ರಲ್ಲಿ ಬಿಜೆಪಿ ಕಚೇರಿಗೆ ಬಂದು ಪಕ್ಷ ನಿಯಂತ್ರಿಸುತ್ತಿದ್ದೀರಿ? ಬಿಜೆಪಿಗೆ ನಿಮ್ಮ ಕೊಡುಗೆ ಏನು? ನೀವು ಪಕ್ಷ ಕಟ್ಟಿ ಬೆಳೆಸಿದ್ದೀರಾ‌? ಹೋರಾಟ, ಪಾದಯಾತ್ರೆ ಮಾಡಿದ್ರಾ? ಜೈಲಿಗೆ ಎಷ್ಟುಬಾರಿ ಹೋಗಿದ್ದಿರಿ ಎಂದು ಪರೋಕ್ಷವಾಗಿ B.L.ಸಂತೋಷ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಒಂದು ಗ್ರಾಮ‌ ಪಂಚಾಯಿತ ಚುನಾವಣೆಯಲ್ಲಿ ಗೆಲ್ಲಿಸಲು ಸಾಧ್ಯವಿಲ್ಲ. ಕರ್ನಾಟಕದ ಕೋರ್ ಕಮಿಟಿಯಲ್ಲಿ ತೀರ್ಮಾನ ಆಗೋದು ಒಂದು, ದೆಹಲಿಗೆ ಹೋದ ಕೂಡಲೇ ಅದು ಬದಲಾಗುತ್ತೆ. ದೆಹಲಿಗೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೋದರೆ ಮುಕ್ತವಾಗಿ ಅವಕಾಶ ಸಿಗುತ್ತೆ. ಅದೇ ಯಡಿಯೂರಪ್ಪರನ್ನು ಯಾವ ರೀತಿ ನಡೆಸಿಕೊಂಡ್ರು ಗೊತ್ತಿದೆ? ದೆಹಲಿಯಲ್ಲಿ ಕೂತಿರುವ ಮಹಾನುಭಾವ ಅದನ್ನು ಬದಲು ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್​ ಕೊರತೆ: ಕೇಂದ್ರದತ್ತ ಬೊಟ್ಟು ಮಾಡಿದ ಸಚಿವ ಸತೀಶ್ ಜಾರಕಿಹೊಳಿ

ಯಡಿಯೂರಪ್ಪನವರು ಹೋರಾಟದ ಹಿನ್ನೆಲೆಯಿಂದ ಬಂದವರು. ಅವರು ಒಬ್ಬ ಶಿಲ್ಪಿಯಿದ್ದಂತೆ. ಕಾಡುಗೊಲ್ಲ ರೀತಿ ಇದ್ದ ನನ್ನನ್ನು ಪರಿವರ್ತನೆ ಮಾಡಿದ್ದು ಬಿಎಸ್ ಯಡಿಯೂರಪ್ಪ. ಇಲ್ಲದಿದ್ದರೆ ಇವತ್ತು ಬೀಡಿ ಸೇದುತ್ತ, ಎಣ್ಣೆ ಹೊಡ್ಕೊಂಡು ಇರುತ್ತಿದ್ದೆ. ರಾಜ್ಯಸಭೆ, ಎಂಎಲ್​ಸಿ ಆದವರು ಯಾರಿಗೋ ಮಂಡಿಯೂರಿದ್ದಾರೆ ಎಂದರು.

ರಾಗಿಗುಡ್ಡ ಗಲಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಓಟ್ ಬ್ಯಾಂಕ್ ರಾಜಕಾರಣ ಯಾರೂ ಮಾಡಬಾರದು. ಖಡ್ಗ, ಔರಂಗಜೇಬನ ಚಿತ್ರ ಪ್ರದರ್ಶನ ಸಂಘರ್ಷ ತರುತ್ತೆ. ಜಿಲ್ಲಾಡಳಿತ ತಡೆಯಬೇಕಿತ್ತು, ಅದನ್ನು ಮಾಡಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: 43 ಹೆಚ್ಚುವರಿ ಬರಪೀಡಿತ ತಾಲೂಕುಗಳನ್ನು ಘೋಷಿಸಿದ ರಾಜ್ಯ ಸರ್ಕಾರ

ರಾಜ್ಯಾಧ್ಯಕ್ಷರ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ವರ್ಚಸ್ಸು ಇರುವ ನಾಯಕರು ಬೇಕು. ಮುಂದೆ ಲೋಕಸಭೆ ಚುನಾವಣೆ ಬರುತ್ತೇ. ಮೋದಿ ಗೆಲ್ಲಬೇಕು. ಇಂದು ಪಂಚರಾಜ್ಯಗಳ ಚುನಾವಣೆ ಘೋಷಣೆ ಆಗಿದೆ. ಇನ್ನೂ 2-3 ತಿಂಗಳು ರಾಜ್ಯದ ಅಧ್ಯಕ್ಷರು ಇಲ್ಲ. ವಿಪಕ್ಷ ನಾಯಕರು ಇಲ್ಲ ಎಂದರು.

ಜೆಡಿಎಸ್- ಬಿಜೆಪಿ ಜೊತೆ ಮೈತ್ರಿ ಆಗಿದೆ.‌ ಇನ್ನು ಅಲ್ಪಸಂಖ್ಯಾತರು ಯಾರಿಗೆ ಮತ ಹಾಕ್ತಾರೆ? ಆದರೂ, ಮತಗಳನ್ನು ಡಿವೈಡ್ ಮಾಡುವ ಕಾರ್ಯ ನಡೆದಿದೆ. ಬಹುಸಂಖ್ಯಾತ ಹಿಂದೂಗಳು ನಿಮಗೆ ಬೇಡವೇ? ವೋಟ್ ಹಾಕಿಲ್ವಾ? ತಪ್ಪಿತಸ್ಥರನ್ನು ಮುಲಾಜಿಲ್ಲದೇ ಎನ್​ಕೌಂಟರ್ ಮಾಡಬೇಕು. ಕೇವಲ ಬಂಧಿಸಿದರೆ ಸಾಲದು‌‌‌ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:51 pm, Mon, 9 October 23

Basavaraj Yaraganavi
Follow Us